"ನಾನು ದೇವನು ಅಲ್ಲ ದೇವ ಮಾನವನೂ ಅಲ್ಲಾ" ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ ಎಂದು ಹೇಳುತ್ತಲೇ ಲಕ್ಷಾಂತರ ಜನಮಾನಸದಲ್ಲಿ ಅಚಲರಾಗಿ ನೆಲೆ ನಿಂತ ಮಹಾನ್ ಚೇತನರು ನಮ್ಮ ವೆಂಕಟಾಚಲ ಅವಧೂತರು.
ಇಂದು ಸಖರಾಯಪಟ್ಟಣದ ಗುರುದೇವರು ನಮ್ಮೆಲ್ಲರ ಆರಾಧ್ಯದೈವ ಶ್ರೀ ವೆಂಕಟಾಚಲ ಗುರುಗಳ ಆರಾಧನಾ ಮಹೋತ್ಸವ- ಅವಧೂತ’ ಪರಿಕಲ್ಪನೆಗೆ ಸಾಕ್ಷಿಯಾಗಿ ನಿಂತವರು ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಗುರುಗಳು. ಅಸಂಖ್ಯಾತ ಗುರುಬಂಧುಗಳಿಂದ, ಸುತ್ತಮುತ್ತಲ ಹಳ್ಳಿಗರಿಂದ ‘ಮಾತಾಡುವ ದೇವರು’, ‘ಗುರುನಾಥ’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು ಬದುಕಿನ ಅರ್ಥವನ್ನು ಸರಳಭಾಷೆಯಲ್ಲಿ ವಿವರಿಸಿದ ಅನುಪಮ ಚೇತನ....
ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ ಜ್ಞಾನ ಹೊಂದಿರುವ ಸಂತರೆ ಅವಧೂತರು.
ಸ್ವಾತ್ಮಾ ರಾಮಂ ನಿಜಾನಂದಂ ಶೋಕ ಮೋಹ ವಿವರ್ಜಿತಂ ಸ್ಮರಾಮಿ ಮನಸಾ ನಿತ್ಯಂ ವೆಂಕಟಾಚಲ ದೇಶಿಕಂ
ಮಧ್ಯ ಕರ್ನಾಟಕವು ಅನೇಕ ಸಿದ್ಧರನ್ನೂ ಸಾಧುಗಳನ್ನೂ ಅವಧೂತರನ್ನೂ ಕಂಡಿದೆ. ಅರಸೀಕೆರೆ, ಬಾಣಾವರ, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು- ಈ ನಡುವಿನ ಊರುಗಳಲ್ಲಿ ಅನೇಕ ಸಾಧು-ಸತ್ಪುರುಷರನ್ನು ಕಾಣುತ್ತೇವೆ. ಕರ್ನಾಟಕದ ಭೂಪಟದಲ್ಲಿ ಈ ಊರುಗಳಿಗೆ ವಿಶೇಷ ಸ್ಥಾನವುಂಟು. ಇಲ್ಲಿ ಅವಧೂತಪಂಥ, ಸಿದ್ಧಪಂಥ, ದತ್ತಪಂಥದ ಮಹಿಮರನ್ನು ಕಾಣಬಹುದು! ಇವರೆಲ್ಲರೂ ‘ಸ್ವಾತ್ಮಾರಾಮಂ, ನಿಜಾನಂದಂ, ಶೋಕ-ಮೋಹವಿವರ್ಜಿತಂ’ ಎಂಬ ಮಾತಿಗೆ ಸಾಕ್ಷಿಯಾದವರು. ಇಂಥವರಲ್ಲಿ ಬಾಣಾವರದ ಮುಕುಂದೂರು ಸ್ವಾಮಿಗಳು ಮತ್ತು ಈಚೆಗೆ ತುಂಬಾ ಪ್ರಸಿದ್ಧಿಗೆ ಬಂದು ಜನಸಾಗರದ ನಡುವೆ ಪ್ರೇಮದ ಅಮೃತಸ್ಪರ್ಶವನ್ನು ನೀಡಿದ, ಸಖರಾಯ ಪಟ್ಟಣದ ಸದ್ಗುರುಗಳಾದ ಶ್ರೀ ವೆಂಕಟಾಚಲ ಅವಧೂತರು ನಿತ್ಯಸ್ಮರಣೀಯರು.
ಇವರು ತಮ್ಮ 48ನೇ ವಯಸ್ಸಿಗೆ ಬಾಹ್ಯ ಪ್ರಪಂಚಕ್ಕೆ ಸದ್ಗುರುವಾಗಿ ಪ್ರಕಟರಾದರು. ಶ್ರೀನಿವಾಸಯ್ಯ ಮತ್ತು ಶಾರದಮ್ಮ ದಂಪತಿಗಳಿಗೆ ಸತತವಾಗಿ 3 ಹೆಣ್ಣುಮಕ್ಕಳಾದಾಗ, ತಮ್ಮ ಮನೆದೇವರು ತಿರುಪತಿ ವೆಂಕಟರಮಣಸ್ವಾಮಿಯನ್ನು ಗಂಡು ಸಂತಾನ ಕೊಡಬೇಕೆಂದು ಕೋರಿದ ಫಲವೋ ಎಂಬಂತೆ 1940ನೇ ಇಸವಿ ವಿಕ್ರಮಸಂವತ್ಸರ ಮಾರ್ಗಶಿರ ಮಾಸದ ಷಷ್ಠಿಯಂದು ಗಂಡು ಮಗು ಹುಟ್ಟಿದಾಗ, ಅದೇ ವೆಂಕಟೇಶ್ವರನ ಕೃಪೆಯಿಂದ ಜನಿಸಿದರು ಎಂಬ ನಂಬಿಕೆಯಿಂದ ವೆಂಕಟಾಚಲ ಎಂದು ನಾಮಕರಣ ಮಾಡಿದರು.
ಸಹಜವಾದ ಸಂಪ್ರದಾಯದಂತೆ ಮೂರನೇ ವರ್ಷಕ್ಕೆ ಬಾಲಕ ವೆಂಕಟಾಚಲನಿಗೆ ಚೌಲ ಕಾರ್ಯವನ್ನು ಮಾಡಿದ್ದಲ್ಲದೇ, ಸಮಯ ಸಿಕ್ಕಾಗಲೆಲ್ಲಾ ಮಗನನ್ನು ತಮ್ಮ ತೊಡೆಯಮೇಲೆ ಕುಳ್ಳಿರಿಸಿಕೊಂಡು ರಾಮಾಯಣ, ಮಹಾಭಾರತಗಳಲ್ಲದೇ, ಪುರಾಣ ಪುರುಷರ ಕಥೆಗಳನ್ನು ಹೇಳುತ್ತಿದ್ದರು. ಉಳಿದೆಲ್ಲಾ ಕಥೆಗಳಿಗಿಂತಲೂ ಬಾಲಕ ವೆಂಕಟಾಚಲರಿಗೆ ಧ್ರುವಕುಮಾರನ ಕತೆ ಅತ್ಯಂತ ಪ್ರಭಾವ ಬೀರಿ ಮತ್ತೆ ಮತ್ತೇ ಅದೇ ಕಥೆಯನ್ನು ಹೇಳಲು ತಮ್ಮ ತಂದೆಯವರಿಗೆ ದಂಬಾಲು ಬೀಳುತ್ತಿದ್ದಂತೆ. ಒಮ್ಮೆ ಅದೇ ಕೇಳುತ್ತಿರುವಾಗಲೇ, ನಾನೂ ಸಹಾ ಧ್ರುವನಂತೆ ನಕ್ಷತ್ರವಾಗಬಹುದೆ? ಎಂದು ಕುತೂಹಲದಿಂದ ತಂದೆಯನ್ನು ಕೇಳಿದ ಬಾಲಕನಿಗೆ, ಅವರ ತಂದೆಯವರು ಖಂಡಿತವಾಗಿಯೂ ನೀನು ಸಹಾ ಧ್ರುವನಂತೆ ಭಕ್ತಿಯನ್ನು ಬೆಳೆಸಿಕೊಂಡು, ಯಾರ ಮನಸ್ಸನ್ನೂ ಯಾವದೇ ಕಾರಣದಿಂದಲೂ ನೋಯಿಸದೇ, ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿದಲ್ಲಿ ನೀನೂ ಸಹಾ ಧ್ರುವನಂತೆ ಪ್ರಖ್ಯಾತವಾಗಬಹುದು ಎಂದು ಹೇಳಿದ್ದರಂತೆ ಅಂದು ತಂದೆಯವರು ಹೇಳಿದ ಮಾತು ಮುಂದೆ ನಿಜವಾಗಿ ವೆಂಕಟಾಚಲರನ್ನು ಕಾಣಲು ಪ್ರತಿ ದಿನವೂ ಸಹಸ್ರಾರು ಜನರು ಅವರ ಮನೆಗೆ ಬರುವಷ್ಟು ಪ್ರಖ್ಯಾತರಾದದ್ದು ಈಗ ಇತಿಹಾಸ.
ಶೃಂಗೇರಿಯ ಶಾರದಾ ಪೀಠದ 34ನೇ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳಿಂದ ಭಾರೀ ಪ್ರಭಾವಿತರಾಗಿ ಶೃಂಗೇರಿ ಪೀಠದೊಡನೆ ನಿಕಟ ಸಂಪರ್ಕವಿಟ್ಟು ಕೊಂಡಿದ್ದಲ್ಲದೇ, ಪ್ರತೀ ತಿಂಗಳು ಶೃಂಗೇರಿ ಮಠಕ್ಕೆ ಹೋಗಿ ಗುರುವಂದನೆ ಮಾಡಿ ಬರುವುದನ್ನು ಕಡ್ಡಾಯವಾಗಿ ರೂಢಿಯಲ್ಲಿಟ್ಟುಕೊಂಡು ಗುರುವಿನ ಪೂರ್ಣಾಶೀರ್ವಾದವನ್ನು ಹೊಂದಿದ್ದರು. ಪ್ರತಿನಿತ್ಯ ತಪ್ಪದೆ ಸಖರಾಯಪಟ್ಟಣದಿಂದ ಶೃಂಗೇರಿ ಗುರುಗಳಿಗೆ ಭಿಕ್ಷೆ ಹೋಗುತ್ತಿತ್ತು.
ಇವರು ಸ್ವಯಂಘೋಷಿತ ಅವಧೂತರಲ್ಲ. ಪ್ರಪ್ರಥಮ ಬಾರಿಗೆ ಶ್ರೀ ಶೃಂಗೇರಿ ಶಾರದಾ ಪೀಠದ 36ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಇವರನ್ನು ಅವಧೂತರೆಂದು ಕರೆದರು. ಆನಂತರ ಇವರು "ಶ್ರೀ ವೆಂಕಟಾಚಲ ಅವಧೂತ"ರೆಂದು ಪ್ರಕಟವಾದರು.
ತಂದೆ ಸತ್ತ ಕೆಲವೇ ದಿನಗಳಲ್ಲೇ ಪ್ರೀತಿಯ ಸೋದರನೂ ಇಹಲೋಕ ತ್ಯಜಿಸಿದ್ದು ವೆಂಕಟಾಚಲರ ಬದುಕಿನಲ್ಲಿ ತಿರುವನ್ನು ತಂದಿತು ಎಂದರು ತಪ್ಪಾಗದು. ಜೀವನ ಎಂದರೆ ನಶ್ವರ, ಹಾಗಾಗಿ ಇರುವಷ್ಟು ಸಮಯದಲ್ಲೇ ಎಷ್ಟು ಸಾಧ್ಯವೋ ಅಷ್ಟು ಪರೋಪಕಾರವನ್ನು ಮಾಡಬೇಕು ಎಂದನಿಸಿದ್ದಲ್ಲದೇ, ಅವರ ಮನಸ್ಸು ವಿರಕ್ತಿಯೆಡೆಗೆ ಸೆಳೆದು ಅಂದಿನಿಂದ ನೀಳವಾದ ಗಡ್ಡ ಕತ್ತರಿದ ಕೂದಲು ಮತ್ತು ಉಡಲು ಒಂದು ಪಂಚೆ ಅಥವಾ ಟವೆಲ್ ಅಷ್ಟೇ ಅವರ ವೇಷಭೂಷಣವಾಯಿತು. ಇಷ್ಟರ ಮಧ್ಯದಲ್ಲೇ ಅವರು ಯಾರಿಗೆ ಏನೇ ಹೇಳಿದರೂ ಆವೆಲ್ಲವೂ ಅಕ್ಷರಶಃ ಸತ್ಯವಾಗುತ್ತಿದ್ದ ಕಾರಣ, ಅವರನ್ನು ಜನರು ಗುರುನಾಥ ಎಂದು ಕರೆಯಲಾರಂಭಿಸಿದ್ದಲ್ಲದೇ, ಅವರ ಬಳಿ ದುಃಖವನ್ನು ಹೇಳಿಕೊಂಡು ಪರಿಹಾರವನ್ನು ಬಯಸಿ ಬಂದವರ ಮಾತುಗಳನ್ನು ಅತ್ಯಂತ ತಾಳ್ಮೆಯಿಂದ ಕೇಳಿ ಅವರಿಗೆ ಸಮಾಧಾನಕರ ರೀತಿಯಲ್ಲಿ ತಾಯಿಯಂತೆ ಪರಿಹಾರವನ್ನು ಸೂಚಿಸುತ್ತಿದ್ದದ್ದಲ್ಲದೆ, ಯಾವುದೇ ಕಾರಣಕ್ಕೂ ಆಡಂಬರ ಮತ್ತು ತೋರಿಕೆಯ ಪ್ರೀತಿಯನ್ನು ಸಹಿಸುತ್ತಿರಲಿಲ್ಲ. ಬದಲಾಗಿ ಪರಿಶುದ್ಧವಾದ ಭಕ್ತಿಯೊಂದೇ ದೇವರನ್ನು ಮುಟ್ಟುವ ದಾರಿ ಎಂದೇ ಎಲ್ಲರಿಗೂ ತಿಳಿ ಹೇಳುತ್ತಿದ್ದರು
ಗುರು ಎಂಬುದು ಏನು? ಗುರುವಿನ ಮಹತ್ವ ಏನು? ಸದ್ಗುರುವಿನ ಸೇವೆ ಹೇಗೆ ಮಾಡಬೇಕು, ಗುರುವಿನ ಕೃಪೆಗೆ ಹೇಗೆ ಪಾತ್ರರಾಗಬೇಕು ಎಂಬುದನ್ನು ಭಕ್ತವೃಂದಕ್ಕೆ ಉಪದೇಶಿಸುತ್ತಿದ್ದರು.
"ನಮಸ್ಕಾರಕ್ಕಲ್ಲಯ್ಯ ಗುರು ನಿನ್ನ ನಿತ್ಯದ ಸಾಧನೆಗೆ ಗುರು" "ಆಚರಣೆಗೆ ಸನ್ಯಾಸಕ್ಕಿಂತ ಗೃಹಸ್ಥಾಶ್ರಮವೇ ಶ್ರೇಷ್ಠ, ಪರಮಾರ್ಥದಲ್ಲಿ ಏನೂ ಇಲ್ಲ, ಎಲ್ಲವೂ ಲೌಕಿಕದಲ್ಲಿದೆ. ಕುಟುಂಬ ಅಥವಾ ಸಂಸಾರವೆಂದರೆ ಕೇವಲ ಗಂಡ- ಹೆಂಡತಿ ಮಕ್ಕಳು ಮಾತ್ರವಲ್ಲಾ. ಸಂಸಾರ ಎಂದರೆ ಇಡೀ ಪ್ರಪಂಚ. ಹಾಗಾಗಿ ಹೇಗೆ ಸಮುದ್ರವು ತನ್ನಬಳಿ ಏನನ್ನೂ ಇಟ್ಟುಕೊಳ್ಳದೇ, ಎಲ್ಲವನ್ನೂ ಹೊರಗೆ ಹಾಕುತ್ತದೆಯೋ ಹಾಗೆಯೇ ಮನ್ನಸನ್ನು ಇಟ್ಟುಕೊಳ್ಳಬೇಕು ಪಾದಪೂಜೆಗಿಂತ ಪದ ಪೂಜೆ ಮುಖ್ಯ ಎಂದು ಪದೇ ಪದೇ ಹೇಳುತ್ತಿದ್ದದ್ದಲ್ಲದೇ, ಕೊಟ್ಟವರನ್ನು ಮರೀಬೇಡ, ನಂದೇ ಹೆಚ್ಚು ಅಂತ ಮೆರೀಬೇಡ, ಯಾರ ಮನಸ್ಸನ್ನೂ ಮುರೀಬೇಡ, ಮನಸ್ಸು ಮಾಗಬೇಕು, ಬಾಳು ಹಣ್ಣಾಗಬೇಕು ಎಂದು ಹೇಳುತ್ತಲೇ, 2010ರಲ್ಲಿ ತಮ್ಮ ಭೌತಿಕ ದೇಹವನ್ನು ತ್ಯಜಿಸಿ ವಿಶ್ವವ್ಯಾಪಿಯಾದರು. ಗುರುಗಳ ಅಂತಿಮ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಸಖರಾಯಪಟ್ಟಣಕ್ಕೆ ಬಂದಿದ್ದು ಇಂದಿಗೂ ಸಹಾ ದಾಖಲೆಯಾಗಿದೆ. ಅಯ್ಯನಕೆರೆಗೆ ಹೋಗುವ ರಸ್ತೆಯಲ್ಲಿ ಇರುವ ಅವರ ತೋಟದಲ್ಲಿಯೇ ಗುರುನಾಥರ ಬೃಂದಾವನವನ್ನು ನಿರ್ಮಿಸಿದ್ದು ಇಂದಿಗೂ ಸಹಾ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅವರ ಬೃಂದಾವನಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗದಿರುವುದು ಅವರ ಪ್ರಖ್ಯಾತಿಯನ್ನು ತೋರಿಸುತ್ತದೆ. ಗುರುನಾಥರು ಭೌತಿಕವಾಗಿ ಎಲ್ಲರನ್ನು ಅಗಲಿದ್ದರೂ, ಬೃಂದಾವನದಲ್ಲಿ ಕುಳಿತು ಸದಾಕಾಲವೂ ನಮ್ಮನ್ನು ಕಾಪಾಡುತ್ತಾರೆ ಎನ್ನುವುದೇ ಅವರ ಭಕ್ತರ ಆಶಯವಾಗಿದೆ.
||ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
- ಸೌಮ್ಯಾ ಸನತ್, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ