ವಿಶ್ವ ಸಾಕ್ಷರತಾ ದಿನಾಚರಣೆ

Upayuktha
0


ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾರವರು ಹೇಳುವಂತೆ " ಶಿಕ್ಷಣವು ನೀವು ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ." ಈ ಮಾತು ಶಿಕ್ಷಣ ಮತ್ತು ಸಾಕ್ಷರತೆಯ ಮಹತ್ವವನ್ನು ಒತ್ತಿ ಹೇಳುತ್ತದೆ. 


ಶಿಕ್ಷಣ ಕಾರ್ಯಕರ್ತೆ ಮಲಾಲಾ ಯೂಸುಫ್ಜಿ  ಹೇಳುವಂತೆ " ನಾವು ನೆನಪಿಟ್ಟುಕೊಳ್ಳೋಣ : ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಜಗತ್ತನ್ನು ಬದಲಾಯಿಸಬಹುದು." ಇಲ್ಲಿ ಪುಸ್ತಕ, ಪೆನ್ನು, ಮಗು ಮತ್ತು ಶಿಕ್ಷಕ ಈ ಪದಗಳು ಓದು ಬರೆಹದ ಕುರಿತು ಹೇಳುತ್ತವೆ. ಓದು - ಬರೆಹ ಅಂದರೆ ಸಾಕ್ಷರತೆ ಎಲ್ಲಿ ದೀಪದಂತೆ ಬೆಳಗುತ್ತದೆಯೋ ಅಲ್ಲಿ ಕತ್ತಲು ಮಾಯವಾಗಿ  ಜ್ಞಾನದ ಬೆಳಕು ಹರಡುತ್ತದೆ. ಇದರಿಂದ ನಿಧಾನವಾಗಿ ಜಗತ್ತು ತಂತಾನೇ ಬದಲಾಗುತ್ತದೆ. 


ವಿಶ್ವದಾದ್ಯಂತ ಪ್ರತೀ ವರ್ಷ ಸೆಪ್ಟಂಬರ್ 8 ರಂದು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಇಡೀ ವಿಶ್ವದ ಜನರಿಗೆ ಶಿಕ್ಷಣದ ಬಗ್ಗೆ  ಅರಿವು ಮೂಡಿಸಲು ಮತ್ತು ಸಾಕ್ಷರತೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಸಾಕ್ಷರತಾ ದಿನವನ್ನು ಆಚರಿಸಬೇಕೆಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ಅಂದರೆ ವಿಶ್ವಸಂಸ್ಥೆಯ ಶೈಕ್ಷಣಿಕ , ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ಘೋಷಿಸಿತು. ಸಾಕ್ಷರತಾ ದಿನವನ್ನು ಮೊದಲು 1967 ರ ಸೆಪ್ಟೆಂಬರ್ 8 ರಂದು ಆಚರಿಸಲಾಯಿತು.


ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬಹುಮುಖ್ಯ ಅಂಶವಾಗಿದ್ದು, ಸಾಕ್ಷರತಾ ವ್ಯಕ್ತಿಯನ್ನು ಸಮಾಜದಲ್ಲಿ ಗೌರವದಿಂದ ಕಾಣಲಾಗುತ್ತದೆ. ಸಾಕ್ಷರತೆಯು ವ್ಯಕ್ತಿಯನ್ನು ಘನತೆಯಿಂದ ಬದಕಲು ಸಹಾಯ ಮಾಡುವುದರ ಜೊತೆಗೆ ಸ್ವಾವಲಂಬಿಯಾಗಿ ಬದುಕಲು ಸಹಕರಿಸುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಇದು ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ. ಯಾವುದೇ ಒಂದು ರಾಷ್ಟ್ರದ ಜನಜಾಗೃತಿಗೆ, ಜೀವನ ಮಟ್ಟ ಸುಧಾರಣೆಗೆ ಮತ್ತು ಕೌಶಲ ವರ್ಧನೆಗೆ ಸಾಕ್ಷರತೆ ಅತೀ ಅವಶ್ಯ. ಆಧುನಿಕ ಸಮಾಜದಲ್ಲಿ ಸಾಕ್ಷರತೆ ನಿತ್ಯ ಬದುಕಿನ ಒಂದು ಸಾಧನ. ಸಾಕ್ಷರತೆಯು ಬಡತನದ ವಿರುದ್ಧ ಒಂದು ರಕ್ಷಣಾ ವ್ಯವಸ್ಥೆ ಎನ್ನಬಹುದು. ಪ್ರಜಾಪ್ರಭುತ್ವ ಸ್ಥಾಪನೆಗೆ ಒಂದು ವೇದಿಕೆ. ರಾಷ್ಟ್ರದ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತನ್ನು ಪ್ರಚಾರಪಡಿಸುವ ಒಂದು ವಾಹನವೆಂದೇ ಹೇಳಬಹುದು. ವಿಶೇಷವಾಗಿ ಮಹಿಳೆ ಮತ್ತು ಹೆಣ್ಣುಮಕ್ಕಳ ಪಾಲಿಗೆ ಸಾಕ್ಷರತೆಯು ಅತ್ಯಗತ್ಯವಾಗಿದೆ. ಕುಟುಂಬ ಆರೋಗ್ಯ ಮತ್ತು ಪೌಷ್ಟಿಕತೆಯ ನಿರ್ವಹಣೆಯಲ್ಲಿ ಸಾಕ್ಷರತೆಯ ಏಜೆಂಟ್ ನಂತೆ ಕಾರ್ಯ ನಿರ್ವಹಿಸುತ್ತದೆ. ನಾವು ಈಗಾಗಲೇ ತಿಳಿದಿರುವಂತೆ ಶಿಕ್ಷಣ ಪ್ರತಿಯೊಬ್ಬರ ಮೂಲ ಭೂತ ಹಕ್ಕು. 


ವಿಕಾಸದ ಹಂತದಲ್ಲಿ ಸಾಕ್ಷರತೆಯು ಶೈಕ್ಷಣಿಕ ಪ್ರಕ್ರಿಯೆಯಾಗಿದೆ. ಸಾಕ್ಷರತೆಯನ್ನು "ಓದುವ ಮತ್ತು ಬರೆಯುವ ಸಾಮರ್ಥ್ಯ" ಎಂದು ವ್ಯಾಖ್ಯಾನಿಸಲಾಗಿದೆ. ಇನ್ನೂ ಮುಂದುವರೆದು ಹೇಳಬೇಕೆಂದರೆ , " ಓದುವ, ಬರೆಯುವ ಮತ್ತು ಅದನ್ನು ಗ್ರಹಿಸಿ, ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯವನ್ನು ಸಾಕ್ಷರತೆ " ಎಂದು ಪರಿಗಣಿಸಲಾಗುತ್ತದೆ. ಸಾಮಾಜಿಕ ಮತ್ತು ಮಾನವನ ಅಭಿವೃದ್ಧಿಗೆ ಸಾಕ್ಷರತೆಯು ಇಂಧನವಾಗಿದೆ. ಹಾಗೆಯೇ ಶಿಕ್ಷಣದ ಕ್ರಿಯೆಯ ಅಭಿವೃದ್ಧಿಗೆ ಸಾಕ್ಷರತೆ ಮೂಲಭೂತ ಅವಶ್ಯಕತೆಯಾಗಿದೆ. ಕಡಿಮೆ ಸಾಕ್ಷರತೆ ದರ ಹೊಂದಿರುವ ದೇಶಗಳು ಆರ್ಥಿಕವಾಗಿ ವಿಫಲವಾಗಿವೆ ಮತ್ತು ಪ್ರಗತಿ ನಿಧಾನಗತಿಯಲ್ಲಿದೆ. ಒಬ್ಬ ವಿದ್ಯಾವಂತ ವ್ಯಕ್ತಿಯ ವ್ಯಕ್ತಿತ್ವವು ಉತ್ತಮವಾಗಿ ರೂಪುಗೊಳ್ಳುತ್ತದೆ. ಆದರೆ ಅನಕ್ಷರಸ್ಥ ವ್ಯಕ್ತಿಯನ್ನು ಸಮಾಜದಲ್ಲಿ ತಿರಸ್ಕಾರದಿಂದ ನಡೆಸಿಕೊಳ್ಳಲಾಗುತ್ತದೆ. ಆದ್ದರಿಂದ ಇಲ್ಲಿ ಸಾಕ್ಷರತೆಯ ಮೌಲ್ಯವನ್ನು ಪರಿಗಣಿಸಬೇಕಾಗುತ್ತದೆ. 


ಸಾಕ್ಷರತೆಯು ವ್ಯಕ್ತಿಯನ್ನು ಕತ್ತಲಿನಿಂದ ಬೆಳಕಿನೆಡೆಗೆ ಹೊತ್ತೊಯ್ಯುತ್ತದೆ. ಅಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ವ್ಯಕ್ತಿಯನ್ನು ಕರೆತರುವ ಮೂಲಕ ವ್ಯಕ್ತಿಯು ತಾನು ವಾಸಿಸುವ ಪ್ರದೇಶದಲ್ಲಿನ ಇತಿಹಾಸ, ಸಾಮಾಜಿಕ, ರಾಜಕೀಯ, ಆರ್ಥಿಕತೆ, ಸಾಂಸ್ಕೃತಿಕತೆಯ ನೆಲೆಗಟ್ಟನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಮಾಂಸದ ಮುದ್ದೆಯಂತಿರುವ ಮಾನವನ ಮೆದುಳಿಗೆ ಸಾಕ್ಷರತೆಯು ಚುರುಕು ನೀಡುವ ಮೂಲಕ ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ. 


ಶಿಕ್ಷಣದ ಕೊರತೆಯನ್ನು ಹೋಗಲಾಡಿಸಲು  ಶಿಕ್ಷಣವು ಎಲ್ಲಾ ನಾಗರಿಕರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಮನುಷ್ಯನ ಬೆಳವಣಿಗೆಗೆ ಬಹಳ ಅವಶ್ಯಕವಾಗಿದೆ. ಈ ದಿನದಂದು ಶಾಲಾ-ಕಾಲೇಜುಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಂತರರಾಷ್ಟ್ರೀಯ ಸಾಕ್ಷರತಾ ದಿನದಂದು ಪುಸ್ತಕ ಮೇಳಗಳನ್ನು ಸಹ ಆಯೋಜಿಸಲಾಗುತ್ತದೆ. ಪುಸ್ತಕಗಳನ್ನು ಖರೀದಿಸಿ ಓದಲು ಪ್ರೇರೇಪಿಸಲಾಗುತ್ತದೆ.


ಯಾವುದೇ ಒಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಸಾಕ್ಷರತೆಯನ್ನು ಅವಲಂಬಿಸಿರುತ್ತದೆ ಎಂಬುದು ಮಹತ್ವಪೂರ್ಣ ಹೇಳಿಕೆಯಾಗಿದೆ. ಸುಶಿಕ್ಷಿತರ ಸಮಾಜವನ್ನು ರೂಪಿಸಿ, ಸ್ವಉದ್ಯೋಗದ ಮೂಲಕ ಆರ್ಥಿಕ ಚೇತರಿಕೆಯನ್ನು ಕಂಡುಕೊಳ್ಳಬೇಕಿದೆ. ವಿಶ್ವದ ಪ್ರತೀ ದೇಶದಲ್ಲಿಯೂ ಬಡತನ ಸಾಮಾನ್ಯ ಅಂಶವಾಗಿದೆ. ಬಡತನವನ್ನು ಸರಿಯಾಗಿ ಅರ್ಥೈಸಿಕೊಂಡು, ಕಾರಣಗಳನ್ನು ಕಂಡು ಹಿಡಿದು ಪರಿಹಾರೋಪಾಯಗಳನ್ನು ಸೂಚಿಸಿದಾಗ ಬಡತನ ನಿವಾರಣೆ ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ ಸಾಕ್ಷರನಾಗಬೇಕಿದೆ. ಇಪ್ಪತ್ತೊಂದನೇ ಶತಮಾನದ ಜನರಲ್ಲಿ ಕೌಶಲ್ಯ ತರಬೇತಿಯನ್ನು ಹೆಚ್ಚಿಸಬೇಕಿದೆ. ಆ ಮೂಲಕ ಆರ್ಥಿಕ ಅಭಿವೃದ್ಧಿಗೆ ಶ್ರಮಿಸೋಣ.


2022ನೇ ವರ್ಷದ, ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಪ್ರಪಂಚದಾದ್ಯಂತ "ಸಾಕ್ಷರತೆಯ ಕಲಿಕೆಯ ಸ್ಥಳಗಳನ್ನು ಪರಿವರ್ತಿಸುವುದು" ಎಂಬ ವಿಷಯದೊಂದಿಗೆ ಆಚರಿಸಲಾಗಿತ್ತು. 2023 ರಲ್ಲಿ "ಪರಿವರ್ತನೆಯಲ್ಲಿರುವ ಜಗತ್ತಿಗೆ ಸಾಕ್ಷರತೆಯನ್ನು ಉತ್ತೇಜಿಸುವುದು: ಸುಸ್ಥಿರ ಮತ್ತು ಶಾಂತಿಯುತ ಸಮಾಜಗಳಿಗಾಗಿ ಅಡಿಪಾಯವನ್ನು ನಿರ್ಮಿಸುವುದು. " ಎಂಬ ವಿಷಯದೊಂದಿಗೆ ಆಚರಿಸಲಾಗಿತ್ತು. ಪ್ರಸ್ತುತ ವರ್ಷದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನದ 2024 ರ ವಿಷಯವು "ಬಹುಭಾಷಾ ಶಿಕ್ಷಣವನ್ನು ಉತ್ತೇಜಿಸುವುದು: ಪರಸ್ಪರ ತಿಳುವಳಿಕೆ ಮತ್ತು ಶಾಂತಿಗಾಗಿ ಸಾಕ್ಷರತೆ". ಈ ವಿಷಯವು ಪರಸ್ಪರ ತಿಳುವಳಿಕೆ, ಸಾಮಾಜಿಕ ಐಕ್ಯತೆ ಮತ್ತು ಶಾಂತಿಯನ್ನು ಬೆಳೆಸಲು ಬಹುಭಾಷಾ ಶಿಕ್ಷಣವನ್ನು ಉಪಯೋಗಿಸುವ ಮಹತ್ವವನ್ನು ಒತ್ತಿ ಹೇಳುತ್ತದೆ. ಇದು ಸಾಕ್ಷರತೆಯ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಮೊದಲ ಭಾಷಾ-ಆಧಾರಿತ, ಬಹುಭಾಷಾ ವಿಧಾನವನ್ನು ಅಳವಡಿಸಿಕೊಳ್ಳುವ ಅರಿವಿನ, ಶಿಕ್ಷಣ ಶಾಸ್ತ್ರ ಮತ್ತು ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ.


ವಿಶ್ವದಲ್ಲಿ ಪ್ರತಿಯೊಬ್ಬರೂ ಗುಣಮಟ್ಟದ, ನ್ಯಾಯೋಚಿತ ಮತ್ತು ಅಂತರ್ಗತ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಾಕ್ಷರತಾ ಕಲಿಕೆಯ ಸ್ಥಳಗಳು ಎಷ್ಟು ಮುಖ್ಯವೆಂದು ಯೋಚಿಸಲು ಇದು ಒಂದು ಅವಕಾಶವಾಗಿದೆ. ಹಾಗೆಯೇ ವಿಶ್ವ ಸಾಕ್ಷರತಾ ದಿನದ ಮೂಲಕ ಸಾಕ್ಷರತೆಯನ್ನು ಹರಡೋಣ. ಈ ವಿಶ್ವ ಸಮಾಜವನ್ನು ಕತ್ತಲಿನಿಂದ ಬೆಳಕಿನೆಡೆಗೆ ತರುವಲ್ಲಿ ನಮ್ಮ ಕೈಲಾದಷ್ಟು ಅಳಿಲು ಸೇವೆಯನ್ನು ಮಾಡೋಣ. ಅಕ್ಷರ ಜ್ಞಾನ ವಿಲ್ಲದವರಿಗೆ ಅಕ್ಷರಗಳನ್ನು ಕಲಿಸುವ ಮೂಲಕ ಸಾಕ್ಷರತಾ ದಿನವನ್ನು ಅರ್ಥಪೂರ್ಣವಾಗಿ ಸೋಣ. 


-ಕೆ.ಎನ್.ಚಿದಾನಂದ. ಸಾಹಿತಿ. ಹಾಸನ

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top