ಮಳೆಗಾಲ ಎಂಬುದು ಒಂದು ಋತುವಾದರೂ ಅದೊಂದು ಅದ್ಭುತ ಅನುಭವ. ಮೂರು ಋತುಗಳು ವಿಶೇಷವಾಗಿದ್ದರೂ ಮಳೆಗಾಲ ಮತ್ತಷ್ಟು ವಿಶೇಷವೆಂದರೆ ತಪ್ಪಾಗಲಾರದು.
ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಮಳೆ ಬರುವ ಕಾಲವಾಗಿದೆ. ಆದರೆ ಇಂದು ಕಾಲವೇ ಬದಲಾದಂತೆ ಆಗುತ್ತಿದೆ. ಯಾವಾಗಲೋ ಮಳೆ ಯಾವಾಗಲೋ ಬಿಸಿಲು. ಮಳೆಗಾಲ ಶುರುವಾದರೆ ಸಾಕು ನಮಗೇನೊ ಸಂಭ್ರಮ. ಕೃಷಿಕರು ತಮ್ಮ ಕೃಷಿ ಕೆಲಸಗಳನ್ನು ಈ ಸಮಯದಲ್ಲಿ ಪ್ರಾರಂಭಿಸುತ್ತಾರೆ. ಯುವಕರು ಚಾರಣಕ್ಕೆ ಹೋಗುತ್ತಾರೆ. ಕೆಲವು ಜನರು ಜುಳು ಜುಳು ಹರಿಯುವ ಜಲಪಾತವನ್ನು ಕಾಣಲು ಹೋಗುತ್ತಾರೆ. ಇನ್ನು ಕೆಲವು ಯುವ ಜನರು ನದಿ ಅಥವಾ ಕೆರೆಯಂತಹ ನೀರಿನ ಮೂಲಗಳಲ್ಲಿ ಈಜಾಡಲು ತೆರಳುತ್ತಾರೆ. ಅದರಲ್ಲಿ ಮೀನು ಹಿಡಿಯಲು ಮುಂದಾದರೆ, ಇನ್ನು ಸ್ವಲ್ಪ ಜನರಿಗೆ ಮಳೆ ಎಂದರೆ ಅದೇನೋ ಕಿರಿ ಕಿರಿ. ಮುಖ್ಯವಾಗಿ ಕಾಣುವುದಾದರೆ ಹೊರಗೆ ಹೋಗಿ ದುಡಿಯುವ ಜನರಿಗೆ, ಶಾಲಾ ಮಕ್ಕಳಿಗೆ, ಅಮ್ಮಂದಿರಿಗೆ, ಕಾರ್ಮಿಕರಿಗೆ, ಪ್ರಾಣಿಗಳಿಗೆಲ್ಲ ಮಳೆ ಎಂದರೆ ಕಷ್ಟ. ಹಲವಾರು ಜನರಿಗೆ ಮಳೆ ಎಂದರೆ ಇಷ್ಟವಾದರೂ ಅನೇಕ ಪರಿಸ್ಥಿತಿಯಲ್ಲಿ ಮಳೆ ಎಂದರೆ ಕಷ್ಟವೇ ಎಂದು ತೋರುತ್ತದೆ.
ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಮಳೆಗಾಲದ ಸಮಯದಲ್ಲಿ ಅವರು ಕೃಷಿ ಭೂಮಿಯಲ್ಲಿ ಭತ್ತ ಬಿತ್ತುವ ಕೆಲಸ ಮಾಡುತ್ತಿದ್ದರು. ಹೆಂಗಸರು ಹಳ್ಳಿಯ ಜಾನಪದ ಶೈಲಿಯ ಹಾಡು ಹೇಳುತ್ತಾ ಗದ್ದೆಯಲ್ಲಿ ಸಸಿ ನೆಡುತ್ತಿದ್ದರು. ರೈತರು ಗದ್ದೆಯ ಬದಿಯಿಂದ ನೀರು ಹಾದು ಹೋಗಲು ಪುಟ್ಟ ಪುಟ್ಟ ಕಾಲುವೆಗಳನ್ನು ನಿರ್ಮಿಸುತ್ತಿದ್ದರು. ಹಾಗೆಯೇ ತಮ್ಮ ಮನೆಯಂಗಳದಲ್ಲಿ ತರಕಾರಿ ಬೆಳೆಸುತ್ತಿದ್ದರು. ಈ ಋತುವಿನಲ್ಲಿ ಬಿಸಿ ಪಾನೀಯ, ಬಿಸಿ ತಿಂಡಿ ತಿನಿಸುಗಳನ್ನು ಸೇವಿಸುತ್ತಿದ್ದರು. ಮಳೆಗಾಲದಲ್ಲಿ ಸಿಗುವಂತಹ ನೈಸರ್ಗಿಕ ಸಂಪನ್ಮೂಲಗಳಿಂದ ವಿಶೇಷ ತಿನಿಸುಗಳನ್ನು ತಯಾರಿಸುತ್ತಿದ್ದರು. ಅಜ್ಜ ಅಜ್ಜಿ ಮಕ್ಕಳಿಗೆ ಕಥೆ ಹೇಳುತ್ತಿದ್ದರು. ಕುಟುಂಬದ ಹಿರಿಯ ಕಿರಿಯ ಸದಸ್ಯರೆಲ್ಲ ಸೇರಿ ಚೆನ್ನೆಮಣೆಯಂತಹ ಆಟಗಳನ್ನು ಆಡುತ್ತಿದ್ದರು. ಆದರೆ ಇಂದು ಇಂತಹ ಸುಂದರವಾದ ದೃಶ್ಯಗಳನ್ನೆಲ್ಲಾ ಕಾಣುವುದು ಬಹಳ ಅಪರೂಪ. ಎಲ್ಲಾದರೂ ಇಂತಹ ಸುಂದರವಾದ ದೃಶ್ಯ ಕಣ್ಣಿಗೆ ಕಾಣ ಸಿಕ್ಕರು ಅದು ಕೆಲವೊಂದು ಗ್ರಾಮೀಣ ಭಾಗಗಳಲ್ಲಿ ಮಾತ್ರ. ಇಂದಿನ ಮಕ್ಕಳಿಗೆ ನಮಗೆ ಅನ್ನ ಹೇಗೆ ದೊರಕುತ್ತದೆ? ಅದು ಎಲ್ಲಿ ಬೆಳೆಯುತ್ತಾರೆ? ಅದರ ಹಿಂದೆ ಒಬ್ಬ ರೈತನಾದವನ ಶ್ರಮ ಎಷ್ಟರ ಮಟ್ಟಿಗೆ ಇರುತ್ತದೆ? ಇದು ಯಾವುದರ ಕುರಿತು ಮಕ್ಕಳಿಗೆ ತಿಳಿದಿರುವುದಿಲ್ಲ. ಜಗತ್ತು ಆಧುನಿಕ ತಂತ್ರಜ್ಞಾನಕ್ಕೆ ಒಳಪಡುತ್ತಾ ಹೋದಂತೆ ಮಕ್ಕಳಿಗೆ ಇಂತಹ ಸೂಕ್ಷ್ಮ ಹಾಗೂ ಮೌಲ್ಯಯುತ ವಿಚಾರಗಳ ಕುರಿತು ತಿಳಿಯುವುದು ಬಹಳ ವಿರಳ.
ನಮ್ಮ ಬಾಲ್ಯದಲ್ಲಿ ಮಳೆಗಾಲದಲ್ಲಿ ನಾವು ಪೇಪರ್ ದೋಣಿಯನ್ನು ಮಾಡಿ ಸಣ್ಣಪುಟ್ಟ ಕಾಲುವೆ, ತೋಡು ಇಂತಹ ನೀರಿನ ಮೂಲಗಳಲ್ಲಿ ಬಿಡುತ್ತಾ ಖುಷಿಪಡುತ್ತಿದ್ದೆವು. ದಾರಿಯಲ್ಲಿ ಓಡಾಡುವಾಗ ನಿಂತ ನೀರಿನಲ್ಲಿ ಕಾಲುಗಳನ್ನು ಮಳುಗಿಸಿ ಅದರಲ್ಲಿ ಆಡುತ್ತಿದ್ದೆವು. ನಮ್ಮ ತಂದೆ, ಅಥವಾ ತಾಯಿ ಇಲ್ಲದಿದ್ದರೆ ಅಜ್ಜ /ಅಜ್ಜಿ ನಮ್ಮನ್ನು ಶಾಲೆಯಿಂದ ಕರೆ ತರಲು ಶಾಲೆಯ ಹತ್ತಿರ ಬಂದು ಕಾಯುತ್ತಿದ್ದರು. ನಾವು ಕೆಸರು ಮಣ್ಣು ಎಂಬುದನ್ನು ಮರೆತು ಮಳೆಯನ್ನು ಸಂಭ್ರಮದಿಂದ ಕಳೆಯುತ್ತಿದ್ದೆವು. ನಮ್ಮ ಬಾಲ್ಯದ ಮಳೆಗಾಲಯೆಂದರೆ ಏನೋ ಸಂತೋಷ ಅದರಲ್ಲಿ ಅಡಗಿತ್ತು. ಆದರೆ ಇಂದಿನ ಮಕ್ಕಳು ಇಂತಹ ಖುಷಿಯ ಕ್ಷಣಗಳನ್ನು ಅನುಭವಿಸಿರುವುದು ಅಸಾಧ್ಯ. ಅವರು ಪೇಪರ್ ದೋಣಿಯನ್ನು ಶಾಲೆಯಲ್ಲಿ ಶಿಕ್ಷಕರು ನೀಡುವ ಚಟುವಟಿಕೆಯಲ್ಲಿ ಮಾಡಿರಬಹುದು. ಇನ್ನು ಮಳೆ ನೀರಿನಲ್ಲಿ ಆಡುವುದು ಅದು ಕನಸಿನ ಮಾತು. ಇಂದು ನಾವು ಕೆಲವೆಡೆ ಕಾಣುವುದಾದರೆ ಪೋಷಕರು ತಮ್ಮ ಮಕ್ಕಳನ್ನು ಶಾಲಾ ವಾಹನದಲ್ಲಿ ಅಥವಾ ಆಟೋ, ವ್ಯಾನ್ ಮುಂತಾದವುಗಳಲ್ಲಿ ಕಳುಹಿಸುತ್ತಾರೆ. ಹೀಗಿರುವಾಗ ಅವರ ಬಾಲ್ಯ ನಮ್ಮ ಬಾಲ್ಯದಂತೆ ಸಂಭ್ರಮದಿಂದಿರುವುದು ಅಸಾಧ್ಯ.
ಇಂದಿನ ಕಾಲದ ಮಳೆಗಾಲಯೆಂದರೆ ಖುಷಿಯೊಂದಿಗೆ ಅಪಾಯವು ಕಣ್ಣಮುಂದೆ ಸುಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ಆದ ಅವಘಡಗಳೆಲ್ಲವನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಅಂತೆಯೇ ದೈನಂದಿನ ಸುದ್ದಿ ಸಮಾಚಾರಗಳಲ್ಲಿ ವೀಕ್ಷಿಸಿರುತ್ತೇವೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಳೆಗಾಲದಲ್ಲಿ ಸಂಭವಿಸಿದ ಅವಘಡಗಳಿಗೆ ಅದೆಷ್ಟೋ ಜನ ಬಲಿಯಾಗಿದ್ದಾರೆ. ಈ ಸಮಯದಲ್ಲಿ ನಾವು ಅದೆಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲದು.
ಮಳೆಗಾಲದಲ್ಲಿ ನಾವು ಪಾಲಿಸಬೇಕಾದ ಕ್ರಮಗಳು
* ಮಳೆಗಾಲದ ಸಮಯದಲ್ಲಿ ಅಪಾಯಕಾರಿ ಅಥವಾ ಎತ್ತರದ ಪ್ರದೇಶಗಳಲ್ಲಿ ಚಾರಣಕ್ಕೆ ಹೋಗುವುದನ್ನು ನಿಲ್ಲಿಸಬೇಕು.
* ಮಳೆಗಾಲದಲ್ಲಿ ಜಲಪಾತವನ್ನು ನೋಡಲು ಈಜಾಡಲು ಹೋಗಬಾರದು. ನದಿಯಲ್ಲಿ, ಕೆರೆಯಲ್ಲಿ ಮೀನು ಹಿಡಿಯಲು ಹೋಗುವುದನ್ನು ತಪ್ಪಿಸಬೇಕು.
* ಎತ್ತರದ ಮಣ್ಣಿನ ಪ್ರದೇಶಕ್ಕೆ ಹೋಗುವುದು ಅಥವಾ ಎತ್ತರದ ಮಣ್ಣಿನ ಪ್ರದೇಶದ ಕೆಳಗೆ ನಿಲ್ಲುವುದು ಮಾಡಬಾರದು.
* ಮಳೆಗಾಲದಲ್ಲಿ ತಡೆಗೋಡೆಗಳ ಬಳಿ ನಿಲ್ಲುವುದು, ಕೂರುವುದು ಇದನ್ನೆಲ್ಲ ಮಾಡಬಾರದು.
* ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದರೆ ಅವುಗಳ ಪರಿಣಿತರ ಸಹಾಯವಿಲ್ಲದೇ ಅದನ್ನು ಸ್ವಯಂ ಜೋಡನಾ ಕಾರ್ಯಕ್ಕೆ ಕೈ ಹಾಕಬಾರದು. ವಿದ್ಯುತ್ ತಂತಿಗಳು ಜಾರಿ ಅಥವಾ ತುಂಡಾಗಿ ಬಿದ್ದಿದ್ದರೆ ಅವುಗಳನ್ನು ತುಳಿಯಬಾರದು. ವಿದ್ಯುತ್ ತಂತಿಗಳು ಹೆಚ್ಚಿರುವ ಸ್ಥಳಗಳಲ್ಲಿ ಸಂಚರಿಸಬಾರದು. ವಿದ್ಯುತ್ ಟ್ರಾನ್ಸಫಾರ್ಮರ್ ನ ಸಮೀಪ ಹೋಗಬಾರದು. ವಿದ್ಯುತ್ ಕಂಬಗಳ ಬಳಿ ನಿಲ್ಲಬಾರದು. ಒಂದು ವೇಳೆ ಅನಿವಾರ್ಯವಾಗಿ ಓಡಾಡುವಂತಹ ಸಂದರ್ಭದಲ್ಲಿ ಸರಿಯಾಗಿ ನೋಡಿಕೊಂಡು ಓಡಾಡಬೇಕು.
* ಈ ಸಮಯದಲ್ಲಿ ರಾತ್ರಿ ವೇಳೆ ವಾಹನದಲ್ಲಿ ಸಂಚರಿಸುವಾಗ ಅಥವಾ ಓಡಾಡುವಾಗ ಜಾಗರೂಕತೆಯಿಂದ ಸಂಚರಿಸಬೇಕು. ರಸ್ತೆಗಳು ಸರಿಯಾಗಿರದಿದ್ದಲ್ಲಿ ಅವನ್ನು ಸರಿಪಡಿಸಬೇಕು.
* ಮಳೆ, ಗುಡುಗು, ಗಾಳಿ ಬರುವ ಸಮಯದಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸಬೇಕು. ವಾಹನ ಚಲಾಯಿಸುವುದು ಇವನ್ನೆಲ್ಲ ಮಾಡಬಾರದು. ಮರದ ಬಳಿ ನಿಲ್ಲಬಾರದು. ಈ ಸಮಯದಲ್ಲಿ ಆಕಸ್ಮಿಕವಾಗಿ ಮರದ ಕೊಂಬೆ ಬೀಳುವಂತಹ ಸಾಧ್ಯತೆ ಹೆಚ್ಚಿರುತ್ತದೆ.
* ಇಂದು ನಾವು ಇಂತಹ ಅಪಾಯಗಳನ್ನು ಎದುರಿಸುವುದರ ಜೊತೆಗೆ ಖಾಯಿಲೆಗಳ ಭೀತಿಯನ್ನು ಎದುರಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಬಹಳ ಪರಿಣಾಮಕಾರಿಯಾಗಿ ಕಾಡುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಇದರ ಮತ್ತು ಮಳೆಗಾಲದಲ್ಲಿ ಕಾಡುವಂತಹ ಇನ್ನು ಹಲವಾರು ಖಾಯಿಲೆಗಳನ್ನು ನಿರ್ಮೂಲನೆಗೊಳಿಸಲು ಪ್ರಯತ್ನಿಸಬೇಕು. ಆದಷ್ಟು ನಮ್ಮ ಪರಿಸರ ಮಾಲಿನ್ಯವಾಗದಂತೆ ಕಾಪಾಡಬೇಕು.
ಮಳೆಗಾಲದ ಸಮಯದಲ್ಲಿ ಅಪಾಯಗಳು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಭವಿಸುತ್ತದೆ. ನಮ್ಮಂತೆ ಯಾವುದೇ ರೀತಿಯ ಆಶ್ರಯ, ಆಹಾರದ ಮೂಲಗಳನ್ನು ಅವುಗಳು ಹೊಂದಿರುವುದಿಲ್ಲ. ಅವುಗಳಿಗೆ ರಸ್ತೆ ಅಥವಾ ಯಾವುದಾದರೂ ಖಾಲಿ ಜಾಗ ಅವುಗಳ ಆಶ್ರಯ. ಯಾರಾದರೂ ಏನಾದರೂ ತಿನ್ನಲು ಕೊಟ್ಟರೆ ಅಥವಾ ಯಾರಾದರೂ ತಿನ್ನುವ ಪದಾರ್ಥ ಬಿಸಾಡಿದರೆ ಅದು ಅವುಗಳ ಆಹಾರ. ಸಾಧ್ಯವಾದರೆ ಬೀದಿ ನಾಯಿ ಅಥವಾ ಬೆಕ್ಕು ಅಥವಾ ದನ ಬಂದರೆ ಅವುಗಳಿಗೂ ಏನಾದರೂ ತಿನ್ನಲು ಕೊಡಿ. ಅವುಗಳು ಬಂದು ಅಂಗಳದಲ್ಲಿ ನಿಂತರೆ ಮಳೆ ಬರುತ್ತಿರುವ ಸಮಯದಲ್ಲಿ ಓಡಿಸಬೇಡಿ. ಬೇಕಾದರೆ ಮಳೆ ನಿಂತ ಮೇಲೆ ಓಡಿಸಿ. ಮನೆಯ ಸಾಕು ಪ್ರಾಣಿಗಳು ಈ ಸಮಯದಲ್ಲಿ ಗಲೀಜು ಮಾಡುತ್ತವೆ ಎಂದು ಅವುಗಳನ್ನು ಬೀದಿಗೆ ತಂದು ಬಿಡಬೇಡಿ. ಮನೆಯ ಸಾಕು ಪ್ರಾಣಿಗಳು ಅವರ ಮರಿಗಳಿಗೆ ಜನ್ಮ ನೀಡಿದರೆ ಅವುಗಳನ್ನು ಎಲ್ಲೆಂದರಲ್ಲಿ ಬಿಡುವುದು ಅಥವಾ ರಸ್ತೆಯಲ್ಲಿ ಬಿಡುವುದು ಇವನ್ನೆಲ್ಲ ಮಾಡಬೇಡಿ. ಸಾಧ್ಯವಾದರೆ ಅವುಗಳನ್ನು ಸಾಕಿ ಇಲ್ಲದಿದ್ದರೆ ಅವುಗಳನ್ನು ಸಾಕಬೇಡಿ. ಮಳೆಗಾಲದ ಸಮಯದಲ್ಲಿ ಕೆಲವೊಂದು ಪ್ರಾಣಿಗಳು ತಮ್ಮ ರಕ್ಷಣೆಗಾಗಿ ಅಥವಾ ಬೆಚ್ಚನೆಯ ಸ್ಥಳದಲ್ಲಿ ಕೂರುವುದಕ್ಕಾಗಿ ವಾಹನದ ಕೆಳಭಾಗದಲ್ಲಿ ಕುಳಿತಿರುತ್ತವೆ. ಆದ್ದರಿಂದ ವಾಹನ ಚಲಾಯಿಸುವ ಮೊದಲು ವಾಹನದ ಕೆಳಭಾಗದಲ್ಲಿ ಸರಿಯಾಗಿ ಗಮನಿಸಿ ನಂತರ ವಾಹನವನ್ನು ಚಲಾಯಿಸಿ. ಮಳೆಗಾಲದಲ್ಲಿ ಚಳಿ ಎಂಬುದು ಎಲ್ಲರಿಗೂ ಸಮಾನವಾದದ್ದು. ಆದ್ದರಿಂದ ಸಾಧ್ಯವಾದಷ್ಟು ಮಳೆಗಾಲದ ಸಮಯದಲ್ಲಿ ಪ್ರಾಣಿಗಳ ಮೇಲೂ ದಯೆ ತೋರಿ. ಉಪಕಾರ ಮಾಡದಿದ್ದರೂ ಪರವಾಗಿಲ್ಲ ಆದರೆ ಅವುಗಳೊಂದಿಗೆ ಅಮಾನವೀಯವಾಗಿ ವರ್ತಿಸಬೇಡಿ.
ನಮ್ಮ ಪರಿಸರದ ರಕ್ಷಣೆ ನಮ್ಮ ಕೈಯಲ್ಲಿದೆ. ನಮ್ಮ ಪರಿಸರವನ್ನು ಮಲಿನಗೊಳಿಸಿ ವಿನಾಶಕ್ಕೆ ದಾರಿ ಮಾಡಿ ಕೊಡುತ್ತಿರುವವರು ನಾವೇ. ಇಂದು ನಾವು ಹಲವಾರು ಪ್ರದೇಶದಲ್ಲಿ ಭೂಕಂಪ, ಭೂ ಕುಸಿತ, ಪ್ರವಾಹ ಸಂಭವಿಸುವುದನ್ನು ಕಾಣುತ್ತೇವೆ. ಆದರೆ ಅವುಗಳಿಗೆ ನಾವೇ ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇಂದು ಅದೆಷ್ಟೋ ಜನ ಹುಸಿಯಾದ ಆಡಂಬರಕ್ಕೆ ಅಗತ್ಯವಿಲ್ಲದಷ್ಟು ಬಹು ಮಹಡಿಯ ಕಟ್ಟಡ, ಮನೆಯನ್ನೆಲ್ಲ ನಿರ್ಮಿಸುತ್ತಿದ್ದಾರೆ. ಇದರಿಂದ ಭೂ ಕಂಪನ ಉಂಟಾಗುತ್ತಿದೆ. ನಮ್ಮ ಪ್ರಕೃತಿ ಮಾತೆಯು ವರದಾನವಾಗಿ ನೀಡಿದ ಸಂಪನ್ಮೂಲಗಳನ್ನೆಲ್ಲಾ ನಾವಿಂದು ಮಲಿನಗೊಳಿಸಿ, ನಶಿಸಿ ಹಾಕುತ್ತಿದ್ದೇವೆ. ಇದರಿಂದ ಭೂ ಕುಸಿತ, ಪ್ರವಾಹ ಉಂಟಾಗುತ್ತಿದೆ. ಇಂದು ನಾವು ಸೃಷ್ಟಿಸಿದ ತಪ್ಪನ್ನು ಪ್ರಕೃತಿಯ ಮೇಲೆ ಹೊರಿಸುತ್ತಿದ್ದೇವೆ. ಆದ್ದರಿಂದ ನಮ್ಮ ಪ್ರಕೃತಿಯ ಅಳಿವು ಉಳಿವು ಎರಡು ನಮ್ಮ ಕೈಯಲ್ಲಿದೆ. ನಾವು ನಮ್ಮ ಪರಿಸರವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು. ಪ್ರಕೃತಿ ಮಾತೆಯು ನಮಗೆ ನೀಡಿದ ಕೊಡುಗೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನಾವು ನೀಡಬೇಕು ಮತ್ತು ಅವರಲ್ಲೂ ಈ ಭೂಮಿಮಾತೆಯನ್ನು ಉಳಿಸಿ ಬೆಳೆಸುವ ಜಾಗೃತಿಯನ್ನು ಮೂಡಿಸಬೇಕು.
- ವಿದ್ಯಾಪ್ರಸಾದ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ