ಧರ್ಮಸ್ಥಳ: ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್ ಉಪನ್ಯಾಸ ನೀಡಿದರು.
ಕ್ರೈಸ್ತ ಧರ್ಮದಲ್ಲಿ ಸಮನ್ವಯದ ದೃಷ್ಟಿ ಎಂಬ ವಿಚಾರವಾಗಿ ಮಾತನಾಡಿದ ಉಪನ್ಯಾಸಕರು ಏಸುಕ್ರಿಸ್ತನ ಜೀವನವನ್ನೇ ಉದಾಹರಣೆಯಾಗಿ ಪ್ರಸ್ತುತಪಡಿಸಿದರು.
ಕ್ರೈಸ್ತ ಮತ ಎಂದರೆ ಶುದ್ಧ ಪ್ರೀತಿ. ಮರ ಬೆಳೆದರೂ ಬೇರು ನೆಲದಾಳದಲ್ಲಿರಬೇಕು ಎನ್ನುವ ಮಾತಿದೆ. ಹಾಗೆಯೇ ಮನುಷ್ಯ ಎಷ್ಟೇ ಬೆಳೆದರೂ ತನ್ನ ಬೇರುಗಳನ್ನು ಪ್ರೀತಿ ಎಂಬ ಭೂಮಿಯ ಒಡಲಿನಲ್ಲಿರಿಸಬೇಕು. ಆಗಲೇ ಆತ ನಿಜವಾದ ಕ್ರೈಸ್ತನಾಗುತ್ತಾನೆ. ಜೀವದ ಬಗ್ಗೆ ಕಾಳಜಿ ಪ್ರೀತಿ ಇಲ್ಲದ ವ್ಯಕ್ತಿ ಕ್ರೈಸ್ತನಾಗಲಾರ.
ನಡು ಮಧ್ಯಾಹ್ನ ಕೀಳು ಜಾತಿಯ ಮಹಿಳೆ ಬಳಿ ನೀರು ಕೇಳಿದ ಏಸುಕ್ರಿಸ್ತ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನೆಡೆಗೆ ತೋರಿಸುವ ಶುದ್ಧ ಪ್ರೀತಿಯನ್ನೇ ತೋರಿಸಿದ್ದು. ಹೀಗಾಗಿ ಜೀವಕ್ಕೆ ಜಾತಿ ಭೇದವಿಲ್ಲ.
ಕ್ರೈಸ್ತ ಧರ್ಮದಲ್ಲಿ ಕ್ಷಮೆ ಅತ್ಯಂತ ಪವಿತ್ರ ಸ್ಥಾನವನ್ನು ಪಡೆದಿದೆ. ಕ್ಷಮೆ ನೀಡದ ದೇವರು ದೇವರಾಗಲಾರ. ಹಾಗೆಯೇ ತಪ್ಪು ಮಾಡದ ಮನುಷ್ಯನೂ ಇಲ್ಲ. ತಪ್ಪುಗಳು ನಡೆಯುವುದು ಸಹಜವಾದದ್ದು. ಆದರೆ ಅದಕ್ಕಾಗಿ ಪಶ್ಚಾತಾಪ ಪಡುವುದು ಮನುಷ್ಯನ ಕರ್ತವ್ಯ. ಮನಸ್ಸಿನೊಳಗೆ ಪಶ್ಚಾತಾಪ ಭಾವ ಇರದೆ ಕ್ಷಮೆ ಕೇಳಿದರೆ ಅದು ವ್ಯರ್ಥ. ಅದಷ್ಟೇ ಅಲ್ಲದೆ ನಾವು ಕ್ಷಮೆ ಮಾತ್ರ ಕೇಳುವುದಲ್ಲ. ಇತರರನ್ನೂ ಕ್ಷಮಿಸಬೇಕು. ನಾವು ಯಾವ ರೀತಿ ಇತರರನ್ನು ಕ್ಷಮಿಸುತ್ತೇವೋ ಅದೇ ರೀತಿ ಪರಮಪಿತನು ನಮ್ಮನ್ನು ಕ್ಷಮಿಸುತ್ತಾನೆ.
ಪ್ರೀತಿ ದಯೆ ಕ್ಷಮೆ ಇವೇ ಯೇಸು ಕ್ರಿಸ್ತನ ಜೀವನ. ಯೇಸುಕ್ರಿಸ್ತ ತನ್ನ ಜೀವಮಾನದಾದ್ಯಂತ ನುಡಿದಂತೆಯೇ ನಡೆದಿದ್ದಾನೆ. ಶಿಲುಬೆಯ ಮೇಲಿದ್ದಾಗಲೂ ತನಗೆ ಅಪಹಾಸ್ಯ ಮಾಡಿದವರನ್ನು ಪರಮಪಿತನಲ್ಲಿ ಕೇಳಿಕೊಂಡಿದ್ದರು. ಈ ರೀತಿಯಾಗಿ ಪರಿಶುದ್ಧ ಹೃದಯವಿದ್ದಲ್ಲಿ ಮಾತ್ರವೇ ದೇವರ ದರ್ಶನ ಸಾಧ್ಯ.
ದೇವರ ದರ್ಶನವಾಗಲು ನುಡಿದಂತೆ ನಡೆಯಬೇಕು. ನುಡಿದಂತೆ ನಡೆಯಲು ಅನೇಕ ಸವಾಲುಗಳು ಎದುರಾಗುತ್ತವೆ. ನಾವು ಮಾಡಬೇಕಾದ ಕೆಲಸವನ್ನು ಮಾಡಲು ಪ್ರಾಣವನ್ನಾದರೂ ಕೊಡಲು ತಯಾರಿರಬೇಕು. ಅದೇ ರೀತಿ ಮಾಡಬಾರದ ಕೆಲಸ ಮಾಡುವ ಪರಿಸ್ಥಿತಿ ಎದುರಾದರೆ ಪ್ರಾಣ ಬಿಟ್ಟಾದರೂ ಮಾಡದೇ ಇರಬೇಕು.
ಇತರರೆಡೆಗೆ ದಯೆ ಪ್ರೀತಿ ಕ್ಷಮೆ ತೋರದ ಧರ್ಮ ಧರ್ಮವೇ ಅಲ್ಲ. ದಯವಿಲ್ಲದ ಧರ್ಮ ಯಾವುದಯ್ಯ. ಪ್ರತಿಯೊಬ್ಬ ಮನುಷ್ಯನಿಗೆ ದಯೆ ಪ್ರೀತಿ ಕ್ಷಮೆಗಳನ್ನು ತೋರಿಸಿದರೆ ಮಾತ್ರವೇ ಸಮನ್ವಯತೆ ಸಾಧ್ಯ ಎಂದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ