ಜೌತಿಷ ಅಪೂರ್ವ ಸಂಪತ್ತು: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ನಮ್ಮ ಪೂರ್ವಜರು ನಮಗೆ ಕಾಲಜ್ಞಾನವನ್ನು ಅರಿಯುವ ಜೌತಿಷದಂಥ ಅಪೂರ್ವ ಸಂಪತ್ತನ್ನು ಬಿಟ್ಟುಹೋಗಿದ್ದು, ಅದನ್ನು ಅರ್ಥ ಮಾಡಿಕೊಳ್ಳದಿರುವುದು ನಮ್ಮ ದೌರ್ಭಾಗ್ಯ. ವ್ಯಕ್ತಿ ಪ್ರಶ್ನೆ ಕೇಳುವ ಮೊದಲ ಅಕ್ಷರದಿಂದಲೇ ಇಡೀ ಫಲವನ್ನು ತಿಳಿಯಬಹುದಾದ ಅಪೂರ್ವ ವಿಧಾನವೂ ಜೌತಿಷದ ಒಂದು ಭಾಗವಾಗಿತ್ತು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 50ನೇ ದಿನವಾದ ಶುಕ್ರವಾರ ಕಾಲ ಸರಣಿಯಲ್ಲಿ ಪ್ರವಚನ ಅನುಗ್ರಹಿಸಿದರು.


ಅ ವರ್ಗ, ಕ ವರ್ಗ, ಚ ವರ್ಗ, ಟ, ತ, ಪ ಹಾಗೂ ಯ ವರ್ಗಗಳ ಮೊದಲ ಅಕ್ಷರಗಳಿಗೆ ಭಿನ್ನ ಫಲವಿದೆ. ಪ್ರಥಮಾಕ್ಷರವನ್ನು ಸೂಚಿಸುವ ಗ್ರಹದ ರಾಶಿಯನ್ನು ಲಗ್ನವಾಗಿ ಪರಿಗಣಿಸಿ ಅದರ ಮೇಲೆ ಫಲ ವಿಶ್ಲೇಷಿಸುವುದು ಅಪೂರ್ವ ಕಲೆ ಎಂದು ಶ್ರೀಗಳು ಬಣ್ಣಿಸಿದರು. ಅ,ಕ,ಚ,ಟ,ತ,ಪ ಮತ್ತು ಯ ವರ್ಗಗಳೊಇಗೆ ಕ್ರಮವಾಗಿ ರವಿ, ಕುಜ, ಶುಕ್ರ, ಬುಧ, ಗುರು, ಶನಿ ಹಾಗೂ ಚಂದ್ರ ಗ್ರಹಗಳು. ಅಂತೆಯೇ ಹೃಸ್ವ ಮತ್ತು ಧೀರ್ಘಸ್ವರಗಳು, ವ್ಯಂಜನಗಳಿಗೆ ಪ್ರತ್ಯೇಕ ಫಲವನ್ನು ನಿರೂಪಿಸಲಾಗಿದೆ ಎಂದು ವಿವರಿಸಿದರು.


ಅಕ್ಷರಗಣದಲ್ಲಿ ಮೂರು ಅಕ್ಷರಗಳ ಒಂದು ಗಣಕ್ಕೆ ಪ್ರತ್ಯೇಕ ಗುಣವಿದೆ. ಇದರ ಆಧಾರದಲ್ಲೂ ಜ್ಯೋತಿಷ ಚಿಂತನೆ ನಡೆಸಬಹುದು. ಯಗಣಕ್ಕೆ ಜಲ ದೇವತೆ, ಉತ್ತಮ ಸಮೃದ್ಧಿ ಫಲ. ಮಗಣಕ್ಕೆ ಸಂಪತ್ತು, ತಗಣಕ್ಕೆ ಶೂನ್ಯತೆ, ರಗಣಕ್ಕೆ ಮರಣ, ಜಗಣಕ್ಕೆ ರೋಗ, ಭಗಣಕ್ಕೆ ಪ್ರಖ್ಯಾತ ಕೀರ್ತಿಯ ಫಲವನ್ನು ಹೇಳಿದೆ ಎಂದು ವಿವರಿಸಿದರು.


ವಾಲ್ಮೀಕಿಗಳು ರಾಮನ ಜಾತಕದ ಆರು ಗ್ರಹಗಳನ್ನು ವಿಶಿಷ್ಟವಾಗಿ ಬಣ್ಣಿಸಿದ್ದಾರೆ. ಸೂರ್ಯ, ಚಂದ್ರ, ಮಂಗಳ, ಗುರು, ಶುಕ್ರ, ಶನಿ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ಬುಧನ ಉಲ್ಲೇಖವನ್ನು ರಾಮಾಯಣದಲ್ಲಿ ವಾಲ್ಮೀಕಿಯವರು ಮಾಡಿಲ್ಲ. ಆದರೆ ವಾಸ್ತವವಾಗಿ ಲೆಕ್ಕಾಚಾರದ ಪ್ರಕಾರ, ರವಿಯ ಪಕ್ಕದಲ್ಲಿ ಬುಧ ಇದ್ದಾನೆ. ರವಿ, ಬುಧ, ಶುಕ್ರ ಜತೆಗೇ ಇರುವುದರಿಂದ ರವಿ ಜತೆಗೆ ಇರುತ್ತಾನೆ ಅಥವಾ ಹಿಂದಿನ ಇಲ್ಲವೇ ಮುಂದಿನ ಮನೆಯಲ್ಲಿದ್ದಾನೆ ಎಂದು ವಿಶ್ಲೇಷಿಸಿದರು.


ಅಪರೂಪದ ಗೋಪ್ರೇಮಿ, ವೈದ್ಯ ಶ್ಯಾಂಪ್ರಸಾದ್ ವ್ಯಕ್ತಿತ್ವ ಇಂದು ಅನಾವರಣವಾಗಿದೆ. ಗೋವಿಗಾಗಿ, ಗುರುವಿಗಾಗಿ, ಸತ್ಕಾರ್ಯಕ್ಕಾಗಿ ಬೇಡುವ ಹವ್ಯಾಸ ತುಂಬಾ ಔಚಿತ್ಯಪೂರ್ಣ. ಜಾತಕದಲ್ಲಿ ಬೇಡುವ ಯೋಗವಿದ್ದರೆ, ಈ ರೀತಿಯಲ್ಲಿ ಬರಬೇಕು. ಸಾಡೇಸಾತ್ ಶನಿಕಾಟದಿಂದ ಮನೆಬಿಟ್ಟು ಹೊರಟು ಹೋಗುವ ಸಂದರ್ಭ ಬರುತ್ತದೆ. ಕೆಲವರಿಗೆ ಅದು ಒಳ್ಳೆಯ ರೀತಿಯಲ್ಲಿ ಬರುತ್ತದೆ. ಸತ್ಕಾರ್ಯಕ್ಕಾಗಿ ನಡೆದಾಗ ಔಚಿತ್ಯಪೂರ್ಣವಾಗುತ್ತದೆ. ಉದಾಹರಣೆಗೆ ಶ್ರೀರಾಮ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಮನೆ ಬಿಡಬೇಕಾಯಿತು. ಆದರೆ ಇಂದಿಗೂ ರಾಮಾಯಣದ ಅನುಸಂಧಾನವಾಗುತ್ತಿರುವುದು ಅದರ ಮಹತ್ವವನ್ನು ಸಾರುತ್ತದೆ ಎಂದು ಬಣ್ಣಿಸಿದರು.


ಸ್ವಯಂಪ್ರೇರಣೆಯಿಂದ ಹಲವು ವರ್ಷಗಳಿಂದ ಗೋವಿನ ಸೇವೆಗಾಗಿ ಸಮರ್ಪಿಸಿಕೊಂಡಿರುವ ಅಪರೂಪದ ವೈದ್ಯ ಡಾ.ಶ್ಯಾಂಪ್ರಸಾದ್. ಗೋವಿಗಾಗಿ ಮೇವು, ಹಿಂಡಿ, ನೀರು, ಹೀಗೆ ಗೋವಿನ ಜೀವನಕ್ಕೆ ನೆರವಾಗುವವನಿಗೆ ಯಮದೂತರ ದರ್ಶನವಿಲ್ಲ. ತಾವು ಸೇವೆ ಮಾಡುವ ಜತೆಗೆ ಹಲವು ಮಂದಿಯನ್ನು ಗೋಸೇವೆಯಲ್ಲಿ ತೊಡಗಿಸುವ ಮೂಲಕ ನರಕ ಬಾರದ ದಾರಿಯನ್ನು ಹಲವು ಮಂದಿಗೆ ತೋರುತ್ತಿರುವುದು ಶ್ಲಾಘನೀಯ ಎಂದರು.


ಅಪೂರ್ವ ಗೋಪ್ರೇಮಿ ಬೆಂಗಳೂರಿನ ಡಾ.ಶ್ಯಾಮ್‍ಪ್ರಸಾದ್ ಅವರ ವ್ಯಕ್ತಿತ್ವವನ್ನು ಮಂಜುನಾಥ ಸುವರ್ಣಗದ್ದೆ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಯುವ ಪ್ರಧಾನ ಕೇಶವಪ್ರಕಾಶ್ ಎಂ, ಚಾತುಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಕೇಂದ್ರೀಯ ಸಮಿತಿ ಅಧ್ಯಕ್ಷ ಎಸ್.ಎಸ್.ಹೆಗಡೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top