ಹಾಸನದಲ್ಲಿ 'ಪ್ರಚಂಡ ರಾವಣ' ನಾಟಕ ಯಶಸ್ವಿ ಪ್ರಯೋಗ

Upayuktha
0


ಹಾಸನ: ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘದ ಕಲಾವಿದರು ಗಾಡೇನಹಳ್ಳಿ ವೀರಭದ್ರಾಚಾರ್ ನಿರ್ದೇಶನದಲ್ಲಿ ದಿವಂಗತ ಕಣಗಲ್ ಪ್ರಭಾಕರ್ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶಿಸಿದರು.


ಈ ನಾಟಕವನ್ನು ದಿವಂಗತ ರಂಗಪ್ಪ ದಾಸ್‌ರವರು ಈ ಹಿಂದೆ ನಿರ್ದೇಶನ ಮಾಡಿದ್ದರು. ಇವರ 2ನೇ ವರ್ಷದ ನೆನಪು ಮತ್ತು ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶಿತವಾದ ಪ್ರಚಂಡ ರಾವಣ ನಾಟಕಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈಗೀಗ ಪೌರಾಣಿಕ ನಾಟಕ ಎಂಟು ಗಂಟೆಗೆ ಮೀರಿ ವಿಸ್ತರಿಸಿವೆ. ಇಲ್ಲಿ ರಂಗಗೀತೆ, ಹಾಡೇ ಪ್ರಧಾನ ಅಂಶವಾಗಿದೆ. ಈ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಕರ್ನಾಟಕ ರಂಗ ಸಂಗೀತ ಪರಿಷತ್ ಗೌ.ಅಧ್ಯಕ್ಷರು ಹೆಚ್.ಎಸ್. ಗೋವಿಂದೇಗೌಡರು ಪೌರಾಣಿಕ ನಾಟಕಗಳು ಬಹಳ ಎಂದರೆ ಮೂರ್ನಾಲ್ಕು ಗಂಟೆಗಳಲ್ಲಿ ಮುಗಿದರೆ ಚೆನ್ನ ಎಂದು ಸೂಚ್ಯವಾಗಿ ಹೇಳಿದರು.


ಪ್ರಚಂಡ ರಾವಣ ನಾಟಕದ ಕಾಲಾವಧಿ ಬಹಳ ಎಂದರೆ ಮೂರು ಗಂಟೆ. ನಾಟಕದಲ್ಲಿ ಹಾಡಿಗಿಂತ ಮಾತು ಸಂಭಾಷಣೆಗೆ ಹೆಚ್ಚಿನ ಒತ್ತು ನೀಡಿದೆ. ಪಂಚವಟಿ ದೃಶ್ಯವನ್ನು ಹೆಚ್ಚಾಗಿ ತರಲಾಗಿತ್ತು. ನಾಟಕದ ಮೂರು ಪ್ರಧಾನ ಪಾತ್ರಗಳು ರಾವಣ, ಕಾಲ ಭೈರವ ಮತ್ತು ಆಂಜನೇಯ. ಈ ಪಾತ್ರಗಳನ್ನು ಅನುಕ್ರಮವಾಗಿ ಜಗದೀಶ್ ರಾಮಘಟ್ಟ, ಕೆ.ಟಿ. ಈಶ್ವರಪ್ಪ ಮತ್ತು ಹಂಚೂರು ನಿರಂಜನ್ ಯಶಸ್ವಿಯಾಗಿ ನಿಭಾಯಿಸಿ ನಾಟಕದ ಯಶಸ್ವಿ ಪ್ರಯೋಗಕ್ಕೆ ಅವರದೇ ಕಾಣಿಕೆ ಹೆಚ್ಚಿನದಾಗಿತ್ತು.


ರಾಮನ ಪಾತ್ರ ಹೀರೋ ನಿಜ ಆದರೂ ರಾವಣ ಆರ್ಭಟದಲ್ಲಿ ಜೀರೋ ಆಗಿಬಿಡುತ್ತದೆ. ರಾವಣನಿಗೆ ಸರಿಸಾಟಿಯಾಗಿ ರಾಮನ ಪಾತ್ರದಲ್ಲಿ ಕದಾಳು ರಾಮಲಿಂಗೇಗೌಡರು ರಂಗಗೀತೆಗಳಿಂದ ಪಾತ್ರಕ್ಕೆ ಜೀವ ತುಂಬಿದರು. ಪಂಚವಟಿ ದೃಶ್ಯ ಆಳವಡಿಸಿ ರಾಮನಿಗೆ ಭರತನಾಗಿ ಚನ್ನಂಗಿಹಳ್ಳಿ ಶಶಿಕುಮಾರ್ ಹಾಡುಗಾರಿಕೆಯಲ್ಲಿ ಸಾತ್ ನೀಡಿದರು. ಸೀತೆ ಪಾತ್ರದಲ್ಲಿ ರಾಣಿ ಚರಾಶ್ರೀಯವರ ಹಾಡುಗಾರಿಕೆ ಚೆನ್ನಾಗಿರಲಿಲ್ಲ ಎಂಬುದು ಕಲಾವಿದರ ಅಭಿಪ್ರಾಯವಾಗಿತ್ತು. ನಾಟಕದ ಮಧ್ಯೆ ಬ್ರೇಕ್ ತೆಗೆದುಕೊಂಡು ಕಾಫಿ ಕುಡಿಯಲು ಹೊರಟು ಹೀಗೆ ಚರ್ಚಿಸಿದರು.


ತುಮಕೂರು ಮೈಸೂರು, ಬೆಂಗಳೂರಿನಿಂದ ಬರುವ ವೃತ್ತಿ ಕಲಾವಿದೆಯರ ಅಭಿನಯ ಹಾಡುಗಾರಿಕೆಗೆ ಹೋಲಿಸಿ ನಿರಾಶೆ ವ್ಯಕ್ತಪಡಿಸಿದರು. ಹಾಗೇ ಹೋಲಿಸಿದರೆ ಸೂತ್ರದಾರಿ ಪಾತ್ರದ ಮಂಜುಳ ರಮೇಶ್‌ರ ಎರಡು ಹಾಡು, ಮಂಡೋದರಿ ಪಾತ್ರದ ಮಮತ ಹಾಡು ಅಭಿನಯ ಒಂದು ಹಂತಕ್ಕೆ ರ‍್ವಾಗಿಲ್ಲ ಎಂಬ ಅಭಿಪ್ರಾಯ ಕಲಾವಿದರದು. ಬ್ರಹ್ಮನ ಪಾತ್ರದಲ್ಲಿ ಕಂಚಮಾರನಹಳ್ಳಿ ರಾಮಣ್ಣ ಮೀಸೆ ಬೋಳಿಸದೇ ಮೇಕಪ್ ಮಾಡಿಕೊಂಡಿದ್ದು ಸಾಣೇನಹಳ್ಳಿ ಸೋಮಣ್ಣನಿಗೆ ಸರಿ ಕಾಣಲಿಲ್ಲ. ಅಶೋಕ ವನದಲ್ಲಿರುವ ಸೀತೆ ಬೆರಳಿಗೆ ಉಂಗುರ ಧರಿಸಿದ್ದು, ಆಂಜನೇಯ ಸೈಡ್‌ವಿಂಗ್‌ನಿಂದ ಉಂಗುರು ಕ್ಯಾಚ್ ಹಿಡಿದು ಸೀತೆಗೆ ತಲುಪಿಸಿದ್ದು ವಿಭೀಷಣ ಪಾತ್ರದಾರಿ ಕಾರ್ಲೆ ಗೋವಿಂದೇಗೌಡರು ಹಾಡು ಮುಗಿಯುವ ಮೊದಲೇ ರಂಗಕ್ಕೆ ಬಂದು ಹಿಂತಿರುಗಿದ್ದು ಕಾಮೆಂಟ್ಸ್ ಮಾಡಿದ ಪ್ರೇಕ್ಷಕರು ಎಷ್ಟೊಂದು ಸೂಕ್ಷ್ಮಮತಿಗಳು ಎನಿಸಿತು. ಅಕರಾಕ್ಷ ಮತ್ತು ಮಕರಾಕ್ಷ ಪಾತ್ರಗಳು (ಬೀಕನಹಳ್ಳಿ ಚಂದ್ರೇಗೌಡ, ಸಿ.ಎಂ.ಶ್ರೀಕಂಠಪ್ಪ) ಹಾಸ್ಯಕ್ಕೆ ಸೀಮಿತ. ಪೋಷಕ ಪಾತ್ರಗಳಲ್ಲಿ ಕುಂಭಕರ್ಣ-ಶರತ್ ಜೆ., ಇಂದ್ರಜೀತ್-ರಮೇಶ್ ರಂಗದ ಮೇಲೆ ಬರುತ್ತಾರೆ.

 

ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕರು ಹೆಚ್.ಕೆ. ಕುಮಾರಸ್ವಾಮಿ ದೀಪ ಬೆಳಗಿಸಿ ಉದ್ಥಾಟಿಸಿದರು. ಹಾಸನ ತಾ. ಜೆಡಿಎಸ್ ಅಧ್ಯಕ್ಷರು ಎಸ್. ದ್ಯಾವೇಗೌಡರು, ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷರು ರವಿ ನಾಕಲಗೊಡು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರು ಈ. ಕೃಷ್ಣೇಗೌಡರು, ನಿವೃತ್ತ ಪ್ರಾಂಶುಪಾಲರು ಜಿ.ಎನ್.ಅನುಸೂಯ, ಎಂ.ಆರ್.ಚಂದ್ರಶೇಖರ್, ರಂಗ ನಿರ್ದೇಶಕರು ಎ.ಸಿ.ರಾಜು, ಕಲಾವಿದರಾದ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ, ಬೆಂಗಳೂರಿನ ತಿಮ್ಮರಸಪ್ಪ, ಅಪ್ಪಾಜಿಗೌಡರು. ಯರೇಹಳ್ಳಿ ಮಂಜೇಗೌಡರು, ಅನಂತಮೂರ್ತಿ ಮೊದಲಾದವರು ಇದ್ದರು. ಪೊಲೀಸ್ ನಂಜಪ್ಪ ಮತ್ತು ಜಿ.ಆರ್. ಶ್ರೀಕಾಂತ್ ಪ್ರಾರ್ಥನೆ ಗೀತೆಗಳನ್ನು ಹಾಡಿದರು. ಸಾಹಿತಿ ಗೊರೂರು ಅನಂತರಾಜು ನಿರೂಪಿಸಿದರು. ಸಂಘದ ಅಧ್ಯಕ್ಷರು ಜಗದೀಶ್ ರಾಮಘಟ್ಟ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top