ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಅಯೋಧ್ಯೆಯಲ್ಲಿ ರಾಮ-ಸೀತೆ, ಲಕ್ಷ್ಮಣ-ಊರ್ಮಿಳೆ, ಭರತ-ಮಾಂಡವಿ, ಶತ್ರುಘ್ನ -ಶ್ರುತಕೀರ್ತಿಯರು ಆನಂದದಿಂದ ಕಾಲಕಳೆಯುತ್ತಿದ್ದರು. ಒಂದು ದಿನ ಶ್ರೀರಾಮಚಂದ್ರನು ತನ್ನ ಅಂತಃಪುರದ ಅಂಗಳದಲ್ಲಿರುವ ರತ್ನಸಿಂಹಾಸನದಲ್ಲಿ ಕುಳಿತು ತನಗೆ ಚಾಮರದಲ್ಲಿ ಗಾಳಿ ಬೀಸುತ್ತಿರುವ ಸೀತೆಯೊಂದಿಗೆ ಹರಟುತ್ತಾ ಪ್ರೇಮಸಂಭಾಷಣೆಯನ್ನು ಮಾಡುತ್ತಿದ್ದನು. ಆಗ ಅಲ್ಲಿಗೆ 'ಎಲ್ಲೆಡೆಗೆ ಯಾವಾಗ ಬೇಕಾದರೂ ಅಡೆತಡೆಗಳಿಲ್ಲದೆ ಹೋಗುವಂತಹ' ನಾರದರು ಬಂದರು. ನಾರದರ ಪಾದಗಳಿಗೆ ನಮಸ್ಕಾರ ಮಾಡಿ ಸೀತಾ-ರಾಮರು ಅವರನ್ನು ಸ್ವಾಗತಿಸಿ ಸತ್ಕರಿಸಿದರು. ಆಗ ನಾರದರು ಶ್ರೀರಾಮನ ಪೂರ್ವರೂಪವಾದ ಮಹಾವಿಷ್ಣುವನ್ನು ಸ್ಮರಿಸುತ್ತಾ ರಾಮಸ್ತುತಿಯನ್ನು ಮಾಡಿದರು. ರಾಮನು ನಾರದರಲ್ಲಿ- ನನ್ನಿಂದೇನಾಗಬೇಕು? ಹೇಳಿರಿ- ಎಂದು ವಿನಂತಿಸಿದನು. ಆಗ ನಾರದರು- ನಾನು ಬ್ರಹ್ಮದೇವನಿಂದ ಪ್ರೇರಿತನಾಗಿ ಬಂದಿರುವೆ. ದಶರಥನು ರಾಜ್ಯದ ಹಿತದೃಷ್ಟಿಯಿಂದ ನಿನಗೆ ಪಟ್ಟಾಭಿಷೇಕ ಮಾಡಲಿರುವನು. ನೀನು ರಾಜ್ಯದ ಆಸಕ್ತಿಯಿಂದ ದಶಕಂಠನನ್ನು ಕೊಲ್ಲದಿದ್ದರೆ ನಿನ್ನ ಪ್ರತಿಜ್ಞೆಯು ನೆರವೇರುವುದಿಲ್ಲ. ದೇವತೆಗಳ ಆತಂಕ ದೂರವಾಗುವುದಿಲ್ಲ. ಅದನ್ನು ನೆನಪಿಸಲು ಬಂದೆ- ಎಂದರು. ರಾಮನು ಮುಗುಳುನಗುತ್ತಾ- ನನ್ನ ಪ್ರತಿಜ್ಞೆಯ ನೆನಪಿದೆ. ಅದನ್ನು ಸತ್ಯವಾಗಿಯೂ ನೆರವೇರಿಸುವೆ. ರಾವಣವಧೆಗಾಗಿ ನಾಳೆಯೇ ದಂಡಕಾರಣ್ಯಕ್ಕೆ ಸೀತೆಯೊಂದಿಗೆ ಹೋಗಿ ಅಲ್ಲಿ ಹದಿನಾಲ್ಕು ವರ್ಷಗಳ ಕಾಲ ಋಷಿವೇಷದಲ್ಲಿದ್ದು, ಸೀತಾಪಹರಣದ ನೆಪದಲ್ಲಿ ಆ ದುಷ್ಟರ ಸಂಹಾರ ಮಾಡುವೆ- ಎಂದು ನಾರದರಲ್ಲಿ ಹೇಳಿದಾಗ ಅವರು ಸಂತಸದಿಂದ ರಾಮನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ ದೇವಲೋಕಕ್ಕೆ ಹೋದರು.
ಇತ್ತ ದಶರಥ ಮಹಾರಾಜನು ತನ್ನ ಅರಮನೆಗೆ ಕುಲಗುರುಗಳಾದ ವಸಿಷ್ಠರನ್ನು ಕರೆಸಿದನು. ಅವರಲ್ಲಿ- ಪೂಜ್ಯರೇ, ನಾನು ಮುದುಕನಾಗಿರುವೆನು. ಹಿರಿಯಮಗ ರಾಮನು ಪ್ರೌಢನಾಗಿರುವನು. ಸಕಲ ವೇದವಿದರು,ಮಂತ್ರಿಗಳು, ಪುರಜನರು ರಾಮನ ಗುಣಗಾನವನ್ನು ಮಾಡುತ್ತಿದ್ದಾರೆ. ಆದ್ದರಿಂದ ನಾಳೆಯೇ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಬೇಕೆಂದಿದ್ದೇನೆ. ಈ ವಿಷಯದಲ್ಲಿ ನೀವೂ ಅನುಮತಿಯನ್ನು ನೀಡಬೇಕು. ಭರತ-ಶತ್ರುಘ್ನರು ಇಲ್ಲಿರದಿದ್ದರೂ ಚಿಂತೆಯಿಲ್ಲ. ನಾಳೆಯೇ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಲು ಮಂತ್ರಿಗಳ ನೆರವಿನೊಂದಿಗೆ ಸೂಕ್ತ ವ್ಯವಸ್ಥೆ ಮಾಡಿರಿ- ಎಂದು ವಿನಂತಿಸಿದನು.ಹಾಗೆಯೇ ಸುಮಂತ್ರನಿಗೆ ವಸಿಷ್ಠರಿಗೆ ನೆರವಾಗಲು ಹೇಳಿ ನಗರದಲ್ಲಿ ಈ ವಿಷಯವನ್ನು ಡಂಗುರ ಸಾರುವ ಮೂಲಕ ತಿಳಿಸಲು ಆದೇಶಿಸಿದನು. ತುರ್ತು ರಾಜಾಜ್ಞೆ. ಪಟ್ಟಾಭಿಷೇಕಕ್ಕೆ ಬೇಕಾದ ಸಕಲ ಸಿದ್ಧತೆಗಳು ನಡೆಯತೊಡಗಿದವು. ವಸಿಷ್ಠರು ರಾಮನ ಅರಮನೆಗೆ ಹೋದರು.
ತನ್ನ ಅರಮನೆಗೆ ಅನಿರೀಕ್ಷಿತವಾಗಿ ಬಂದ ಕುಲಗುರು ವಸಿಷ್ಠರನ್ನು ಸಾಷ್ಟಾಂಗವಂದನೆಗಳ ಮೂಲಕ ಬರಮಾಡಿಕೊಂಡನು. ಸೀತೆಯು ಚಿನ್ನದ ಕಲಶದಲ್ಲಿ ನೀರನ್ನು ತಂದು ರತ್ನಸಿಂಹಾಸನದಲ್ಲಿ ಕುಳಿತ ವಸಿಷ್ಠರ ಪಾದಗಳನ್ನು ತೊಳೆಯಲು ರಾಮನ ಕೈಗಿತ್ತಳು. ಪಾದ ತೊಳೆದು ಎಲ್ಲ ಉಪಚಾರಗಳಾದ ಬಳಿಕ ವಸಿಷ್ಠರು ತಾನು ಬಂದ ಪಟ್ಟಾಭಿಷೇಕದ ವಿಷಯವನ್ನು ರಾಮನಿಗೆ ಹೇಳಿದರು. ರಾಮನಲ್ಲಿ- ನೀನು ದೇವತೆಗಳ ಕಾರ್ಯಸಿದ್ಧಿಗಾಗಿ ಅವತರಿಸಿರುವ ಮಹಾವಿಷ್ಣುವೆಂಬುದನ್ನು ನಾನು ಬಲ್ಲೆ. ಆದರೆ ಯಾರಿಗೂ ಹೇಳಲಾರೆ. ಇಲ್ಲಿ ತೋರಿಕೆಗಾಗಿರುವ ನನ್ನ-ನಿನ್ನ ಗುರು-ಶಿಷ್ಯ ಸಂಬಂಧದಿಂದ ದಶರಥನ ಅಪೇಕ್ಷೆಯಂತೆ ಬಂದಿದ್ದೇನೆ. ನಾಳೆ ದಶರಥ ಮಹಾರಾಜನು ನಿನಗೆ ಪಟ್ಟಾಭಿಷೇಕ ಮಾಡಲಿದ್ದಾನೆ. ಇಂದು ನೀನು ವಿಧಿಪೂರ್ವಕವಾಗಿ ಸೀತೆಯೊಡನೆ ಉಪವಾಸವಿದ್ದು, ಜಿತೇಂದ್ರಿಯನಾಗಿದ್ದುಕೊಂಡು, ಶುದ್ಧವಾದ ನೆಲದ ಮೇಲೆ ಮಲಗಿರಬೇಕು. ಈಗ ನಾನು ರಾಜನ ಬಳಿಗೆ ಹೋಗುತ್ತೇನೆ.ನೀನು ನಾಳೆ ಹೋಗುವಿಯಂತೆ- ಎಂದು ಹೇಳಿ ಹೊರಟುಹೋದರು. ತನ್ನೊಡನಿದ್ದ ಲಕ್ಷ್ಮಣನಿಗೆ- ಹೆಸರಿಗೆ ನನಗೆ ಯುವರಾಜಪಟ್ಟಾಭಿಷೇಕ, ಅದರ ಎಲ್ಲ ಕಾರ್ಯಗಳನ್ನು ನೀನೇ ಮಾಡುವವನಾಗು- ಎಂದು ನಸುನಗುತ್ತಾ ಹೇಳಿದ. ಪಟ್ಟಾಭಿಷೇಕದ ವಿಚಾರವು ಕೈಕೇಯಿಯನ್ನುಳಿದು ಎಲ್ಲರಿಗೂ ಸಂದೇಶವಾಹಕರ ಮೂಲಕ ತಿಳಿಸಲಾಯಿತು.
ಪಟ್ಟಾಭಿಷೇಕದ ಸುದ್ದಿ ತಿಳಿದ ದೇವತೆಗಳು ಗಾಬರಿಯಿಂದ ಸರಸ್ವತಿಯ ಮೊರೆಹೊಕ್ಕರು. ಆಕೆಯಲ್ಲಿ- ರಾಮನು ಪಟ್ಟಾಭಿಷೇಕಗೊಂಡು ಅರಮನೆಯಲ್ಲೇ ಇರುವಂತಾದರೆ ಅವನ ಅವತಾರದ ಉದ್ದೇಶವೇ ಈಡೇರದು, ದುಷ್ಟರ ಸಂಹಾರವಾಗದು. ಆದ್ದರಿಂದ ನೀನು ಈಗಲೇ ದಶರಥನಲ್ಲಿಗೆ ಹೋಗಿ ಪಟ್ಟಾಭಿಷೇಕಕ್ಕೆ ಅಡ್ಡಿಯುಂಟುಮಾಡು. ಮೊದಲು ಮಂಥರೆಯಲ್ಲಿ, ಆಮೇಲೆ ಕೈಕೇಯಿಯಲ್ಲಿ ಪ್ರವೇಶಿಸಿ ಅವರು ವಿಘ್ನ ಉಂಟುಮಾಡುವಂತೆ ಮಾಡಿ; ಇಲ್ಲಿಗೆ ಬಂದುಬಿಡು- ಎಂದು ಪ್ರಾರ್ಥಿಸಿದರು. ಸರಸ್ವತಿಯು ಅದಕ್ಕೊಪ್ಪಿ; ಅಯೋಧ್ಯೆಗೆ ಬಂದು; ಅವರಿಬ್ಬರನ್ನು ಪ್ರವೇಶಿಸಿದಳು.
ಅಯೋಧ್ಯೆಗೆ ಅಯೋಧ್ಯೆಯೇ ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಂಭ್ರಮ-ಸಡಗರಗಳಿಂದ ತಯಾರಾಗುತ್ತಿತ್ತು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಸಿದ್ಧತೆಗಳು ಲಗುಬಗೆಯಿಂದ ಆದರೆ ಪರಿಪೂರ್ಣವಾಗಿ ಸಿದ್ಧಗೊಂಡವು. ಕೌಸಲ್ಯೆಯು ಮಗನ ಉನ್ನತಿಗಾಗಿ ವ್ರತ-ಉಪಾಸನೆ-ಪೂಜೆ-ಧ್ಯಾನಗಳಲ್ಲಿ ತಲ್ಲೀನಳಾದಳು. ಎಲ್ಲವೂ ಧಿಡೀರ್-ಧಿಡೀರ್!! ನಿರ್ಧಾರವೂ ಧಿಡೀರ್, ಸಿದ್ಧತೆಗಳೂ ಧಿಡೀರ್!! ಅವಸರವೇ ಅಪಘಾತಕ್ಕೆ ಕಾರಣ! ಇಲ್ಲಿ ಪಟ್ಟಾಭಿಷೇಕಕ್ಕೆ ಅಡ್ಡಿಯೂ ಧಿಡೀರನೆ ಧುತ್ತೆಂದು ಎದುರಾಯಿತು!
ಸರಸ್ವತಿಯಿಂದ ಪ್ರೇರಿತಳಾದ ವಕ್ರಸುಂದರಿ- ಕೈಕೇಯಿಯ ದಾಸಿ ಮಂಥರೆಯು ಅರಮನೆಯ ಉಪ್ಪರಿಗೆಯನ್ನು ಹತ್ತಿ ನೋಡುತ್ತಾಳೆ- ಎಲ್ಲೆಲ್ಲೂ ಸಡಗರ- ಸಂಭ್ರಮ! ಅಲಂಕಾರ- ಶೃಂಗಾರ! ಕುತೂಹಲ ಹೆಚ್ಚಾಗಿ ಉಪ್ಪರಿಗೆಯಿಂದ ಇಳಿದು ಬೀದಿಗೆ ಬಂದು ಪೌರರಲ್ಲಿ ವಿಚಾರಿಸಿದಾಗ ಶ್ರೀರಾಮನ ಪಟ್ಟಾಭಿಷೇಕದ ಸುದ್ದಿ ತಿಳಿಯಿತು. ಸರಸ್ವತಿಯ ಪ್ರಚೋದನೆ! ಸಿಹಿಯಾಗಬೇಕಾಗಿದ್ದ ಮನಸ್ಸು ಕಹಿಯಾಯಿತು, ಕಹಿಕಹಿಯಾಯಿತು. ತಾನುಂಡ ಕಹಿಯನ್ನು ತಿನ್ನಿಸಲು ಕೈಕೇಯಿಯತ್ತ ಧಾವಿಸಿದಳು. ಶ್ರೀರಾಮನ ಪಟ್ಟಾಭಿಷೇಕದ ಸಿಹಿಸುದ್ದಿ ತಿಳಿದ ಕೈಕೇಯಿಯು ತನ್ನ ಸಂತಸವನ್ನು ಕೊರಳಿನಲ್ಲಿದ್ದ ರತ್ನಹಾರವನ್ನು ತೆಗೆದು ಮಂಥರೆಗೆ ಕೊಡುವ ಮೂಲಕ ವ್ಯಕ್ತಪಡಿಸಿದಳು. ಮಂಥರೆಗೆ ಕೈಕೇಯಿಯ ಪೆದ್ದುತನ ನೋಡಿ ಸಿಟ್ಟುಬಂತು. ಭರತನಿಗೆ ಪಟ್ಟಾಭಿಷೇಕವಾಗದಿದ್ದರೆ ಕೈಕೇಯಿಗೆ ಆಗುವ ನಷ್ಟ-ಅವಮಾನಗಳತ್ತ ಬೊಟ್ಟುಮಾಡಿದಳು. ಕೌಸಲ್ಯೆಯು ಕೈಕೇಯಿಯಿಂದಾದ ಅವಮಾನಕ್ಕೆ ಸೇಡುತೀರಿಸಿಕೊಳ್ಳುವ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಹೇಳಿದಳು. ಭರತನು ಬೀದಿಗೆ ಬೀಳುವ ಸಂಭವವನ್ನು ಒತ್ತುಕೊಟ್ಟು ಹೇಳಿದಳು. ಕೊನೆಗೂ ದೈವೇಚ್ಛೆ ಕೈಗೂಡಿತು. ಕೈಕೇಯಿಯ ಸಿಹಿಮನಸ್ಸು ಮಂಥರೆಯು ಹಿಂಡಿದ ಹುಳಿಯಿಂದಾಗಿ ಕಹಿಯಾಯಿತು. ದೇವಾಸುರರ ಯುದ್ಧದ ಕಾಲದಲ್ಲಿ ಕೈಕೇಯಿಯು ತನ್ನ ಕೈಯನ್ನೇ ಕೀಲಾಗಿಸಿ ರಥಚಕ್ರವು ಕಳಚಿ ಬೀಳದಂತೆ ತಡೆಹಿಡಿದದ್ದನ್ನು ಮಂಥರೆಯು ನೆನಪಿಸಿದಳು.ದಶರಥನು ಆಗ ಕೊಟ್ಟ ಎರಡು ವರಗಳನ್ನು ಅವನಲ್ಲಿ ಕಾದಿರಿಸಿದ್ದನ್ನೂ ನೆನಪಿಗೆ ತಂದಳು. ಈಗ ಅವುಗಳನ್ನು ಬಳಸಿ- ರಾಮನಿಗೆ ನಾಳೆಯಿಂದಲೇ ಹದಿನಾಲ್ಕು ವರ್ಷಗಳ ದಂಡಕಾರಣ್ಯವಾಸ, ಭರತನಿಗೆ ಯುವರಾಜ ಪಟ್ಟಾಭಿಷೇಕ- ಎಂಬ ಎರಡು ವರಗಳಿಗಾಗಿ ದಶರಥನನ್ನು ಆಗ್ರಹಪಡಿಸುವ ಸಲಹೆಯನ್ನು ದಾಸಿ ಮಂಥರೆಯು ರಾಣಿ ಕೈಕೇಯಿಗೆ ಆದೇಶಾತ್ಮಕವಾಗಿ ನೀಡಿದಳು. ದಶರಥನ ನಿರ್ಧಾರವು ಕೈಕೇಯಿಗೆ ವಿಷವಾಗಿ ಕಂಡಿತು,ಮೋಸದಾಟವೆಂದು ತಿಳಿದಳು. ಕೋಪ ಮನೆಮಾಡಿತು. ಪಟ್ಟಾಭಿಷೇಕದ ವಿರುದ್ಧ ಸತ್ಯಾಗ್ರಹವನ್ನು ಹೂಡಲು ಕೋಪಗೃಹವನ್ನು ಹೊಕ್ಕಳು. ದಶರಥನನ್ನು ಮೆಚ್ಚಿಸಲು ಧರಿಸಿದ ವಿಶೇಷ ಉಡುಗೆ-ತೊಡುಗೆಗಳನ್ನು ಕಿತ್ತೆಸೆದು ಬರಿನೆಲದಲ್ಲಿ ಮಲಗಿ, ದಶರಥನ ಬರುವಿಕೆಯನ್ನು ಕಾಯತೊಡಗಿದಳು.
(ಸಶೇಷ...)
- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ