ಖಾಸಗಿ ವಲಯದ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಅನುಷ್ಠಾನದ ಕುರಿತಾಗಿ ಕರ್ನಾಟಕ ಸರ್ಕಾರ ತೆಗೆದುಕೊಳ್ಳುವ ನಿಣ೯ಯ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಹುಟ್ಥಿ ಬೆಳೆದು ಬೇರೆ ಬೇರೆ ರಾಜ್ಯಗಳಲ್ಲಿ ಕೆಲಸ ಹುಡುಕಿಕೊಂಡು ಹೇೂಗುವವರಿಗೆ ಮತ್ತು ಉದ್ಯೋಗದಲ್ಲಿರುವ ಲಕ್ಷಾಂತರ ಮಂದಿಯ ಬದುಕಿನಮೇಲೆ ಅತಿ ದೊಡ್ಧ ಪರಿಣಾಮ ಬೀರಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಇಂದಿನ ರಾಜ್ಯ ಸರ್ಕಾರ ಜನರನ್ನು ತಾತ್ಕಾಲಿಕವಾಗಿ ಖುಷಿಪಡಿಸುವ ದೃಷ್ಟಿಯಿಂದ ಈ ಮೀಸಲಾತಿ ತರಲು ಮುಂದಾಗಿರಬಹುದು. ಆದರೆ ಮುಂದೆ ಇದರ ಪರಿಣಾಮದ ಬಗ್ಗೆಯೂ ಆಲೇೂಚನೆ ಮಾಡಿದೆಯಾ ಅನ್ನುವುದು ನಮ್ಮ ಪ್ರಶ್ನೆ. ಈ ರೀತಿಯ ಮೀಸಲಾತಿ ಭಾರತದ ಒಕ್ಕೂಟ ವ್ಯವಸ್ಥೆಗೂ ಮಾರಕ ಮಾತ್ರವಲ್ಲ ಸಂವಿಧಾನ ಬಾಹಿರವೂ ಹೌದು.
ಇಂದು ಕರ್ನಾಟಕ ಸರ್ಕಾರ ರಾಜ್ಯದ ಜನರನ್ನು ತಾತ್ಕಾಲಿಕವಾಗಿ ಖುಷಿ ಪಡಿಸಲು ವಿಧೇಯಕ ಮಂಡಿಸಿರಬಹುದು. ನಾಳೆ ಇದೇ ರೀತಿಯಲ್ಲಿ ವಿಧೇಯಕವನ್ನು ಬೇರೆ ಬೇರೆ ರಾಜ್ಯಗಳಲ್ಲಿಯೂ ಮಂಡಿಸಲು ಮುಂದಾದರೆ ಆ ರಾಜ್ಯಗಳಲ್ಲಿ ಬದುಕು ಕಟ್ಟಿಕೊಂಡಿರುವ ನಮ್ಮ ಜನರ ಪಾಡು ಏನಾಗ ಬಹುದು ಅನ್ನುವ ಗಂಭೀರತೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಆಲೇೂಚನೆ ಮಾಡಿದೆಯಾ?
ಬೇರೆ ರಾಜ್ಯಗಳಲ್ಲಿ ಖಾಸಗಿ ವಲಯದಲ್ಲಿ ದುಡಿಯುತ್ತಿರುವರಿಗೆ ಕರ್ನಾಟಕ ಸರ್ಕಾರಕ್ಕೆ ಉದ್ಯೋಗ ನೀಡುವ ಸಾಮರ್ಥ್ಯ ಇದೆಯಾ? ನಾವು ಮಾತ್ರ ಬುದ್ಧಿವಂತರು ಅಂದು ತಿಳಿದುಕೊಳ್ಳುವುದು ಮೂರ್ಖತನ. ಬೇರೆಯವರು ಇದೇ ಬುದ್ಧಿವಂತಿಕೆ ಪ್ರದರ್ಶನ ಮಾಡಿದರೆ ಅವರನ್ನು ಪ್ರಶ್ನೆ ಮಾಡುವ ನೈತಿಕತೆ ನಮಗೆ ಇದೆಯಾ? ಭಾರತ ಒಂದು ಒಕ್ಕೂಟ ವ್ಯವಸ್ಥೆ ಇದಕ್ಕೆ ಚ್ಯುತಿ ತರುವ ಯಾವುದೇ ನಿರ್ಣಯ ಯಾವುದೇ ಸರಕಾರ ಮಾಡಿದರೂ ಅದು ಖಂಡಿತವಾಗಿಯೂ ಸಂವಿಧಾನ ವಿರೇೂಧಿ ಅನ್ನಿಸುತ್ತದೆ.
ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂತಹ ಅಪಾಯಕಾರಿ ಪ್ರಾದೇಶಿಕವಾದ ನಿರ್ಣಯ ತೆಗೆದುಕೊಳ್ಳುವುದು ಖೇದಕರ. ಸರ್ಕಾರಿ ಉದ್ಯೋಗದಲ್ಲಿ ಬೇಕಾದರೆ ಇಂತಹ ನಿರ್ಣಯ ತೆಗೆದುಕೊಳ್ಳಲಿ. ಜನರ ಮತ್ತು ಆಡಳಿತದ ನಡುವಿನ ಭಾಷಾ ಸಂಬಂಧದ ದೃಷ್ಟಿಯಿಂದ ಈ ರೀತಿಯಲ್ಲಿ ಪ್ರಾದೇಶಿಕ ಆರ್ಹತೆ ನಿಗದಿ ಪಡಿಸಬೇಕಾದ ಅನಿವಾರ್ಯತೆ ಇದೆ. ಅದೂ ಕೂಡಾ ಕೆಲವೊಂದು ಮಿತಿಯ ಆಧಾರದಲ್ಲಿಯೇ ಒಪ್ಪಿಗೆ ಸೂಚಿಸಲಾಗಿದೆ. ಇದು ಮುಂದುವರಿದರೆ ಭಾರತದ ಒಕ್ಕೂಟದ ವ್ಯವಸ್ಥೆಗೆ ಅತಿ ದೊಡ್ಧ ಸವಾಲಾಗಬಹುದು. ಜೊತೆಗೆ ಬಹು ಮುಖ್ಯವಾಗಿ ಮಲ್ಟಿ ನ್ಯಾಶನಲ್ ಕಂಪನಿಗಳು ತಮಗೆ ಬೇಕಾಗುವ ಪ್ರತಿಭಾವಂತ ಅಭ್ಯರ್ಥಿಗಳ ಆಯ್ಕೆಗೂ ಈ ವಿಧೇಯಕ ತಡೆ ಒಡ್ಧಬಹುದು. ಇದರಿಂದಾಗಿ ಐ.ಟಿ ಹಬ್ ಅನ್ನಿಸಿಕೊಂಡ ಬೆಂಗಳೂರಿನ ಪರಿಸ್ಥಿತಿ ಎಲ್ಲಿಗೆ ಬರ ಬಹುದು. ಪ್ರತಿಷ್ಠಿತ ಕಂಪನಿಗಳು ಬೇರೆ ರಾಜ್ಯಗಳನ್ನು ಹುಡುಕಿಕೊಂಡು ಹೇೂದರೂ ಆಶ್ಚರ್ಯ ಪಡಬೇಕಾಗಿಲ್ಲ.
ರಾಜ್ಯದಲ್ಲಿ ನಮ್ಮ ಪರಿಸ್ಥಿತಿ ಹೇಗಿದೆ ಅಂದರೆ ಮನೆಗೆಲಸದಿಂದ ಹಿಡಿದು ಕೃಷಿ ಕೆಲಸದ ತನಕ; ಕ್ಷೌರದಂಗಡಿಯಿಂದ ಹಿಡಿದು ಹೊಟೇಲಂಗಡಿ ತನಕ, ಗೂಡಂಗಡಿಯಿಂದ ಹಿಡಿದು ಮಲ್ಟಿ ಸ್ಟೇೂರ್ ಮಹಲ್ ತನಕ ಉತ್ತರ ಭಾರತದ ಕಾರ್ಮಿಕರನ್ನೇ ನಂಬಿ ಬದುಕಬೇಕಾದ ಪರಿಸ್ಥಿತಿ ನಮ್ಮದಾಗಿರುವ ಕಾಲ ಘಟ್ಟದಲ್ಲಿ ನಾವಿರುವಾಗ ನಮ್ಮ ಸಿದ್ದರಾಮಯ್ಯ ಸರ್ಕಾರ ಮಾತ್ರ ಖಾಸಗಿ ವಲಯದಲ್ಲಿ ಮೀಸಲಾತಿ ಬಗ್ಗೆ ವಿಧೇಯಕ ಮಂಡನೆಯ ಬಗ್ಗೆ ಕನಸು ಕಾಣುತ್ತಿದ್ದಾರೆ.
ಮೊದಲು ರಾಜ್ಯ ವಾಸ್ತವಿಕತೆಯ ಕುರಿತಾಗಿ ಗಮನ ಹರಿಸಲಿ. ಅನಂತರ ಮೀಸಲಾತಿ ಕುರಿತಾಗಿ ಚಿಂತನೆ ನಡೆಸುವುದು ಉತ್ತಮ. ಕರ್ನಾಟಕ ಸರ್ಕಾರ ಮಾಡಬೇಕಾದ ಮೊದಲ ಕೆಲಸವೆಂದರೆ ಸರಕಾರದ ವಿವಿಧ ಇಲಾಖೆಗಳಲ್ಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಜನರನ್ನು ಸಂತೃಪ್ತಿ ಪಡಿಸುವ ಕೆಲಸಕ್ಕೆ ಮುಂದಾಗಲಿ. ಈ ವಿಧೇಯಕ ಕೂಡಲೇ ಕೈಬಿಡುವುದು ಸೌಖ್ಯ ಅನ್ನುವುದು ನಮ್ಮೆಲ್ಲರ ಅನಿಸಿಕೆ.
- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ