ಜ್ಞಾನ ದುಃಖವನ್ನು ಕಳೆದು ಆನಂದವನ್ನು ಕೊಡುತ್ತದೆ: ಹರಿಹರಪುರ ಶ್ರೀಗಳು

Upayuktha
0

ಹರಿಹರಪುರದಲ್ಲಿ ಹೊಸ ಪದವಿ ಕಾಲೇಜಿನ ಕಟ್ಟಡಕ್ಕೆ ಭೂಮಿಪೂಜೆ | ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ



ಹರಿಹರಪುರ: "ಜ್ಞಾನವೇ ದೇವರು, ಜಗತ್ತನ್ನು ತಿಳಿದುಕೊಳ್ಳುವುದೇ ಯಥಾರ್ಥವಾದ ಅರಿವು. ಇದ್ದಿದ್ದನ್ನು ಇರುವ ಹಾಗೆ ಹೇಳುವುದು ಅರಿವು. ಜ್ಞಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜ್ಞಾನದ ಹುಡುಕಾಟದಲ್ಲಿ ಮನುಷ್ಯನಿಗೆ ಸಿಕ್ಕಿರುವುದು ಅತ್ಯಲ್ಪ. ಸಮುದ್ರದಲ್ಲಿ ಒಂದು ಹನಿ ನೀರಿನಷ್ಟು. ಜ್ಞಾನ ಅಂದರೆ ದುಃಖವನ್ನು ಕಳೆದು ಆನಂದವನ್ನು ಕೊಡುವಂತಹದು. ಜ್ಞಾನ ಬದುಕನ್ನು ಕೊಡುತ್ತದೆ. ಜ್ಞಾನ ಇಲ್ಲದಿದ್ದಲ್ಲಿ ದುಃಖ ಇದೆ. ಸತ್ಯವನ್ನು ತಿಳಿದುಕೊಳ್ಳಲು ಜ್ಞಾನವನ್ನು ಅರಸುವುದು ಮನುಷ್ಯನ ನಿರಂತರ ಪ್ರಕ್ರಿಯೆ" ಎಂದು ದಿವ್ಯಕ್ಷೇತ್ರ ಹರಿಹರಪುರ ಶ್ರೀಮಠದ ಪೀಠಾಧೀಶ್ವರರಾದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿಯವರು ನುಡಿದರು.


ಅವರು ಹರಿಹರಪುರದಲ್ಲಿ ಹೊಸ ಪದವಿ ಕಾಲೇಜಿನ ಕಟ್ಟಡಕ್ಕೆ ಭೂಮಿಪೂಜೆ ಮಾಡಿ ಆಶೀರ್ವಚನ ನೀಡಿದರು. ಹಿಂದೆ ಬದುಕಿಗೆ ಬೇಕಾದ ಜ್ಞಾನವನ್ನು ಪಡೆದುಕೊಳ್ಳಲು ವಿದ್ಯಾಲಯಗಳನ್ನು ಸ್ಥಾಪಿಸಿದ್ದರು. ಈಗ ಹರಿಹರಪುರ ವಿದ್ಯಾ ದೇವತೆ ಶಾರದೆಯ ಸನ್ನಿಧಿಯಲ್ಲಿ ಪದವಿ ಕಾಲೇಜಿಗೆ ಬೇಕಾದ ಒಂದು ಆಲಯ ನಿರ್ಮಿಸುವ ಅವಕಾಶ ನಮಗೆಲ್ಲ ದೊರೆತಿದೆ. ಜ್ಞಾನ ದುಃಖವನ್ನು ಕಳೆದು ಆನಂದವನ್ನು ಕೊಡುವಂತಹದು. ಎಲ್ಲರ ಆನಂದವನ್ನು ಹೆಚ್ಚಿಸುವ ಈ ದೇವರ ಕೆಲಸಕ್ಕೆ ಎಲ್ಲರೂ ಕೈ ಜೋಡಿಸೋಣ" ಎಂದು ಅವರು ಹೇಳಿದರು.


ಹರಿಹರಪುರದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನ ಇದು. ವಿಜಯನಗರ ಸಾಮ್ರಾಜ್ಯದ ಅರಸು ಎರಡನೆ ಹರಿಹರರಾಯ ಕಿ.ಶ.1396 ಈ ಊರಿಗೆ ಹರಿಹರಪುರ ಎಂದು ನಾಮಕರಣ ಮಾಡಿದ ಇತಿಹಾಸ ಪ್ರಸಿದ್ದ ಕ್ಷೇತ್ರ ಇದು. 630 ವರ್ಷಗಳ ಇತಿಹಾಸ ಮಾತ್ರ ಅಲ್ಲ, ಆಧ್ಯಾತ್ಮಿಕ, ಪೌರಾಣಿಕ ಮಹಾತ್ಮೆಯೂ ಈ ಪ್ರದೇಶಕ್ಕಿದೆ. ಪುರಾಣ ಪ್ರಸಿದ್ದ ದಕ್ಷ ಯಜ್ಞ ನೆಡೆದ ಕ್ಷೇತ್ರವಿದು. ದಕ್ಷಾಶ್ರಮ, ದಕ್ಷ ಹರ ಸೋಮೇಶ್ವರ ದೇವಾಲಯ ಇರುವ ಪುಣ್ಯ ಭೂಮಿ ಇದು.


ಅಗಸ್ತ್ಯ ಮಹರ್ಷಿ ತಪಸ್ಸು ಮಾಡುತ್ತ ಪೂಜೆ ಮಾಡುತ್ತಿದ್ದ ಲಕ್ಷ್ಮೀನೃಸಿಂಹನ ನೆಲೆವೀಡು. ಹರಿಯೇ ಲಕ್ಷ್ಮೀನರಸಿಂಹನಾಗಿ ಇಲ್ಲಿದ್ದಾನೆ. ದಕ್ಷ ಯಜ್ಞದ ನಂತರ ಸಾಕ್ಷಾತ್ ಹರನೇ ಇಲ್ಲಿ ಬಂದು ಸೋಮೇಶ್ವರನಾಗಿ ನೆಲೆಸಿದ್ದಾನೆ. ಹಾಗಾಗಿಯೇ ವಿಜಯನಗರ ಸಾಮ್ರಾಜ್ಯದ ಅರಸು ಎರಡನೆ ಹರಿಹರರಾಯ ಈ ಊರಿಗೆ ಹರಿಹರಪುರ ಎಂದು ನಾಮಕರಣ ಮಾಡಿದ್ದು. ಇದು ಸಣ್ಣ ಊರಾದರೂ ಮಹತ್ವ ದೊಡ್ಡದಿರುವ ಊರು ಇದು. ವೈಭವ, ಸಾಂಸ್ಕೃತಿಕ ಪರಂಪರೆ, ಭವ್ಯ ಇತಹಾಸ ಇದೆ. ವಿದ್ಯಾಧಿದೇವತೆ ಶಾರದೆಯೂ ನೆಲೆಸಿಹ ಜ್ಞಾನ ಕ್ಷೇತ್ರ ಈ ಹರಿಹರಪುರ. ಆತ್ಮ ಜ್ಞಾನ ಅರಿವಿನಿಂದಲೇ ಬರುವದು.  ಅರಿವನ್ನು ವೃದ್ದಿಸುವ ಪರಿಸರ ಇತಿಹಾಸ, ಪುರಾಣ ಕಾಲಗಳಿಂದಲೇ ಇಲ್ಲಿ ಸೃಷ್ಟಿ ಆಗಿದೆ. ಇಂತಹ ಜ್ಞಾನ ಪರಿಸರದಲ್ಲಿ ಉನ್ನತ ವಿದ್ಯಾಭ್ಯಾಸದ ಶಿಕ್ಷಣಕ್ಕೆ ಒಂದು ವಿಶಾಲವಾದ ಕಟ್ಟಡ ನಿರ್ಮಾಣ ಮಾಡಬೇಕಿದೆ. ಅದಕ್ಕೀಗ ಭೂಮಿ ಪೂಜೆಯೂ ಆಗಿದೆ.


ಕಾಯೇನವಾಚ ಮನಸಾ ಮಾಡುವ ಎಲ್ಲಾ ಒಳ್ಳೆಯ ಕೆಲಸ, ಸೇವೆಯೂ ಶಿವ ಪೂಜೆಯೆ. ಪ್ರಜಾ ಸೇವೆಯೇ ಶಿವ ಪೂಜೆ, ದೇಶ ಸೇವೆ, ಸಮಾಜ ಸೇವೆ, ಶಿಕ್ಷಣ ಸೇವೆಯೂ ಶಿವ ಪೂಜೆ.


ಕೈಗೆ ಅಲಂಕಾರ ಯಾವುದು ಎಂದರೆ ದಾನ ಮಾಡುವುದೇ ಅಲಂಕಾರ.  ಕೈಗೆ ಅಲಂಕಾರ ವಾಚಲ್ಲ, ಉಂಗುರ ಅಲ್ಲ. ದೇಶ ಸೇವೆಗೆ,  ಸಮಾಜ ಸೇವೆಗೆ, ಅನ್ನ ಸೇವೆಗೆ, ಶಿಕ್ಷಣ ಸೇವೆಗೆ ದಾನ ಮಾಡುತ್ತ ನಮ್ಮ ಕೈಗಳಿಗೆ ಅಲಂಕಾರ ಮಾಡಿಕೊಳ್ಳುವುದೇ ಶಿವನ ಪೂಜೆ.  ಸಾಧ್ಯವಾದಷ್ಟು ನಮ್ಮ ಯಥಾನುಶಕ್ತಿ ಶಿವ ಪೂಜೆ ಮಾಡುತ್ತ ಶಾರದೆಯ ದೇಗುಲವನ್ನು ನಿರ್ಮಿಸೋಣ.  


ವಿಜಯದಶಮಿ ದಿನ ಭೂಮಿ ಪೂಜೆ ಮಾಡಿದ್ದಕ್ಕೆ ತೊಂದರೆ ಬರುವುದಿಲ್ಲ. ಅದಷ್ಟು ಬೇಗ ಪದವಿ ಕಾಲೇಜಿನ ಕಟ್ಟಡ ಸಿದ್ದಗೊಳ್ಳಲಿ ಎಂದು ಶ್ರೀಗಳು ಹಾರೈಸಿದರು.


ಇದಕ್ಕೆ ಮೊದಲು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಗೌಡರು ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ 50 ಲಕ್ಷ ಮತ್ತು ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ಕಾಲೇಜಿನ ಕನಿಷ್ಟ ಒಂದು ಕೊಠಡಿಯ ಖರ್ಚನ್ನು ದಾನವಾಗಿ ಕೊಡುವ ಭರವಸೆ ನೀಡಿದರು.


ಮಠದ ಆಡಳಿತಾಧಿಕಾರಿಗಳು ಪ್ರಾಸ್ತವಿಕ ಮಾತುಗಳನ್ನು ಆಡಿದರು. ಲೆಕ್ಕ ಪರಿಶೋಧಕರಾಗಿರುವ ಹರ್ಷರವರು ವಂದನಾರ್ಪಣೆ ಸಲ್ಲಿಸಿದರು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top