ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ
ಬೆಂಗಳೂರು: ‘ಕರ್ನಾಟಕ ರಾಜ್ಯೋತ್ಸವವನ್ನು ನವೆಂಬರ್ ತಿಂಗಳಲ್ಲಿ ಸಂಭ್ರಮಾಚರಣೆಯಾಗಿ ಆಚರಿಸುತ್ತಿರುವುದು ಅರ್ಥಪೂರ್ಣ. ಆದರೆ ಇದನ್ನು ‘ಕನ್ನಡ ರಾಜ್ಯೋತ್ಸವ’ ಎಂದು ಪರಿಪೂರ್ಣ ಅರ್ಥದಲ್ಲಿ ಕರೆಯಲು ಇನ್ನೂ ಕಾಲ ಕೂಡಿಬಂದಿಲ್ಲ. ಏಕೆಂದರೆ ಜಗತ್ತಿನ ಇತರೆ ಭಾಷೆಗಳಂತೆ ಕನ್ನಡ ಕೂಡ ಸಂಪೂರ್ಣವಾಗಿ ವ್ಯಾವಹಾರಿಕ ಭಾಷೆಯಾಗಬೇಕು, ಉದ್ಯೋಗ ದೊರಕಿಸುವ ಅನ್ನದ ಭಾಷೆಯಾಗಬೇಕು ಹಾಗೂ ಶಿಕ್ಷಣ ಮಾಧ್ಯಮವಾಗಿ ಕಡ್ಡಾಯವಾಗಿ ಎಲ್ಲ ಶಾಲೆಗಳಲ್ಲಿಯೂ ಅಳವಡಬೇಕು. ಇದು ಈಡೇರಬೇಕಾದರೆ ನಾವೆಲ್ಲರೂ ನಮ್ಮ ಮಕ್ಕಳ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಜರುಗಬೇಕು ಎಂದು ಶಪಥ ಮಾಡಬೇಕು. ಆಗ ಕನ್ನಡದ ಕಸುವು ಮತ್ತು ಕನ್ನಡದ ಸಂಸ್ಕೃತಿಯ ತಿರುಳು ನಮ್ಮ ಮಕ್ಕಳಿಗೆ ಮನದಟ್ಟಾಗುತ್ತದೆ ಎಂದು ಚಂದನ ವಾಹಿನಿಯ ಜನಪ್ರಿಯ ‘ಥಟ್ ಅಂತ ಹೇಳಿ’ ಕ್ವಿಜ್ ಸರಣಿಯ ರೂವಾರಿ ಹಾಗೂ ಪ್ರಸಿದ್ಧ ವೈದ್ಯಸಾಹಿತಿ ಡಾ|| ನಾ. ಸೋಮೇಶ್ವರ ಅವರು ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ತನ್ನ ಸೋದರ ಸಂಸ್ಥೆಗಳೊಡಗೂಡಿ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
"ವಿಶ್ವದ ಯಾವುದೇ ಭಾಷೆಯನ್ನು ಮಕ್ಕಳು ಕಲಿಯಲಿ, ಆದರೆ ಅದನ್ನು ಕನ್ನಡದೊಡನೆ ಎಂಬುದನ್ನು ಮರೆಯಬಾರದು. ಕನ್ನಡದ ಸಂಸ್ಕಾರ ನಮ್ಮ ಮಕ್ಕಳನ್ನು ಮೃದುಮಧುರವಾಗಿಸುತ್ತದೆ ಮತ್ತು ಜಾಣರನ್ನಾಗಿಸುತ್ತದೆ. ಸತ್ಯದ ಸಂಗತಿಯೆಂದರೆ ಕನ್ನಡದ ಸಂಸ್ಕಾರ ನಮ್ಮ ಮಕ್ಕಳು ವಿಶ್ವದೆಲ್ಲೆಡೆ ಸಲ್ಲುವಂತೆ ಮಾಡುತ್ತದೆ’, ಎಂದು ಅವರು ಹೇಳಿದರು.
‘ನಮ್ಮ ಕರ್ನಾಟಕದ ಪ್ರಾಚೀನತೆಯನ್ನು ಕ್ರಿಸ್ತಪೂರ್ವ 5000ದ ವರೆಗೆ ನಮ್ಮ ಸಂಶೋಧಕರು ಕೊಂಡೊಯ್ದಿದ್ದಾರೆ. ಸಿಂಧೂ ಸರಸ್ವತಿ ಸಂಸ್ಕೃತಿಯಲ್ಲೂ ಕನ್ನಡಿಗರ ಹೆಜ್ಜೆಗುರುತುಗಳನ್ನು ಪಾಶ್ಚಾತ್ಯ ವಿದ್ವಾಂಸರು ಗುರುತಿಸಿದ್ದಾರೆ. ಅಲ್ಲಿ ದೊರೆತ ಪುರಾತನ ಚಿನ್ನದ ಆಭರಣಗಳಲ್ಲಿ ಶೇಕಡಾ 11ರಷ್ಟು ಬೆಳ್ಳಿಯ ಪ್ರಮಾಣ ಇರುವುದನ್ನು ಸಾಬೀತುಪಡಿಸಿರುವ ವಿದ್ವಾಂಸರು, ಇಷ್ಟು ಅಗಾಧ ಪ್ರಮಾಣದ ಬೆಳ್ಳಿಯ ಅಂಶ ಒಳಗೊಂಡ ಚಿನ್ನ ಇರುವುದು ನಮ್ಮ ನಾಡಿನ ಹಟ್ಟಿ ಚಿನ್ನದ ಗಣಿಯಲ್ಲಿ ಹಾಗೂ ಕೋಲಾರದ ಚಿನ್ನದ ಗಣಿಯಲ್ಲಿ ಮಾತ್ರ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಹಾಗಾಗಿ ನಮ್ಮ ಕನ್ನಡಿಗರು ವ್ಯಾಪಾರ ವ್ಯವಹಾರಗಳ ಸಲುವಾಗಿ ಸಿಂಧೂ ಸರಸ್ವತಿ ತೀರಕ್ಕೆ ಹೋಗುತ್ತಿದ್ದರು ಎಂಬುದು ನಿರ್ವಿವಾದದ ಸಂಗತಿ. ಮಹಾಭಾರತದಲ್ಲಿ ಲಭ್ಯವಾಗುವ ಮಹಿಷಿಕ, ವನವಾಸಿಕ, ಕುಂತಳ ಮತ್ತು ಕರ್ನಾಟ ಎಂಬ ಭೂಪ್ರದೇಶಗಳು ಕ್ರಮವಾಗಿ ನಮ್ಮ ಮೈಸೂರು, ಬನವಾಸಿ, ಬಳ್ಳಾರಿ ಹಾಗೂ ಕನ್ನಡ ನಾಡಿನ ಕರಾವಳಿ ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ. ಇಂತಹ ರೋಚಕ ಇತಿಹಾಸವನ್ನು ನಮ್ಮ ಮಕ್ಕಳಿಗೆ ಬೋಧಿಸುವ ಕಾರ್ಯ ಇನ್ನೂ ಆಗಬೇಕಿದೆ. ಆಗ ಮಾತ್ರ ನಮ್ಮ ಮಕ್ಕಳಲ್ಲಿ, ಅವರು ಮುಂದೆ ಎಲ್ಲಿಗೇ ಹೋದರೂ ನಾಡುನುಡಿಗಳ ಮೇಲಣ ಅಭಿಮಾನ ಚಿರಸ್ಥಾಯಿಯಾಗಿ ಉಳಿಯುತ್ತದೆ’ ಎಂದರು.
ಸಮಾರಂಭಕ್ಕೆ ಶುಭ ಹಾರೈಸಿದ ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅವರು ‘ನಾನು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಗುರುಗಳು ಬೋಧಿಸಿದ್ದೂ ಕೂಡ ಕನ್ನಡದಲ್ಲಿಯೇ. ನನ್ನ ವ್ಯಕ್ತಿತ್ವದ ವಿಕಾಸ ಹಾಗೂ ತಿಳುವಳಿಕೆಯ ವಿಸ್ತರಣೆಯಲ್ಲಿ ಕನ್ನಡ ಮಾಧ್ಯಮ ಎಂದೂ ಅಡ್ಡಿಯಾಗಲಿಲ್ಲ. ಮಾಧ್ಯಮ ಮುಖ್ಯ ಅಲ್ಲ, ಗ್ರಹಿಕೆ ಮುಖ್ಯ. ಕಲಿಯುವ ಮನಸ್ಸು ಮುಖ್ಯ. ನಾನು ಕನ್ನಡ ಮಾಧ್ಯಮದಲ್ಲಿ ಕಲಿತರೂ ಇಂಗ್ಲಿಷ್, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನನ್ನ ಭಾವನೆಗಳನ್ನು ಯಶಸ್ವಿಯಾಗಿ ಬಿಚ್ಚಿಡಬಲ್ಲೆ ಎಂಬ ಭರವಸೆ ನನಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶವಿದ್ಯಾಲಯಯದ ವಿಶ್ರಾಂತ ಕುಲಾಧಿಪತಿ ಪ್ರೊ. ಎನ್.ಆರ್.ಶೆಟ್ಟಿ ಅವರು ತಮ್ಮ ಭಾಷಣದಲ್ಲಿ ‘ಈಗ ಇಂಟರ್ನೆಟ್ (ಅಂತರ್ಜಾಲ), ಜೀವನಾವಶ್ಯಕವಾದ ಕುಡಿಯುವ ನೀರಿನಷ್ಟೇ ಪ್ರಾಧಾನ್ಯ ಗಳಿಸಿದೆ. ಆದ್ದರಿಂದ ನಾವು ನಮ್ಮ ಗ್ರಾಮೀಣ ಪ್ರದೇಶದ ಕನ್ನಡ ಶಾಲಾ ಮಕ್ಕಳಿಗೆಲ್ಲ ಮಲ್ಟಿಮೀಡಿಯಾ ಹೂರಣ ಹೊಂದಿದ ಟ್ಯಾಬ್ಲೆಟ್ಗಳನ್ನು ‘ಅಂತರ್ಜಾಲ ಸಂಪರ್ಕ’ ವ್ಯವಸ್ಥೆಯೊಂದಿಗೆ ಒದಗಿಸಬೇಕು. ಕನ್ನಡ ಭಾಷೆ ಹಾಗೂ ಇಂಗ್ಲಿಷ್ಗಳಲ್ಲಿ ಈ ಹೂರಣ ಲಭ್ಯವಾಗಬೇಕು. ಆಗ ನಾವು ನಮ್ಮ ಗ್ರಾಮೀಣ ಮಕ್ಕಳಿಗೆ ‘ಡಿಜಿಟಲ್ ತಂತ್ರಜ್ಞಾನ’ದ ಪರಿಚಯ ಮಾಡಿದಂತಾಗುತ್ತದೆ. ಅಲ್ಲದೆ ರಾಜ್ಯ ಸರ್ಕಾರ ಕೂಡ ಆಯ್ದ ಗುಣಮಟ್ಟದ ಇಂಜಿನಿಯರಿಂಗ್ ಕಾಲೇಜ್ಗಳಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ರೊಬೊಟಿಕ್ ತಂತ್ರಜ್ಞಾನಗಳ ಹೊಸ ಸಂಶೋಧನೆಗಳ ಸಲುವಾಗಿ ಅತ್ಯುತ್ತಮ ಪ್ರಯೋಗಾಲಯಗಳನ್ನು ಸ್ಥಾಪಿಸಲು ಹಣ ಹೂಡಬೇಕು. ಆಗ ನಿಜವಾದ ಅರ್ಥದಲ್ಲಿ ಸಂಶೋಧನೆಯ ಫಲಗಳು ಜನಸಾಮಾನ್ಯರಿಗೆ ಪ್ರಾಪ್ತವಾಗುತ್ತವೆ. ಮಾತ್ರವಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ವಿಶ್ವಮಾನ್ಯತೆ ಗಳಿಸುತ್ತದೆ’ ಎಂದರು.
ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ‘ಚಿಗುರು’ ಕನ್ನಡ ಸಾಂಸ್ಕೃತಿಕ ಬಳಗದ ಬಗ್ಗೆ ಕಿರುವರದಿಯನ್ನು ಬಳಗದ ಶಿಕ್ಷಕ ಸಂಯೋಜಕಿ ಡಾ|| ಎನ್. ನಳಿನಿ ಮಂಡಿಸಿದರು. ನಂತರ ಚಿಗುರು ಹೊರತಂದಿರುವ ರಾಜ್ಯೋತ್ಸವ ಸ್ಮರಣಿಕೆಯನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ರಾಜ್ಯೋತ್ಸವ ಸಮಾರಂಭದಲ್ಲಿ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳು ನಡೆಸಿದ್ದ ವಿವಿಧ ಸ್ಫರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದವರು- ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಹೆಚ್.ಸಿ. ನಾಗರಾಜ್ ಅವರು. ಸಮಾರಂಭದಲ್ಲಿ ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ|| ಸುಧೀರ್ ರೆಡ್ಡಿ ಹಾಗೂ ಗೌರವ ಪ್ರಾಧ್ಯಾಪಕ ಡಾ|| ವಿ. ಶ್ರೀಧರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಕನ್ನಡದ ಸಿರಿವಂತ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ