ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನ: ವಿಶೇಷ ಗಾಯನ ಕಾರ್ಯಕ್ರಮಕ್ಕೆ ನ.24ರಂದು ಮಂಡ್ಯದಲ್ಲಿ ಧ್ವನಿ ಪರೀಕ್ಷೆ

Upayuktha
0

'ಮಧುರ ಮಧುರವೀ ಮಂಜುಳ ಗಾನ’, ‘ನಾವಾಡುವ ನುಡಿಯೇ ಕನ್ನಡ ನುಡಿ' 



ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯದಲ್ಲಿ ಡಿಸೆಂಬರ್ 20, 21 ಮತ್ತು 22ರಂದು ಆಯೋಜಿತವಾಗಿರುವ 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾಗಿ ಕನ್ನಡದ ವಾತಾವರಣವನ್ನು ರೂಪಿಸುವ ಉದ್ದೇಶದಿಂದ ದೂರದರ್ಶನ ಚಂದನ ವಾಹಿನಿ ಸಹಯೋಗದಲ್ಲಿ ‘ಮಧುರ ಮಧುರವೀ ಮಂಜುಳಗಾನ-ನಾವಾಡುವ ನುಡಿಯೇ ಕನ್ನಡ ನುಡಿ’ ಎನ್ನುವ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಚಿತ್ರಗೀತೆಗಳ ಮತ್ತು ಕವಿಗೀತೆಗಳ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ. ಡಿಸೆಂಬರ್ 1ರ ಭಾನುವಾರಕ್ಕೆ ಆಯೋಜಿತವಾಗಿರುವ ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ನವೆಂಬರ್ 24ರ ಭಾನುವಾರ ಮಂಡ್ಯದ ಡಾ. ಅಂಬೇಡ್ಕರ್ ಭವನದಲ್ಲಿ ಧ್ವನಿ ಪರೀಕ್ಷೆ ಮತ್ತು ಪೂರ್ವಭಾವಿ ಆಯ್ಕೆ ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ.


ಇದು ಧ್ವನಿ ಪರೀಕ್ಷೆಯಾಗಿದ್ದು ಆಯ್ಕೆ ಪ್ರಕ್ರಿಯೆಯ ಭಾಗವಾಗಿರುವುದರಿಂದ ಯಾವುದೇ ರೀತಿಯ ಪ್ರಯಾಣ ಭತ್ಯ ಮತ್ತು ಊಟ-ವಸತಿ ಸೌಕರ್ಯಗಳನ್ನು ಒದಗಿಸಲಾಗುವುದಿಲ್ಲ. ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಮೊದಲೇ ಕನ್ನಡ ಸಾಹಿತ್ಯ ಪರಿಷತ್ತು ನಿಗದಿ ಪಡಿಸಿರುವ ಅರ್ಜಿ ನಮೂನೆಯಲ್ಲಿ ತಮ್ಮ ವಿವರಗಳನ್ನು ತುಂಬಿ ನೊಂದಣಿಯನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ತಮ್ಮ ಇತ್ತೀಚಿನ ಭಾವಚಿತ್ರ ಮತ್ತು ಆಧಾರ್ ಅಥವಾ ಯಾವುದೇ ಗುರುತಿನ ಚೀಟಿಯನ್ನು ತಂದಿರಬೇಕು. ಅಭ್ಯರ್ಥಿಗಳು ಕನ್ನಡ ನಾಡು-ನುಡಿ-ನೆಲ-ಜಲಕ್ಕೆ ಸಂಬoಧಿಸಿದ ಚಿತ್ರಗೀತೆಗಳನ್ನು ಮಾತ್ರ ಹಾಡಬೇಕು, ಕವಿಗೀತೆಗಳನ್ನು ಹಾಡಬಹುದು. ಇವು ಕೂಡ ನಾಡು-ನುಡಿಗೆ ಸಂಬAಧಪಟ್ಟದ್ದಾಗಿರಬೇಕು.


ನೃತ್ಯ ಪ್ರದರ್ಶನ ನೀಡುವವರು ಇದಕ್ಕೆ ಅಗತ್ಯವಾದ ಧ್ವನಿಸಾಂದ್ರಿಕೆಯನ್ನು ತಾವೇ ತಂದಿರಬೇಕು, ಅದಕ್ಕೆ ಬೇಕಾದ ಪರಿಕರಗಳನ್ನು ಅವರೇ ಹೊಂದಿಸಿ ಕೊಳ್ಳಬೇಕು, ಗಾಯಕರು, ಸ್ಥಳೀಯವಾಗಿ ಒದಗಿಸಿರುವ ಸೀಮಿತ ವಾದ್ಯ ಸಹಕಾರದೊಂದಿಗೆ ಹಾಡ ಬೇಕು. ಕರೋಕೆ ಬಳಸಲು ಅನುಮತಿ ಇರುವುದಿಲ್ಲ.


ಆಯ್ಕೆ ಪ್ರಕ್ರಿಯೆಯು ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಎನ್ನುವ ತತ್ವದಡಿಯಲ್ಲಿ ನಡೆಯಲಿದ್ದು ಅಭ್ಯರ್ಥಿಗಳು ತಾಳ್ಮೆಯಿಂದ ಸಹಕರಿಸಬೇಕು. ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ಇದ್ದರೂ ನಾಡಿನ ಎಲ್ಲಾ ಭಾಗದವರನ್ನೂ ಗಣನೆಗೆ ತೆಗೆದು ಕೊಳ್ಳಲಾಗುವುದು. ಎಲೆಮರೆಯ ಕಾಯಿಯಂತಿದ್ದು ಸೂಕ್ತ ಅವಕಾಶ ದೊರಕದೆ ದೊಡ್ಡದಾದ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಬಯಸುವ ಪ್ರತಿಭಾವಂತರಿಗೆ ಆದ್ಯತೆಯನ್ನು ನೀಡಲಾಗುವುದು. ಭಾಗವಹಿಸುವವರು ಗಾಯನದಲ್ಲಿ ನೃತ್ಯದಲ್ಲಿ ಪ್ರಾಥಮಿಕ ಅರಿವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ. ಆಯ್ಕೆಯಾದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ದೂರದರ್ಶನ ಚಂದನ ವಾಹಿನಿಯಲ್ಲಿ ನಂತರ ಕಾರ್ಯಕ್ರಮವು ಪ್ರಸಾರವಾಗಲಿದೆ.


ಆಯ್ಕೆಯಾದವರು ಡಿಸಂಬರ್ 1ರ ಭಾನುವಾರದಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿವರಗಳನ್ನು ವಾಟ್ಸಪ್ ಮೂಲಕ ತಿಳಿಸಲಾಗುವುದು ಎಂದು ಕಸಾಪ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್.ಶ್ರೀಧರ ಮೂರ್ತಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top