ವಿಶ್ವವಿಖ್ಯಾತ ಜಗದೊಡೆಯ ಬಾಲಕೃಷ್ಣನ ಪಾದಪದ್ಮ ಆರಾಧಕರಾದ ಉಡುಪಿಯ ಪರ್ಯಾಯ ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸುಗುಣಮಾಲಾದಲ್ಲಿ ಬರೆದ ರಾಷ್ಟ್ರೀಯ- ಅಂತರರಾಷ್ಟ್ರೀಯ- ಧಾರ್ಮಿಕ- ಸಾಮಾಜಿಕ- ರಾಜಕೀಯ ವಿಡಂಬನೆಗಳ ಸಂಗ್ರಹ ಹೊತ್ತಿಗೆ ಅವರ 60ರ ಜನ್ಮ ವರ್ಧಂತಿಯ ಗುರುವಂದನ ಸಮಾರಂಭದಲ್ಲಿ ಜನಾರ್ಪಣೆಗೊಂಡಿದೆ.
ವಿಶ್ವಗುರು ಶ್ರೀಮದ್ ಆನಂದತೀರ್ಥ ಭಗವತ್ಪಾದರ ವಿಶ್ವ ನಿಯಾಮಕ ಭಗವಂತನ ಸರ್ವೋತ್ತಮತ್ವ ವನ್ನು ವಿಶ್ವಾದ್ಯಂತ ಪಸರಿಸುವ ಸಂತರಲ್ಲಿ ಪರಮಪೂಜ್ಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೀಪ ಸ್ತಂಭದಂತೆ ಎದ್ದು ತೋರುತ್ತಾರೆ.
ಕೃಷ್ಣ ಭಕ್ತಿಯ ಜಾಗೃತಿ, ತತ್ವ ಪ್ರಚಾರವನ್ನು ವಿಶ್ವಾದ್ಯಂತ ಮಠ ಮಂದಿರಗಳ ಸ್ಥಾಪನೆಯ ಕ್ರಾಂತಿಯ ಮೂಲಕ ಶ್ರೀ ಮಧ್ವರ ಆದೇಶವನ್ನು ಅಕ್ಷರಶ ಪ್ರತಿಪಾದಿಸುತ್ತಿರುವ ಭಕ್ತಿ ಗಂಗೆಯನ್ನು ಮೂಲೆ ಮೂಲೆಗೆ ಕರೆದೊಯ್ಯುತ್ತಿರುವ ಆಧುನಿಕ ಭಗೀರಥರು ಪೂಜ್ಯ ಶ್ರೀಪಾದರು. ಪೂಜ್ಯರ ನಡೆಯಂತೆ ಅವರ ನುಡಿಯು ಸತ್ವಪೂರ್ಣವಾದದ್ದು. ಪ್ರವಚನ ಮತ್ತು ಬರವಣಿಗೆ ಎರಡರಲ್ಲೂ ಸಿದ್ಧಹಸ್ತರಾಗಿ ಸುಮಾರು 35 ವರ್ಷಗಳಿಂದ ಸುಗುಣಮಾಲಾದಲ್ಲಿ ಅವರು ಬರೆಯುತ್ತಿರುವ ಲೇಖನಗಳೇ ಸಾಕ್ಷಿ.
60ರ ಸಂಭ್ರಮದಲ್ಲಿರುವ ಸದಾ ಕ್ರಿಯಾಶೀಲ ಶ್ರೀಪಾದರ ವಿಡಂಬನಾತ್ಮಕ -ಉದ್ಭೋದಕ ಚಿಂತನೆಗಳು ಅಕ್ಷರರೂಪದಲ್ಲಿ ಮೂಡಿಬಂದ ಸಂಗ್ರಹಯೋಗ್ಯ ಕೃತಿಯನ್ನು ಹಿರಿಯಡಕ ಶ್ರೀ ಪುತ್ತಿಗೆ ವಿದ್ಯಾಪೀಠದ ಹಳೆಯ ವಿದ್ಯಾರ್ಥಿ ಸಂಘ ಗುರು ಕಾಣಿಕೆಯಾಗಿ ಪ್ರಕಟಪಡಿಸಿದೆ.
ಶ್ರೀ ಮಧ್ವರ ನೇರ ಶಿಷ್ಯರಾದ ಶ್ರೀ ಉಪೇಂದ್ರ ತೀರ್ಥ ಪರಂಪರೆಯ ಶತಾಯುಷಿ ಶ್ರೀ ಸುಧೀಂದ್ರ ತೀರ್ಥರ ಶಿಷ್ಯರಾದ ಶ್ರೀ ಸುಜ್ಞಾನೇಂದ್ರ ತೀರ್ಥರು ಆಯುರ್ವೇದ ಔಷಧಿಗಳ ಮೂಲಕ ಸಾವಿರಾರು ಜನರ ರೋಗಗಳನ್ನು ಧರ್ಮಾರ್ಥವಾಗಿ ಪರಿಹರಿಸುತ್ತಿದ್ದರು. ಇಂತಹ ಮಹಾನ್ ಸಾಧಕರ ದಿವ್ಯ ಸ್ಮೃತಿಗೆ ಈ ಕೃತಿಯನ್ನು ಅರ್ಪಿಸಲಾಗಿದೆ.
ಭಾಗ ಒಂದರಲ್ಲಿ ಪ್ರಾದೇಶಿಕ- ರಾಷ್ಟ್ರೀಯ- ಸಾಮಾಜಿಕ- ಸಾಂಸ್ಕೃತಿಕ- ರಾಜಕೀಯ- ಧಾರ್ಮಿಕ ಮೀಮಾಂಸೆಗಳ ಕುರಿತು 67 ಬರಹಗಳಿವೆ ಅಂತೆಯೇ ಭಾಗ ಎರಡರಲ್ಲಿ ಅಂತರರಾಷ್ಟ್ರೀಯ -ಸಾಮಾಜಿಕ -ರಾಜಕೀಯ ಮೀಮಾಂಸೆಗಳ ಕುರಿತು 25 ಬರಹಗಳಿವೆ.
ಚಿತ್ತಾಕರ್ಷಕ ಚುಟುಕು ಶೀರ್ಷಿಕೆಗಳೇ ಲೇಖನವನ್ನು ಓದಲು ಪ್ರೇರೇಪಿಸುತ್ತದೆ. ಬರವಣಿಗೆಯ ಶೈಲಿಯಂತೂ ವಾಸ್ತವತೆಗೆ ಹಿಡಿದ ಕೈಗನ್ನಡಿಯಂತಿದೆ.
ಬಿಡಿಲೇಖನಗಳ ಸಂಗ್ರಹ ಸಂಕಲನ ಮತ್ತು ಸಂಪಾದನೆನೆ ಯನ್ನು ಅಚ್ಚುಕಟ್ಟಾಗಿ ಒಟ್ಟು ಮಾಡುವಲ್ಲಿ ಸಹಕರಿಸಿರುವ ಮಹಿತೋಷ ಆಚಾರ್ಯ ಮತ್ತು ಓಂ ಪ್ರಕಾಶ ಭಟ್ಟರ ಕಾರ್ಯ ಶ್ಲಾಘನೀಯ.
ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಒಂದು ಮಠಕ್ಕೆ, ಒಂದು ಮತಕ್ಕೆ, ಒಂದು ರಾಜ್ಯಕ್ಕೆ ಸೀಮಿತರಾದವರಲ್ಲ ಅವರು ವಿಶ್ವ ಸನ್ಯಾಸಿ, ಇಂತಹ ಸಾಧಕ ಯತಿಗಳ ಲೇಖನಿಯಿಂದ ಮೂಡಿ ಬಂದಿರುವ ಚಿಂತನೆಗಳು ಅಂತರ್ಮುಖ ಸಾಧನೆಗೆ ದಾರಿದೀಪವಾಗಿದೆ. ಸುಗುಣಗಳಿಗೆ ಇಂದ್ರರಾಗಿರುವ ಶ್ರೀ ಸುಗುಣೇಂದ್ರರ ಜೀವನವೇ ನಮಗೆ ಸ್ಪೂರ್ತಿ.
ಜಾತಿ -ಧರ್ಮ ಚಿಂತನೆಗಳ ಸಮನ್ವಯ ಸಂವಾದಗಳು ತೀವ್ರ ಗತಿಯಲ್ಲಿ ಜಗತ್ತಿನಾದ್ಯಂತ ಆಗಬೇಕಿದೆ. ಪ್ರತಿಯೊಬ್ಬ ಮಾನವನು ಅಂತ:ಕರಣದ ಮಾತನ್ನು ಮನ್ನಿಸಿ ಕಾರ್ಯ ತತ್ಪರನಾಗಬೇಕು, ಅಂತಃಕರಣದ ಅಂತರಾಳದ ಚಿಂತನೆಗಳ ಆದೇಶದಂತೆ ವ್ಯಕ್ತಿ ನಡೆನುಡಿಗಳಲ್ಲಿ ಅನುಸರಿಸಿದರೆ ಅವರವರ ಜಾತಿ ಧರ್ಮಗಳ ತತ್ವಗಳು ಪೂರಕವಾಗಿ ನಿಲ್ಲುತ್ತದೆ. ಈ ಮನೋಧರ್ಮಕ್ಕೆ ಅವರವರ ಜಾತಿ ಮತ ಧರ್ಮಗಳ ತತ್ವಗಳನ್ನೇ ಶಕ್ತಿಯಾಗಿ ಬಳಸಿಕೊಂಡು ಮಾನವೀಯತೆಯ ಸಹೋದರತ್ವದಲ್ಲಿ ಬಾಳಬೇಕು. ಹಾಗಾದರೆ ದ್ವೇಷಕ್ಕೆ ಎಡೆಯಲ್ಲಿ? ಶಾಂತಿ ಸಹ ಬಾಳ್ವೆ ಎಲ್ಲೆಲ್ಲೂ ನಡೆಸುತ್ತವೆ. ಇದುವೇ ಶ್ರೀಪಾದರ ಧರ್ಮಸಮನ್ವತೆಯೊಂದಿಗೆ ಜಾಗತಿಕ ಶಾಂತಿಯುರೂಪಗೊಳ್ಳಬೇಕೆಂಬ ಹೆಬ್ಬಯಕೆಯ ಸಂದೇಶ.
ಕೃತಿಯ ಹೆಸರು: ಮರ್ಮ ಮೀಮಾಂಸೆ
ಮರ್ಮ ಮೀಮಾಂಸಕರು: ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು
ಪ್ರಕಾಶಕರು: ಹಳೆ ವಿದ್ಯಾರ್ಥಿ ಸಂಘ, ಶ್ರೀ ಪುತ್ತಿಗೆ ಮಠ ಹಿರಿಯಡಕ, ಉಡುಪಿ
ಪುಟಗಳು 306
ಬೆಲೆ ರೂ 180
ಪ್ರತಿಗಳಿಗೆ ಸಂಪರ್ಕಿಸಿ: +919482414444
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ