ಮಂಗಳೂರು: ಸಾಹಿತಿ, ಉಪನ್ಯಾಸಕ ರಘು ಇಡ್ಕಿದು ಇವರ 32ನೇ ಕೃತಿ “ಪೊನ್ನಂದಣ” (ಕೃತಿ ವಿಮರ್ಶೆ) ವನ್ನು ಇತ್ತೀಚೆಗೆ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಇವರು ಆಯೋಜಿಸಿದ ಪುಸ್ತಕ ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಮಂಗಳೂರಿನ ಪುರಭವನದಲ್ಲಿ ಉಡುಪಿಯ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಇವರು ಬಿಡುಗಡೆಗೊಳಿಸಿದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಕೆ ವಿದ್ಯಾ ಕುಮಾರಿಯವರು– ಇಂದಿನ ಒತ್ತಡದ ಬದುಕಿನ ಸಂದರ್ಭದಲ್ಲಿ ಪುಸ್ತಕದ ಓದು ಅತಿ ಅಗತ್ಯ. ನಮ್ಮೆಲ್ಲ ಒತ್ತಡಗಳನ್ನು ದೂರ ಮಾಡಿ ಮನಸ್ಸನ್ನು ನಿರ್ಮಲಗೊಳಿಸುವಲ್ಲಿ ಪುಸ್ತಕಗಳು ಮುಖ್ಯವಾಗುತ್ತವೆ. ಪೊನ್ನಂದಣ ಕೃತಿಯ ವಿಮರ್ಶೆಗಳು ಆಪ್ತವಾದ ಭಾಷೆಯಲ್ಲಿದ್ದು ಮೂಲ ಕೃತಿಗಳನ್ನು ಓದುವಂತೆ ಪ್ರೇರೇಪಿಸುತ್ತವೆ ಎಂದರು.
ಕೃತಿ ಕುರಿತು ಮಾತನಾಡಿದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ ಪಿ ಕೃಷ್ಣಮೂರ್ತಿ ಇವರು- ಪೊನ್ನಂದಣ ಕೃತಿಯಲ್ಲಿ ಸಹೃದಯಿ ವಿಮರ್ಶೆಗಳಿವೆ. ಹಳೆಯ ತಲೆಮಾರಿನ ಕೃತಿಕಾರರ ಜೊತೆಗೆ ಹೊಸ ತಲೆಮಾರಿನ ಕೃತಿಕಾರರ ಕೃತಿಗಳ ವಿಮರ್ಶೆಯು ಸೇರಿ ಹದವಾದ ನೆಯ್ಗೆಯ ಆಪ್ಯಾಯಮಾನ ಬರಹಗಳು ಇಲ್ಲಿವೆ. ಓದನ್ನು ಪ್ರೇರೇಪಿಸುವ ಉತ್ತಮ ಕೃತಿಯನ್ನು ರಘು ಅವರು ನೀಡಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ರಂಗ ಸಂಗತಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಕೆ.ಎಂ, ರಂಗ ಸಂಗಾತಿಯ ಸಂಚಾಲಕ ಕವಿ ನಾಟಕಕಾರ ಶಶಿರಾಜ್ ರಾವ್ ಕಾವೂರು, ವಿದ್ಯಾ ಪ್ರಕಾಶನದ ಶ್ರೀಮತಿ ವಿದ್ಯಾ ಯು ಮತ್ತು ವಿನಮ್ರ ಇಡ್ಕಿದು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆಯನ್ನು ಲೇಖಕಿ, ಆಕಾಶವಾಣಿ ಉದ್ಘೋಷಕಿ ಅಕ್ಷತಾ ರಾಜ್ ಪೆರ್ಲ ಅವರು ನಡೆಸಿಕೊಟ್ಟರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ