ಸರಾಗವಾಗಿ ಜೀವನ ನಡೆದುಕೊಂಡು ಹೋಗುತ್ತಿರುವಾಗ, ಸ್ವಲ್ಪ ಏನಾದರೂ ಅಸ್ತವ್ಯಸ್ತವಾಯಿತೋ, ಜೀವನ ಬೇಸರವಾಗುತ್ತದೆ. ಅಂದರೆ, ಅಂದುಕೊಂಡಂತೆ ಸರಾಗವಾಗಿ, ಅರ್ಥಾತ್ ರಾಗೇಣ ಸಹ, ರಾಗಪ್ರೀತಿಗಳ ಅನುಬಂಧಗಳಿಗೆ ಅನುಗುಣವಾಗಿ ನಡೆಯುವುದು ಕೊಂಚ ಕೊಂಚವಾಗಿ ಕಡಿಮೆಯಾಗಿ ನಡೆಯುತ್ತಾ, ಕೊನೆಗೆ ಅದೇ ಬೃಹತ್ತಾಗಿ ತೋರುವಂತಾದಲ್ಲಿ, ಜೀವನ ಸರಿಯಲ್ಲದೇ ಬೆಸಗೊಂಡು ಬೇಸರವಾಗುತ್ತದೆ...! ಇನ್ನು ಕೆಲವರಿಗೆ, ಜೀವನ ಒಂದೇ ರೀತಿಯಲ್ಲಿ ಸರಳವಾಗಿ ಬಹಳಷ್ಟು ದಿನ-ಅವಧಿಗಳಿಗೆ ನಡೆದುಕೊಂಡು ಹೋದರೂ ಬೇಸರವೆನಿಸತೊಡಗುತ್ತದೆ. ಒಟ್ಟಾರೆ, ಈ ಬೇಸರದ ಅನುಭವಗಳೆಲ್ಲವುಗಳು, ಆಯಾ ಹೊತ್ತಿಗೆ ಮನುಷ್ಯನ ಇಷ್ಟಾನಿಷ್ಟಗಳಿಗನುಸಾರವಾಗಿ, ಅಭಿರುಚಿಗಳಿಗನುಸಾರವಾಗಿ ಬದಲಾಗುತ್ತಾ ಹೋಗುತ್ತದೆ. ಇದು, ಬೇಸರದ ದಿನನಿತ್ಯದ ಜೀವನಾನುಭವದ ಕತೆಯಾದರೆ, ಇನ್ನು ಬೇಸೂರು...?
ಬೇಸೂರು, ಎಂಬುದು ಸಂಗೀತಕ್ಷೇತ್ರದಲ್ಲಿ ಬಹುವಾಗಿ ಉಪಯೋಗಿಸಲ್ಪಡುವ ಪದವಾಗಿರುತ್ತದೆ. ಹಾಡುವವ, ಇಲ್ಲವೇ ವಾದ್ಯ ನುಡಿಸುವವ, ಶೃತಿ ಅಥವಾ ಸೂರು ತಪ್ಪಿದಾಗ ಅಪಶೃತಿ ಎಂದಾಗಲಿ, ಬೇಸೂರು ಎಂದಾಗಲಿ ಹೇಳಲ್ಪಡುತ್ತದೆ. ಬೇಸೂರು ಅಥವಾ ಅಪಶೃತಿಯುಳ್ಳ ಸಂಗೀತ ಹೇಗೆ ಕೇಳಲು ಕಷ್ಟವೆನಿಸಿ, ಅನುಭವಿಸಲು ಅಹಿತಕರವೆನಿಸುವುದೋ ಹಾಗೆಯೇ ಜೀವನದ ಪಥ ತಾಳತಪ್ಪಿದಾಗಲೂ ಬೇಸರ ಎನಿಸುತ್ತದೆ, ಅಲ್ಲವೇ...!?
ಬೇಸರವೆನಿಸಿ ಜೀವನ ಬೇಸೂರಾದಾಗ, ಆಸರವೆನಿಸಿ ಮತ್ತೆ ಜೀವನ ಸರಾಗವಾಗಿ ಹಳಿಯ ಮೇಲೆ ಜರುಗಿಕೊಂಡು ಹೋಗಲು ಆಧಾರವಾಗುವುದು, ಹಿರಿಯರ ಜೀವನಾನುಭವದ ನುಡಿಗಳು, ಉಪದೇಶಗಳು, ಒತ್ತಾಸೆಯುತ ಸಮಾಧಾನಪಡಿಸುವ ಅಂತಃಕರಣಭರಿತ ಪ್ರೀತಿಯುತ ನಡೆಗಳು. ಇವುಗಳ ಜೊತೆಗೆ ಅಧ್ಯಾತ್ಮಿಕ ವಾತಾವರಣವು ಕೂಡ ಪೂರಕವಾಗಿ ಪರಿಣಮಿತವಾಗಿರುತ್ತದೆ. ಹೀಗೆ ಜೀವನಾನುಭವಿಗಳ ಪಡಿನುಡಿಗಳ ಆಶ್ರಯದಲ್ಲಿ, ಗುರುಹಿರಿಯರ, ದೈವಗಳ ಅಂತಃಕರಣಭರಿತ ಕೃಪಾಶ್ರಯಗಳಲ್ಲಿ, ನಮ್ಮ ಬೇಸರ-ಬೇಸೂರುಗಳನ್ನು ನೀಗುವತ್ತ ಪ್ರಯತ್ನಿಸಿ, ಸರಾಗ, ಸಮೃದ್ಧ, ಸೌರಭಯುತ ಜೀವನಪಥವನ್ನು ಕ್ರಮಿಸೋಣವೇ...!?
ಓಂ ಶಾಂತಿಃ, ಶಾಂತಿಃ, ಶಾಂತಿಃ...!
- ಕುರಾಜನ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ