ಮಣಿಪಾಲ: ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅರ್ಪಿಸುತ್ತಿರುವ 'ಕಥೆ ಕೇಳೋಣ' ಸರಣಿ ಕಾರ್ಯಕ್ರಮದ 125ನೇ ಸಂಚಿಕೆ ಸೆ.21 ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ಈ ವಿಶೇಷ ಸಂಚಿಕೆಯಲ್ಲಿ ಹಿರಿಯ ವಕೀಲರು, ಉಡುಪಿ ಜಿಲ್ಲಾ ಕ.ಸಾ.ಪ ಸ್ಥಾಪಕಾಧ್ಯಕ್ಷರು ಹಾಗೂ ರೋಟರಿ ಶತಾಬ್ದಿ ಗವರ್ನರ್ ಕುಂದಾಪುರದ ಎ.ಎಸ್.ಎನ್ ಹೆಬ್ಬಾರ್ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು.
ನಮ್ಮ ರಾಜ್ಯದಲ್ಲೇ ಮೊದಲ ಬಾರಿಗೆ ಸಮುದಾಯ ಬಾನುಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಈ ರೀತಿಯ ಕಥಾಸರಣಿಯು ಮೂಡಿಬರುತ್ತಿದ್ದು ರೇಡಿಯೊ ಮಣಿಪಾಲ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕಕ್ಕೆ ಹೆಮ್ಮೆತಂದಿದೆ.
ಈ ಕಥಾಯಾನದಲ್ಲಿ ಅನೇಕ ಮಂದಿ ಉದಯೋನ್ಮುಖ ಕಥೆಗಾರರೂ ಸೇರಿದಂತೆ ಹಿರಿಯ,ಕಿರಿಯ ಕಥೆಗಾರರು ಭಾಗವಹಿಸಿ ವಿಶಿಷ್ಟ ಕಥಾನಕಗಳ ಸ್ವರಚಿತ ಕಥೆಗಳನ್ನು ಕೇಳುಗರ ಮುಂದಿಟ್ಟಿದ್ದಾರೆ. ಸಮುದಾಯ ಬಾನುಲಿಯ ಪರಿಕಲ್ಪನೆಯಂತೆ ಸಮುದಾಯದ ಪಾಲ್ಗೊಳ್ಳುವಿಕೆಗೂ ಇದು ಕಾರಣವಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕವೂ ದೇಶವಿದೇಶಗಳಲ್ಲಿನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕಾರ್ಯಕ್ರಮದ ಆದಿಭಾಗದಲ್ಲಿ ದಿಕ್ಸೂಚಿಯಂತೆ ಕಾರ್ಯನಿರ್ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಕಥೆಗಾರರಿಗೆ ಸ್ಫೂರ್ತಿಯನ್ನು ತುಂಬುತ್ತಾ ಕಾರ್ಯಕ್ರಮದ ಸಂಚಲನ ಶಕ್ತಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ಅತ್ಯಾಕರ್ಷಕ ಪೋಸ್ಟರ್ ವಿನ್ಯಾಸದ ಮೂಲಕ ಜನಪ್ರಿಯತೆ ಹೆಚ್ಚುವಂತೆ ಮಾಡಿದ ವಿನ್ಯಾಸಗಾರ ಶಶಿಕಾಂತ್ ಶೆಟ್ಟಿಉಡುಪಿ, ಸದಾ ಸಹಕಾರ, ನಗುಮೊಗದಿಂದ ಪ್ರೋತ್ಸಾಹ ನೀಡಿದ ಕ.ಸಾ.ಪ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಹೆಚ್.ಪಿ ಹಾಗೂ ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಸೇರಿದಂತೆ ಕ.ಸಾ.ಪ ಉಡುಪಿ ಜಿಲ್ಲೆ ಮತ್ತು ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು, ಕಥೆಗಾರರು, ಮಾಧ್ಯಮ ಮಿತ್ರರು ಮತ್ತು ಕೇಳುಗರು ರೇಡಿಯೊ ಮಣಿಪಾಲ್ ನಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ಯಶಸ್ಸಿಗೆ ನೆರವಾಗಿದ್ದಾರೆ.
ನಿರಂತರ ಪ್ರಸಾರವಾಗುವ 'ಕಥೆ ಕೇಳೋಣ' ಸಂಚಿಕೆಯ ಮನದಾಳದ ಶೀರ್ಷಿಕೆ ಸಾಹಿತ್ಯಕ್ಕೆ ರಾಗನೀಡಿದ್ದಾರೆ ಕಾವ್ಯಶ್ರೀ ಸೀತಾರಾಮ ಆಚಾರ್ಯ ಕೊಡವೂರು. 125ರ ಸಂಭ್ರಮದ ವಿಶೇಷ ಸಂಚಿಕೆಯಲ್ಲಿ ಕವಿ, ಸಾಹಿತಿ ಹಾಗೂ ಆಕಾಶವಾಣಿ ಮಂಗಳೂರು ಕೇಂದ್ರದ ನಿವೃತ್ತ ನಿರ್ದೇಶಕರಾಗಿರುವ ಡಾ.ವಸಂತಕುಮಾರ ಪೆರ್ಲ ಮತ್ತು ನಿವೃತ್ತ ಪ್ರಾಧ್ಯಾಪಕರು, ನಾಟಕಕಾರ, ರಂಗನಿರ್ದೇಶಕ ಹಾಗೂ ರಂಗಭೂಮಿ ತಜ್ಞರೂ ಆಗಿರುವ ಡಾ. ನಾ.ದಾ. ಶೆಟ್ಟಿ ಅವರಿಂದ ಶುಭ ಸಂದೇಶವನ್ನು ಆಲಿಸಲಿದ್ದೀರಿ. ಅಲ್ಲದೆ ಕೇಳುಗ ಅಭಿಮಾನಿ ಬೇಬಿ ಲೀಲಾ ಅಲೆವೂರು ಅವರ ಅನಿಸಿಕೆಯೂ ಪ್ರಸಾರವಾಗಲಿದೆ ಎಂದು ಮಣಿಪಾಲ್ ಇನಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಕ್ಯಾಂಪಸ್ ನಲ್ಲಿರುವ ರೇಡಿಯೋ ಮಣಿಪಾಲ್ ನಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾದ ಡಾ.ರಶ್ಮಿ ಅಮ್ಮೆಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ