ಹೌದು, 1974ರಲ್ಲಿ ಜಡಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೀಕರ ನೆರೆ ನೇತ್ರಾವತಿ ನದಿಯಲ್ಲಿ ಹರಿದು ಬಂದಿತ್ತು. ಬಂಟ್ವಾಳ, ಪಾಣೆಮಂಗಳೂರು, ಉಪ್ಪಿನಂಗಡಿ ಪೇಟೆಗಳು ಮುಳುಗಿದ್ದವು. ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ತಗ್ಗು ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು. ನೇತ್ರಾವತಿ ನದಿಯ ದಡದಲ್ಲಿದ್ದ ಅನೇಕ ಮನೆಗಳು ನೆರೆಯಲ್ಲಿ ಕೊಚ್ಚಿ ಹೋಗಿದ್ದವು. ಆವತ್ತಿನ ಕಾಲದಲ್ಲಿ ಮಣ್ಣಿಗೋಡೆಗಳಿಂದ ನಿರ್ಮಿಸಿದ್ದ ಸಾವಿರಾರು ಹುಲ್ಲಿನ, ಹಂಚಿನ ಮನೆಗಳು ನೆರೆ ನೀರಿಗೆ ಕರಗಿ ಕುಸಿದು ಬಿದ್ದು ಧರಾಶಾಯಿಯಾಗಿದ್ದವು. ಬತ್ತದ ಕೃಷಿ ನೆರೆ ನೀರಿನಲ್ಲಿ ಮುಳುಗಿ ಬೆಳೆ ಸಂಪೂರ್ಣ ಹಾನಿಯಾಗಿತ್ತು. ಹಲವಾರು ಮನೆಯ ಸೊತ್ತುಗಳು, ಬಟ್ಟೆಬರೆಗಳು, ಪಾತ್ರೆಪಗಡೆಗಳು, ಪೀಠೋಪಕರಣಗಳು, ಮನೆಯ ಮಾಡುಗಳು, ದನಕರುಗಳು ನೆರೆಯಲ್ಲಿ ತೇಲಿಕೊಂಡು ಹೋಗುವುದನ್ನು ನೋಡಿದ ಜನ ಭಯಭೀತರಾಗಿದ್ದರು.
ದೊಡ್ಡ ದೊಡ್ಡ ಮರಗಳು ಬೇರು ಸಮೇತ ನೆರೆಯಲ್ಲಿ ತೇಲಿಕೊಂಡು ಬಂದು ಪಾಣೆಮಂಗಳೂರು ಸೇತುವೆಯಲ್ಲಿ ಸಿಕ್ಕಿಕೊಂಡಿದ್ದವು. ನದಿಯಲ್ಲಿ ತೆಲಾಡುತ್ತಿರುವ ತೆಂಗಿನಕಾಯಿಗಳು, ತೆಂಗಿನ ಮರಗಳು ನೋಡುತ್ತಿದ್ದವರಿಗೆ ಮರುಕ ಹುಟ್ಟಿಸುತ್ತಿತ್ತು. ಅನೇಕರು ಮನೆ ಕಳೆದುಕೊಂಡು ನಿರಾಶ್ರಿತರಾಗಿ ಕಂಗಾಲಾಗಿದ್ದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಕಡೇಶ್ವಾಲ್ಯ ಲಕ್ಷ್ಮೀ ನರಸಿಂಹ, ಸರಪಾಡಿ ಶರಭೇಶ್ವರ, ಪಾಣೆಮಂಗಳೂರು ಭಯಂಕೇಶ್ವರ, ಬಂಟ್ವಾಳ ಮಹಾಲಿಂಗೇಶ್ವರ, ವೆಂಕಟ್ರಮಣ, ನಂದಾವರ ಸೇರಿದಂತೆ ನದಿ ದಡದಲ್ಲಿದ್ದ ಪ್ರಸಿದ್ಧ ದೇವಸ್ಥಾನಗಳು ನೆರೆಯಲ್ಲಿ ಮುಳುಗಿ ಗರ್ಭಗುಡಿಯ ಮುಗುಳಿ ಮಾತ್ರ ಕಾಣುತ್ತಿತ್ತು. ಜನಜೀವನ ಅಸ್ತವ್ಯಸ್ತವಾಗಿತ್ತು.
ಸರಕಾರ, ಆಡಳಿತ ಯಂತ್ರ ಹಗಲಿರುಳೆನ್ನದೆ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ಕಾಲೇಜುಗಳ ಎನ್ನೆಸ್ಸೆಸ್, ಎನ್ಸಿಸಿ ವಿದ್ಯಾರ್ಥಿಗಳು, ಹಲವು ಸೇವಾಸಂಸ್ಥೆಗಳವರು ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅಲ್ಲಲ್ಲಿ ತಾತ್ಕಾಲಿಕ ವಸತಿ ಹಾಗೂ ಗಂಜಿ ಕೇಂದ್ರಗಳನ್ನು ತೆರೆದು ಆಹಾರ ಪೂರೈಸಲಾಗಿತ್ತು. ಆ ಬಳಿಕ ಅನೇಕ ಸಂತ್ರಸ್ಥರಿಗೆ, ಮನೆ ಕಳೆದುಕೊಂಡವರಿಗೆ ಎತ್ತರ ಪ್ರದೇಶಗಳಲ್ಲಿ ಸರಕಾರದಿಂದ ನಿವೇಶನ ನೀಡಿ ಮನೆ ಕಟ್ಟಿ ಕೊಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು, ಪಾಣೆಮಂಗಳೂರಿನಲ್ಲಿ ನೆರೆವಮೋಚನಾ ರಸ್ತೆ ನಿರ್ಮಿಸಲಾಯಿತು. ಈಗಲೂ ಕೂಡಾ ಆ ಭೀಕರ ನೆರೆಯನ್ನು ಕಣ್ಣಾರೆ ಕಂಡ ಆಗ ಯುವಕರಾಗಿದ್ದ ಈಗ ಇರುವ ಹಿರಿಯರ ಬಾಯಲ್ಲಿ "ಎಲ್ಪತ್ತ ನಾಲೆತ್ತ ಮಾರಿ ಬೊಲ್ಲ"ಎಂದು ನೆನಪಿಸಿಕೊಂಡು ಭೀಕರತೆಯನ್ನು ಹೇಳುತ್ತಾರೆ.
ಜುಲೈ 26 ಕ್ಕೆ 74 ರ ಬೊಲ್ಲಕ್ಕೆ 50 ವರ್ಷ ಆಗಲಿದೆ. 74ರ ಜುಲೈ 26 ಶುಕ್ರವಾರವಾಗಿತ್ತು. ಮತ್ತು ಈ ವರ್ಷ ಜುಲೈ 26, 2024 ಕೂಡಾ ಶುಕ್ರವಾರವೇ ಬಂದಿದೆ.
ಈಗಿನ ಹಿರಿಯರು (70 ವರ್ಷ ದಾಟಿದವರು) ತಮ್ಮ ಬಾಲ್ಯದಲ್ಲಿ ಆಗಿನ ಹಿರಿಯರು ಹೇಳುತ್ತಿದ್ದ ಮಾತುಗಳನ್ನು ನೆನಪಿಸಿಕೊಂಡು ನೂರು ವರ್ಷಗಳ ಹಿಂದೆ (1924ರಲ್ಲೂ) ಇದೇ ರೀತಿ ಮಹಾಮಳೆ ಬಂದು ವ್ಯಾಪಕ ನಾಶ-ನಷ್ಟ ಉಂಟಾಗಿತ್ತು ಎನ್ನುತ್ತಾರೆ. ಈ ಕಾಲಘಟ್ಟಗಳನ್ನು ಸ್ವಲ್ಪ ವಿಶ್ಲೇಷಿಸಿದರೆ, ಪ್ರತಿ 50 ವರ್ಷಕ್ಕೊಮ್ಮೆ ಇಂತಹ ಪ್ರಾಕೃತಿಕ ಮಳೆ ವೈಪರೀತ್ಯಗಳು ಮರುಕಳಿಸುತ್ತಿವೆ ಎಂದು ಹೇಳಬಹುದು.
ಈ ವರ್ಷ ನೇತ್ರಾವತಿ ನದಿಯಲ್ಲಿ ಕೆಲವು ದಿನಗಳಿಂದ ರಾಜ್ಯಾದ್ಯಂತ ಧಾರಕಾರ ಮಳೆ ಬಂದರೂ ನೇತ್ರಾವತಿ ನದಿಯಿಂದ ನೆರೆ ಭೀತಿ ಇರಲಿಲ್ಲ. ಉಕ್ಕಿ ಹರಿದು ನದಿಯಲ್ಲಿ ನೀರಿನ ಅಪಾಯದ ಮಟ್ಟ ತಲಪಿರಲಿಲ್ಲ. ಹವಾಮಾನ ಇಲಾಖೆಯಿಂದ ಹಲವು ಬಾರಿ ರೆಡ್ ಅಲರ್ಟ್ ಘೋಷಣೆಯಾಗಿದ್ದರೂ ನದಿಯಲ್ಲಿ ವಿಶೇಷ ನೆರೆ ಬಂದಿರುವುದಿಲ್ಲ. ಮಳೆಯಿಂದ ಹಲವೆಡೆ ಮನೆಗಳಿಗೆ ದರೆಗಳು ಜರಿದು ಬಿದ್ದು ಹಲವಾರು ಅನಾಹುತಗಳಾಗಿವೆ. ಮರಗಳು ಮನೆಗಳ ಮೇಲೆ ಮರಗಳು ಬಿದ್ದ ಘಟನೆಗಳೂ ನಡೆದಿದ್ದು ರಸ್ತೆಗಳಿಗೆ ಮರಗಳು ಬಿದ್ದುಸಂಚಾರಕ್ಕೆ ಹಲವುಕಡೆ ಅಡ್ಡಿಯುಂಟಾಯಿತು. ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಇತ್ತೀಚೆಗೆ ಕಲ್ಲಡ್ಕ ರಸ್ತೆಯಲ್ಲಿ ಕೃತಕ ನೆರೆಹರಿದು ದೊಡ್ಡ ಸುದ್ದಿಯಾಯಿತು. ಆಟಿ ತಿಂಗಳು ಆರಂಭವಾಯಿತು. ಕರಾವಳಿಯಲ್ಲಿ ಇನ್ನೂ ನೀರಿನ ಒರತೆ ಸರಿಯಾಗಿ ಆಗಿಲ್ಲ, ಬೇಕಾದಷ್ಟು ಮಳೆಯಾಗಿಲ್ಲವೆಂದು ಹೇಳುತ್ತಾರೆ ರೈತರು.
ಶಾಲಾ ಕಾಲೇಜುಗಳಿಗೆ ನಿರಂತರ ಐದಾರು ದಿನಗಳಿಂದ ಮುಂಜಾಗರೂಕತಾ ಕ್ರಮವಾಗಿ ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿದ್ದಾರೆ. ಮಳೆ ಸುರಿಯುತ್ತಲೇ ಇದೆ. ದೇಶಾದ್ಯಂತ ಮಾನ್ಸೂನ್ ಟ್ರಫ್ ಪರಿಣಾಮದಿಂದಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಆರ್ಭಟ, ನೆರೆಯ ಹಾವಳಿ ಅನಾಹುತಗಳು ನಡೆಯುತ್ತಲೇ ಇದೆ. ಪಶ್ಚಿಮ ಸಮುದ್ರದಿಂದ ಬೀಸುತ್ತಿರುವ ಮಾರುತಗಳು ದಕ್ಷಿಣ ಭಾರತದೆಡೆಗೆ ಮುಖಮಾಡಿವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೂ ಸುರಿಯುವ ಮಳೆಯ ಭೀತಿ ಎದುರಾಗಿದೆ.
ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಉಗಮ ಸ್ಥಾನಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಶಿರಾಡಿ ಘಾಟ್ನಲ್ಲಿ ಬೆಟ್ಟಗಳು ರಾಷ್ಟ್ರೀಯ ಹೆದ್ದಾರಿಗೆ ಜಾರುತ್ತಿವೆ. ರಾಜ್ಯಾದ್ಯಂತ ಎಲ್ಲಾ ನದಿಗಳು ಉಕ್ಕಿಹರಿದು ಎಲ್ಲೆಡೆ ವರುಣಾವತಾರ ಕಾಣುತ್ತಿದೆ. ನೇತ್ರಾವತಿ ನದಿಯ ನೀರಿನ ಮಟ್ಟ 8.6 ಮೀಟರ್ ನಲ್ಲಿದ್ದು ಅಪಾಯದ ಮಟ್ಟ ತಲಪಿದೆ. ತಗ್ಗು ಪ್ರದೇಶಗಳಲ್ಲಿ ನೀರು ಆವರಿಸಿಕೊಂಡಿದೆ. ನೆರೆ ಏರುವ ಸಾಧ್ಯತೆ. ಈಗಾಗಲೇ ಉಂಟಾಗಿರುವ ನೆರೆಯ ಅನಾಹುತ ನೋಡಿದಾಗ ಜುಲೈ ತಿಂಗಳಲ್ಲಿ ನೇತ್ರಾವತಿಯಲ್ಲಿ ನೆರೆ ಬರುವ ಸಾಧ್ಯತೆಯಿದೆ. ಭೀಕರ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತಿಳಿಸಿದ್ದು ಎಚ್ಚರಿಕೆ ನೀಡಿದೆ.
- ಜಯಾನಂದ ಪೆರಾಜೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ