ಉಜಿರೆ:ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನವೀಕೃತ ಸಭಾಂಗಣ ‘ಇಂದ್ರಪ್ರಸ್ಥ’ದಲ್ಲಿ ಜು.23ರಂದು ಪ್ರದರ್ಶನಗೊಂಡ ನಾಟಕವು ಕುರುಕ್ಷೇತ್ರದಲ್ಲಿ ಅವಮಾನದಿಂದ ಹಿಡಿದು ಅವಸಾನದವರೆಗಿನ ಭೀಷ್ಮರ ಅಂತ್ಯ, ಸಂದಿಗ್ಧತೆ, ಗಾಂಧಾರಿಯ ಪ್ರಬುದ್ಧತೆ, ಧೃತರಾಷ್ಟ್ರನ ಆಂತರಂಗಿಕ ಅಂಧತ್ವ, ಅರ್ಜುನನ ದುಃಖ, ಶ್ರೀಕೃಷ್ಣನ ತಂತ್ರ, ಶಿಖಂಡಿಯ ಪ್ರತೀಕಾರ, ಗಂಗೆಯ ಕಾರುಣ್ಯ, ಶ್ರೀ ವಿಷ್ಣುವಿನ ದರ್ಶನವನ್ನು ಮನೋಜ್ಞವಾಗಿ ತೋರಿಸಿತು.
ವ್ಯಾಸ ರಚಿತ ಮಹಾಭಾರತ, ಕುಮಾರವ್ಯಾಸ ಭಾರತ, ಭಗವದ್ಗೀತೆ ಹಾಗೂ ಇತರ ಕೆಲವು ಪೌರಾಣಿಕ ಆಕರಗಳಿಂದ ಪ್ರೇರಿತಗೊಂಡಿರುವ, ಎಸ್.ಡಿ.ಎಂ. ಸಾಂಸ್ಕೃತಿಕ ಕೇಂದ್ರ ಪ್ರಸ್ತುತಪಡಿಸಿದ ಈ ನಾಟಕವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಸ್ಕಂದ ಭಾರ್ಗವ ಅವರು ರಚಿಸಿದ್ದಾರಲ್ಲದೆ, ಭೀಷ್ಮನ ಪಾತ್ರವನ್ನೂ ನಿರ್ವಹಿಸಿದ್ದಾರೆ. ಕೇಂದ್ರದ ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ (ನೀನಾಸಂ) ಅವರು ನಿರ್ದೇಶಿಸಿರುವ ನಾಟಕಕ್ಕೆ ಮದನ್ ಎಂ. ಸಂಗೀತ ನೀಡಿದ್ದು, ಸುಬ್ರಮಣ್ಯ ಜಿ. ಭಟ್ (ಅಂತಿಮ ಪದವಿ ವಿದ್ಯಾರ್ಥಿಗಳು) ಪಕ್ಕವಾದ್ಯದಲ್ಲಿ ಸಾಥ್ ನೀಡಿದರು.
ಹಿರಿಯ ವಿದ್ಯಾರ್ಥಿಗಳಾದ ಅಮಿತ್ (ಶ್ರೀಕೃಷ್ಣ), ಮಾಧವಿ (ಅರ್ಜುನ), ರಿತೇಶ್ (ಧೃತರಾಷ್ಟ್ರ) ಶರಣ್ಯ (ಗಾಂಧಾರಿ) ಅವರ ನಟನೆ ನಾಟಕಕ್ಕೆ ವಿಶೇಷ ಕಳೆ ನೀಡಿತು. ಶಿಖಂಡಿಯಾಗಿ ದ್ವಿತೀಯ ಎಂಎಸ್ಸಿ ವಿದ್ಯಾರ್ಥಿನಿ ಸೋನಾಕ್ಷಿ, ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಹರ್ಷ ಧರ್ಮರಾಯನಾಗಿ, ಉಲ್ಲೇಖ ದ್ರೌಪದಿಯಾಗಿ, ಅಮೃತವರ್ಷಿಣಿ ಸೂತ್ರಧಾರನಾಗಿ, ಪ್ರಥಮ ಪದವಿ ವಿದ್ಯಾರ್ಥಿಗಳಾದ ಭೂಷಣ್ ಭೀಮಸೇನನಾಗಿ ಹಾಗೂ ಕನ್ನಿಕಾ ಎಸ್. ಭೀಷ್ಮನ ತಾಯಿ ಗಂಗೆಯಾಗಿ ಪಾತ್ರಗಳಿಗೆ ಜೀವ ತುಂಬಿದರು.
ಪ್ರದರ್ಶನ ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಪುಂಜಾಲಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ಅವರು, ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿ, ಅಭಿನಯವನ್ನು ಪ್ರಶಂಸಿಸಿದರು. ತಮ್ಮ ಶಿಷ್ಯ, ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ರಂಗದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಇನ್ನಷ್ಟು ಶ್ರೇಷ್ಠ ಪ್ರಸ್ತುತಿ ಸಾಧ್ಯವಾಗಲಿ ಎಂದು ಆಶಿಸಿದರು.
ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, "ಇಂದ್ರಪ್ರಸ್ಥ ಸಭಾಂಗಣವು ನವೀಕರಣಗೊಂಡ ಬಳಿಕ ಮೊದಲ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಈ ನಾಟಕವು ಪ್ರದರ್ಶನಗೊಂಡಿದ್ದು, ಅತ್ಯುತ್ತಮವಾಗಿ ಮೂಡಿಬಂದಿದೆ. ‘ಭೀಷ್ಮಾಸ್ತಮಾನ’ವು ಉಜಿರೆಯ ಸಿದ್ಧವನ ಗುರುಕುಲದಲ್ಲಿ ಇತ್ತೀಚೆಗೆ ಪ್ರಥಮ ಪ್ರದರ್ಶನ ಕಂಡಿದ್ದು, ಸೂಕ್ತ ಮಾರ್ಪಾಡುಗಳೊಂದಿಗೆ ಇಂದು ಎರಡನೇ ಪ್ರದರ್ಶನ ಕಂಡಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಅಭಿನಯಿಸಿದ್ದಾರೆ” ಎಂದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ