ಹಾಸನ: ಆಪರೇಷನ್ ಸಿಂದೂರದಲ್ಲಿ ದೇಶಕ್ಕಾಗಿ ಪ್ರಾಣ ಕೊಟ್ಟ ವೀರ ಯೋಧರಿಗೆ ಜಿಲ್ಲಾಧಿಕಾರಿ ಕಛೇರಿ ಎದುರು ಪುಷ್ಪಾರ್ಚನೆ ಮೂಲಕ ಭಾವಪೂರ್ಣ ಶ್ರದ್ದಾಂಜಲಿಯನ್ನು ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ನೇರವೇರಿಸಿದರು.
ನಂತರ ಮಾತನಾಡಿದ ಅವರು, ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆಯು “ಆಪರೇಷನ್ ಸಿಂದೂರ”ವನ್ನು ಪ್ರಾರಂಭಿಸಿ ಪಾಕಿಸ್ತಾನದೊಳಗೆ ಆಳವಾಗಿ ದಾಳಿ ನಡೆಸಿ, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಗುಂಪುಗಳಿಗೆ ಸೇರಿದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿತು. ನೂರಾರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಮೂಲಕ ಮತ್ತು ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ ಎಂಬ ದಿಟ್ಟ ಸಂದೇಶವನ್ನು ಜಗತ್ತಿಗೆ ರವಾನಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಯೋತ್ಪಾದಕರಿಗೆ ಪ್ರತೀಕಾರ ಮೂಲಕ ಮುಗ್ಧ ಹಿಂದೂಗಳು ಚೆಲ್ಲುವ ಪ್ರತಿ ರಕ್ತದ ಹನಿಗೂ ನ್ಯಾಯ ಒದಗಿಸಿದೆ ಎಂದರು.
ನರೇಂದ್ರ ಮೋದಿಯವರು ಮೊದಲ ಬಾರಿಗೆ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಭಾರತೀಯ ಸೇನೆಯು ಪಾಕಿಸ್ತಾನವನ್ನು ಪ್ರವೇಶಿಸಿ 26 ಅಮಾಯಕರ ಹತ್ಯೆಗೆ ಕಾರಣರಾದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದೆ. ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ನಡುವೆ, ಭಾರತವು ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿ, ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆಯನ್ನು ಅದರ ಬೇರುಗಳಲ್ಲಿಯೇ ಹತ್ತಿಕ್ಕಿದೆ ಎಂದು ಹೇಳಿದರು.
ನಮಗಾಗಿ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಪ್ರತಿ ಮನೆ ಮನೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಗೌರವ ಪೂರಕವಾಗಿ ಕೃತಜ್ಞತೆ ಸಲ್ಲಿಸುವುದು ಭಾರತ ದೇಶದ ಎಲ್ಲಾ ಪ್ರಜೆಗಳ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ಹಾಸನದ ಜಿಲ್ಲಾ ಉಪಾಧ್ಯಕ್ಷ ಯಾಕುಬ್ ಖಾನ್ ಗೊರೂರು, ಸಕಲೇಶಪುರ ತಾಲ್ಲೂಕು ಅಧ್ಯಕ್ಷ ವಿಶ್ವಾಸ್ ಬಿ ಗೌಡ, ಹಿರಿಯ ಸಾಹಿತಿ ಗೊರೂರು ಅನಂತರಾಜು, ಸಿರಿಗನ್ನಡ ಪತ್ರಿಕೆ ಸಂಪಾದಕ ಆನಂದ ಪಟೇಲ್ ನೆಲ್ಲಿಗೆರೆ, ನಿವೃತ್ತ ಎಎಸ್ಐ ಗಾಯಕರು ಶಿ.ನ ನಂಜೇಗೌಡ, ರೈತ ಸಂಘದ ಹೋರಾಟಗಾರ ಪ್ರಕಾಶ್ ಗೌಡ, ರಾಜ್ಯ ಸಮಿತಿ ಸದಸ್ಯ ರಾಮು ಚಿಕ್ಕೆಗೌಡನದೊಡ್ಡಿ, ಮಂಡ್ಯ ಜಿಲ್ಲೆ ಸಂಚಾಲಕ ಸಲ್ಮಾನ್ ಪ್ರಮುಖರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ