ಅದೇನೋ ಗೊತ್ತಿಲ್ಲ ಕಷ್ಟದಲ್ಲಿರೋರ ನೋವಿಗೆ ಯಾವುದಾದರೂ ರೀತಿಯಲ್ಲಿ ಸ್ಪಂದಿಸಿದರೆ ಅದರಿಂದ ಸಿಗುವ ಸಂತೃಪ್ತಿ ಭಾವಕ್ಕೆ ಬೆಲೆ ಕಟ್ಟಲು ಸಾಧ್ಯನೇ ಇಲ್ಲ ಅನ್ನುವಂತೆ ಭಾಸವಾಗೋದು. ಸಮಾಜದಿಂದ ಪಡೆದುಕೊಂಡದ್ದು ಸಮಾಜಕ್ಕೆ ನೀಡಬೇಕು ಎಂಬ ಅರ್ಥಪೂರ್ಣ ಮಾತು ನೀವೂ ಕೇಳಿರಬಹುದು. ಹಾಗಾಗಿ ಇಂತಹ ಯೋಚನೆಯನ್ನು ಯೋಜನಾತ್ಮಕವಾಗಿ ಮಾಡಬೇಕು ಎಂಬ ಸದುದ್ದೇಶ ತಲೆಗೆ ಬಂದದ್ದು ಸುಳ್ಳಲ್ಲ. ಹೀಗಾಗಿ ಹೀಗೆ ಕೂತು ಮಾತಾಡುವಾಗ ನಮಗೆ ತಲೆಗೆ ಬಂದ ಒಂದು ಅದ್ಭುತ ವಿಚಾರವೆಂದರೆ ದಸರಾವನ್ನು ಹಾಗೋ ಹೀಗೋ ತಿರುಗಾಡಿ, ತಿಂದು ತೇಗಿ ಸಂಭ್ರಮಿಸುವುದಕ್ಕಿಂತ ನಾವೂ ವೇಷ ತೊಟ್ಟು ದೇಣಿಗೆ ಸಂಗ್ರಹ ಮಾಡಿ ಅನಾರೋಗ್ಯಕ್ಕೀಡಾದ ಮಗುವಿನ ಪಾಲಿಗೆ ಸಾಧ್ಯವಾದಷ್ಟು ಸೇವೆಗೈದು ಧನ್ಯರಾದರೆ ಹೇಗೆ ಅಂತ...ಇಂತಹ ಕೆಲಸ ಭಾವಿಸಿದಷ್ಟು ಸುಲಭವಲ್ಲ, ಸಾಧ್ಯವಿಲ್ಲವೆಂದು ಹೇಳುವಷ್ಟು ಕಠಿಣವೂ ಅಲ್ಲ. ಮೂರು ವರ್ಷದ ಹಿಂದೆ ಇಂತಹ ವಿನೂತನ ಪ್ರಯೋಗಕ್ಕೆ ಕೈ ಹಾಕಿಯೇ ಬಿಟ್ಟೆವು. ಥಲಸ್ಸೇಮಿಯಾ ಎಂಬ ಚರ್ಮರೋಗದಿಂದ ಬಳಲುತ್ತಿದ್ದ ಮಗುವಿಗೆ ನಿರಂತರವಾಗಿ ೫-೬ ದಿನ ಕೆಲಸ ಮುಗಿಸಿಕೊಂಡು ಬಂದು, ರೂಂನಲ್ಲಿ ಅಡುಗೆ ಮಾಡಿಟ್ಟು ಸಂಜೆ ಕುದ್ರೋಳಿ ದೇವಸ್ಥಾನಕ್ಕೆ ದೊಡ್ಡ ದೊಡ್ಡ ಬಾಕ್ಸ್ ಹಿಡಿದು ಹೋದರೆ ಮತ್ತೆ ರೂಂಗೆ ಹಿಂತಿರುಗುತ್ತಿದ್ದದ್ದು ರಾತ್ರಿ ಹನ್ನೆರಡಕ್ಕೆ. ಮರುದಿನ ಮತ್ತದೇ ದಿನಚರಿ. ಆಯಾಸ, ದಣಿವು, ಸಂಕೋಚ ಎಲ್ಲವೂ ನಮ್ಮೊಳಗೆ ತಾಂಡವವಾಡುತ್ತಿದ್ದರೂ ಹಣವನ್ನು ನೀಡಲು ಹೋದಾಗ ಮಗುವಿನ ಹೆತ್ತವರ ಕಣ್ಣಲ್ಲಿ ಆನಂದ ಬಾಷ್ಪ ನೋಡುವ ತವಕ ಎಂತಹ ಸವಾಲನ್ನು ಎದುರಿಸಲೂ ಪ್ರೇರೇಪಿಸುತ್ತಿತ್ತು. ನಾಲ್ಕು ಜನ ಒಂದೊಳ್ಳೆ ಮನಸ್ಸಿನ ಸ್ನೇಹಿತರ ಬಳಗ ಕೂಡಿ ಈ ಸತ್ಕಾರ್ಯವನ್ನು ಯಶಸ್ವಿಗೊಳಿಸಿದೆವು.
ಎರಡನೇ ವರ್ಷದ ದಸರಾ ಬಂದಾಗ ನಾಲ್ವರು ಇಬ್ಬರಾಗಿದ್ದೆವು. ಉದ್ದೇಶ ಹಸಿರಾಗಿತ್ತು, ಸವಾಲೂ ಸಾಕಷ್ಟಿತ್ತು. ಗೊಂಬೆ ವೇಷ ಬರೀ ಹುಡುಗರೇ ಯಾಕೆ ಹಾಕ್ಬೇಕು. ಈ ಬಾರಿ ನಾನೂ ಹಾಕ್ತೇನೆ ಅಂತ ಗೆಳೆಯನಲ್ಲಿ ಹಠ ಹಿಡಿದಿದ್ದೆ. ಕೊನೆಗೆ ಧರಿಸಿದೆ ಕೂಡಾ. ಅಬ್ಬಾ ಎನಿಸಿದಷ್ಟು ಸುಲಭವಲ್ಲ ಬಿಡಿ. ದೊಡ್ಡ ಮಂಡೆ ಹಾಕಿ, ಗೊಂಬೆ ವೇಷ ತೊಟ್ಟು ನಿಲ್ಲೋದಂದ್ರೆ ಸಾಮಾನ್ಯನಾ... ಬೆವರು ಮುಖದಿಂದ ಇಳಿದು ತುಟಿಯ ಸ್ಪರ್ಶಿಸಿದರೂ ಕೈಯಿಂದ ಒರೆಸುವಂತಿಲ್ಲ. ಮೂತ್ರ ಕಟ್ಟಿಕೊಂಡು ಐದಾರು ಗಂಟೆ ನಿಲ್ಲೋದಂದ್ರೆ ಸಾಮಾನ್ಯ ಸಂಗತಿ ಅಂತೂ ಅಲ್ಲವೇ ಅಲ್ಲ. ನೋಡಲು ಕಾಮಿಡಿ ಎನಿಸುವ ಎಂಥವರನ್ನೂ ನಗಿಸುವ ನಾ ಧರಿಸಿದ ಮುಖವಾಡದೊಳಗಿನ ಬೆವರು, ಅಸಹಾಯಕತೆ ಅರಿತವರಾರು ಹೇಳಿ. ಜನಸಂದಣಿಯಲ್ಲಿ ನಿನ್ನದೆಂಥ ಉಪದ್ರ ಎಂದು ಅದಾರೋ ಒಬ್ಬಾತ ಕೋಲಲ್ಲಿ ಕಾಲಿಗೆ ಪೆಟ್ಟು ಕೊಟ್ಟಾಗ ಭಯಂಕರ ನೋವಾಗಿತ್ತು. ನಾನು ಹುಡುಗಿ ಅಂತ ತಿಳಿಯದೆ ಪೊಲೀಸರು ನಮ್ಮದೆಂಥಾ ದಂಧೆ ಎಂದು ಸುತ್ತಮುತ್ತ ನೆರೆದ ಜನರೆದುರು ಅವಮಾನಿಸಿ ಬೈದು ಮುಖವಾಡ ತೆಗೆಯಲು ಹೇಳಿದಾಗ ಅಂತೂ ಕಣ್ಣಂಚು ತೇವಗೊಂಡಿತ್ತು. ಕೋಪ, ಅಸಹಾಯಕತೆ ಮಾತಾಡು ಎನ್ನುತ್ತಿದ್ದರೂ ಮಾಡುತ್ತಿರೋದು ಒಂದು ಮಗುವಿನ ಜೀವಕ್ಕಾಗಿ ಪುಣ್ಯದ ಕೆಲಸ ಸೈರಿಸು, ಕೆಲಸ ಮುಂದುವರೆಸು ಎಂದೇ ಪಿಸುಧ್ವನಿಸುತ್ತಿತ್ತು. ಪೊಲೀಸರು, ದೇಗುಲದ ಆಡಳಿತ ಸಿಬ್ಬಂದಿ, ರಕ್ಷಣಾ ಸಿಬ್ಬಂದಿಯ ಕಿರಿಕಿರಿಗೇ ನಮ್ಮ ಅವಾಂತರ ಮುಗಿಲಿಲ್ಲ ಬಿಡಿ. ದೊಡ್ಡ ಮಂಡೆಯ ಪುಟ್ಟ ಗೊಂಬೆಯನ್ನು ನೋಡುವಾಗ ಪುಟ್ಟ ಪುಟ್ಟ ಮಕ್ಕಳಿಗೆ ತಲೆಗೆ ಹೊಡೆಯೋದ್ರಲ್ಲಿ ಖುಷಿ, ಮೂಗು ಒಯ್ಯೋದ್ರಲ್ಲಿ ಖುಷಿ. ಆದರೆ ಒಳಗಿದ್ದ ನನಗೆ ಪರಮ ಸಂಕಟ. ವಿಪರೀತ ತಲೆನೋವು. ಮಕ್ಕಳು ಮಾತ್ರನಾ... ಕುಡಿದು ನಶೆಯಲ್ಲಿದ್ದ ಯುವಕರು, ಹಿಂದಿ ಭಾಷೆಯ ತರುಣರು ಹುಚ್ಚಾಟದಲ್ಲಿ ಹತ್ತಿರ ಬಂದಾಗ ಒಂಥರಾ ಭಯ.... ಇವರಿಗೇನು ಗೊತ್ತು ವೇಷ ಧರಿಸಿದ ನಾನು ಹೆಣ್ಣೆಂದು....
ದಸರಾ ಸಂದರ್ಭ ಹತ್ತು ಹಲವಾರು ವೇಷ ಧರಿಸಿ ಬಡವರ, ಅನಾರೋಗ್ಯಕ್ಕೀಡಾದ ಮಕ್ಕಳ ಪಾಲಿಗೆ ಆಶಾಕಿರಣವಾಗುವ ಸದುದ್ದೇಶಕ್ಕೆ ಸ್ಪೂರ್ತಿಯೇ ರವಿ ಕಟಪಾಡಿಯಂತಹ ದೇವಮಾನವರು. ಆದರೆ ಇಂತಹ ಕಾರ್ಯವನ್ನೂ ಸ್ವಾರ್ಥಕ್ಕೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದುರುಳರು, ಹಣ ಸಂಗ್ರಹಿಸಿ ಬಾರ್ ನಲ್ಲಿ ಕೂತು ಶೇಂದಿ ಒಯ್ಯುತ್ಯಿದ್ದ ಕುಡುಕ ಭೂಪರಿಂದ ನೇರ ದುಷ್ಪರಿಣಾಮ ಬಿದ್ದದ್ದು ಮಾತ್ರ ನಮ್ಮ ಮೇಲೆ. ಇಂತವರಿಂದ ನಮ್ಮ ಒಳ್ಳೆ ಕೆಲಸಕ್ಕೂ ಬೆಲೆಯಿಲ್ಲದಂತಾಗಿತ್ತು. ಪೊಲೀಸರ ಕಿರಿಕಿರಿ ಅತಿರೇಕಕ್ಕೆ ಏರಿತ್ತು. ಮುಂಜಾಗೃತಾ ಕ್ರಮವಾಗಿ ನಾವು ಪೊಲೀಸ್ ಕಮಿಷನರ್ ನ ಅಪ್ಪಣೆ ಪತ್ರ ಸಹಿತ ಈ ಕಾರ್ಯವನ್ನು ಆರಂಭಿಸಿದ್ದೆವು. ಆದರೂ ಆದ ಕಿರಿಕಿರಿ, ಎದುರಿಸಿದ ಸವಾಲು, ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಬಾರಿ ಮತ್ತೊಂದು ಹೊಸ ತೆರನಾದ ಸಂಕಷ್ಟ ಎದುರಾಗಿತ್ತು. ರಾಜಾಜಿ ಪಾರ್ಕ್ ನಲ್ಲಿ ಕೂತು ಬಾಕ್ಸ್ ರೆಡಿ ಮಾಡಿ, ಗೊಂಬೆ ವೇಷವನ್ನೂ ಖರೀದಿಸಿ ರೆಡಿಯಾದ್ರೆ ಸಾಕಾ....? ಪರ್ಮಿಷನ್ ಪತ್ರಕ್ಕೆ ಅಲೆದಾಡಿದ ರೀತಿ ಒಂದೆರಡಲ್ಲ...ಪ್ರತೀ ಬಾರಿಯಂತೆ ಈ ಬಾರಿ ಪೊಲೀಸ್ ಕಮಿಷನರ್ ಕಛೇರಿಯಿಂದ ಅನುಮತಿ ಪತ್ರಕ್ಕೆ ಸಹಿ ಪಡೆಯಲೆಂದು ಹೋಗಿದ್ದೆವು. ನಿಯಮ ಬದಲಾಗಿದೆ. ಈಗ ಮಹಾನಗರ ಪಾಲಿಕೆಗೆ ತೆರಳಿ ಅನುಮತಿ ಪತ್ರ ಪಡೆದುಕೊಳ್ಳಿ ಎಂದ ಅಲ್ಲಿಯ ನೌಕರನ ಮಾತು ಕೇಳಿ ಮತ್ತೆ ಹೋದದ್ದು ಮಾವು ಪಾಲಿಕೆಗೆ. ಅಲ್ಲಿ ಕೆಲ್ಸ ಮುಗೀತಾ ಇಲ್ಲ. ಇದ್ದ ಪ್ರಕ್ರಿಯೆಗಳನ್ನು ಮುಗಿಸಿ, ನಾವು ನೀಡಿದ್ದ ಪ್ರತೀ ಮಾಹಿತಿಯನ್ನು ಮೂರ್ನಾಲ್ಕು ಬಾರಿ ಪರಿಶೀಲಿಸಿ ಸಹಿ ಮಾಡಿ ಈಗ ಇದನ್ನು ತೆಗೆದುಕೊಂಡು ನೀವು ಬಂದರು ಪೊಲೀಸ್ ಠಾಣೆಗೆ ತೆರಳಬೇಕೆಂದು ಅಲ್ಲಿಯ ಅಧಿಕಾರಿ ಹೇಳಿದಾಗ ನಮ್ಮಲ್ಲಿ ತಾಳ್ಮೆ ಕಳೆಗುಂದಿತ್ತು, ಅಸಹಾಯಕತೆ ಮನೆ ಮಾಡಿತ್ತು. ಆದರೂ ನಾವು ಮಾಡುತ್ತಿರುವುದು ಈಗಷ್ಟೇ ಜಗತ್ತು ನೋಡುತ್ತಿರುವ ಪುಟ್ಟ ಹಸಿಕೂಸಿಗಾಗಿ ಎಂಬುದು ನೆನಪಾದಾಗ ಎಲ್ಲವೂ ತಿಳಿಯಾಗುತ್ತಿತ್ತು.... ಮತ್ತೆ ಠಾಣೆಗೆ ಹೋದೆವು. ಅಲ್ಲಿ ಕಾದು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಹಿಂತಿರುಗಿದಾಗ ದಣಿವಾಗಿತ್ತು. ಆದರೂ ಹಠದಲ್ಲಿ ಇಂದೇ ದೇಣಿಗೆ ಸಂಗ್ರಹ ಆರಂಭಿಸಬೇಕು ಎಂದು ಕುದ್ರೋಳಿ ದೇಗುಲಕ್ಕೆ ಹೋದೆವು. ಅಲ್ಲಿಂದ ಮತ್ತದೇ ಪೊಲೀಸರ ಕಿರಿಕಿರಿ, ಆಡಳಿತ ಮಂಡಳಿಯ ಸಾಲು ಪ್ರಶ್ನೆಗಳು, ವರುಣನಾರ್ಭಟ....ಉಫ್...ಒಂದಲ್ಲ ಎರಡಲ್ಲ ಸಾಲು ಸವಾಲುಗಳು ಎದುರಾದರೂ ನಮ್ಮ ಪುಣ್ಯದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿಲ್ಲ. ಮಗುವಿನ ಆರೋಗ್ಯ ಕುರಿತು ವಿಚಾರಿಸಲೆಂದು ಆಸ್ಪತ್ರೆಗೆ ಹೋದಾಗ ಮಗುವಿನ ತಂದೆ ಕಣ್ಣೀರಿಟ್ಟು ಆಡಿದ ಮಾತು ಹೃದಯ ಚುಚ್ಚುವಂತಿತ್ತು. ನಮ್ಮಿಂದಾದಷ್ಟು ಮಟ್ಟಕ್ಕೆ ಎಲ್ಲವನ್ನೂ ಸಹಿಸಿಕೊಂಡು ಈ ಮೂರನೇ ವರ್ಷದ ಪುಣ್ಯದ ಕೆಲಸವನ್ನು ಕೂಡಾ ಯಶಸ್ವಿಯಾಗಿ ಪೂರ್ಣಗೊಳಿಸಿದೆವು. ಮಗುವಿನ ತಂದೆಗೆ ಸಂಗ್ರಹಿಸಿದ್ದ ದೇಣಿಗೆಯನ್ನು ತುಂಬು ಮನಸ್ಸಿನಿಂದ ಹಸ್ತಾಂತರಿಸಿದೆವು. ಭಾವುಕತೆ, ಖುಷಿ, ಸಂತೃಪ್ತ ಭಾವ ಎಲ್ಲವೂ ನಮ್ಮಿಬ್ಬರನ್ನು ಆ ಕ್ಷಣ ಮೌನಕ್ಕೆ ಶರಣಾಗಿಸಿತ್ತು.
ಇಂತಹ ಅಳಿಲು ಸೇವೆಗೆ ನಿಮ್ಮ ಆಶೀರ್ವಾದವಿರಲಿ. ಮತ್ತೊಂದು ಕೋರಿಕೆ. ನಮ್ಮಿಂದ ಇನ್ನಾರದ್ದೋ ಜೀವನಕ್ಕೆ ಒಳ್ಳೆಯದಾಗುತ್ತದೆ ಎಂದರೆ ಅದನ್ನು ತೊಂದರೆ ಕೊಡದೆ ಮಾಡಲು ಬಿಡಿ..... ಸಾಧ್ಯವಾದರೆ ನೀವು ಮಾಡಿ ನೋಡಿ.... ಕೈಲಾಗದವರ ಪಾಲಿಗೆ ಆ ರೀತಿ ನೀವೂ ದೇವರಾಗಿ ಬಿಡಿ.
- ಅರ್ಪಿತಾ ಕುಂದರ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ