ಧರ್ಮಕೇಂದ್ರವಾಗಿ ತೀರ್ಥಹಳ್ಳಿ ಮಠ ಅಭಿವೃದ್ಧಿ: ರಾಘವೇಶ್ವರ ಶ್ರೀ ಆಶಯ

Upayuktha
0


ಗೋಕರ್ಣ: ತೀರ್ಥಹಳ್ಳಿ ಮಠ ಇಡೀ ಸಮಾಜದ ಭಕ್ತಿ ಶ್ರದ್ಧಾಕೇಂದ್ರವಾಗಿ ರೂಪುಗೊಳ್ಳಬೇಕು. ಧರ್ಮಸಂಘಟನಾ ಕಾರ್ಯ ಇಲ್ಲಿ ನಡೆಯಬೇಕು. ಇಡೀ ಸಮಾಜದ ಶಕ್ತಿ ಕೇಂದ್ರವಾಗಿ, ಧರ್ಮ ಕೇಂದ್ರವಾಗಿ ಶ್ರೀಮಠ ಬೆಳೆಯಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ತೀರ್ಥಹಳ್ಳಿ ಶ್ರೀರಾಮಚಂದ್ರಾಪುರ ಮಠದಲ್ಲಿ ಪ್ರಪ್ರಥಮ ಬಾರಿಗೆ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ನೃಸಿಂಹ ಜಯಂತಿ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.


ಪ್ರತಿ ಬಾರಿಯೂ ಇಲ್ಲಿ ಧರ್ಮಚಿಂತನೆ ನಡೆಯಬೇಕು. ಸಾವಿರಾರು ಮಂದಿಗೆ ಧರ್ಮಜ್ಯೋತಿಯನ್ನು ಬೆಳಗುವಂತಾಗಬೇಕು. ಇದು ದೇಶವೇ ನರಸಿಂಹಾವತಾರ ತಾಳಿದ ಸಂದರ್ಭದಲ್ಲಿ ಶಾಂತಿ, ಸಮೃದ್ಧತೆ, ಸಾಮರಸ್ಯ ಬೆಳೆಯುವಂತಾಗಲಿ ಎಂದು ಆಶಿಸಿದರು. ದೇಶದ ಬಗ್ಗೆ, ನಮ್ಮ ಉನ್ನತಿಯ ಬಗ್ಗೆ ಆತ್ಮಜ್ಞಾನ ಪ್ರತಿಯೊಬ್ಬರಿಗೆ ಮೂಡಿಬರಲಿ ಎಂದು ಆಶೀರ್ವದಿಸಿದರು.



ತೀರ್ಥಹಳ್ಳಿ ಮಠ ಸಮಸ್ತರ ಕೇಂದ್ರವಾಗಬೇಕು; ಎಲ್ಲ ಸಮಾಜಗಳು ಒಗ್ಗೂಡಿ ಸನಾತನ ಧರ್ಮ ಉಳಿಸಿ ಬೆಳೆಸುವ ಪಣ ತೊಡಬೇಕು. ಧರ್ಮಸಂಘಟನಾ ಕಾರ್ಯ ನಡೆಯಬೇಕು. ಇದು ಸಮಸ್ತರ ಮಠವಾಗಿ ವಿಕಾಸಗೊಳ್ಳಬೇಕು. ಜೀವಚೇತನ, ಜೀವಚೈತನ್ಯ ತುಂಬಿಕೊಂಡು ಮತ್ತಷ್ಟು ಸಮಾಜಮುಖಿ ಕಾರ್ಯಗಳಿಗೆ ಮುಂದಾಗಬೇಕು ಎಂದು ಆಶಿಸಿದರು.ಸಮಸ್ತರು ಕಲೆತು ಗಂಗಾವಿಶ್ವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಿದರೆ ಇಡೀ ಸಮಾಜದ ಶಕ್ತಿಕೇಂದ್ರವಾಗಿ ಇದು ಬೆಳೆಯಲಿದೆ ಎಂದು ಹೇಳಿದರು.


ನೃಸಿಂಹ ಜಯಂತಿ ವಿಶೇಷತೆ ಬಗ್ಗೆ ಬಣ್ಣಿಸಿದ ಅವರು, ಕಂಬದಿಂದ ಹಿರಣ್ಯಕಶಿಪುವಿಗೆ, ಬಿಂಬದಿಂದ ಪ್ರಹ್ಲಾದನಿಗೆ ಮುಕ್ತಿಯನ್ನು ಒದಗಿಸಿದ ನೃಸಿಂಹದೇವರು ದೇವರ ಅವತಾರಗಳಲ್ಲೇ ಅದ್ಭುತ ಮತ್ತು ಉಗ್ರ ಅವತಾರ. ಧರ್ಮಸಂಸ್ಥಾಪನೆಯ ಸಲುವಾಗಿ ಮಹಾವಿಷ್ಣು ಈ ವಿಶೇಷ ಅವತಾರ ಎತ್ತಿದ. ವಿರುದ್ಧ ಧ್ರುವಗಳು ಸೇರುವಂಥ ವಿಚಿತ್ರ ಅವತಾರ ಎಂದು ಬಣ್ಣಿಸಿದರು. ನರಸಿಂಹ ಅವತಾರದ ಮೂಲಕ ಸಮಸ್ತ ಲೋಕಕ್ಕೆ ವಿಶೇಷ ಸಂದೇಶವನ್ನು ಅನುಗ್ರಹಿಸಿದರು ಎಂದರು.


ನಮ್ಮ ಮನಸ್ಸು ಶುಷ್ಕವಾದಾಗ ಮನಸ್ಸು ಯಾವುದಕ್ಕೂ ಸ್ಪಂದಿಸುವುದಿಲ್ಲ; ಅದರ ಸಾಂಕೇತಿಕ ರೂಪವೇ ಸ್ತಂಭ ಅಥವಾ ಕಂಬ. ದೇಶ, ಧರ್ಮ, ಒಳ್ಳೆಯತನ, ಸಂಪ್ರದಾಯ, ಸಂಸ್ಕøತಿಯ ಬಗ್ಗೆ ಭಾವನೆಗಳು ಇಲ್ಲದಿರುವುದೇ ಅಸುರೀಶಕ್ತಿಯ ರೂಪ. ಅದನ್ನು ಭೇದಿಸಿ ಕೆಡುಕನ್ನು ದಮನ ಮಾಡಲು ತಾಳಿದ ವಿಶೇಷ ಅವತಾರ ಎಂದು ಹೇಳಿದರು.


ನೃಸಿಂಹನ ಸಿಟ್ಟು ತಣಿಸಲು ಸಾಧ್ಯವಾದದ್ದು ಪ್ರಹ್ಲಾದನಿಗೆ ಮಾತ್ರ. ಉಗ್ರನರಸಿಂಹ ಲಕ್ಷ್ಮೀನರಸಿಂಹನಾಗಿ ಸಂಪ್ರೀತನಾಗುತ್ತಾನೆ. ಪ್ರಹ್ಲಾದನ ಮೊಮ್ಮಗನೇ ಬಲಿಚಕ್ರವರ್ತಿ. ಅಸುರರಲ್ಲೂ ಒಳ್ಳೆಯವರಿರುತ್ತಾರೆ ಎನ್ನುವುದಕ್ಕೆ ಪ್ರಹ್ಲಾದ, ಬಲಿಚಕ್ರವರ್ತಿಯಂಥವರು ನಿದರ್ಶನಗಳು ಎಂದು ವಿಶ್ಲೇಷಿಸಿದರು.



ಮನಸ್ಸು ದಾರಿ ತಪ್ಪಿಹೋಗುವ ಕಾಯಿಲೆ ಯಾರ ಅರಿವಿಗೂ ಬರುವುದಿಲ್ಲ. ಇದು ವಿನಾಶಕ್ಕೆ ನಾಂದಿಯಾಗುತ್ತದೆ ಎಂದು ಎಚ್ಚರಿಸಿದರು. ನಮಗೆ ಅರಿವಿಲ್ಲದಂತೆಯೇ ನಾವು ನಮ್ಮತನವನ್ನು ಕಳೆದುಕೊಳ್ಳುತ್ತೇವೆ. ಕೊನೆಗೊಂದು ದಿನ ಸಮಸ್ತವನ್ನೂ ನಾವು ಕಳೆದುಕೊಳ್ಳುವಂತಾಗುತ್ತದೆ. ಗುರಿ ಇಲ್ಲದ ಬದುಕು ಅರ್ಥಹೀನ. ಸಂಸಾರಯಾತ್ರೆ ವಿಷಮವಾಗಿರುವುದೇ ಮುಂದಿನದು ಏನು ಎನ್ನುವುದನ್ನು ನಾವು ತಿಳಿಯದಿರುವ ಕಾರಣದಿಂದ. ಮತ್ತೆ ಸರಿಯಾಗಯವ ಬಗ್ಗೆ ನಾವು ಯೋಚಿಸಬೇಕು ಎಂದು ಕಿವಿ ಮಾತು ಹೇಳಿದರು.


ನಮ್ಮೊಳಗೇ ನರಸಿಂಹ ಅವತಾರ ಪ್ರತಿದಿನವೂ ಆಗುತ್ತದೆ. ಅದನ್ನು ಗಮನಿಸುವ ದೃಷ್ಟಿ ನಮ್ಮದಾಗಬೇಕು. ಅಂತರಂಗದ ಮೂರ್ತಿಯನ್ನು ದರ್ಶನ ಮಾಡುವ ಕಣ್ಣು ನಮ್ಮದಾಗಬೇಕು. ಅನನ್ಯ ಹರಿಸ್ಮರಣೆಯೊಂದಿಗೆ ಇದನ್ನು ಸಾಧಿಸಬೇಕು ಎಂದು ಸೂಚಿಸಿದರು.


ಹೊಸನಗರ ಮಠ ಹಾಗೂ ತೀರ್ಥಹಳ್ಳಿ ಮಠ ಭೂಮಿಯ ಎರಡು ಮಗ್ಗಲುಗಳಿದ್ದಂತೆ. ಮೂಲಮಠ, ಪ್ರಧಾನ ಮಠ, ಕೆಕ್ಕಾರುಮಠವನ್ನು ಬಿಟ್ಟು, ಇಡೀ ಜೀವನವನ್ನು ತೀರ್ಥಹಳ್ಳಿಯಲ್ಲಿ ಕಳೆದರು. ಅವರ ಪೂರ್ವಗುರುಗಳ ದರ್ಶನವಾಗಿರುವುದು, ಗುರುಗಳು ಅವರಿಗೆ ಸ್ವಪ್ನದರ್ಶನ ನೀಡಿದ ತಾಣ ಎಂದು ಹೇಳಿದರು.


ದೀಕ್ಷೆ ಕೊಟ್ಟಗುರುವಿಗೆ ಮಠವನ್ನೇ ಶಿಷ್ಯ ಸಮರ್ಪಣೆ ಮಾಡಿದ ಅಪರೂಪದ ಸಂಪ್ರದಾಯ ತೀರ್ಥಹಳ್ಳಿ ಮಠದ್ದು. ನಮಗೆ ವಿಶೇಷ ಗುರುಸಂಸರ್ಗ ಉಂಟಾದ್ದು ಇದೇ ತಾಣದಲ್ಲಿ ಎಂದು ನೆನಪಿಸಿಕೊಂಡರು. ಗುರುಗಳು ಒರೆಗೆ ಹೆಚ್ಚಿದ ಸ್ಥಾನ. ಅನೇಕ ಪರೀಕ್ಷೆಗಳನ್ನು ಇಲ್ಲಿ ನಡೆಸಿದ್ದರು. ಈ ಮಠದ ಜತೆ ಸದಾ ಭಾವನಾತ್ಮಕ ಸಂಬಂಧ ಇದೆ ಎಂದು ವಿವರಿಸಿದರು.


ಸಮಿತಿ ಗೌರವಾಧ್ಯಕ್ಷ ಮತ್ತು ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಹಿಂದೂ ಸಮಾಜ ಒಗ್ಗೂಡದಿದ್ದರೆ ಸನಾತನ ಧರ್ಮಕ್ಕೆ ಅಪಾಯ ಖಚಿತ. ಆದ್ದರಿಂದ ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ಶ್ರೀರಾಮಚಂದ್ರಾಪುರ ಮಠ ಸಮಸ್ತ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಕೋರಿದರು.


ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಈ ಮಹೋತ್ಸವ ಯಾವುದೇ ಸಮುದಾಯಗಳಿಗೆ ಸೀಮಿತವಾದುದಲ್ಲ; ಸಮಸ್ತ ಸಮಾಜದ ಉತ್ಸವವಾಗಿ ಇದು ಬೆಳೆದುಬಂದಿದೆ. ಶ್ರೀಮಠ ಇಡೀ ಮಠದ ಶಕ್ತಿಕೇಂದ್ರವಾಗಿ ರೂಪುಗೊಂಡು ಈ ಭಾಗಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.


ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಭೀಮೇಶ್ವರ ಜೋಶಿ ಮಾತನಾಡಿದರು. ಶ್ರೀಮಠದ ನಿರ್ವಹಣಾ ಸಮಿತಿಯ ಅಧ್ಯಕ್ಷ ಶಶಿಧರ ಬೊಬ್ಬಿ ಸಭಾಪೂಜೆ ನೆರವೇರಿಸಿದರು. ನಾಗಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯದರ್ಶಿ ಕಾರ್ತಿಕ್ ಶರ್ಮಾ ಅವಲೋಕನ ನಡೆಸಿದರು.


ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಉಪಾಧ್ಯಕ್ಷರಾದ ವೆಂಕಟೇಶ ಹಾರೇಬೈಲ್, ಕಾರ್ಯದರ್ಶಿಗಳಾದ ರುಕ್ಮಾವತಿ ರಾಮಚಂದ್ರ, ಗೀತಾ ಮಂಜಪ್ಪ, ಪದಾಧಿಕಾರಿಗಳಾದ ಈಶ್ವರ ಪ್ರಸಾದ್ ಕನ್ಯಾನ, ಕೇಶವ ಪ್ರಕಾಶ್, ಪ್ರಸನ್ನ ಉಡುಚೆ, ವಿವಿಧ ಮಂಡಲಗಳ ಅಧ್ಯಕ್ಷರಾದ ಈಶ್ವರ ಪ್ರಸನ್ನ, ಆರ್.ಜಿ.ಹೆಗಡೆ, ಸ್ಥಳೀಯ ಸಮಿತಿಯ ಉಮಾಪತಿ, ವೆಂಕಟಗಿರಿ, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.


ಕೇರಳದ ಕಣ್ಣೂರಿನ ರಾಘವಪುರ ಮಹಾಯೋಗಂನಿಂದ ವಿಶೇಷವಾಗಿ ಆಗಮಿಸಿದ್ದ ಶ್ರೀಮಠದ ನೂರಕ್ಕೂ ಹೆಚ್ಚು ಶಿಷ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top