ಮಂಗಳೂರು: ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇದರ 15ನೇ ಘಟಿಕೋತ್ಸವವು ಶನಿವಾರ ಜೂ. 14ರಂದು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ನಡೆಯಿತು.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಟರಾದ ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ. ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ ಬಿ. ರವಿ, ಎನ್.ಐ.ಟಿ.ಕೆ. ಸುರತ್ಕಲ್ ನ ನಿರ್ದೇಶಕರು ಮಾತನಾಡಿ, ಇಂದಿನ ಯುವ ಪೀಳಿಗೆಗಳು ಶಿಕ್ಷಣದಿಂದ ದೊರೆತ ಜ್ಞಾನ, ತರಗತಿಯ ಹೊರಗಿನಿಂದ ಪಡೆದ ಅನುಭವದಿಂದ ತಮ್ಮ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. ಸ್ವಾಭಾವಿಕ ಬುದ್ದಿಮತ್ತೆಯು ನಮ್ಮ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಲು ಪ್ರಯೋಜನವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲೂ ಕೃತಕ ಬುದ್ದಿಮತ್ತೆಯು ತಾಂತ್ರಿಕತೆಯನ್ನು ಒಳಗೊಂಡಿದ್ದು ಯುವಜನತೆಯೂ ಅದರಂತೆ ಕಾರ್ಯನಿರ್ವಹಿಸುವಂತೆ ಮಾಡುತ್ತಿದೆ. ತಂತ್ರಜ್ಞಾನವು ಮಾನವನ ನೋವನ್ನು ಅರ್ಥಮಾಡಿಕೊಳ್ಳುವಂತೆ ನಟಿಸುತ್ತದೆ ಹೊರತು ಪ್ರಾಯೋಗಿಕವಾಗಿ ಸ್ಪಂದಿಸಲು ಸಾಧ್ಯವಿಲ್ಲ. ವ್ಯಕ್ತಿಯೊಬ್ಬ ನೈತಿಕತೆಯ ಮೌಲ್ಯವನ್ನು ಅಳವಡಿಸಿದಾಗ ಉತ್ತಮ ಜೀವನವನ್ನು ನಡೆಸಲು ಸಾಧ್ಯ ಎಂದರು.
ಮಂಗಳೂರು ವಲಯದ ಅರಣ್ಯ ಉಪ ಸಂರಕ್ಷಣಾಧಿಕಾರಿ ಶ್ರೀ ಆಂಟನಿ ಮರಿಯಪ್ಪ, ಐ.ಎಫ್.ಎಸ್., ಗೌರವ ಅತಿಥಿಗಳಾಗಿ ಮಾತನಾಡಿ, ಘಟಿಕೋತ್ಸವವು ನಿಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಹಂತದ ಮೊದಲ ಮೆಟ್ಟಿಲು. ಈ ಹಂತದಲ್ಲಿ ನಮ್ಮ ಸ್ವ-ಜವಬ್ದಾರಿಯನ್ನು ಅರಿತುಕೊಂಡು, ನಮ್ಮನ್ನು ನಾವು ಪ್ರೇರೇಪಿಸಲು ಅವಕಾಶವನ್ನು ನೀಡುತ್ತದೆ. ಪದವಿ ಪಡೆದ ನೀವು ಮುಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಬೆಳೆಯುವಾಗ ಶಿಸ್ತು, ಸ್ವ-ಸಮರ್ಪಣೆ ಹಾಗೂ ನಿರ್ಣಾಯಕಗಳನ್ನು ತೆಗೆದುಕೊಳ್ಳಲು ಮುಂದಾಗಬೇಕು. ಇವೆಲ್ಲದರ ಜೊತೆಗೆ ಪರಿಸರ ಸುಸ್ಥಿರತೆಯನ್ನು ಕಾಪಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಮಂಗಳೂರು ಜೆಸ್ವಿಟ್ ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷರು ಹಾಗೂ ಕರ್ನಾಟಕ ಜೆಸ್ವಿಟ್ ಪ್ರೊವಿನ್ಸ್ ಇದರ ಪ್ರಾಂತೀಯ ಮುಖ್ಯಸ್ಥ ವಂ. ಫಾ. ಡಯೋನಿಶಿಯಸ್ ವಾಝ್ ಎಸ್.ಜೆ. ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ಆರ್ಥಿಕ ಲಾಭಕ್ಕಾಗಿ ಮಾತ್ರ ಬಳಸದೆ ಸಮಾಜಕ್ಕೆ ತಮ್ಮಿಂದಾಗುವ ಕೊಡುಗೆಯನ್ನು ನೀಡಿ ಮಾದರಿಯಾಗಬೇಕು. ನಾವು ಬೆಳೆದು ಬಂದ ಹಾದಿಯನ್ನು ಮರೆಯದೇ, ನಮ್ಮ ಜೊತೆಗಿರುವವರೊಂದಿಗೆ ಕೂಡಿ ಬೇರೆತಾಗ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯ ಎಂದರು.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಟರಾದ ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ. ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಿಂದ ಕಲಿತಿರುವ ಮೌಲ್ಯಗಳ್ಳನ್ನು ಸ್ವ-ಜೀವನದಲ್ಲಿ ಅಳವಡಿಸಿಕೊಡುವುದರ ಜೊತೆಗೆ ನಿಮ್ಮೊಂದಿಗಿರುವ ಇತರರಿಗೂ ಅವುಗಳ ಬಗ್ಗೆ ತಿಳಿಸಬೇಕು. ಯಾವುದೇ ಒಂದು ವಿಷಯ ನಿಮ್ಮ ಹೃದಯ ಮುಟ್ಟಿದಾಗ ಅದು ನಿಮ್ಮದಾಗುತ್ತದೆ. ತಂತ್ರಜ್ಞಾನದ ಇಂದಿನ ಯುಗದಲ್ಲಿ ಇತರರ ನೋವು ಕಷ್ಟಗಳಿಗೆ ಸ್ಪಂದಿಸಿ ಅವರೊಂದಿಗೆ ನಾವು ಕೈ ಜೋಡಿಸಬೇಕು ಎಂದರು.
ಈ ಸಂಧರ್ಭದಲ್ಲಿ ಕಳೆದ ಸಾಲು ಮೆದುಳು ನಿಷ್ಕ್ರಿಯಗೊಂಡು, ಅಂಗಾಂಗ ದಾನ ಮಾಡಿದ ಕಾಲೇಜಿನ ವಿದ್ಯಾರ್ಥಿನಿ ಗ್ಲೋರಿಯಾ ರೋಡ್ರಿಗಸ್ ಇವರ ತಾಯಿ ಘಟಿಕೋತ್ಸವದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 94 ರ್ಯಾಂಕುಗಳು ಹಾಗೂ ವಿಶೇಷ ಬಹುಮಾನಗಳನ್ನು ವಿತರಿಸಲಾಯಿತು. ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ವಿದ್ಯಾರ್ಥಿಗಳು ಒಟ್ಟು 2567 ವಿದ್ಯಾರ್ಥಿಗಳು ಘಟಿಕೋತ್ಸವ ಪ್ರಮಾಣಪತ್ರವನ್ನು ಪಡೆದುಕೊಂಡರು.
ಕಾಲೇಜಿನ ಪ್ರಾಂಶುಪಾಲ ವಂ. ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ. ಸ್ವಾಗತಿಸಿದರು. ಕುಲಸಚಿವ ಡಾ. ಆಲ್ವಿನ್ ಡೆಸಾ ರ್ಯಾಂಕ್ ವಿದ್ಯಾರ್ಥಿಗಳ ಹಾಗೂ ವಿಶೇಷ ಬಹುಮಾನ ವಿಜೇತ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.
ಆಡಳಿತ ಮಂಡಳಿಯ ಸದಸ್ಯರು, ಶೈಕ್ಷಣಿಕ ಮಂಡಳಿಯ ಸದಸ್ಯರು, ನಿರ್ದೇಶಕರು, ವಿವಿಧ ನಿಕಾಯದ ಡೀನ್ಗಳು, ಬೋಧಕ-ಬೋಧಕೇತರ ಸದಸ್ಯರು, ಸಂತ ಅಲೋಶಿಯಸ್ ಕಾಲೇಜ್ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಎ ವನಜಾ 15ನೇ ಘಟಿಕೋತ್ಸವದ ಸಂಯೋಜಕರು ವಂದಿಸಿ, ಉಪನ್ಯಾಸಕರುಗಳಾದ ಮನೋಜ್ ಫೆರ್ನಾಂಡಿಸ್, ಡಾ. ಮೋನಾ ಮೆಂಡೋನ್ಸಾ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ