ಧರ್ಮಸ್ಥಳ: ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ನಡೆದ ಸರ್ವಧರ್ಮ ಸಮ್ಮೇಳನವನ್ನು ರಾಜ್ಯದ ಗೃಹ ಸಚಿವ ಡಾ ಜಿ. ಪರಮೇಶ್ವರ್ ಉದ್ಘಾಟಿಸಿ ಮಾತನಾಡಿದರು.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಮನ್ವಯತೆ ನಾಡಿನ ಪ್ರಮುಖ ಆದ್ಯತೆಯಾಗಬೇಕಿದೆ. ಅದಕ್ಕಾಗಿ ಜನರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು.
ಭಾರತ ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಕೇವಲ ಹಣ, ಸೌಕರ್ಯಗಳು ಇದ್ದರೆ ಸಾಲದು. ವಿಭಿನ್ನ ಆಲೋಚನೆಗಳ ಜನರ ನಡುವೆ ಸೌಹಾರ್ದಯುತ ವಾತಾವರಣ ಇರಬೇಕು.
ಭಾರತದಲ್ಲಿ ಅನೇಕ ಧರ್ಮಗಳು ನೆಲೆಕಂಡಿದ್ದು, ಕೆಲವು ದೇಶದೊಳಗೆ ಹುಟ್ಟಿದ್ದರೆ ಇನ್ನೂ ಕೆಲವು ಹೊರಗಿನಿಂದ ಬಂದಂಥವು. ದೇಶ ಇಂದು ನಂಬಿಕೆಗಳ ನಡುವಿನ ತಿಕ್ಕಾಟದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಜನರ ನಡುವೆ ಸೌಹಾರ್ದಯುತ ಭಾವ ಇಲ್ಲದೆ ಹೋದಲ್ಲಿ ಆರ್ಥಿಕ ಪ್ರಗತಿ ಅಸಾಧ್ಯ.
ಸಾಂಸ್ಕೃತಿಕ ವೈವಿಧ್ಯತೆ ದೇಶದ ಶಕ್ತಿಯಾಗಿದೆ. ಆದರೆ, ಆ ವೈವಿಧ್ಯತೆಯ ನಡುವೆ ಒಗ್ಗಟ್ಟು ಕಾಪಾಡುವುದರಲ್ಲಿ ನಮ್ಮ ಗೆಲುವಿದೆ. ಇಂದು ಯುವ ಜನತೆಗೆ ಅನೇಕ ಅವಕಾಶಗಳಿವೆ. ಅದರೊಂದಿಗೆ ಸವಾಲುಗಳೂ ಇವೆ. ಪ್ರತಿ ಕಾಲದಲ್ಲೂ ಸ್ಪರ್ಧೆ ಇದ್ದೇ ಇರುತ್ತದೆ. ಸ್ಪರ್ಧೆ ಅಲ್ಲದೆ ಯುವಕ ಯುವತಿಯರಿಗೆ ಒಂದು ಸವಾಲಿದೆ. ಅದೇನೆಂದರೆ ಸಮಾಜದ ಸ್ವಾಸ್ತ್ಯ ಕಾಪಾಡುವುದು.
ಇಂದಿನ ಯುವ ಜನತೆ ಸಂವಿಧಾನದಲ್ಲಿರುವ ಭ್ರಾತೃತ್ವ, ಸಮಾನತೆ, ಇತರರ ಘನತೆಗೆ ಗೌರವಿಸುವುದು, ಮುಂತಾದ ಉದಾತ್ತ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅದರೊಂದಿಗೆ ಪ್ರತಿಯೊಂದು ಧರ್ಮದಿಂದಲೂ ಒಳ್ಳೆಯ ಮೌಲ್ಯಗಳನ್ನು ಎರವಲು ಪಡೆದುಕೊಳ್ಳಬೇಕು. ಯುವ ಜನತೆ ಸಮಾಜದಲ್ಲಿ ಜವಾಬ್ದಾರಿಯುತರಾಗಿ ವರ್ತಿಸಿದರೂ ಸಾಕು, ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಂಡ ಹಾಗಾಗುತ್ತದೆ.
ಆಗಲೇ ಮುಂಬರುವ ದಿನಗಳಲ್ಲಿ ನಾವು ಸಾಮಾಜಿಕ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಆಲೋಚನೆಗಳ ಘರ್ಷಣೆ ಉದಾತ್ತ ಮೌಲ್ಯಗಳೊಂದಿಗೆ ಆದಾಗ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ