ಚರಗದ ಸಂಭ್ರಮದಲ್ಲಿ ಲೋಕಾರ್ಪಣೆಗೊಂಡ ಮರಿಗುಬ್ಬಿ

Upayuktha
2 minute read
0




ಹುನಗುಂದ: ಸಮೀಪದ ಸೂಳೇಬಾವಿಯ ಮಕ್ಕಳ ಸಾಹಿತಿ ಅಶೋಕ ಬಳ್ಳಾ ಅವರ 8 ನೇ ಕೃತಿ 'ಮರಿಗುಬ್ಬಿ' ಮಕ್ಕಳ ಕಥಾ ಸಂಕಲನ ವಿಶಿಷ್ಟವಾಗಿ ಲೋಕಾರ್ಪಣೆಯಾಗಿ ಸಹೃದಯಿಗಳ ಮೆಚ್ಚುಗೆಗೆ ಪಾತ್ರವಾಯಿತು. ರೈತಾಪಿ ವರ್ಗದ ಸಂಭ್ರಮದ ಹಬ್ಬ ಎಳ್ಳ ಅಮಾವಾಸ್ಯೆಯ ಚರಗದ ಜೊತೆ ಹೊಲದಲ್ಲಿ ಪ್ರಕೃತಿಯ ಮಡಿಲಲ್ಲಿ ಪುಸ್ತಕ ಬಿಡುಗಡೆಯಾಗಿದ್ದು ಈ ವಿಶೇಷತೆಗೆ ಕಾರಣ.


ಕುಷ್ಟಗಿ ತಾಲೂಕಿನ ಗಡಿ ಗ್ರಾಮ ಪುರತಗೇರಿಯ ಶಿಕ್ಷಕ ಸಿದ್ದು ಶೀಲವಂತರ ಅವರ ಹೊಲದಲ್ಲಿ ಎಳ್ಳ ಅಮಾವಾಸ್ಯೆಯ ಚರಗದ ಹಬ್ಬ ಪ್ರತಿ ವರ್ಷದಂತೆ ನಡೆಯುತ್ತಿತ್ತು. ಈ ಬಾರಿ ವಿಶೇಷವಾಗಿ ಹಬ್ಬ ಮಾಡೋಣ ಎನಿಸಿದಾಗ ಗೆಳೆಯರೆಲ್ಲ ದಿಢೀರೆಂದು ನಿರ್ಧರಿಸಿದ್ದು ಪುಸ್ತಕ ಬಿಡುಗಡೆಯ ಆಲೋಚನೆ.


ಈ ಕುರಿತು ಕೃತಿಕಾರ ಅಶೋಕ ವಿ ಬಳ್ಳಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇವಲ ಒಂದೇ ದಿನದಲ್ಲಿ ಕೃತಿ ಪರಿಚಯಿಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತವರು ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಪಿ.ಎಸ್. ಮಾಲಗಿತ್ತಿ.


ಇದಕ್ಕೆ ಹೆಗಲು ಕೊಟ್ಟು ನಿಂತವರು ಸಂಗಮೇಶ ಹೊದ್ಲೂರ ಹಾಗೂ ಕಮತಗಿಯ ಶ್ರೇಯಾಂಶ ಕೋಲಾರ, ಶಶಿಧರ ಹಳ್ಳೂರ ಮತ್ತು ಶೀಲವಂತರ ಕುಟುಂಬ. ಪರಿಣಾಮವಾಗಿ, ಕೃಷಿಕರ ಚರಗದ ಹಬ್ಬದ ಸಂಭ್ರಮದಲ್ಲಿ ಸಾಹಿತ್ಯ ಕೃಷಿಯ ಸಂಭ್ರಮವೂ ಒಂದಾಗಿದ್ದು ಅಲ್ಲಿ ನೆರೆದವರಲ್ಲದೆ ಈ ವಿಷಯ ತಿಳಿದು ಸರ್ವರೂ ಇದೊಂದು ವಿಭಿನ್ನ ಆಲೋಚನೆ ಅಷ್ಟೇ ವಿಶಿಷ್ಟ ಕಾರ್ಯಕ್ರಮ ಎಂದು ಮೆಚ್ಚುಗೆ ಸೂಚಿಸಿದ್ದಾರೆ.


ಚರಗದ ದಿನ ಮಧ್ಯಾಹ್ನ 12 ಗಂಟೆಗೆ ಹೊಲಕ್ಕೆ ಬಂದ ಕಾರ್ಯಕ್ರಮದ ಆಯೋಜಕರು ಕುಟುಂಬ ವರ್ಗದ ಹಿರಿಜೀವ ಮಲ್ಲಮ್ಮನವರ ನೇತೃತ್ವದಲ್ಲಿ ಈಶ್ವರಪ್ಪ ಮ್ಯಾಗೇರಿ ಅವರ ಅಧ್ಯಕ್ಷತೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಂಡರು. ಮರಿಗುಬ್ಬಿಯಂತಹ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಿದ್ದು ಶೀಲವಂತರ ಅವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. 


ಪುಸ್ತಕ ಬಿಡುಗಡೆ ನಂತರ ಪಿ. ಎಸ್. ಮಾಲಗಿತ್ತಿ ಪುಸ್ತಕದ ಕುರಿತು ಮಾತನಾಡುತ್ತಾ, ಮರಿಗುಬ್ಬಿ ಕಥೆಗಳು ಮಕ್ಕಳನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಅವರಲ್ಲಿ ತಾರ್ಕಿಕ ಮನೋಭಾವ ವೈಚಾರಿಕತೆ ಕಲ್ಪನಾ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ಮನರಂಜನೆಯ ಜೊತೆಗೆ ಜೀವನದ ಸಂಕಷ್ಟದ ಕ್ಷಣಗಳನ್ನು ಹೇಗೆ ಎದುರಿಸಬೇಕೆಂದು ಬುದ್ಧಿವಾದ ಹೇಳುತ್ತವೆ.


ಇಲ್ಲಿ ಅಶೋಕ್ ವಿ ಬಳ್ಳಾ ಅವರು ಆಯ್ದುಕೊಂಡ ವಸ್ತು ವಿಷಯ ನಮ್ಮ ಸುತ್ತಲಿನ ಸಂಗತಿಗಳನ್ನೇ ಹೊಂದಿದ್ದು ಕಥೆಯ ನಿರೂಪಣಾ ಶೈಲಿ, ಕಥೆಗಳಿಗೆ ತಕ್ಕ ಚಿತ್ರಗಳು ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಮೂಡಿಸುವಂತಿವೆ. ಇಲ್ಲಿನ ಬಹುತೇಕ ಕಥೆಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಈ ಕೃತಿ ಮಕ್ಕಳ ನೆಚ್ಚಿನ ಕೃತಿಯಾಗುವುದರಲ್ಲಿ ಸಂಶಯವಿಲ್ಲ ಎಂದರು. 


ಈಗಾಗಲೇ ಮಕ್ಕಳಿಗಾಗಿ ಎರಡು ಕಥಾ ಸಂಕಲನ ಮತ್ತು ಎರಡು ಕವನ ಸಂಕಲನಗಳನ್ನು ಪ್ರಕಟಿಸಿರುವ ಅಶೋಕ ವಿ ಬಳ್ಳಾ ಅವರ ಬರವಣಿಗೆ ಉತ್ತರೋತ್ತರವಾಗಿ ಬೆಳೆಯಲಿ. ನಾಡಿನ ಪಠ್ಯಪುಸ್ತಕಗಳಲ್ಲಿ ಇವರ ಬರಹಗಳಿಗೆ ಸ್ಥಾನ ಸಿಗಲಿ ಎಂದು ಹಾರೈಸಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಈಶ್ವರಪ್ಪ ಮ್ಯಾಗೇರಿ, ಪಾರಂಪರಿಕ, ಸಾಂಪ್ರದಾಯಿಕ ರೈತರ ಸಂಭ್ರಮದ, ಚರಗದ ಹಬ್ಬವನ್ನು ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮವನ್ನಾಗಿಸಿದ ಕೀರ್ತಿ ಬಹುತೇಕ ಶಿಕ್ಷಕರೇ ಕೂಡಿರುವ ಈ ಬಳಗಕ್ಕೆ ಸಲ್ಲುತ್ತದೆ.


ಕ್ರಿಯಾಶೀಲ ಶಿಕ್ಷಕರು ಮಾತ್ರ ಇಂತಹ ವಿನೂತನ ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯ. ಆ ಮೂಲಕ ಒಂದು ಸ್ಥಾಪಿತ ವ್ಯವಸ್ಥೆಯನ್ನು ಮುರಿದು ಕಟ್ಟುವ ಪ್ರಕ್ರಿಯೆಗೆ ಒಳಪಡಿಸಿದಂತಾಯಿತು. ಕೇವಲ ಇದು ದಾಖಲೆಗಾಗಿ ಮಾತ್ರವಾಗಿರದೆ ನಮ್ಮ ಸಂಪ್ರದಾಯಕ್ಕೆ ಹೊಸ ರೂಪ ನೀಡುವಂತಾಗಬೇಕು ಎಂದರು. 


ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಇಳಕಲ್ಲ ತಾಲೂಕಾ ಘಟಕದ ನಿರ್ದೇಶಕರಾದ ಶಂಕರ್ ಖತ್ರಿ, ಎಂ. ಬಿ. ಕೂಡಲಗಿಮಠ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ನೂತನ ಚುನಾಯಿತ ನಿರ್ದೇಶಕರಾದ ಜಾಕೀರ್ ಹುಸೇನ್ ಗಡೇದ, ಎಸ್ ಎಚ್ ಹಿರೇಕುಂಬಿ, ಶಿವಪ್ಪ ಚಲವಾದಿ ಅವರನ್ನು ಸನ್ಮಾನಿಸಲಾಯಿತು. 


ಸಿ.ಆರ್.ಪಿ. ಸಂಗಪ್ಪ ಸಂಗಮ, ಹುನಗುಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ. ಬಾಗವಾನ್ ಶಿಕ್ಷಕರಾದ ಸುಭಾಸ ಕಣಗಿ, ವಿಶ್ವನಾಥ್ ಬೀಳಗಿ, ಸುಮಿತ್ರಾ ಮ್ಯಾಗೇರಿ, ಶಿವಮ್ಮ ಪರುತಗೌಡ್ರ, ಪರಶುರಾಮ ಪಾಟೀಲ, ಬಸಮ್ಮ ಪಾಟೀಲ, ಜ್ಯೋತಿ ಶೀಲವಂತರ, ಸಂಜೋತಾ ಜಗದೀಶ ಶೀಲವಂತರ ಇತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top