ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಪ್ರೊ. ಅರಬಿ ಅವರು ತಮ್ಮದೇ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದೆ.
2018ರಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯ ಆರೋಪವನ್ನು ಆಧರಿಸಿ ವಿಶ್ವವಿದ್ಯಾನಿಲಯದ ಪ್ರೊ. ಕಿಶೋರೀ ನಾಯಕ್ ಅಧ್ಯಕ್ಷತೆಯ ಆಂತರಿಕ ದೂರು ಸಮಿತಿ ನಡೆಸಿದ್ದು ವಿಚಾರಣೆಯಲ್ಲಿ ಆ ವಿದ್ಯಾರ್ಥಿನಿಯು ನೀಡಿರುವ ದೂರು ಮತ್ತು ಮಾಡಿರುವ ಆರೋಪವು ಸಾಬೀತಾಗಿದೆ ಮತ್ತು ಆ ಸಂದರ್ಭದಲ್ಲಿ ಸಿಸಿ ಕ್ಯಾಮರಾದಲ್ಲಿಯೂ ಲೈಂಗಿಕ ಕಿರುಕುಳ ನೀಡುತ್ತಿರುವ ದೃಶ್ಯ ಸೆರೆಯಾಗಿತ್ತು ಎಂದು ಎಬಿವಿಪಿ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.
ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕರಾದ ಸುವಿತ್ ಈ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಪತ್ರದ ಪೂರ್ಣ ವಿವರ ಇಂತಿದೆ:
ಭಾರತದಲ್ಲಿ ಹೆಣ್ಣು ಅತ್ಯಂತ ಪೂಜನೀಯವಾದವಳು. ಅವಳನ್ನು ತಾಯಿ ಎಂದು ಕರೆದಂತಹ ಸಂಸ್ಕೃತಿ ನಮ್ಮದು. ಅದೇ ರೀತಿ ವಿದ್ಯೆಯೂ ಕೂಡಾ ಶಾರದೆ ಎಂದೇ ಹಿಂದಿನಿಂದಲೂ ನಾವು ನಂಬಿಕೊಂಡು ಬಂದಿದ್ದೇವೆ.
ಒಂದು ವಿಶ್ವವಿದ್ಯಾನಿಲಯ ಎಂದರೆ ಅದು ಶಾರದೆಯ ದೇಗುಲ. ಅಂತಹ ಶಾರದೆಯ ದೇಗುಲದಲ್ಲಿ ಪ್ರತಿ ಹೆಣ್ಣಿಗೂ ಕೂಡ ಗೌರವವಿದೆ ಆದರೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ಈ ಘಟನೆಯಿಂದ ಇಡೀ ಸಮಾಜ ತಲೆತಗ್ಗಿಸುವಂಥಾಗಿದೆ.
2018ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಅರಬ್ಬಿ ಅವರ ಮೇಲೆ ಅವರದೇ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಕುರಿತು ವಿಚಾರಣೆಯನ್ನು ವಿಶ್ವವಿದ್ಯಾನಿಲಯದ ಪ್ರೊ. ಕಿಶೋರೀ ನಾಯಕ್ ಅಧ್ಯಕ್ಷತೆಯ ಆಂತರಿಕ ದೂರು ಸಮಿತಿ ನಡೆಸಿದ್ದು ವಿಚಾರಣೆಯಲ್ಲಿ ಸದರಿ ವಿದ್ಯಾರ್ಥಿನಿಯು ನೀಡಿರುವ ದೂರು ಮತ್ತು ಮಾಡಿರುವ ಆರೋಪವು ಸಾಬೀತಾಗಿದೆ ಮತ್ತು ಆ ಸಂದರ್ಭದಲ್ಲಿ ಸಿಸಿ ಕ್ಯಾಮರಾದಲ್ಲಿಯೂ ಲೈಂಗಿಕ ಕಿರುಕುಳ ನೀಡುತ್ತಿರುವ ದೃಶ್ಯ ಸೆರೆಯಾಗಿತ್ತು.
ಆದರೆ ಸುಮಾರು ಎರಡುವರೆ ವರ್ಷಗಳ ಕಾಲ ಆಗ ಕುಲಸಚಿವರಾಗಿದ್ದ ಎ. ಎಂ ಖಾನ್ (ಮೊಹಮ್ಮದ್ ಐರಾಣಿ ಖಾನ್) ಅವರು ಆ ವರದಿಯನ್ನು ಅಡಗಿಸಿಟ್ಟು ಪ್ರೊ. ಅರಬಿ ಅವರಿಗೆ ಶಿಕ್ಷೆಗೊಳಪಡಿಸುವ ಅಧಿಕಾರ, ಅವಕಾಶಗಳೆರಡೂ ಇದ್ದರೂ, ತಮ್ಮದೇ ಸಮುದಾಯದ ಅವರಿಗೆ ಶಿಕ್ಷೆಯಾಗದ ಹಾಗೆ ನೋಡಿಕೊಂಡರು. ಒಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯನ್ನು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಕ್ಷಿಸುವದು ಸಹ ಒಂದು ಅಷ್ಟೇ ಗಂಭೀರವಾದ ಅಪರಾಧವಾಗಿದೆ.
ಪ್ರೊ. ಅರಬ್ಬಿ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ವಿ.ವಿಗೆ ಸಾಧ್ಯವಾಗಲಿಲ್ಲ. ಯಾವುದೇ ಶಿಕ್ಷೆ ಕೊಡುವ ಮೊದಲು ಅಪರಾಧಿಗೆ ನೋಟೀಸ್ ನೀಡಬೇಕು ಎಂಬ ನಿಯಮ ತಿಳಿದಿದ್ದರೂ ಅಂದಿನ ಕುಲಪತಿಗಳಾದ ಪೊ. ಪಿ ಎಸ್ ಯಡಪಡಿತ್ತಾಯರ ಅಧ್ಯಕ್ಷತೆಯ ಸಿಂಡಿಕೇಟ್ ಅವರನ್ನು ಅಮಾನತು ಮಾಡಿತ್ತು. ನೀವು ಅವರಿಗೆ ನೋಟೀಸ್ ನೀಡದೇ ಅಮಾನತುಗೊಳಿಸಿದ್ದೀರಿ ಎಂದು ರಾಜ್ಯ ಹೈಕೋರ್ಟ್ ಪ್ರೊ. ಅರಬಿ ಅವರ ಅಮಾನತಿಗೆ ತಡೆ ತಂದಾಗಲೂ ಅದನ್ನು ವಿವಿ ಪ್ರಶ್ನಿಸಿ ಅಪೀಲು ಸಹ ಹೋಗಲಿಲ್ಲ. ಮಾನ್ಯ ಹೈಕೋರ್ಟ್ ನೀಡಿದ ಸಲಹೆಗಳನ್ನು ಗಣನೆಗೆ ಪಡೆದುಕೊಂಡು ಶಿಕ್ಷೆ ವಿಧಿಸುವ ಅವಕಾಶ ಇತ್ತು. ಆ ಸಂದರ್ಭದಲ್ಲಿ ಪೊಲೀಸ್ ಕೇಸ್ ದಾಖಲಿಸುವ ಅವಕಾಶವೂ ಇತ್ತು. ಅದನ್ನೂ ಸಹ ವಿ.ವಿ ಮಾಡಲಿಲ್ಲ. ಪ್ರೊ. ಅರಬ್ಬಿ ಗಂಭೀರ ಅಪರಾಧ ಎಸಗಿದ ಆಪರಾಧಿಯಾದರೂ ಯಾವುದೇ ಶಿಕ್ಷೆ ಅನುಭವಿಸದೆ ನಿವೃತ್ತರಾಗಿ ಲಕ್ಷಗಟ್ಟಲೆ ನಿವೃತ್ತಿ ಭತ್ಯೆ ಪಡೆದು ಹೊರಟು ಹೋದರು.
ಪ್ರೊ. ಎ.ಎಂ ಖಾನ್ ಅವರ ಮೇಲಿನ ಈ ಆರೋಪವೂ ಸಹ ಕೇವಲ ಆರೋಪವಾಗಿರದೆ ನಿವೃತ್ತ ನ್ಯಾಯಮೂರ್ತಿ ಜ. ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಎಸಗಿದ ಅನ್ಯಾಯ ಸಾಬೀತಾಗಿದೆ. ಪ್ರಸ್ತುತ ತನಿಖಾ ವರದಿಯಲ್ಲಿ ಮಾನ್ಯ ತನಿಖಾಧಿಕಾರಿಗಳು ಅವರ ಮೇಲೆ ಹೊರಿಸಿದ ಆರೋಪವು ಸತ್ಯ ಎಂದು ವರದಿ ನೀಡಿದ್ದಾರೆ. ಜೊತೆಗೆ ಅವರು ಕುಲಸಚಿವರಾಗಿದ್ದ ಕಾರಣಕ್ಕೆ ಅವರಿಗೆ ಶಿಕ್ಷೆ ನೀಡುವ ಅಧಿಕಾರ ವಿ.ವಿಯ ಸಿಂಡಿಕೇಟ್ ಗೆ ಇಲ್ಲ ಆ ಕಾರಣಕ್ಕಾಗಿ ಅವರಿಗೆ ಶಿಕ್ಷೆ ನೀಡುವಂತೆ ಉನ್ನತ ಶಿಕ್ಷಣ ಸಚಿವಾಲಯದ ಮುಖ್ಯ ಕಾರ್ಯದರ್ಶಿಗಳಿಗೆ ಶಿಕ್ಷೆ ನೀಡಲು ಶಿಫಾರಸ್ಸು ಮಾಡಬೇಕಾಗಿತ್ತು. ಆದರೆ ವಿವಿ ಅಲ್ಲಿಯೂ ಸರಿಯಾಗಿ ಪ್ರಕರಣವನ್ನು ಸರ್ಕಾರಕ್ಕೆ ತಿಳಿಸಲಾಗಲಿಲ್ಲ ಎಂದು ಮಾನ್ಯ ನಾಯಮೂರ್ತಿಗಳೇ ವರದಿಯಲ್ಲಿ ತಿಳಿಸಿದ್ದಾರೆ.
ಆದರೆ ನಮ್ಮ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಪ್ರೊ ಖಾನ್ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಿ ನಂತರ ಇನ್ನು ಹೀಗೆ ತಪ್ಪು ಮಾಡಬೇಡಿ ಎಂದು ಬುದ್ದಿ ಹೇಳಿ ಕಳುಹಿಸಿ ಬಿಟ್ಟಿದೆ.
ನಮ್ಮ ದೇಶದಲ್ಲಿ ಒಂದು ಹೆಣ್ಣಿಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಲು ನಮ್ಮ ವಿಶ್ವವಿದ್ಯಾನಿಲಯದ ಅಧಿಕಾರಿಗಳನ್ನು ಯಾವ ಶಕ್ತಿ ತಡೆಯಿತು ಅನ್ನುವುದೇ ಬಹಳ ಸೋಜಿಗದ ಸಂಗತಿ. ಈ ಬಗ್ಗೆ ಮಹಿಳಾ ಆಯೋಗ ಗಂಭೀರವಾಗಿ ಕ್ರಮ ಕೈಗೊಂಡು ಮುಂದೆಂದೂ ಇಂತಹ ಅನ್ಯಾಯ ನಡೆಯದ ಹಾಗೆ ಇದರಲ್ಲಿ ಪಾಲ್ಗೊಂಡ ಎಲ್ಲಾ ಆಧಿಕಾರಿಗಳ ಮೇಲೆ ಮಾರ್ಗದರ್ಶಕ ರೀತಿಯಲ್ಲಿ ಶಿಸ್ತುಕ್ರಮವನ್ನು ಕೈಗೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಸುವಿತ್ ಪತ್ರದಲ್ಲಿ ಮನವಿ ಮಾಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ