ಪಾಂಚಜನ್ಯ ಮೊಳಗಲಿ: ಪ್ರತಿಯೊಬ್ಬ ಪ್ರಜೆಯೂ ಸೈನಿಕರೇ!

Upayuktha
0




ಗದೊಮ್ಮೆ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಾಗುವ ಎಲ್ಲಾ ಸೂಚನೆಗಳೂ ಕಂಡು ಬರುತ್ತಿದೆ. 1947ರಲ್ಲಿ ಸ್ವಾತಂತ್ರ್ಯ ಲಭಿಸಿ ಭಾರತ ಮತ್ತು ಪಾಕಿಸ್ತಾನ ಇಬ್ಬಾಗವಾದ ಬಳಿಕ ಈವರೆಗೆ 4 ಬಾರಿ ಯುದ್ಧ ಜರುಗಿ, ನಾಲ್ಕು ಬಾರಿ ಪಾಪಿ ಪಾಕಿಸ್ತಾನ ಸೋತು ಮಕಾಡೆ ಮಲಗಿದ್ದರೂ, ತನ್ನ ನರಿ ಬುದ್ಧಿಯನ್ನು ಇನ್ನೂ ಬಿಟ್ಟಿಲ್ಲ. ಪದೇ ಪದೇ ಕಾಲು ಕೆರೆದು ಜಗಳಾಡಿ ಸೋತು ಸುಣ್ಣವಾಗಿ, ಜಗತ್ತಿನಲ್ಲಿ ನಾಲಕ್ಕು ಬಾರಿ ಬೆತ್ತಲಾದರೂ ಮತ್ತೆ ಮಗದೊಮ್ಮೆ ಈಗ 2025ರಲ್ಲಿ ಉಗ್ರವಾದಿಗಳಿಗೆ ಅಮೇದ್ಯ.. ಮಿಶ್ರಿತ ಬಿರಿಯಾನಿ ತಿನ್ನಿಸಿ ಭಾರತದ ಒಳಗೆ ಛೂ ಬಿಟ್ಟು ಅಮಾಯಕರನ್ನು ಕೊಂದು ಅಟ್ಟಹಾಸ ಮೆರೆದು ತಾನೇನು ಮಾಡಿಲ್ಲ ಎಂದು ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿದ ರೀತಿಯಲ್ಲಿ ಮುಸಿ ಮುಸಿ ನಗುತ್ತಿರುವಾಗಲೇ, ಭಾರತದ ಸೇನೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪಾಕಿಸ್ತಾನದ 15 ಉಗ್ರತಾಣಗಳು ಮತ್ತು ಸೇನಾ ನೆಲೆಗಳ ಮೇಲೆ ಭೀಕರ ದಾಳಿ ಮಾಡಿ ತಕ್ಕ ಶಾಸ್ತಿ ಮಾಡಿದೆ. 1947, 1965, 1971, 1999 ಹೀಗೆ ನಾಲಕ್ಕು ಬಾರಿ ಯುದ್ಧವಾಗಿದೆ. 1971ರ ಯುದ್ಧ ಬಾಂಗ್ಲ ವಿಮೋಚನೆಗಾಗಿ ನಡೆದಿದ್ದರೆ, ಉಳಿದ ಎಲ್ಲಾ ಬಾರಿ ಕಾಶ್ಮೀರ ಗಡಿ ವಿಚಾರದಲ್ಲೇ ಯುದ್ಧ ನಡೆದಿರುತ್ತದೆ. ಪ್ರತಿ ಬಾರಿಯೂ ಪಾಪಿ ಪಾಕಿಸ್ತಾನ ನಮ್ಮ ಮೇಲೆ ನೇರವಾಗಿ ಯುದ್ಧ ಮಾಡಲೇ ಇಲ್ಲ.


ಧರ್ಮಾಂಧ ಭಯೋತ್ಪಾದಕರನ್ನು ಸೃಷ್ಟಿಸಿ, ಅವರ ತಲೆಕೆಡಿಸಿ, ಭಾರತದ ಮತ್ತು ಭಾರತೀಯರ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿ, ಅವರನ್ನು ತಲೆಹಿಡುಕ ಕೊಲೆಗಡುಕ ಮನೋಸ್ಥಿತಿಗೆ ತಯಾರು ಮಾಡಿ, ಭಾರತದೊಳಗೆ ನುಗ್ಗಿಸಿ, ಅಮಾಯಕ ಭಾರತೀಯರ ಮೇಲೆ ಬಾಂಬ್ ದಾಳಿ ಅಥವಾ ಇನ್ನಾವುದೋ ರೀತಿಯಲ್ಲಿ ದಾಳಿ ಮಾಡಿ ವಿಘ್ನ ಸಂತೋಷಪಡುತ್ತಲೇ ಇತ್ತು. ಒಂದಲ್ಲ, ಎರಡಲ್ಲ, ಹಲವಾರು ಬಾರಿ ಭಾರತದೆಲ್ಲೆಡೆ ಪ್ರಮುಖ ನಗರಗಳಿಗೆ ಬಾಂಬ್ ದಾಳಿ ಮಾಡಿ ಭಾರತದ ತಾಳ್ಮೆ ಪರೀಕ್ಷಿಸುತ್ತಲೇ ಇತ್ತು. ಕಾಶ್ಮೀರದ ಗಡಿ ಪ್ರದೇಶದಲ್ಲಿಯೂ ಪ್ರತಿದಿನ, ಪ್ರತಿಕ್ಷಣ ಭಯೋತ್ಪಾಧನೆಯನ್ನು ಪ್ರತಿಪಾದಿಸುತ್ತಾ, ಪ್ರಚೋದಿಸುತ್ತಾ, ಧರ್ಮಾಂಧ ಜನರನ್ನು ಮರಳು ಮಾಡಿ, ಜನಜೀವನವನ್ನು ಪ್ರತಿನಿತ್ಯ ಅಸ್ತವ್ಯಸ್ತಗೊಳಿಸುತ್ತಲೇ ಇತ್ತು. ತೆರೆಮರೆಯಲ್ಲಿ ನಿಂತು ಉಗ್ರವಾದಿಗಳಿಗೆ, ಭಯೋತ್ಪಾದಕರಿಗೆ ಬೇಕಾದ ಶಸ್ತ್ರಾಸ್ತ್ರ, ಹಣ, ವಸತಿ, ನೀಡಿ ಪೋಷಿಸುತ್ತಲೇ ಬಂತು. ಇಡೀ ಜಗತ್ತಿಗೆ ಪಾಕ್ ಪ್ರಾಯೋಜಿತ ಭಯೋತ್ಪಾದನೆ ಎಂದು ಗೊತ್ತಿದ್ದರೂ, ಪಾಪಿ ಪಾಕಿಸ್ತಾನ ಮಾತ್ರ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತೆ ತನ್ನ ಮನೆ ಮುರುಕ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಲೆ ಬರುತ್ತಿತ್ತು.



ಪಹಲ್ಗಾಮ್ ದಾಳಿ:

ಮೊನ್ನೆ ಏಪ್ರಿಲ್ ತಿಂಗಳ ೨೨ರಂದು ಪಾಕ್ ಪ್ರಾಯೋಜಿತ ಉಗ್ರರು ಭಾರತದೊಳಗೆ ಅಕ್ರಮವಾಗಿ ನುಸುಳಿ ಭಾರತದ ಸ್ವಿಜರ್‍ಲ್ಯಾಂಡ್ ಎಂದು ಪ್ರಖ್ಯಾತಿ ಪಡೆದ ಪಹಲ್ಗಾಮ್‍ನಲ್ಲಿ ಅಮಾಯಕ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿರುವಾಗ ಶಿಖಂಡಿಯಂತೆ ಮರೆಯಲ್ಲಿ ನಿಂತು ಗುಂಡು ಹಾರಿಸಿ, ತನ್ನ ನರಿಬುದ್ಧಿಯನ್ನು ಮತ್ತೆ ತೋರಿಸಿದೆ. ಇಷ್ಟು ದಿನ ಅವುಡುಗಚ್ಚಿ ಸಹಿಸಿಕೊಂಡಿದ್ದ ಭಾರತದ ಸಹನೆ ಕಟ್ಟೆಯೊಡೆದಿತ್ತು. ಏನೂ ತಪ್ಪು ಮಾಡದ ಅಮಾಯಕ ಜನರನ್ನು ಧರ್ಮದ ನೆಪ ಮಾಡಿ ಒಂದೇ ಧರ್ಮದ ಜನರನ್ನು ಬಿಟ್ಟು, ಉಳಿದವರನ್ನೆಲ್ಲಾ ಸಾಲು ಸಾಲು ಗುಂಡುಹಾರಿಸಿ ವಿಕೃತಿ ಮೆರೆದದ್ದು, ಮಾನವೀಯತೆಯ ಮೇಲೆ ಸ್ವಾತಂತ್ರ್ಯ ನಂತರ ನಡೆದ ಬಹುದೊಡ್ಡ ಅತ್ಯಾಚಾರವೆಂದರೂ ತಪ್ಪಾಗಲಾರದು. ಇಷ್ಟೆಲ್ಲಾ ನಡೆದರೂ ತನ್ನದೇನೂ ಪಾತ್ರವೇ ಇಲ್ಲ ಎಂದು ತನ್ನ ಪಾಡಿಗೆ ಇದ್ದು, ಮನದೊಳಗೆ ಮಂಡಿಗೆ ತಿನ್ನುತ್ತಿದ್ದ ಪಾಕಿಸ್ತಾನಕ್ಕೆ ಈ ಬಾರಿ ಅದೃಷ್ಟ ಕೈಕೊಟ್ಟಿತ್ತು. ದಾಳಿ ಮಾಡಿದ ಉಗ್ರರ ಜಾತಕವನ್ನು ಜಾಲಾಡಿ ಅವರ ತವರು ಮನೆಯನ್ನು ಮೇ 7ರಂದು ಸುಟ್ಟು ಬೂದಿ ಮಾಡಿ ಭಾರತದ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟಿದೆ. ಅಷ್ಟೂ ಸಾಲದಂತೆ ಶಿಶುಪಾಲನ ನೂರು ತಪ್ಪುಗಳನ್ನು ಮನ್ನಿಸಿ, 101ನೇ ತಪ್ಪಿಗೆ ಸುದರ್ಶನ ಚಕ್ರದಿಂದ ಶಿರಛ್ಘೇದ ಮಾಡಿದಂತೆ, ಭಾರತ ಕೂಡಾ ಪಾಕಿಸ್ತಾನದ ನೂರು ತಪ್ಪನ್ನು ಮನ್ನಿಸಿ ಮೇ 22ರಂದು, 101ನೇ ತಪ್ಪಿಗೆ ತಕ್ಕ ಶಾಸ್ತಿ ಮಾಡಿದೆ, ಈಗಲೂ ಮಾಡುತ್ತಲೇ ಇದೆ. ಈಗಷ್ಟೆ ಪಾಂಚಜನ್ಯ ಮೊಳಗಿದೆ.ಇನ್ನು ಬಹಳಷ್ಟು ಶತ್ರುದಹನ ಬಾಕಿ ಇದೆ. ಇನ್ನಷ್ಟು ಉಗ್ರರ ಮತ್ತು ಪಾಪಿಗಳ ಸಂಹಾರ ಆಗಬೇಕಿದೆ. ಈ ಬಾರಿ ಮಾತ್ರ ಪಾಕಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ನಭೂತೋ ಭವಿಷ್ಯತಿ ಎಂಬ ರೀತಿಯಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಒಳಗೆ ನುಗ್ಗಿ ಬಗ್ಗುಬಡಿದಿದೆ. ಈಗ ಕಾಣಿಸಿದ್ದು ಬರೀ ಟ್ರೇಲರ್ ಅಷ್ಟೆ! ಪಿಕ್ಚರ್ ಅಭೀ ಬಾಕಿ ಹೈ! ಈ ಬಾರಿಯಂತೂ ಉಗ್ರರ ಸರ್ವನಾಶ ಆಗಲೇಬೇಕು. ಉಗ್ರರು ಎಲ್ಲೇ ಅಡಗಿದ್ದರೂ ಅವರನ್ನು ಹುಡುಕಿ ಹೊರತಂದು ತಕ್ಕ ಶಾಸ್ತಿ ಮಾಡಲೇಬೇಕು. ಇನ್ನೆಂದೂ ಭಯೋತ್ಪಾದನೆಗೆ ಇಳಿಯಕೂಡದು ಎಂಬ ರೀತಿಯಲ್ಲಿ ತಕ್ಕ ಉತ್ತರ ನೀಡುವ ಕಾಲ ಸನ್ನಿಹಿತವಾಗಿದೆ. ಮೊದಲೇ ಆರ್ಥಿಕ ದಿವಾಳಿ ಆಗಿ, ಸಾಲದ ಹೊರೆಯಲ್ಲಿ ಮುಳುಗಿರುವ ಪಾಕಿಸ್ತಾನ ಅನಗತ್ಯವಾಗಿ ಭಾರತದ ಜೊತೆ ಕಾಲುಕೆರೆದು ಜಗಳಾಡಿ ತನ್ನ ವಿನಾಶಕ್ಕೆ ಮುನ್ನುಡಿ ಬರೆದಿರುವುದು 'ವಿನಾಶಕಾಲೇ ವಿಪರೀತ ಬುದ್ಧಿ' ಎಂಬ ಮಾತಿಗೆ ಪೂರಕವಾಗಿಯೂ ಇದೆ. ಈ ಬಾರಿ ಅಮೆರಿಕಾ, ಚೀನಾ,  ಮತ್ತು ಇತರ ಪ್ರಮುಖ ಇಸ್ಲಾಂ ರಾಷ್ಟ್ರಗಳು ಪಾಕಿಗೆ ಕೈಕೊಟ್ಟಿವೆ. ಇನ್ನೇನಿದ್ದರೂ ಕ್ಷಣಗಣನೆ. ಈ ಬಾರಿ ಉಗ್ರವಾದವನ್ನು ಬೇರು ಸಮೇತ ಕಿತ್ತು ಹಾಕಲೇಬೇಕು. 


ನಾಗರೀಕರ ಜವಾಬ್ದಾರಿಗಳು:

ದೇಶದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯದ ಮೇಲೆ ಬೇರೆ ದೇಶಗಳು ದಾಳಿ ಮಾಡಿದಾಗ, ಎಲ್ಲವನ್ನೂ ಪ್ರಧಾನಿ, ಗ್ರಹಸಚಿವ ಅಥವಾ ಸೈನಿಕರು ದೇಶ ಕಾಯುವ ಕೆಲಸ ಮಾಡಬೇಕು ಎಂಬುದು ಮೂರ್ಖತನದ ಪರಮಾವಧಿ. ಎಲ್ಲರೂ ಅವರವರ ಇತಿಮಿತಿಯಲ್ಲಿ ದೇಶಕಾಯುವ ಕೆಲಸ ಮಾಡಲೇಬೇಕು. ಈಗಿನ ಸಂಧಿಗ್ಧ ಪರಿಸ್ಥಿತಿಯಲ್ಲಿ ಪ್ರತಿ ಪ್ರಜೆಯೂ ಸೈನಿಕನಂತೆ ವರ್ತಿಸಬೇಕು ಮತ್ತು ದೇಶರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕು. ದೇಶದ ಗಡಿಗಳಲ್ಲಿ ಸೈನಿಕರು ಹೇಗೆ ದೇಶದೊಳಗೆ ಉಗ್ರರು ಅಥವಾ ಪರದೇಶೀಯರು ಆಕ್ರಮಣ ಮಾಡದಂತೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಾರೋ, ಅದೇ ರೀತಿಯಲ್ಲಿ ದೇಶದೊಳಗೆ ನಾವು ಪ್ರತಿಯೊಬ್ಬರೂ ದೇಶ ಕಾಯುವ ಕೆಲಸ ಮಾಡಲೇಬೇಕು. ನಮ್ಮ ಸುತ್ತಮುತ್ತಲಿನ ಜನರ ಆಗುಹೋಗುಗಳ ಬಗ್ಗೆ, ಜನರ ಚಲನವಲನ, ಸುತ್ತ ನಡೆಯುವ ಘಟನೆಗಳ ಬಗ್ಗೆ ಒಂದು ಕಣ್ಣು ಇಡಲೇಬೇಕು.


(1.) ನಮ್ಮ ಸುತ್ತಮುತ್ತ ಯಾರಾದರೂ ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರೆ, ದೇಶದ ಐಕ್ಯತೆ ಮತ್ತು ಶಾಂತಿಗೆ ಭಂಗ ತರುವ ರೀತಿಯಲ್ಲಿ ನಡವಳಿಕೆ ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾಡಳಿತಕ್ಕೆ ಅಥವಾ ಪೋಲಿಸ್ ಇಲಾಖೆಗೆ ವರದಿ ಮಾಡಬೇಕು.


(2) ದಯವಿಟ್ಟು ಅಂತೆಕಂತೆಗಳ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅನಗತ್ಯವಾಗಿ ಸುಳ್ಳು ವದಂತಿಗಳಿಗೆ ಆಸ್ಪದ ನೀಡಬೇಡಿ. ವಾಸ್ತವ ಸಂಗತಿಗಳನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.


(4) ಯುದ್ಧದಂತಹ ಸಂಕಷ್ಟದ ಸನ್ನಿವೇಶಗಳಲ್ಲಿ ಇತರ ಧರ್ಮದ ಬಗ್ಗೆ ಅವಹೇಳನಕಾರಿ ಸುದ್ದಿಗಳನ್ನು ಹರಡಬೇಡಿ.ಆದಷ್ಟು ನಿಮ್ಮ ಸುತ್ತಮುತ್ತಲಿನ ಜನರ ಜೊತೆ ಶಾಂತಿ, ಸಹನೆ ಮತ್ತು ಪ್ರೀತಿಯಿಂದ ವ್ಯವಹರಿಸಿ. ನೆನಪಿರಲಿ, ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದೇ ಹೊರತು ದ್ವೇಷದಿಂದಲ್ಲ.


(5) ದೇಶದ ಭದ್ರತೆ ಮತ್ತು ರಕ್ಷಣೆ ವಿಚಾರ ಬಂದಾಗ ಎಲ್ಲಾ ವೈಯಕ್ತಿಕ ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಮರೆತು ದೇಶದ ಸೇವೆಗಾಗಿ ನಮ್ಮನ್ನು ಸಮರ್ಪಿಸಿಕೊಳ್ಳೋಣ. ಜಾತಿ, ಮತ, ಧರ್ಮ, ಪಕ್ಷ ಇದ್ಯಾವುದೂ ದೇಶದ ಐಕ್ಯತೆ ಮತ್ತು ಸಾಮರಸ್ಯದ ಮುಂದೆ ನಗಣ್ಯ.


(6) ನಮ್ಮ ಸುತ್ತಮುತ್ತಲಿನ ವ್ಯವಹಾರಗಳ ಬಗ್ಗೆ, ಘಟನೆಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ನೆನಪಿರಲಿ, ದೇಶದ ಹೊರಗಿನ ಶತ್ರುವನ್ನು ಗೆಲ್ಲಬಹುದು, ದೇಶದೊಳಗಿನ ಶತ್ರುವನ್ನು ಗೆಲ್ಲುವುದು ಸುಲಭವಲ್ಲ.


ಕೊನೆಮಾತು:

ಈ ಹಿಂದೆ ನಡೆದ ಭಾರತ ಪಾಕ್ ಕದನಕ್ಕೂ, ಈಗ ಆರಂಭವಾಗಿರುವ ಆಪರೇಷನ್ ಸಿಂಧೂರಕ್ಕೂ ಬಹಳ ವ್ಯತ್ಯಾಸವಿದೆ. ಈ ಹಿಂದೆ ನೇರವಾಗಿ ಸೈನಿಕರು ಯುದ್ಧರಂಗದಲ್ಲಿ ಹೋರಾಡಬೇಕಾಗಿತ್ತು, ಆದರೆ ಈಗ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಮಿಸೈಲ್‍ಗಳು, ಯುದ್ದ ಜೆಟ್‍ಗಳು, ಡ್ರೋನ್ ಕ್ಷಿಪಣಿಗಳು ನಮ್ಮ ಬಳಿ ಇದೆ. ನೂರಾರು ಕಿಲೋಮೀಟರ್ ದೂರದಲ್ಲಿ ಕುಳಿತು ಶತ್ರುವಿನ ಅಡಗು ತಾಣಗಳ, ಶಸ್ತ್ರ ತರಬೇತಿ ತಾಣಗಳ ಮೇಲೆ ಅತ್ಯಂತ ನಿಖರವಾಗಿ ದಾಳಿ ಮಾಡಬಹುದು. ಈಗಿನ ಆಧುನಿಕ ಯುದ್ಧ ಸಾಂಪ್ರಾದಾಯಿಕ ಯುದ್ಧಕ್ಕಿಂತ ಬಹಳ ಭಿನ್ನವಾಗಿದೆ. ಭಾರತ ಮನಸ್ಸು ಮಾಡಿದರೆ ತನ್ನಲ್ಲಿರುವ ರಫಾಯೆಲ್ ಕ್ಷಿಪಣಿ ಗಳ ಮುಖಾಂತರ ಪಾಪಿ ಪಾಕಿಸ್ತಾನವನ್ನು ಎರಡು ಘಂಟೆಗಳ ಒಳಗೆ  ಚಿಂದಿ ಉಡಾಯಿಸಿ, ನಿವಾಳಿಸಿ ಹಾಕಬಹುದು. ಇಷ್ಟು ಸಮಯ ಸಹಿಸಿಕೊಂಡು, ನಮ್ಮ ಸಹನೆಯ ಕಟ್ಟೆಯೊಡೆದಿದೆ. ನಮ್ಮ ಭಾರತಾಂಬೆಯ ಮಕ್ಕಳಾದ ನಮ್ಮ ಸಹೋದರಿಯರ ಸಿಂಧೂರ ಅಳಿಸಿ ಹೋಗಿ ವಾರವಿನ್ನೂ ಕಳೆದಿಲ್ಲ. ಅವರ ಕಣ್ಣೀರು ಇನ್ನೂ ಬತ್ತಿಲ್ಲ. ದುಃಖದ ಛಾಯೆ ದೇಶದೆಲ್ಲೆಡೆ ಆವರಿಸಿದೆ. ಪಾಪಿ ಪಾಕಿಸ್ತಾನ ಇನ್ನೂ ಬುದ್ಧಿ ಕಲಿತಿಲ್ಲ. ತನ್ನ ನರಿಬುದ್ಧಿ ಬಿಟ್ಟಿಲ್ಲ. ಇನ್ನು ಕಾಯುವ, ಕಾದು ನೋಡುವುದಕ್ಕೆ ಅರ್ಥವೇ ಇಲ್ಲ. ಪಾಂಚಜನ್ಯ ಮೊಳಗಲೇ ಬೇಕು. ಇನ್ನೊಂದು ಬಾರಿ ಕನಸಲ್ಲೂ ನಮ್ಮ ಮೇಲೆ ದಾಳಿ ಮಾಡಲು ಅಲೋಚಿಸದಂತೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲೇಬೇಕು. ಮುಟ್ಟಿ ನೋಡಿ ರಾತ್ರಿ ಕೂಡಾ ಬೆಚ್ಚಿ ಬೀಳುವಂತೆ ದರಿದ್ರ ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕು. ಸಿಂಧೂರ ಭಾಗ್ಯ ಕಳೆದುಕೊಂಡ ನಮ್ಮ ಸಹೋದರಿಯರ ಕಣ್ಣೀರಿಗೆ ಪಾಕಿಸ್ತಾನ ಬೆಲೆ ಕಟ್ಟಲೇಬೇಕು. ಇಷ್ಟೆಲ್ಲಾ ಆದ ಮೇಲೆ ಸತ್ಯ ಹೇಳಿ ಶರಣಾಗುವುದರ ಬದಲು, ನಮ್ಮ ಗಡಿ ಪ್ರದೇಶದ ಸಾಮಾನ್ಯ ನಾಗರಿಕರ ಮೇಲೆ ಕ್ಷಿಪಣಿ  ದಾಳಿ ಮಾಡಿ, ಮುಗ್ದ ಜನರ ಸಾವಿಗೆ ಪಾಕಿಸ್ತಾನ ನೇರವಾಗಿ ಕಾರಣೀ ಭೂತವಾಗಿದೆ. ಪಾಪಿ ಪಾಕಿಸ್ತಾನದ ಪಾಪದ ಕೊಡ ತುಂಬಿದೆ. ಇನ್ನೇನಿದ್ದರೂ ಸಂಧಾನದ ಮಾತೇ ಇಲ್ಲ. ದಂಡ ಪ್ರಯೋಗ ಆಗಲೇಬೇಕು. ಪಾಕಿಸ್ತಾನವನ್ನು ಹೆಡೆ ಮುರಿ ಕಟ್ಟಿ ನಿವಾಳಿಸಿ ಹಾಕಲೇಬೇಕು. ಮೊದಲೇ ಆಂತರಿಕ ಕಚ್ಚಾಟ, ಶಸ್ತ್ರಾಸ್ತ್ರಗಳ ಕೊರತೆ, ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ ತನ್ನ ದೌರ್ಬಲ್ಯಗಳನ್ನು ಮುಚ್ಚಿಹಾಕಲು ಉಗ್ರವಾದಿಗಳಿಗೆ ಆಶ್ರಯ ನೀಡಿ, ಭಾರತದ ಜೊತೆ ಕಾಲು ಕೆರೆದು ಜಗಳಾಡಿ ತನ್ನ ಶವಯಾತ್ರೆಗೆ ಅಂತಿಮ ಮೊಳೆ ಹೊಡಿಸಿಕೊಳ್ಳಲು ತಯಾರಿ ನಡೆಸಿರುವುದು ಕುಚೋದ್ಯದ ಪರಮಾವಧಿ. ಆಗಿ ಬಿಡಲಿ, ಇನ್ನೊಂದು ಕೊನೆ ಯುದ್ಧ. ಮುಂದೆಂದಿಗೂ ಯುದ್ಧ ಮಾಡಲು ಆಗದಂತೆ ಪಾಕ್ ನಿರ್ನಾಮವಾಗಿ ಹೋಗಲಿ. ಅದರಲ್ಲಿಯೇ ನಮ್ಮ ದೇಶದ ಮತ್ತು ವಿಶ್ವದ ಶಾಂತಿ ಅಡಗಿದೆ. 


ಜೈಹಿಂದ್


- ಡಾ. ಮುರಲೀ ಮೋಹನ ಚೂಂತಾರು

ಮಾಜಿ ಸಮಾದೇಷ್ಟರು, ದ.ಕ ಜಿಲ್ಲಾ ಗೃಹ ರಕ್ಷಕ ದಳ ಮಂಗಳೂರು.

98451 35787


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top