ಸಾಗರ: ಸಾಗರ ತಾಲೂಕು ಆಡಳಿತ ಸೌಧದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ ಇರುವುದು ಎರಡನೇ ಮಹಡಿಯಲ್ಲಿ. ಈ ಮಹಡಿಗೆ ಹತ್ತಿ ಇಳಿಯಲು ಲಿಫ್ಟ್ ವ್ಯವಸ್ಥೆ ಇದ್ದರೂ ಕೆಲವು ಸಮಯದಿಂದ ಅದು ನಿಷ್ಕ್ರಿಯವಾಗಿದೆ. ಹೀಗಾಗಿ ಭೂ ದಾಖಲೆಗಳಿಗಾಗಿ ಕಛೇರಿಗೆ ಬರುವ ಅಶಕ್ತರು, ಹಿರಿಯ ನಾಗರಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ನಾಗರಿಕರು ದೂರಿದ್ದಾರೆ.
ಇತ್ತೀಚೆಗೆ ವಿಜಯನಗರ ಬಡಾವಣೆಯಲ್ಲಿ ವಾಸಿಸುವ ಹಿರಿಯ ನಾಗರಿಕರೊಬ್ಬರು ಈ ಕಛೇರಿಗೆ ಭೇಟಿ ನೀಡಿದಾಗ ಲಿಫ್ಟ್ ಅವ್ಯವಸ್ಥೆಯಿಂದ ತಮಗಾದ ತೊಂದರೆಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಸುಮಾರು ಮೂವತ್ತೈದು ವರ್ಷ ಪ್ರೌಢಶಾಲಾ ಶಿಕ್ಷಕ/ ಮುಖ್ಯ ಶಿಕ್ಷಕನಾಗಿ ದುಡಿದಿರುವ ಅವರು, ಇತ್ತೀಚೆಗೆ ದೃಢೀಕೃತ ಭೂ ದಾಖಲೆಗಳನ್ನು ಪಡೆಯಲು ಕಛೇರಿಗೆ ತೆರಳಿದ್ದಾರೆ. ಆಗ ಅಲ್ಲಿರುವ ಲಿಫ್ಟ್ ಹಾಳಾಗಿರುವುದು ಅವರ ಗಮನಕ್ಕೆ ಬಂದಿದೆ. ಎರಡೆರಡು ಬಾರಿ ಮಹಡಿ ಹತ್ತಿ ಇಳಿಯುವ ಸನ್ನಿವೇಶ ಎದುರಾದಾಗ ತಮ್ಮಂತಹ ಹಿರಿಯ ನಾಗರಿಕರಿಗೆ ಆಗುವ ಸಂಕಷ್ಟವನ್ನು ಅವರು ವಿವರಿಸಿದ್ದಾರೆ.
"ನನಗೆ ಭೂ ದಾಖಲೆ, ವ್ಯವಸಾಯದ ಬಗ್ಗೆ ಏನೂ ಅರಿವಿಲ್ಲ, ಒಪ್ಪಿಕೊಳ್ಳುತ್ತೇನೆ. ಆದರೆ ಇಂದು ಅಗತ್ಯವಾಗಿ ಬೇಕಾದ ಕೆಲವು ದಾಖಲೆಗಳ ದೃಢೀಕೃತ ನಕಲುಗಳಿಗಾಗಿ" ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕ ಮಾಡಿದೆ. ಆದರೆ ರಾಮ, ರಾಮ ಯಾರಿಗೂ ಈ ಪರಿಸ್ಥಿತಿ ಬೇಡ. ಇರುವುದೊಂದೇ ಲಿಫ್ಟ್. ಅದೂ ಕೆಲಸ ಮಾಡುತ್ತಿಲ್ಲ. ಆ ಕಛೇರಿ ಇರುವುದು ಎರಡನೇ ಮಹಡಿಯಲ್ಲಿ. ಮಗಳೊಂದಿಗೆ ಹೇಗೋ ಹತ್ತಿ ಹೋದೆ".
"ಮಹಡಿ ಮೇಲಿನ ಅಧಿಕಾರಿಗಳು ಈ ಎಲ್ಲ ಸಾಗುವಳಿದಾರರ ಪಹಣಿ ಬೇಕೇ ಬೇಕು" ಎಂದರು. ಅದಕ್ಕಾಗಿ ಮತ್ತೆ ಕೆಳಗಿಳಿಯಬೇಕು. ಸಂಬಂಧಿಸಿದ ಗುಮಾಸ್ತೆ ಹೇಳಿದರು- "ಅಂಕಲ್ ನೀವು ಹೊರಗೆ ಕುಳಿತಿರಿ. ನಿಮ್ಮ ಮಗಳು ಕೆಳಗಿಳಿದು ಪಹಣಿ ತರಲಿ". ನಾನು ಕುಳಿತೆ. ಮಗಳು ಎಲ್ಲಾ ಪಹಣಿ ತಂದಳು. ನನಗೆ ಬೇಕಾದ ದಾಖಲೆಗಳ ನಕಲನ್ನು ಒಂದು ವಾರದಲ್ಲಿ ಸಿದ್ಧಪಡಿಸುವುದಾಗಿ ಆಕೆ ಹೇಳಿದರು. ಸಂಬಂಧಿಸಿದ ಅಧಿಕಾರಿಗಳು ಕೂಡ ನಮ್ಮನ್ನು ಗೌರವದಿಂದ ಕಂಡರು.
"ಸಮಸ್ಯೆ ಏನಂದರೆ ಎಪ್ಪತ್ತೇಳರ ನಾನು ಎರಡು ಮಹಡಿ ಹತ್ತಲಿ ಹೇಗೆ? ಈ ಲಿಫ್ಟ್ ಸರಿಪಡಿಸುವ ಸಂಬಂಧ ಸಾಗರದ ಪ್ರಜ್ಞಾವಂತ ನಾಗರಿಕರು ಹಕ್ಕೊತ್ತಾಯ ಮಂಡಿಸಬೇಕು. ನನಗೆ ಮೊದಲೇ ಮಂಡಿನೋವು, ಎರಡು ಮಹಡಿ ಹತ್ತಲೆ? ನೀರಿಳಿಯದ ಗಂಟಲಲ್ಲಿ ಕಡುಬು ನುಂಗಲೆ?" ಎಂದು ಈ ಹಿರಿಯ ನಾಗರಿಕರು ಕಷ್ಟ ತೋಡಿಕೊಂಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ