ರಫ್ತು ಚಟುವಟಿಕೆ ಉತ್ತೇಜಿಸಲು ಅಂಚೆ ಇಲಾಖೆಯಿಂದ ಡಾಕ್ ನಿರ್ಯಾತ್ ಕೇಂದ್ರ: ಸುಧಾಕರ ಮಲ್ಯ

Upayuktha
0




ಮಂಗಳೂರು: ಅಂಚೆ ಇಲಾಖೆಯಿಂದ ರಫ್ತು ಚಟುವಟಿಕೆ ಉತ್ತೇಜಿಸಲು ದೇಶಾದ್ಯಂತ 1000 ಡಾಕ್ ನಿರ್ಯಾತ್ ಕೇಂದ್ರಗಳಿವೆ. ಈ ಪೈಕಿ ಮಂಗಳೂರು ಅಂಚೆ ವಿಭಾಗದಲ್ಲಿ ಮೂರು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ತಿಳಿಸಿದರು.


ಅವರು ಇಂದು ಅಂಚೆ ಇಲಾಖೆಯ ವತಿಯಿಂದ ವಿಶ್ವ ಅಂಚೆ ದಿನದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.


ಮಂಗಳೂರು ಅಂಚೆ ವಿಭಾಗದ ಪ್ರಧಾನ ಅಂಚೆ ಕಚೇರಿ ಇರುವ ಪಾಂಡೇಶ್ವರ, ಹಂಪನಕಟ್ಟೆ ಮತ್ತು ಸುರತ್ಕಲ್ ಅಂಚೆ ಕಚೇರಿಗಳು ಡಾಕ್ ನಿರ್ಯಾತ್ ಕೇಂದ್ರಗಳಾಗಿ ವಿದೇಶಗಳಿಗೆ ಗ್ರಾಹಕರ ಉತ್ಪನ್ನಗಳನ್ನು ರಫ್ತು ಮಾಡಲು ನೆರವು ನೀಡುತ್ತಿವೆ. ಪ್ರಪಂಚದಾದ್ಯಂತದ ವಿವಿಧ ದೇಶಗಳಿಗೆ ಗ್ರಾಹಕರು ಉತ್ಪನ್ನ ಗಳನ್ನು ರಫ್ತು ಮಾಡುವ ಚಟುವಟಿಕೆಗಳಿಗೆ ಈ ಕೇಂದ್ರಗಳ ಮೂಲಕ ಸಹಾಯ ಮಾಡಲಾಗುತ್ತದೆ ಎಂದು ಸುಧಾಕರ ಮಲ್ಯ ಹೇಳಿದರು.


ಅಂಚೆ ಇಲಾಖೆಯ ಮೂಲಕ ಅಂಚೆ ಬ್ಯಾಂಕ್ ಆರಂಭಿಸಿ ಗ್ರಾಹಕರ ಮನೆ ಬಾಗಿಲಿಗೆ ಡಿಜಿಟಲ್ ಮೂಲಕ ಬ್ಯಾಂಕಿಂಗ್ ಸೌಲಭ್ಯ ನೀಡುತ್ತಿದೆ. ಆಧಾರ ನೋಙದಣಿ, ತಿದ್ದುಪಡಿ ಜೊತೆಗೆ ಜೀವನ ಪ್ರಮಾಣ ಪತ್ರ, ಜನನ, ಮರಣ ಪ್ರಮಾಣ ಪತ್ರ, ಅಪಘಾತ ವಿಮೆ, ಆರೋಗ್ಯ ವಿಮಾ ಸೌಲಭ್ಯ, ಪೌರತ್ವ ಅರ್ಜಿ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಪೋಸ್ಟಲ್ ಬ್ಯಾಂಕಿಂಗ್ ಮೂಲಕ ಸಾಲ ನೀಡುವ ಯೋಜನೆಯೂ ಇದೆ ಎಂದರು.


1854 ದಲ್ಲಿ ಭಾರತದಲ್ಲಿ ಆರಂಭಗೊಂಡ ಅಂಚೆ ಸೇವೆ ಇಂದು ವಿವಿಧ ರೀತಿಯ ಸೇವಾ ಸೌಲಭ್ಯಗಳನ್ನು ನೀಡುವ ಅತ್ಯಂತ ದೊಡ್ಡ ಜಾಲವನ್ನು ಹೊಂದಿದೆ. ದೇಶಾದ್ಯಂತ 164,972 ಅಂಚೆ ಕಚೇರಿಗಳನ್ನು ಹೊಂದಿದ್ದು, 4 ಲಕ್ಷ ಸಿಬ್ಬಂದಿಗಳು ಕಾರ್ಯನಿರ್ವ ಹಿಸುತ್ತಿದ್ದಾರೆ. ಈ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸೇವೆ ನೀಡುತ್ತಿವೆ ಎಂದರು‌.


ದಕ್ಷಿಣ ಕನ್ನಡ ಜಿಲ್ಲೆ ಅಂಚೆ ಇಲಾಖೆಯ 150 ನೆ ವರ್ಷಾಚರಣೆಯ ಸಂದರ್ಭದಲ್ಲಿದೆ. ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಅಂಚೆ ಇಲಾಖೆ ತಬ್ನ ಹಿಂದಿನ ಸೇವೆಗಳ ಜೊತೆ ಭಾರತದ ಇತಿಹಾಸ, ಸಂಸ್ಕೃತಿ ತಿಳಿಸುವ ಅಂಚೆ ಚೀಟಿ ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿದೆ ಜೊತೆಗೆ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತಿದೆ ಎಂದರು.


ಸಂವಾದ ಗೋಷ್ಠಿಯಲ್ಲಿ ಮಂಗಳೂರು ಅಂಚೆ ವಿಭಾಗದ ಉಪ ಅಧೀಕ್ಷಕ ದಿನೇಶ್ ಪಿ, ಯಾಂತ್ರಿಕ ವಿಭಾಗದ ಮುಖ್ಯಸ್ಥ ವಿಲ್ಸನ್ ಸೆಲ್ವಿನ್ ಡಿ ಸೋಜ,ಮಂಗಳೂರು ವಿಭಾಗದ ಅಂಚೆ ವಿಮಾ ಅಭಿವೃದ್ಧಿ ಅಧಿಕಾರಿ ಯತಿನ್ ಕುಮಾರ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್  ರೈ, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.


ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್  ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top