ರಂಗ ಧ್ವನಿ ಪ್ರವರ್ತಕರಾಗಿ, ಅನೇಕ ನಾಟಕಗಳನ್ನು ತಮ್ಮ ಹಿನ್ನಲೆಯ ಧ್ವನಿಯಲ್ಲಿ ಜಯಭೇರಿ ಮಾಡಿದ, ಅಬ್ಬೂರು ಜಯತೀರ್ಥರು ನಾಟಕರಂಗದ ಅಪರೂಪದ ವ್ಯಕ್ತಿ! ಕನ್ನಡ ಸಾಹಿತ್ಯ ಕಲಾ ಸಂಘ, ಸಾಹಿತ್ಯ ದಪ೯ಣ, ನಾಟ್ಯ ದರ್ಪಣ, ಎಜಿ ಆಫೀಸಿನ ಮನರಂಜನಾ ಕೂಟದ ನಾಟಕ ರಂಗಗಳು, ಅಬ್ಬೂರು ಜಯತೀರ್ಥರ ಸಮರ್ಥ ಸಾರಥ್ಯದಲ್ಲಿ ಉತ್ತುಂಗ ಶಿಖರಕ್ಕೇರಿದವು. ಬಹಿರಂಗದಲ್ಲಿ ಆಚಾರಶೀಲರಾಗಿ ಆಂತರ್ಯದಲ್ಲಿ ವಿಚಾರ ಶೀಲರೂ ಸಮಾಜಮುಖಿ ಮತ್ತು ಹೃದಯವೈಶಾಲ್ಯತೆ ಅಭಿವ್ಯಕ್ತಿ ಪ್ರದಶಿ೯ಸಿ, ನಾಟಕರಂಗಗಳಿಗೆ ಧ್ವನಿಯಾದರು. ಕಾನೂನಿನ ಪದವಿ ಪಡೆದರೂ, ರಂಗಕಲೆಗೆ ಮನಸೋತು, ಹಿರಿಯರ ಸಂಸ್ಕಾರದಿಂದ, ಕಲಾಸಕ್ತಿ, ನಾಟಕಗಳಲ್ಲಿ ಅಭಿರುಚಿ ಜನ್ಮದತ್ತವಾಯಿತು. ಅಮೋಘ ಅಭಿನಯ, ತ್ರಿವಿಕ್ರಮ ವ್ಯಕ್ತಿತ್ವ, ನಿರ್ದೇಶನ ನಾಟಕಕ್ಕೆ ಹಿನ್ನೆಲೆಯಲ್ಲಿ ಪೂರಕವಾದ ವಿವಿಧ ಧ್ವನಿ ಸಂಯೋಜನೆ ಇವರ ಪ್ರತಿಭೆಯಾಗಿದೆ.
ಹಕ್ಕಿಗಳ ಕಲರವ, ರೈಲಿನ ಶಬ್ದ, ಸಿಡಿಲಿನ ಆರ್ಭಟ, ಹರಿವ ನೀರಿನ ಜುಳು ಜುಳು ಶಬ್ದ ರಂಗಭೂಮಿಗೆ ಬೆಳಕು ಹೇಗೋ ಹಾಗೆ ಧ್ವನಿಯು ಪೂರಕವಾಗಿತ್ತು. ಶಬ್ದ ಜಗತ್ತಿನ ವಿವಿಧ ಸ್ತರಗಳಲ್ಲಿ ರಂಗಭೂಮಿಯ ಸಂವೇದನೆ ಕಾರಣವಾಗಿತ್ತು! ಅಂತಹ ಅನಿವಾರ್ಯ ಅಗತ್ಯವನ್ನು ಅಬ್ಬೂರು ಜಯತೀರ್ಥರು ಕಲಾತ್ಮಕವಾಗಿ ನಿರ್ದೇಶಿಸಿ ಪ್ರದರ್ಶನಗೊಂಡ ಅನೇಕ ನಾಟಕಗಳು ಪ್ರೇಕ್ಷಕರ ಮನಸೂರೆಗೊಂಡವು. ರಂಗಭೂಮಿಯಲ್ಲಿ ಹಿರಿಯ ದಿಗ್ಗಜರಾದ ಬಿ.ವಿ ಕಾರಂತ, ನಾಣಿ, ಬಿ.ಚಂದ್ರಶೇಖರ್, ಶಂಕರನಾಗ್, ಬಿ. ಜಯಶ್ರೀ, ಪಿ. ಲಂಕೇಶ್ ಮೊದಲಾದವರೊಂದಿಗೆ ಅಬ್ಬೂರರು ನಿಕಟ ಸಂಪರ್ಕದಲ್ಲಿದ್ದರು. ಹಾಗೆ ತಾವು ಕಾಯ೯ವಹಿಸುತ್ತಿದ್ದ ಸಂಸ್ಥೆಯಲ್ಲಿ ಅನೇಕ ಕಲಾವಿದರನ್ನು ತಯಾರು ಮಾಡಿದ ಕೀರ್ತಿಗೆ ಭಾಜನರು. ಹೆಚ್.ಎಸ್.ವಿ ಅವರ "ಹೆಜ್ಜೆಗಳು" ನಾಟಕ ಅನೇಕ ರಂಗಪ್ರಯೋಗಗಳ ಹೆಜ್ಜೆಗಳನ್ನು ಜನಮಾನಸದಲ್ಲಿ ರೂಪಿಸಿದವರು ಅಬ್ಬೂರು ಜಯತೀರ್ಥರು. ಇವರ ನಿರ್ದೇಶನದಲ್ಲಿ ಕೈಲಾಸಂ, ಆದ್ಯ ರಂಗಾಚಾರ್ಯ, ಲಂಕೇಶ್ ಅವರ ನಾಟಕಗಳು ಮಿಂಚಿದವು. ಅಬ್ಬೂರು ಜಯತೀರ್ಥರಿಗಿದ್ದ ಪ್ರೀತಿ ಗೌರವ, ದೀಕ್ಷಾಬದ್ಧತೆ, ಸಮರ್ಪಣಾ ಮನೋಭಾವ ಇತರರಿಗೆ ಮಾದರಿಯಾಗಿದೆ.
ಅಬ್ಬೂರು ಜಯತೀರ್ಥರ ಸಾಧನೆ ಗುರುತಿಸಿ, ಕೇಂದ್ರ ಸರಕಾರ "ಅಮೃತ ಪ್ರಶಸ್ತಿ" ನೀಡಿದ್ದು ಗಮನಾರ್ಹ. ಚಿಕ್ಕಬಳ್ಳಾಪುರದ ಲಕ್ಷ್ಮಣರಾಯರ ಪುತ್ರಿ, ಉಮಾ ಅವರನ್ನು ವಿವಾಹವಾದರೂ, ಅವರ ಪತ್ನಿ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಅವರ ಪುರಸ್ಕಾರ ವೀಕ್ಷಿಸಲಿಲ್ಲ! ಕನ್ನಡ ರಂಗಭೂಮಿಯಲ್ಲಿ ಸತತ 60 ವರ್ಷ ತಮ್ಮನ್ನು ತೊಡಗಿಸಿಕೊಂಡು ನಿರಪೇಕ್ಷ ಸೇವೆ ಮಾಡಿದ ಆಬ್ಬೂರರಿಗೆ ಸಲ್ಲಬೇಕಾದ ಸನ್ಮಾನಗಳು, ಪ್ರಶಸ್ತಿಗಳು ದೊರಕದೇ ಹೋಗಿ ರಂಗಾಸಕ್ತರಿಗೆ ಬೇಸರದ ಸಂಗತಿಯಾಗಿದೆ. 38 ವರ್ಷ ಎಜಿ ಆಫೀಸಿನಲ್ಲಿ ಸೇವೆ ಸಲ್ಲಿಸಿ, ರಂಗಭೂಮಿಯಲ್ಲಿ ಆರು ದಶಕಗಳ ಕಾಲ ಮೀರಿ ಕೃಷಿಗೈದು, ಕಲಾಭೂಮಿಯನ್ನು ತಪಸ್ಸು ಮಾಡಿದ ಕಲಾತಪಸ್ವಿ.
ಅಬ್ಬೂರರು ಉತ್ಸಾಹದ ಚಿಲುಮೆಯಾಗಿ, ರಸವತ್ತಾದ ಉತ್ತರಗಳನ್ನು ನೀಡಿ, ಅನುಭವಗಳನ್ನು ಹಂಚಿ, ಎಲ್ಲರ ಪ್ರೀತಿಪಾತ್ರರಾಗಿ ಜನಾನುರಾಗಿದ್ದಾರೆ. ಸರಸ್ವತಿ ಕಲಾ ನಿಕೇತನದ ಸದಸ್ಯರಾಗಿ ನೇತಾರರಾಗಿದ್ದ ಕಾಕೋಳು ಶ್ರೀನಿವಾಸರಾವ್ ಅವರಿಗೆ ಅಬ್ಬೂರು ಜಯತೀಥ೯ರು ಆತ್ಮೀಯರಾಗಿದ್ದುದು ವಿಶೇಷ! ಲೇಡಿ ಟೈಪಿಸ್ಟ್, ದಾಶರಥಿ ದೀಕ್ಷಿತ್ ಅವರ ಸಿಡಿಲು ಮರಿ, ಮುಂತಾದ ನಾಟಕಗಳನ್ನು ನಿರ್ದೇಶಿಸಿ, ಪಾತ್ರಗಳನ್ನೂ ವಹಿಸಿದ್ದರು. ಅನಕೃ ಅವರ. ಗುಬ್ಬಚ್ಚಿ ಗೂಡು ಕಟು ವಿಮರ್ಶೆಗೆ ಗುರಿಯಾಗಿದ್ದರೂ ಭಯಪಡದೆ ಅದನ್ನು ನಾಟಕಕ್ಕೆ ರೂಪಾಂತರಿಸಿ, ಪ್ರದಶಿ೯ಸಿ ತಮ್ಮ ದಿಟ್ಟತನ ತೋರಿಸಿದ ಅದ್ಭುತ ಪ್ರಯೋಗಶೀಲ ಕಲಾವಿದ. ಶ್ರೀರಂಗರ ನಾಟಕಗಳನ್ನು ಪ್ರದಶಿ೯ಸಿ ಸೈ ಎನಿಸಿಕೊಂಡರು. ಬದುಕಿನುದ್ದಕ್ಕೂ ಸಿಹಿ ಕಹಿ ಉಂಡು ಸಿದ್ಧಾಂತಗಳಿಗೆ ಬದ್ಧರಾಗಿ ಅಶಿಸ್ತನ್ನು ಎಂದೂ ಸಹಿಸದ ಮಹನೀಯರು. ತಮ್ಮ ಹಿಂದುತ್ವ, ಬ್ರಾಹ್ಮಣತ್ವ, ಮಧ್ವ ಸಿದ್ಧಾಂತದಲ್ಲಿ ಅಚಲ ನಂಬಿಕೆ ಹೊಂದಿ ಸಮುದಾಯ ತಂಡದ ವೈಚಾರಿಕ ನಾಟಕ "ತಾಯಿ", ಗೆಲಿಲಿಯೋ ನಾಟಕಗಳಿಗೆ ಧ್ವನಿ ಒದಗಿಸಿದರು. ಮಾರೀಚನ ಬಂಧುಗಳು ನಾಟಕ ಸಹ ನಿರ್ದೇಶಿಸಿದರು.
ಸೇತುಮಾಧವರಾವ್ ಮತ್ತು ಸುಶೀಲಾಬಾಯಿ ಪುತ್ರರಾಗಿ ತಾ॥ 29-11-1939ರಲ್ಲಿ ಜನಿಸಿ ಹಿರಿಯರ ರಕ್ತಗತ ಕಲೆಯನ್ನು ಪಡೆದ ಕಲಾಕುಸುಮ ಜಯತೀರ್ಥರು ನಾಡಿಗೆ ದೊರೆತ ಅಪರೂಪದ, ಹಿರಿಯ ರಂಗಕರ್ಮಿ. ಕನ್ನಡ ನಾಟಕಗಳಿಗೆ ಭ್ರಾಮಕ ಕನಸಿನ ವಾತಾವರಣ ನಿಮಿ೯ಸಿದರು.
1982- 1985ರವರೆಗೆ ರಾಜ್ಯ ನಾಟಕ ಅಕಾಡೆಮಿಯ ಸದಸ್ಯರಾಗಿ 1988ರಲ್ಲಿ, ಮ್ಯಾಂಚೆಸ್ಟರ್ ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವರು ನಿರ್ದೇಶಿಸಿದ, "ಉದ್ಭವ" ನಾಟಕ ಪ್ರದಶ೯ನ ಅದ್ಭುತ ಯಶಸ್ಸು ಗಳಿಸಿ ಅಪಾರ ಮೆಚ್ಚುಗೆ ಪಡೆಯಿತು. ಪ್ರಸ್ತುತ ಮಕ್ಕಳಿಗೆ ನಾಟಕದ ತರಬೇತಿ ನೀಡುತ್ತಾ ಭವ್ಯ ಸಾಂಸ್ಕೃತಿಕ ಪರಂಪರೆ, ಕಲಾ ಸಂಸ್ಕೃತಿ ಮುಂದುವರೆಸುತ್ತಿರುವ ಆನಂದ ಪಡುತ್ತಿರುವ ನಿರ್ಲಿಪ್ತ ಕಲಾವಿದ!
ಇವರ ರಂಗಚೇತನದ ಅಪರಿಮಿತ ಉತ್ಸಾಹ, ಕಾರ್ಯಶೀಲತೆ ಅನುಕರಣೀಯ. ಇವರ ಧಾರ್ಮಿಕ ಮನೋಭಾವ, ಸಜ್ಜನರ ಸಂಗ, ಆತಿಥ್ಯ, ಕಿರಿಯರಿಗೆ ದಾರಿದೀಪವಾಗಿ, ಬೆಂಗಳೂರಿನ ವಸಂತಪುರದಲ್ಲಿ ಕಲೆಯನ್ನು ಪೋಷಿಸುತ್ತಾ ಮಾರ್ಗದರ್ಶನ ನೀಡುತ್ತಿರುವ ಮಹಾನ್ ಕಲಾವಿದರು. ಸುಧಾ ಪ್ರಸನ್ನ ಇವರ ಪುತ್ರಿಯಾಗಿದ್ದು ಕಿರುತೆರೆ ಮತ್ತು ಬೆಳ್ಳಿತೆರೆಯ ಪ್ರಖ್ಯಾತ ನಟಿ. ಪುತ್ರ ಭಾರ್ಗವ ತಂದೆಯಂತೆ ರಂಗಭೂಮಿಯ ನೇಪಥ್ಯಕ್ಕೆ ಸಹಾಯಕರು. ಅಬ್ಬೂರಿನ ಇವರ ಪುರಾತನ ಗೃಹದಲ್ಲಿ ಅನೇಕ ಕಿರುಚಿತ್ರಗಳು ಚಿತ್ರೀಕರಣಗೊಂಡಿವೆ. ಇತ್ತೀಚೆಗೆ ಬಿಡುಗಡೆಯಾದ ರಂಗ ಭೀಷ್ಮ ಅಬ್ಬೂರು ಜಯತೀಥ೯ ಕೃತಿಯ ಪ್ರಕಾಶಕರಾದ ಎಂ ಬಸವರಾಜು ತಮ್ಮ ಹಿನ್ನುಡಿಯಲ್ಲಿ ಜಯತೀರ್ಥರಿಗೆ ಯಾವ ಪ್ರಶಸ್ತಿ ನೀಡದೆ ಇರುವುದು ಬೇಸರ ಸಂಗತಿ ಎಂದು ತಿಳಿಸುತ್ತಾ, ಭಾರತ ಸರ್ಕಾರ ಭಾರತ ಸ್ವಾತಂತ್ರ್ಯ ಅಮೃತೋತ್ಸವ ಸಂದರ್ಭದಲ್ಲಿ ಅಬ್ಬೂರು ಜಯತೀಥ೯ರಿಗೆ "ಅಮೃತ ಪ್ರಶಸ್ತಿ" ನೀಡಿ ಗೌರವಿಸಿರುವುದು ಕನ್ನಡ ರಂಗಭೂಮಿಗೆ ದೊರೆತ ಗೌರವ ಎಂದು ಹೃದಯ ತುಂಬಿ ನಮಸ್ಕರಿಸಿ ಸ್ವತಃ: ತಾವೇ ಕೃತಿ ಪ್ರಕಟಿಸಿ ಗೌರವ ಸೂಚಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ