ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ಉದಯ: ಡಾ. ಬಸವರಾಜ ಸಾದರ

Upayuktha
0

'ಅರಿವಿನ ದೀವಿಗೆ'ಯ ಐದನೇ ಕಂತಿನ ಕಾರ್ಯಕ್ರಮ ಹಾಗೂ ‘ವಚನ ದರ್ಶನ-ಗಾಯನ’ ಕಾರ್ಯಕ್ರಮ





ಉಜಿರೆ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ಉದಯಿಸುತ್ತದೆ. ಆ ಕಾರ್ಯ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಆಗುತ್ತಿದೆ ಎಂದು ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಸವರಾಜ ಸಾದರ ಹೇಳಿದರು.


ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ವಿಭಾಗವು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಉಪನ್ಯಾಸ ಮಾಲೆ 'ಅರಿವಿನ ದೀವಿಗೆ'ಯ ಐದನೇ ಕಂತಿನ ಕಾರ್ಯಕ್ರಮ ಹಾಗೂ ‘ವಚನ ದರ್ಶನ-ಗಾಯನ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.


“ಸಂಸ್ಕಾರವಿಲ್ಲದ ಶಿಕ್ಷಣದಿಂದ ಏನೂ ಪ್ರಯೋಜನವಿಲ್ಲ. ಪ್ರಸ್ತುತ ಸನ್ನಿವೇಶ ಗಮನಿಸಿದಾಗ ಶಿಕ್ಷಣದಿಂದ ಪ್ರಯೋಜನವಾದಂತೆ ಕಂಡುಬರುತ್ತಿಲ್ಲ. ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಣುತ್ತಿಲ್ಲ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ನಡೆಯ ಶಿಕ್ಷಣ ಕಂಡುಬರುತ್ತಿದೆ. ಸುತ್ತೂರಿನ ಮಠದ ಸಂಸ್ಥೆ, ಸಿರಿಗೆರೆಯ ಮಠ ಮತ್ತು ಧರ್ಮಸ್ಥಳದ ಸಂಸ್ಥೆಗಳಲ್ಲಿ ಅಂತಹ ಆಶಾದಾಯಕ ಸ್ಥಿತಿ ಕಂಡುಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.


“ಒಂದು ಪರಂಪರೆ ಎನ್ನುವುದು ತನ್ನಿಂದ ತಾನೆ ಹುಟ್ಟುವುದಿಲ್ಲ. ಅದಕ್ಕೆ ಒಂದು ದೊಡ್ಡ ಇತಿಹಾಸ ಇರುತ್ತದೆ. ಆ ಇತಿಹಾಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹಾಕಿಕೊಟ್ಟರು. ಯಶೋವರ್ಮ ಅವರಂಥ ವ್ಯಕ್ತಿತ್ವಗಳು ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆ ದಾರಿಯಲ್ಲಿ ಸಾಗುವುದಕ್ಕೆ ನೀವು ಕೂಡ ಅಣಿಯಾಗಬೇಕು” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 


ಸೋನಿಯಾ ಯಶೋವರ್ಮ ಅವರು ಮಾತನಾಡಿ, “ಓದುವುದು ಡಾ. ಯಶೋವರ್ಮ ಅವರ ಇಷ್ಟದ ಹವ್ಯಾಸವಾಗಿತ್ತು. ಯಾವುದೇ ಪುಸ್ತಕವನ್ನು ತುಂಬು ಮನಸ್ಸಿನಿಂದ ಓದುತ್ತಿದ್ದ ಅವರು ನಡೆದಾಡುವ ಗ್ರಂಥಾಲಯ ಎನಿಸಿಕೊಂಡಿದ್ದರು. ಅವರು ಮೊಬೈಲನ್ನು ‘ಲರ್ನಿಂಗ್ ಟೂಲ್’ ಎನ್ನುತ್ತಿದ್ದರು. ಆದರೆ ಮೊಬೈಲ್ ಎಂಬುದು ಈಗ ಮನೋರಂಜನೆಯಾಗಿದೆ. ನಾವು ಕೂಡ ಮೊಬೈಲ್ ಅನ್ನು ಲರ್ನಿಂಗ್ ಟೂಲ್ ಆಗಿ ಬಳಸಬೇಕು” ಎಂದು ಸ್ಮರಿಸಿದರು.


“ವಚನಗಳು ಯಾವಾಗಲೂ ಸುಲಭವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಸಮಾಜವನ್ನು ತಿದ್ದುವ, ಮನುಷ್ಯನ ಮನಸ್ಸನ್ನು ತಿದ್ದುವ, ಕೆಲಸ ಮಾಡುತ್ತವೆ. ವಚನಗಳು ಕನ್ನಡ ಸಾಹಿತ್ಯದ ಬಹುದೊಡ್ಡ ಕೊಡುಗೆ. ನಮ್ಮ ದೇಹ ಎಷ್ಟು ಪವಿತ್ರವಾದದ್ದು ಎಂಬ ಭಾವನೆ ನಮ್ಮಲ್ಲಿ ಬರುವ ಹಾಗೆ ವಚನಕಾರರು ಮಾಡಿದ್ದಾರೆ. ಯಾವಾಗಲೂ ನಮ್ಮ ನಡೆ, ನಮ್ಮ ಕೆಲಸ, ಒಳ್ಳೆಯ ಉದ್ದೇಶ ಹೊಂದಿರಬೇಕು” ಎಂದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, “ಮಾತಿನಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಇರುತ್ತದೆ. ಅನುಭವಿಗಳು ಅನುಭವದ ಮುತ್ತನ್ನು ವಚನದಲ್ಲಿ ತಿಳಿಸಿದರು. ಅದರಲ್ಲೂ ಬಸವಣ್ಣನ ವಚನಗಳನ್ನು ಓದಿದರೆ ನಾವು ಹೇಗೆ ಬದುಕಬೇಕು, ಯಾವ ರೀತಿ ಬದುಕಿದರೆ ಆ ಮಹಾ ಚೈತನ್ಯಕ್ಕೆ ಪ್ರೀತಿ ಆಗುತ್ತದೆ ಎಂಬುದು ಅರಿವಾಗುತ್ತದೆ. ಅಲ್ಲದೆ, ಸಮಸ್ಯೆ ಬಂದಾಗ ಧೃತಿಗೆಡದೆ ಆ ಸಂತೆಯ ಸಮಸ್ಯೆಯಲ್ಲಿ ಈಸಬೇಕು, ಇದ್ದು ಜಯಿಸಬೇಕು ಎಂದು ಅಕ್ಕನವರು ಹೇಳಿದ್ದಾರೆ” ಎಂದರು.


ಶ್ರೀವಿದ್ಯಾ ಐತಾಳ ಮತ್ತು ಡಾ. ಬಸವರಾಜ ಸಾದರ ಅವರಿಂದ ವಚನಗಳ ಗಾಯನ (ಗಮಕ) ಕಾರ್ಯಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top