ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದಲ್ಲಿ ಲಕ್ಷದೀಪೋತ್ಸವದ ಪ್ರಥಮ ದಿನವಾದ ಮಂಗಳವಾರ ಹೊಸಕಟ್ಟೆ ಉತ್ಸವ ವೈಭವದಿಂದ ಜರುಗಿತು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಲಕ್ಷದೀಪೋತ್ಸವದ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು.
ಗರ್ಭಗುಡಿಯೊಳಗೆ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ನಡೆಸಿ, ದೇವಾಲಯದ ಒಳಾಂಗಣದಲ್ಲಿ ಉತ್ಸವಮೂರ್ತಿಯೊಂದಿಗೆ 16 ಸುತ್ತು ಬರಲಾಯಿತು. ಚೆಂಡೆ, ನಾದಸ್ವರ,ಸಂಗೀತ,ಶಂಖ ಸೇರಿದಂತೆ ಸರ್ವವಾದ್ಯಗಳೊಂದಿಗೆ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಹೊರಾಂಗಣದಲ್ಲಿ ಭಕ್ತರು ಮಂಜುನಾಥನಿಗೆ ನಮಿಸಿ ದೀಪಗಳನ್ನು ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದಿಂದ ಉತ್ಸವ ಮೂರ್ತಿಯನ್ನು ಜಾಗಟೆ, ತಮಟೆ ವಾದ್ಯಗಳ ಜತೆ ಸಾವಿರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ವಸಂತ ಮಹಲಿನ ಹೊಸಕಟ್ಟೆಗೆ ತರಲಾಯಿತು. ಅಲ್ಲಿ ದೇವರಿಗೆ ಚತುರ್ವೇದಗಳ ಪಠಣ,ಸಂಗೀತ ಸೇರಿದಂತೆ ಅಷ್ಟಸೇವೆಗಳ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ದೇವಾಲಯದ ಆನೆಗಳಾದ ಲಕ್ಷ್ಮಿ ಮತ್ತು ಶಿವಾನಿ ಆನೆಗಳು ಹೆಜ್ಜೆ ಹಾಕಿದವು. ದೇವಾಲಯದ ಬಸವನ ಉಪಸ್ಥಿತಿ ಉತ್ಸವಕ್ಕೆ ಕಳೆ ನೀಡಿತು.
ವಸಂತ ಮಹಲಿನಲ್ಲಿ ದೇವರಿಗೆ ಪೂಜೆಸಲ್ಲಿಸಿದ ಬಳಿಕ ದೇವಾಲಯದ ಹೊರಾಂಗಣದಲ್ಲಿ ಅಲಂಕೃತ ಬೆಳ್ಳಿರಥದಲ್ಲಿ ದೇವರನ್ನು ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬರಲಾಯಿತು. ನೆರೆದಿದ್ದ ಭಕ್ತರು ಭಕ್ತಿಭಾವದಿಂದ ರಥ ಎಳೆದು ಮಂಜುನಾಥನ ಅನುಗ್ರಹ ಪಡೆದ ಧನ್ಯತೆಯಿಂದ ತೃಪ್ತರಾದರು. ಉತ್ಸವಮೂರ್ತಿಯನ್ನು ದೇವಾಲಯದ ಒಳಗೆ ಕೊಂಡೊಯ್ಯುವಲ್ಲಿಗೆ ಹೊಸಕಟ್ಟೆ ಉತ್ಸವ ಸಂಪನ್ನವಾಯಿತು.
ವರದಿ: ಶ್ರವಣ್ ನೀರಬಿದಿರೆ, ದ್ವಿತೀಯ ಎಂಸಿಜೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ