ಮಾದಕ ವ್ಯಸನದ ಚುಂಬಕ ಶಕ್ತಿಯಿಂದ ದೂರ !
ಪ್ರತೀ ವರ್ಷ ಜೂನ್ 26ರಂದು ಅಂತರ್ರಾಷ್ಟ್ರೀಯ ಮಾದಕ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರುದ್ಧದ ದಿನಾಚರಣೆ ಆಚರಿಸುತ್ತೇವೆ. ಮಾದಕ ವ್ಯಸನದ ಮಾದಕತೆ ಕಲ್ಪಿಸಿಕೊಂಡು ಬಾಯಿ ಚಪ್ಪರಿಸುವ ಮುಗ್ಧರು, ಮಿತ್ರರು ಹಾಗೂ ಇತರರಿಂದ ಬಲವಂತವಾಗಿ ಈ ಚಟದತ್ತ ಸೆಳೆಯಲ್ಪಟ್ಟ ಯುವಜನ, ಅದನ್ನೇ ಚಟ ಮಾಡಿಕೊಂಡು, ಅದೊಂದೇ ಸಾಕೆಂದು, ಬೇರೆ ಎಲ್ಲಾ ಕಳೆದುಕೊಳ್ಳಲು ಸಿದ್ಧರಾದಾಗ, ಮೃತ್ಯು ಪಂಜರದಲ್ಲಿ ತಾವಾಗಿಯೇ ಹೋಗಿ ಬೀಳುತ್ತಾರೆ. ಇದು ಇಲಿ ಬೋನಿನಲ್ಲಿಟ್ಟ ವಡೆ ವಾಸನೆಗೆ ಇಲಿ ತಾನಾಗಿಯೇ ಬಂದು ಬೀಳುವಂತೆಯೇ ಸರಿ.
ಈ ಸರ್ಪಚುಂಬನ ಹಾಗೂ ಮೃತ್ಯು ಆಲಿಂಗನಕ್ಕೆ,ಮಾದಕ ದ್ರವ್ಯಗಳ ಸುಳಿಗೆ ಯಾವ ಯುವಜನರೂ ಬೀಳದಿರಲಿ ಎಂಬುದೇ ನನ್ನ ಹಾರೈಕೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. ಡಾ. ರಾಜಕುಮಾರ್, ಜಯಪ್ರದಾ ಅಭಿನಯಿಸಿದ, ಎಸ್. ನಾರಾಯಣ್ ನಿರ್ದೇಶನದ ಚಿತ್ರ - ಶಬ್ದವೇದಿ, ನೀವೆಲ್ಲ ನೋಡಿದ್ದರೆ, ಅದರಲ್ಲಿ ರಾಜಕುಮಾರ್ಮಗನ ಪಾತ್ರ ಮಾದಕ ಪದಾರ್ಥ ವ್ಯಸನಕ್ಕೆ ದಾಸನಾದ ಸನ್ನಿವೇಶಗಳು, ತಂದೆ ತಾಯಿಯ ತೊಳಲಾಟ, ಇದರ ವಿರುದ್ಧದ ಹೋರಾಟ, ಇವೆಲ್ಲ ಮಾದಕಪದಾರ್ಥಗಳ ಕ್ಷೇತ್ರದ ಭೀಕರತೆ ಚೆನ್ನಾಗಿ ನಿರೂಪಿಸಿದ್ದವು. ಪೋಲೀಸ್ ಅಧಿಕಾರಿ ವಿಜಯ ಸಾಸನೂರ್ ಬರೆದ ಕಾದಂಬರಿ ಆಧರಿಸಿತ್ತು ಆ ಚಿತ್ರ.
ವಿಶ್ವಸಂಸ್ಥೆ ಮಾದಕ ಪದಾರ್ಥ ಸಾಗಾಣಿಕೆ ವಿರುದ್ಧದ ಯುದ್ಧವನ್ನು, ಪ್ರಪಂಚದ ಸುರಕ್ಷತೆ ಹಾಗೂ ಅಭಿವೃದ್ಧಿ ಧ್ಯೇಯಗಳೊಂದಿಗೆ ಸೇರಿಸಿ, ಒಂದುಸಮಗ್ರ ಸಂಯೋಜಿತ ಪ್ರಯತ್ನ ಸಂಘಟಿಸಿದೆ. ಆರೊಗ್ಯ ಹಾಗೂ ಮಾನವ ಹಕ್ಕುಗಳ ಮೂಲ ತತ್ವಗಳಿಗೆ ಬದ್ಧರಾಗಿರುವ ನಾವು, ಹಂಚಿಕೊಂಡ ಜವಾಬ್ದಾರಿಯಿಂದ, ಪೂರೈಕೆ ಹಾಗೂ ಬೇಡಿಕೆಗಳನ್ನು ಕಡಿಮೆ ಮಾಡುವ ಸಮತೋಲನ ಮಾರ್ಗದಲ್ಲಿ ನಡೆಯಬೇಕಾಗಿದೆ.
ಇದರಿಂದ ತಡೆಯುವಿಕೆ, ಚಿಕಿತ್ಸೆ ಹಾಗೂ ಬೆಂಬಲಗಳಿಗೆ ವಿಶ್ವ ಮಾರ್ಗ ಸೃಷ್ಟಿಯಾಗಬೇಕು. ಇದರಿಂದ ಸಮುದಾಯಗಳು ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧ ಹಾಗೂ ಹಿಂಸೆಗಳಿಂದ ಮುಕ್ತವಾಗುತ್ತವೆ. ಮಾದಕ ಪದಾರ್ಥಗಳ ಮೇಲೆ ಅವಲಂಬಿಸಿರುವ ವ್ಯಕ್ತಿಗಳು ಸ್ವತಂತ್ರರಾಗುತ್ತಾರೆ. ಇವರು ಕೊಡುಗೆ ಸಲ್ಲಿಸಿ ಎಲ್ಲರಿಗೂ ಸುರಕ್ಷಿತ ಪ್ರಪಂಚ ದೊರೆಯುತ್ತದೆ”. ಮಾದಕ ಪದಾರ್ಥಗಳ ವ್ಯಸನದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವುದು, ಮದ್ಯ, ಸ್ನಾನದ ಕೃತಕ ಉಪ್ಪು, ಕ್ಲಬ್ ಔಷಧಿಗಳು, ಕೊಕೈನ್, ಹಲ್ಲೂಸಿರೋಜೆನ್ಸ್, ಹೆರಾಯಿನ್, ಮಾರಿಜುಯಾನ, ನೆಗಡಿ ಕೆಮ್ಮಿಗೆ ಕೊಡುವ ವೈದ್ಯಕೀಯ ಚೀಟಿ ಆಧರಿಸಿದ ಔಷಧಿಗಳು, ಸೆಲ್ವಿಯಾ, ನೋವು ನಿವಾರಕ.
ಸ್ಟೆರಾಯಡ್ಸ್, ತಂಬಾಕು, ನಿಕೋಟಿನ್. ಸಮಾಜೀಕರಣ, ವಿಶ್ರಾಂತಿ, ದುಃಖ ಮರೆಯುವುದು, ಈ ಕಾರಣಗಳಿಂದ ಜನ ಈ ದುಶ್ಚಟ ಆರಂಭಿಸಿ ಮುಂದೆ ದಾಸರಾಗುತ್ತಾರೆ. ಇದೀಗ ಹೇಳಿದ ಬಹಳಷ್ಟು ಔಷಧಿಗಳ ಸತತ ಬಳಕೆಯಿಂದ, ಅದು ಮುಂದೆ ದುರ್ಬಳಕೆಯಾದಾಗ, ಈ ಚಟ ವ್ಯಸನಕಾರಿಯಾಗುತ್ತದೆ. ದೀರ್ಘಕಾಲದ, ಮತ್ತೆ ಮತ್ತೆ ಮರುಕಳಿಸುವ, ಬಿಡಲಾಗದ ರೋಗವಾಗುತ್ತದೆ.
ಇದು ಮೆದುಳಿನ ಮೇಲೆ ಪರಿಣಾಮ ಮಾಡಿ, ವ್ಯಕ್ತಿಯಯೋಚನೆ ಹಾಗೂ ನಿರ್ಧಾರ ಶಕ್ತಿ ಮೇಲೆ, ಹೊಡೆತ ಬಾರಿಸುತ್ತದೆ. ಇದರಿಂದ ಅಪಘಾತ, ಗಾಯ, ಸೋಂಕು ರೋಗಗಳು, ಇವೆಲ್ಲ ಅಪಾಯಗಳಿವೆ. ಅಸುರಕ್ಷಿತ ಲೈಂಗಿಕ ಸಂಬಂಧ ಹಾಗೂ ಚುಚ್ಚಿಕೊಳ್ಳುವ ಅದೇ ಸೂಜಿಯ ಮರುಬಳಕೆ ಇವುಗಳಿಂದ ಹೆಚ್.ಐ.ವಿ., ಏಡ್ಸ್, ಹೆಪಾಟಿಟಿಸ್ ಬರುವ ಸಾಧ್ಯತೆ ಹೆಚ್ಚು. ಗರ್ಭಿಣಿಯರು ಇವುಗಳನ್ನು ಸೇವಿಸಿದಾಗ, ಹುಟ್ಟುವ ಮಗುವಿಗೆ ಅನೇಕ ಮಾರಕ ರೋಗಗಳ ಸೋಂಕು ಬರುತ್ತದೆ. ಮಾರಿಜುಯಾನ, ಹಫೀಸ್, ಚರಸ್, ಭಾಂಗ್, ಗಾಂಜಾ ಇವೆಲ್ಲ ಸೇವಿಸಿದೊಡನೆ ಕೊಡುವ ಉನ್ಮಾದ, ಸೃಷ್ಟಿಸುವ ಕಾಲ್ಪನಿಕ ಸ್ನೇಹಿತರು, ಮಾರಾಟಗಾರರು, ಮಾದಕ ದ್ರವಗಳನ್ನು ಪದಾರ್ಥಗಳನ್ನು, ಸೇರಿಸಿ,ಅವರಿಗೆ ಒಂದು ರೀತಿಯ ಅಮಲುಸೃಷ್ಟಿಸುತ್ತಾರೆ.
ಹಳ್ಳಿಯ ಮುಗ್ಧ ಯುವಜನ ಹೈಸ್ಕೂಲ್-ಕಾಲೇಜು-ವಿಶ್ವವಿದ್ಯಾಲಯ ಸೇರಿದಾಗ ಸ್ನೇಹಿತರ ಹೆಸರಿನಲ್ಲಿ ಕೆಲವರು ಸೆಳೆಯುತ್ತಾರೆ. ಪ್ರತಿದಿನ ಆ ನಿಗದಿತ ಸಮಯಕ್ಕೆ ಅದು ಬೇಕೇ ಬೇಕು. ಇಲ್ಲದಿದ್ದರೆ ಮೈಕೈ ತುಂಬ ನೋವು, ಸಂಕಟ, ಉದ್ವಿಗ್ನತೆ, ಮಾನಸಿಕ ಗೊಂದಲ, ಭ್ರಮೆ ಸೃಷ್ಟಿಯಾಗುತ್ತದೆ. ಅದೇ ಜೀವನ ಎಂಬ ಭ್ರಮೆಯಲ್ಲೇ, ಅದರ ದಾಸ್ಯದಲ್ಲೇಸುಖವಿದೆ ಎಂದು, ಮಕ್ಕಳು ಯುವಜನ ಹಳ್ಳಕ್ಕೆ ಬೀಳುತ್ತಾರೆ. ಅವರಿಗೆ ದುಡ್ಡುಎಲ್ಲಿಂದ ಬರುತ್ತೆ? ಅಪ್ಪನ ಜೇಬಿನಿಂದ, ಅಮ್ಮನ ಬ್ಯಾಗ್ನಿಂದ ಅಣ್ಣನ ಪ್ಯಾಂಟಿನಿಂದ, ಮನೆ ದೇವರ ಹುಂಡಿಯಿಂದ ಕಳ್ಳತನ ಮಾಡುತ್ತಾರೆ.
ಹಣ ಸಾಲದಾದಾಗ ಬೇರೆಮನೆಗಳಲ್ಲಿ, ಅಂಗಡಿಗಳಲ್ಲಿ, ಕಳ್ಳತನ ದರೋಡೆ ಮಾಡಲು, ಅಸಹನೀಯ ಸ್ಥಿತಿಯಲ್ಲಿರುವ ಮಾದಕ ವ್ಯಸನಿಗಳನ್ನು ಮಾರಾಟಗಾರರು, ಪ್ರೇರೇಪಿಸುತ್ತಾರೆ. ವ್ಯಕ್ತಿ ವಸ್ತುಗಳ ಅಪಹರಣ, ಮಾನಭಂಗ, ಕೊಲೆ ಮಾಡಲೂ ಇವರನ್ನು ಸಿದ್ಧಮಾಡುವ ಕೃತಕ ಪರಿಸ್ಥಿತಿ, ಈ ದುಶ್ಚಟಕ್ಕೆ ಮಾರು ಹೋದವರ ಸುತ್ತ ನಿರ್ಮಾಣ ಮಾಡುತ್ತಾರೆ. ಆಕಾಶವಾಣಿಯ ಭದ್ರಾವತಿ, ರಾಯಚೂರು, ಬಿಜಾಪುರ, ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾದ, ನಾನು ಬರೆದು ನಿರ್ದೇಶಿಸಿಭಾಗವಹಿಸಿದ ಕಥಾ ಗೀತೆಗಳು, ಹಲೋ ಮೃತ್ಯು, ಆಧುniಕ ಅಸುರರು, ಚಟದಿಂದ ಚಟ್ಟ, ಮಾದಕ ಮಾರಿ ಮಸಣದ ದಾರಿ ಎಂಬ ರೇಡಿಯೋ ನಾಟಕಗಳನ್ನು ಇಲ್ಲಿ ನೆನೆಯ ಬಯಸುತ್ತೇನೆ. ಅಲ್ಲದೇ ರಂಗಭೂಮಿಯ ಮೇಲೆ ನಾನೇ ನಿರ್ದೇಶಿಸಿ ಅಭಿನಯಿಸಿದ ಈ ನಾಟಕಗಳ 25 ಪ್ರದರ್ಶನಗಳು, ಜನರಂಜನೆ, ಹಾಗೂ ಆರೋಗ್ಯಶಿಕ್ಷಣದ, ಕ್ರಾಂತಿಕಾರಿ ಪ್ರಯೋಗಗಳಾಗಿದ್ದವು.
ಹಲೋ ಮೃತ್ಯುವಿನಲ್ಲಿ ಮೃತ್ಯುಮುಖದಲ್ಲಿರುವ ಮಾದಕ ವ್ಯಸನಿ, ಮೃತ್ಯುದೇವತೆಯೊಂದಿಗೆ ತೋಡಿಕೊಳ್ಳುವ ಅಳಲು. ಈ ಗೀತ ರೂಪಕದಲ್ಲಿ ಪುಟ್ಟ ಎಂಬ ಹಳ್ಳಿಯ ಯುವಕ, ನಗರದ ಸ್ನೇಹಿತರ ಒತ್ತಾಯ ಹಾಗೂ ಕುತೂಹಲದಿಂದ ಆರಂಭಿಸಿದ ಮಾದಕ ವ್ಯಸನ,ಆತನನ್ನು ಬಳಲಿಸಿ, ನೋವು, ಸಂಕಟ, ಮರಣ ತರುವ ವಿವರ ವರ್ಣಿಸಿತು.
ಆಧುನಿಕ ಅಸುರರು ನಾಟಕದಲ್ಲಿ, ತಂಬಾಕಾಸುರ, ಗುಟಕಾಸುರ, ಧೂಮಾಸುರ, ಮದಿರಾಸುರ, ಮಾದಕಾಸುರ, ಮಾದಕ ಪಿಶಾಚಿ,ದುರಾಶೆ ಮೋಹಿನಿ, ಗಾಂಜಾಸುರ,ಹಷೀಸ್ ರಾಣಿ, ಕೊಕೈನ್ ರಾಜ, ಈ ಪಾತ್ರಗಳು, ಯುವಜನರ ಸುತ್ತ ಸುತ್ತುತ್ತ,
ಬಲಗಡೆಯಿಂದ ಎಡಗಡೆ, ಎಡಗಡೆಯಿಂದ ಬಲಗಡೆ, ಆಕರ್ಷಕವಾಗಿ ಕುಣಿಯುತ್ತಾ ಸಾಗಾಣಿಕೆ ಮಾಡುವುದು, ಸಂಗ್ರಹಿಸುವುದು, ಬಳಸುವುದು ಎಲ್ಲ ಕಾನೂನುಬಾಹಿರವಾಗಿದೆ. 1986ರ ಮಾರ್ಚ್ನಿಂದ ಮಾದಕ ಪದಾರ್ಥಗಳ ನಿಯಂತ್ರಣ ವಿಭಾಗ ಜಾರಿಗೆ ಬಂದಿದೆ. ಈ ಕಾಯಿದೆಗೆ 1988, 2001 ಹಾಗೂ 2014ರಲ್ಲಿ 3 ಬಾರಿ ತಿದ್ದುಪಡಿ ಬಂದಿದೆ.
ಇದು ಇಡೀ ಭಾರತ ದೇಶ, ಭಾರತ ದೇಶದಹೊರಗಿರುವ ಎಲ್ಲ ಭಾರತೀಯರು, ಈ ದೇಶದಲ್ಲಿ ದಾಖಲಾಗಿರುವ ಎಲ್ಲ ಹಡಗು ಹಾಗೂ ವಿಮಾನಗಳಲ್ಲಿ ಪಯಣಿಸುವ ಎಲ್ಲ ಪ್ರಯಾಣಿಕರಿಗೂ ಇದು ಅನ್ವಯಿಸುತ್ತದೆ. ಇದರ ಪ್ರಕಾರ 1 ಕೆ.ಜಿ.ಗಿಂತ ಕಡಿಮೆ ಪ್ರಮಾಣ ಹೊಂದಿದ್ದರೆ, 6 ತಿಂಗಳವರೆಗೆ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ. ವ್ಯಾಪಾರಿ ಪ್ರಮಾಣಕ್ಕಿಂತ ಕಡಿಮೆ, ಆದರೆ, ಮೇಲಿನ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣವಿದ್ದರೆ,10 ವರ್ಷಗಳವರೆಗೆ ಕಠಿಣ ಸಜೆ ಹಾಗೂ 1 ಲಕ್ಷ ರೂಪಾಯಿವರೆಗೆ ದಂಡ.ವಾಣಿಜ್ಯ ಪ್ರಮಾಣದಲ್ಲಿದ್ದರೆ, 20 ವರ್ಷಗಳವರೆಗೆ ಕಠಿಣ ಶಿಕ್ಷೆ ಹಾಗೂ 2 ಲಕ್ಷರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ನಮ್ಮೆಲ್ಲರ ಜವಾಬ್ದಾರಿ:- ಔಷಧಿಗಳ ಅವಲಂಬನೆ ಒಂದು ರೋಗವೇ ಹೊರತು ಅಪರಾಧವಲ್ಲ. ನಿಜವಾದ ಅಪರಾಧಿಗಳು ಔಷಧ ಸಾಗಾಣಿಕೆದಾರರು. ಆಕ್ರಮ ಔಷಧಗಳಿಗೆ ಬೇಡಿಕೆ ಕಡಿಮೆಯಾಗುವವರೆಗೆ, ಇದರ ಬೇಸಾಯ, ಉತ್ಪಾದನೆ ಹಾಗೂ ಸಾಗಾಣಿಕೆ ಸಂಪೂರ್ಣ ತಡೆಯಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮುದಾಯ, ಕುಟುಂಬ, ಶಾಲೆ, ನಾಗರಿಕ ಸಮಾಜ, ಸರಕಾರ, ಸ್ವಯಂ ಸೇವಾ ಸಂಘಗಳು, ಧಾರ್ಮಿಕ ಮುಖಂಡರು, ಧಾರ್ಮಿಕ ಸಂಘ ಸಂಸ್ಥೆಗಳು, ಜನರು ಈ ಮಾದಕ ಪದಾರ್ಥಗಳಿಂದ ದೂರವಾಗಲು ಪ್ರಯತ್ನಿಸಬೇಕು.
ಸಮಾಜವನ್ನು ಮಾದಕ ವಸ್ತುಗಳಿಂದ ರಕ್ಷಿಸುವುದು,ತಡೆಯುವಿಕೆ ಹಾಗೂ ಆರೋಗ್ಯ ವೃದ್ಧಿಸುವ ಚಟುವಟಿಕೆಗಳ ಮೇಲೆ ಗಮನ:-ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸುವುದು, ಸಮತೋಲ ಪೌಷ್ಠಿಕತೆ, ವ್ಯಾಯಾಮ, ವಿಶ್ರಾಂತಿ ಹಾಗೂ ಮನರಂಜನೆ, ಕ್ರಿಯಾತ್ಮಕ ಹವ್ಯಾಸಗಳು,ಇಚ್ಛಾತ್ಮಕ ಚಿಂತನೆ, ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು,ಇವುಗಳನ್ನು ಬೆಳೆಸಿಕೊಳ್ಳಲು ಪ್ರೇರಣೆ ನೀಡುವುದು. ಈ ಚಟ ತಡೆಯಲು ಹಾಗೂಮಾದಕ ವ್ಯಸನಿಗಳ ಪುನರ್ವಸತಿಯಲ್ಲಿ ಯೋಗ ಹಾಗೂ ಧ್ಯಾನಗಳು ಹೆಚ್ಚು ಉಪಕಾರಿ.
-ಎನ್.ವ್ಹಿ.ರಮೇಶ್
ನಿವೃತ್ರ ಕಾರ್ಯಕ್ರಮ ಅಧಿಕಾರಿಗಳು ಆಕಾಶವಾಣಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ