ಗೋಕರ್ಣ: ಸಮರಸ ಮತ್ತು ಸಮರ ಎರಡಕ್ಕೂ ಸಮಾಜ ಸಜ್ಜಾಗಬೇಕು. ಸಮಾಜದಲ್ಲಿ ಸಮರಸ ಮೂಡಿಸಲು ಶ್ರಮಿಸೋಣ. ಇದರ ಜತೆಜತೆಗೆ ನಮ್ಮತನವನ್ನು ಉಳಿಸಿಕೊಳ್ಳಲು ಹೋರಾಟದ ಕೆಚ್ಚನ್ನೂ ರೂಢಿಸಿಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, 53ನೇ ದಿನವಾದ ಬುಧವಾರ ಮುಳ್ಳೇರಿಯಾ ಮಂಡಲದ ಕೊಡಗು, ಗುಂಪೆ, ಕಾಸರಗೋಡು, ಚಂದ್ರಗಿರಿ, ಗುತ್ತಿಗಾರು ಮತ್ತು ಸುಳ್ಯ ವಲಯಗಳ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಇಂದು ಜಗತ್ತಿಗೆ ಸಮರ ಗೊತ್ತೇ ವಿನಃ ಸಮರಸ ಗೊತ್ತಿಲ್ಲ. ಮುಳ್ಳೇರಿಯಾ ಮಂಡಲ ವ್ಯಾಪ್ತಿಯಲ್ಲಿ ಸಮರಸ ಟ್ರಸ್ಟ್ ಹೆಸರಿನಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ಸುಮಾರು 2 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಭವ್ಯ ಸಭಾಗೃಹ ಮತ್ತು ಗುರುನಿವಾಸ ನಿರ್ಮಾಣವಾಗುತ್ತಿದೆ. ಇದು ಸಕಾಲದಲ್ಲಿ ಪೂರ್ಣಗೊಳ್ಳಲು ಸಮಾಜದ ಸ್ಪಂದನೆ ಬೇಕು ಎಂದು ಹೇಳಿದರು. ಸಮಾಜದ ಸಾಮರಸ್ಯಕ್ಕಾಗಿ ಸಂಘಟನೆ ಶ್ರಮಿಸಬೇಕು, ನಮ್ಮ ಇಡೀ ಸಂಘಟನೆಗೆ ಹೆಮ್ಮೆಯಾಗುವ ರೀತಿಯಲ್ಲಿ ಇಡೀ ಸಮಾಜ ಇದಕ್ಕೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಪೊಸಡಿಗುಂಪೆಯ ಸುಂದರ ಪರಿಸರದಲ್ಲಿ, ಪರ್ವತಾಗ್ರದಲ್ಲಿ ಶಂಕರಧ್ಯಾನ ಮಂದಿರ ಸ್ಥಾಪನೆಯ ಉದ್ದೇಶದಿಂದ ಈ ಭಾಗದ ಶಿಷ್ಯಭಕ್ತರು ಸುಮಾರು 10 ಎಕರೆ ಭೂಮಿಯನ್ನು ಕ್ರೋಢೀಕರಿಸಿದ್ದಾರೆ. ಈ ಭೂಮಿಯ ಮೇಲೆ ಸರ್ಕಾರದ ಕೆಟ್ಟ ದೃಷ್ಟಿ ಬಿದ್ದಿದೆ. ಇದನ್ನು ಉಳಿಸಿಕೊಳ್ಳಲು ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ನಮ್ಮತನವನ್ನು ಉಳಿಸಿಕೊಳ್ಳಲು ಸಮರ ಅನಿವಾರ್ಯವಾದಲ್ಲಿ, ಅದಕ್ಕೆ ಸಜ್ಜಾಗಬೇಕು. ಭೂಮಿ ಕಳೆದುಕೊಳ್ಳಲು ಬೇಸರವಿಲ್ಲ. ದೊಡ್ಡ ಪ್ರಮಾಣದ ಭೂಮಿಯಲ್ಲಿ ಮಠ ಕಳೆದುಕೊಂಡಿದೆ. ಆದರೆ ಹೀಗೆ ಕಳೆದುಕೊಂಡ ಭೂಮಿ ಅದು ಸದುಪಯೋಗವಾಗಬೇಕು. ದುರುಪಯೋಗವಾಗುವುದಾದಲ್ಲಿ ಭೂಮಿ ನೀಡಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಲ ಸರಣಿಯ ಪ್ರವಚನ ಮುಂದುವರಿಸಿದ ಶ್ರೀಗಳು, ನಾವು ದೈವಜ್ಞರಿಗೆ ನೀಡುವ ತಾಂಬೂಲ ನಮ್ಮ ಪೂರ್ವಾಪರಗಳನ್ನು ತಿಳಿಸಬಲ್ಲದು. ಇದರ ಮೂಲಕ ಶುಭಾಶುಭ ಫಲಗಳನ್ನು ಕೂಡಾ ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಹನ್ನೆರಡು ಎಲೆಗಳಿಂದ ದ್ವಾದಶಭಾವಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂದು ವಿಶ್ಲೇಷಿಸಿದರು.
ತಾಂಬೂಲ ಆರೋಗ್ಯಕ್ಕೆ ಸರ್ವಶ್ರೇಷ್ಠ ಮತ್ತು ಸಾಂಪ್ರದಾಯಿಕ ರೂಢಿ. ಆದರೆ ಇಂದಿನ ಸಮಾಜದ ಒಂದು ವರ್ಗ ಇದರ ಬಳಕೆಯನ್ನೇ ಕೈಬಿಟ್ಟರೆ, ಮತ್ತೊಂದು ವರ್ಗ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಹದ ಧಾತುಸಾಮ್ಯಕ್ಕೆ ಇದು ಅಗತ್ಯ. ಯೋಗಸಾಧನೆಗೆ ಧಾತುಸಾಮ್ಯ ಅಗತ್ಯ. ಹೀಗೆ ತಾಂಬೂಲ ಯೋಗ ಮತ್ತು ಭೋಗ ಜೀವನಕ್ಕೂ ಬೇಕು ಎಂದು ಪ್ರತಿಪಾದಿಸಿದರು. ಹದತಪ್ಪದಂತೆ ಬಳಸುವ ಕಲೆ ನಮ್ಮದಾಗಬೇಕು ಎಂದು ಕಿವಿಮಾತು ಹೇಳಿದರು.
ಶಾಸ್ತ್ರೀಯ ತಾಂಬೂಲದಲ್ಲಿ ತಂಬಾಕಿನಂಥ ಕೆಟ್ಟ ಅಂಶಗಳಿಗೆ ಸ್ಥಾನವಿಲ್ಲ. ತಂಬಾಕಿನ ಕಾರಣದಿಂದಲೇ ತಾಂಬೂಲ ಕೆಟ್ಟದು ಎಂಬ ಅಭಿಪ್ರಾಯಕ್ಕೆ ಸಮಾಜ ಬಂದಿರುವುದು ವಿಪರ್ಯಾಸ ಎಂದರು. ತಾಂಬೂಲ ಚರ್ವಣವನ್ನು ಗೃಹಸ್ಥರು ಅನುಸರಿಸಬೇಕು. ಜನಜೀವನದಲ್ಲಿ ಇದರ ಬಳಕೆ ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ, ಮುಳ್ಳೇರಿಯಾ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುರ್ವಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ದೈವಜ್ಞರಾದ ಕೇಶವ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ