ಮಂಗಳೂರು: ಭಾರತೀಯ ಸೇನಾಪಡೆಗಳು ಪಾಪಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಡೆಸುತ್ತಿರುವ 'ಆಪರೇಶನ್ ಸಿಂದೂರ' ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡು ಭಯೋತ್ಪಾದಕ ನೆಲೆಗಳು ಸಂಪೂರ್ಣ ನಾಶವಾಗಲಿ, ಮತ್ತು ಭಾರತಕ್ಕೆ ಸಂಪೂರ್ಣ ವಿಜಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ಬಿಜೆಪಿ ಜಿಲ್ಲಾ ವಕ್ತಾರ ರಾಜಗೋಪಾಲ್ ರೈ ಅವರ ನೇತೃತ್ವದಲ್ಲಿ ಇಂದು ಸಂಜೆ ಉರ್ವ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಗೋಪಾಲ್ ರೈ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರರ ನಾಶಕ್ಕೆ ಕೈಗೊಂಡ ದಿಟ್ಟ ಕಾರ್ಯಾಚರಣೆಯ ನಿರ್ಧಾರವನ್ನು ಶ್ಲಾಘಿಸಿದರು. ಹಿಂದೂಗಳ ಹತ್ಯೆಗೆ ಪ್ರತೀಕಾರ ತೀರಿಸುವ ಮೂಲಕ ಭಯೋತ್ಪಾದಕರ ನೆಲೆಯಾದ ಪಾಕಿಸ್ತಾನದ ಹೆಡೆಮುರಿ ಕಟ್ಟಬೇಕು. ಅದಕ್ಕೆ ದೇವರ ಅನುಗ್ರಹವಿರಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನದ ಅಧ್ಯಕ್ಷರಾಗಿರುವ ಸುರೇಂದ್ರ ರಾವ್ ಅವರು ಮಾತನಾಡಿ, ಭಗವಂತನ ಅನುಗ್ರಹದಿಂದ ಭಾರತೀಯ ಸೇನಾಪಡೆಗಳು ಅಭೂತಪೂರ್ವ ವಿಜಯವನ್ನು ಸಾಧಿಸಲಿ ಎಂದು ಪ್ರಾರ್ಥಿಸಿದರು. ಜತೆಗೆ ದೇಶದೊಳಗೇ ಇರುವ ದೇಶದ್ರೋಹಿಗಳ ಮನಃ ಪರಿವರ್ತನೆಯಾಗಲಿ ಎಂದು ಹಾರೈಸಿದರು.
ಜಯಪ್ರಕಾಶ್ ರಾವ್ ಅವರು ಮಾತನಾಡಿ, ಪಾಕ್ ಪೋಷಿತ ಉಗ್ರರು ಹಿಂದೂಗಳನ್ನು ಹುಡುಕಿ ಹುಡುಕಿ ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಕ್ಷುದ್ರ ರಾಕ್ಷಸರನ್ನು ಮಟ್ಟಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರ ಕೈಗೊಂಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಅವರ ಇಚ್ಛಾಶಕ್ತಿಗೆ ಭಗವಂತ ಮತ್ತಷ್ಟು ಬಲ ತುಂಬಲಿ ಎಂದು ಹಾರೈಸಿದರು.
ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಮಣಿಯಾಣಿ ಅವರೂ ಭಾರತದ ಶತ್ರುಗಳ ನಾಶಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಅನಂತರ ದೇವರ ಮುಂದೆ ದೀಪ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ತುಳುಕೂಟದ ಅಧ್ಯಕ್ಷ ಎ.ಸಿ ಭಂಡಾರಿ, ದೇವಸ್ಥಾನದ ಕೋಶಾಧಿಕಾರಿ ಗೋಪಾಲಕೃಷ್ಣ ಪೂಜಾರಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷರಾಗಿರುವ ನೆಲ್ಸನ್ ಕ್ಯಾಸ್ಟಲಿನೊ, ಮಾಜಿ ಕಾರ್ಪೊರೇಟರ್ ಗಳಾದ ರಾಧಾಕೃಷ್ಣ, ಜಯಲಕ್ಷ್ಮಿ ವಿ ಶೆಟ್ಟಿ, ಬಜರಂಗ ದಳದ ಸಂಚಾಲಕ ದೀಕ್ಷಿತ್, ದೇವಸ್ಥಾನದ ರಾಜಗೋಪಾಲ ಶೆಟ್ಟಿ, ರವಿ ಶೆಣೈ, ಬಾಲಕೃಷ್ಣ ಪೂಜಾರಿ, ಗುರುಪ್ರಸಾದ್ ರಾವ್, ಉಮೇಶ್ ಶೆಟ್ಟಿ, ಸುರೇಖಾ ಹೆಗ್ಡೆ, ಅಮಿತ್ ರಾಜ್, ನರೇಶ್ ಆಳ್ವ, ಲೋಕೇಶ್ ಶೆಟ್ಟಿ, ಪುರಂದರ್, ಶ್ರೀಕಾಂತ್, ಸೌಮ್ಯಾ ಅಮಿತ್ ರಾಜ್, ಶ್ರೀಕಾಂತ್, ಸವಿತಾ ವರದರಾಜ್, ರಾಹುಲ್ ಮುಂತಾದವರಿದ್ದರು.
ಮಂಗಳೂರು: ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸುತ್ತಿರುವ ನಿರ್ಣಾಯಕ ಪ್ರಹಾರ- 'ಆಪರೇಶನ್ ಸಿಂದೂರ'ದ ಯಶಸ್ಸಿಗಾಗಿ ಪ್ರಾರ್ಥಿಸಿ ಮಂಗಳೂರಿನ ಕೊಟ್ಟಾರದಲ್ಲಿರುವ ಶ್ರೀ ವಿದ್ಯಾಸರಸ್ವತಿ ಮಂದಿರದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ರಾಜಗೋಪಾಲ್ ರೈ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ವಿಶೇಷ ಪ್ರಾರ್ಥನೆ ನೆರವೇರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ