ಚಾತುರ್ವಣ್ಯವನ್ನು ತಿದ್ದುವುದಲ್ಲ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು

Upayuktha
0


ಉಡುಪಿ: ನಮ್ಮ ಪ್ರಜಾಸತ್ತೆಯ ಬದುಕಿಗೆ ದಾರಿದೀಪವಾದ ಸಂವಿಧಾನವನ್ನು ರಚಿಸಿಕೊಟ್ಟ ಬಾಬಾಸಾಹೇಬ್ ಅಂಬೇಡ್ಕರರು ಈ ನೆಲದ ರೋಗಗಳ ಮೂಲವಾದ ಜಾತಿಯ ವಿನಾಶದಲ್ಲೇ ಈ ದೇಶದ ಏಳಿಗೆಯಿದೆಯೆಂದರೋ, ಅಂತೆಯೇ ಕನ್ನಡದ ನಿಜದನಿಯಾದ ಶ್ರೀ ಕುವೆಂಪು ಕೂಡಾ ‘ಚಾತುರ್ವಣ್ಯವನ್ನು ತಿದ್ದುವುದಲ್ಲ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು’ ಎಂದೇ ಪ್ರತಿಪಾದಿಸಿದರು ಎಂದು ವಿಮರ್ಶಕ ಮುರಳೀಧರ ಉಪಾಧ್ಯಾಯ ಹಿರಿಯಡಕ ಹೇಳಿದರು. ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮಾಡುವ ಮೂಲಕ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇನಲ್ಲಿ ಆಯೋಜಿಸಿದ ‘ಚಕೋರ - ಸಾಹಿತ್ಯ ವಿಚಾರ ವೇದಿಕೆ ಉಡುಪಿ’ ಇದನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ‘ಕುವೆಂಪು ಕೃತಿಗಳಲ್ಲಿ ಸಮಾನತೆಯ ಆಶಯ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಡಾ. ರೇಖಾ ವಿ ಬನ್ನಾಡಿ ಅವರು, ‘ಜಲಗಾರ’ ನಾಟಕ ಪಠ್ಯವನ್ನು ವಿಶ್ಲೇಷಿಸುತ್ತಾ, ಶ್ರೀಕುವೆಂಪು ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಪಂಪನಿಂದ ತೊಡಗಿ, ಕಾಯಕ ಸಮಾನತೆಯ ಮೂಲಕವೇ ಮನುಷ್ಯ ಸಮಾನತೆಯನ್ನು ಸಾರಿದ ಶರಣರು, ತತ್ವಪದಕಾರರುಗಳ ನಿಜವಾರಸುದಾರರು ಮಾತ್ರವಲ್ಲ ನೆಲದ ಸಮುದಾಯಗಳೆಲ್ಲವನ್ನೂ ತಾಯ್ತನದ ಕರುಳಿಂದಲೇ ಪ್ರೀತಿಸಿದ ಗಾಂಧೀ ಮತ್ತು ಅಂಬೇಡ್ಕರ್ ಬಯಸಿದ ಅರ್ಥಪೂರ್ಣ ಪ್ರಜಾಸತ್ತೆಯ ಕನಸನ್ನು ಕಂಡ ಮನುಷ್ಯಲೋಕದ ಮಹತ್ವದ ಆಸ್ತಿಯೂ ಹೌದೆಂದರು. 


ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯಡಕ ಸಪ್ರದ ಕಾಲೇಜಿನ ಪ್ರಾಂಶುಪಾಲ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ. ಜಯಪ್ರಕಾಶ್ ಶೆಟ್ಟಿಯವರು ಅಕಾಡೆಮಿಯ ಕನಸಿನ ಕೂಸಾದ ‘ಚಕೋರ’ದ ಕರ‍್ಯಚಟುವಟಿಕೆಗಳ ಸ್ವರೂಪ ಮತ್ತು ಆಶಯಗಳನ್ನು ಪರಿಚಯಿಸಿ, ಅದು ಕುವೆಂಪು ಹುಟ್ಟಿದ ತಿಂಗಳಾದ್ದರಿಂದ ಅವರ ನುಡಿನಮನದೊಂದಿಗೇ ಆರಂಭಗೊಳ್ಳುತ್ತಿದೆ  ಎಂದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಪ್ರಕಾಶ್ ಪ್ರಭು, ವಿದ್ಯಾರ್ಥಿನಾಯಕ ಪ್ರಶಾಂತ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕ ದೇವದಾಸ ಪ್ರಭು ವಂದಿಸಿದ ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಚಕೋರ ಬಳಗದ ಸಂಚಾಲಕಿ ಶಾಲಿನಿ ಯು. ಬಿ ನಿರೂಪಿಸಿದರು.  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top