ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಅವರು, ಕನ್ನಡ-ಸಂಸ್ಕೃತ, ಭಾಷೆ, ಸಾಹಿತ್ಯ-ಸಂಸ್ಕೃತಿಯ ಅಪಾರ ವಿದ್ವತ್ ಪಡೆದು ಭಾಷಣ, ಉಪನ್ಯಾಸ, ಬರಹದ ಮೂಲಕ ಜನರಿಗೆ ಚಿರಪರಿಚಿತರಾದ ಮಹನೀಯರು. ಶಂಭಾ ಜೋಷಿಯವರಿಂದ ಶಿವರತ್ನಾಕರದ ವರೆಗೆ ಅನೇಕ ಸಾಹಿತ್ಯದ ಕೃತಿಗಳ ಬಗ್ಗೆ
ಸಂಶೋಧನೆ ಮಾಡಿ, ರಸವತ್ತಾಗಿ ಉಣಬಡಿಸಿದ ವಿದ್ವಾಂಸರು. ಇವರ ಅಗಾಧ ಮೌಲಿಕ ಸಾಹಿತ್ಯ, ಸಂಸ್ಕೃತಿ ಕೃಷಿ ತಿಳಿಯುವುದೇ ಸೊಗಸು. ಕನಾ೯ಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ, ಸಂಸ್ಕೃತ ಪರಿವಾರವನ್ನು ಸ್ವಾಗತಿಸಿದ್ದು, ಪ್ರೀತಿ, ವಿಶ್ವಾಸ ತೋರಿಸಿದ್ದು ಮರೆಯಲಾಗದ ಅನುಭವ. ಸಮಕಾಲೀನ ಚಿಂತಕರಾಗಿ, ತಮ್ಮದೇ ಆದ ವೈಶಿಷ್ಟ್ಯತೆ ಪಡೆದು, ಅನೇಕ ಅಭಿಮಾನಿಗಳನ್ನು ಸಂಪಾದಿಸಿದ ಕೀರ್ತಿಗೆ ಭಾಜನರು.
ಕುಲಪತಿಗಳಾಗಿ, ಕೇವಲ ಕನಸು ಕಾಣದೇ, ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು, ವಿಶ್ವವಿದ್ಯಾಲಯಕ್ಕೆ ನವ ವಿನ್ಯಾಸ ತಂದು, ಭವಿಷ್ಯತ್ತಿಗೆ, ಪ್ರಬಲ ಬುನಾದಿ ಹಾಕಿದ ಮಹನೀಯರು. ಉತ್ತಮ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಬಂಧ, ಅಧ್ಯಯನದ ಪರಿಸರ, ಪ್ರಮುಖವಾದ ಗುರಿಯೆಂದು ನಂಬಿದ್ದರು. ಅದರಂತೆ, ಹೊಸ ಸಂಸ್ಕೃತ ವಿಶ್ವವಿದ್ಯಾಲಯವೂ, ಅವರ ಕನಸನ್ನು ನನಸುಮಾಡಿದೆ. ಮಹಾ ವಾಗ್ಮಿ, ಅದ್ಭುತ ಓದುಗ, ಅನೇಕ ವಿಷಯಗಳ ಬಗ್ಗೆ ಹರಟೆ, ಸಂಸ್ಕೃತ ವಾಙ್ಮಯ ಜಗತ್ತಿನ ಇತಿಹಾಸ ಪರಿಚಯಿಸಿಕೊಂಡ ಪಂಡಿತರು. ವಿದ್ವಾಂಸರಲ್ಲಿ ಗೌರವ, ಅಪಾರ ಭಕ್ತಿ, ಶ್ರದ್ಧೆ, ನಿರಂತರ ಗ್ರಂಥಗಳ ಅಧ್ಯಯನ. ವೃದ್ಧ ಜನರ ಉಪಾಸನೆ, ರಾಜನೀತಿಯಿಲ್ಲದ ನಡೆ, ನೇರ, ನಿಷ್ಠುರವಾದ ನುಡಿ, ಸಹಕಾರ, ಕಷ್ಟದಲ್ಲಿರುವವರ ಬಗ್ಗೆ ಸಹಜ ಪ್ರೇಮ ನುಡಿಯ ಸಾಕಾರ ಮೂರ್ತಿ ಮಲ್ಲೇಪುರಂ ಜಿ.ವೆಂಕಟೇಶ್.
ಅನೇಕ ವಿದ್ವಾಂಸರ ಒಡನಾಟ, ಅದರಲ್ಲೂ, ರಾಮಸ್ವಾಮಿ ಅಯ್ಯಂಗಾರ್, ಆದಿದೇವಾನಂದರು, ಡಾ॥ಎಸ್ ಕೆ ರಾಮಚಂದ್ರರಾಯರು, ಶಂ ಬಾ ಜೋಷಿ, ಸತ್ಯಕಾಮ, ಎನ್ ರಂಗನಾಥ ಶರ್ಮ, ಪುತಿನ ಮುಂತಾದ ಘನ ಸಾಹಿತಿಗಳ ಪರಿಚಯ ಇವರ ಆಸ್ತಿ ಎಂದೇ ಹೇಳಬಹುದು. ಸ್ವ- ಪರ ಜನರ ಟೀಕೆಗಳಿಗೆ ಕಿವಿಗೊಡದೇ, ತಮಗೆ ಸರಿಯೆನಿಸಿದ್ದನ್ನು ಧೈರ್ಯದಿಂದ ಅನುಷ್ಠಾನಗೊಳಿಸುವ ಮನೋಭಾವ ಇವರದು. ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಭದ್ರವಾದ ಬುನಾದಿ ಹಾಕಿ, ಅದರ ಗೌರವ ಹೆಚ್ಚಿಸಿದ ಕೀತಿ೯ಗೆ ಭಾಜನರು. ಹಳೆಯ ಕಸವನ್ನು ಕಿತ್ತೆಸೆದು, ಮನಸ್ಸನ್ನು ಹಗುರಗೊಳಿಸಬೇಕೆಂದು ಮಲ್ಲೇಪುರಂ ಸಂದೇಶ ಹೇಳುವ ಪರಿಪಾಠ, ಅಭ್ಯಾಸ ಇವರದು. ಯೋಗಿಗೆ ಇರುವಂತೆ, ಇವರ ದಿನಚರಿ, ಸದಾ ಚಟುವಟಿಕೆಗಳು, ಓದು, ಬರಹ, ಸಭೆ, ಪುಸ್ತಕ ಮುದ್ರಣ, ಪ್ರವಾಸ ಎಲ್ಲದರಲ್ಲೂ ಶಿಸ್ತು! ಮಾತಿನಲ್ಲಿ ಸಂಯಮ, ವಿಚಾರದಲ್ಲಿ ಉದಾತ್ತತೆಯ ಸಾಧಕರು.
ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಅವರು, ಸಿದ್ದಲಿಂಗೇಶ್ವರ ಸಂಸ್ಕೃತ ಮಹಾ ಪಾಠಶಾಲೆ, ಸಿದ್ಧಗಂಗಾ, ತುಮಕೂರಿನಲ್ಲಿ, ಪ್ರಾಥಮಿಕ ಶಿಕ್ಷಣವನ್ನು ಪಡೆದು, ತದನಂತರ, ಸ್ನಾತಕೋತ್ತರ ಪದವಿ, ಕನ್ನಡದಲ್ಲಿ, ಆಂಗ್ಲ ಭಾಷೆಯಲ್ಲಿ ಪಡೆದರು. ಗಂಗಯ್ಯ ಮತ್ತು ವೆಂಕಟಮ್ಮ ದಂಪತಿಗೆ ಪುತ್ರನಾಗಿ, ನೆಲಮಂಗಲದಲ್ಲಿ ತಾ. 5-6-1952 ರಂದು ಜನಿಸಿದರು. ಕುವೆಂಪು ಚಿನ್ನದ ಪದಕ, ಸಂಸ್ಕೃತ ಎಂ ಎ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ಕೆಲಸವನ್ನು ಮೊದಲು ಕನಕಪುರ, ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಕನ್ನಡ ಪಂಡಿತರಾದರು. 1992 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರವಾಚಕ, ನಿರ್ದೇಶಕ, ನಂತರ ಕುಲಸಚಿವರಾದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಧ್ಯಕ್ಷ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಡೀನ್, ಪ್ರಸಾರಾಂಗದ ನಿದೇ೯ಶಕ, 2008ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ, ನಂತರ ಅದೇ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ಸೇವೆ ಸಲ್ಲಿಸಿದರು. 2015ರಿಂದ ಕಲಬುರಗಿ ಪಾಲಿ ಇನ್ಸ್ಟಿಟ್ಯೂಟ್ ಸಂಸ್ಥೆಯ ಗೌರವ ನಿದೇ೯ಶಕರು.
ವಿಮರ್ಶಾ ಕ್ಷೇತ್ರದಲ್ಲಿ, ಶಂ ಬಾ ಜೋಷಿಯವರ ಕೃತಿಗಳ ಅಧ್ಯಯನ, ಸಂಪಾದನೆ, ಕಾವ್ಯ ಶಾಸ್ತ್ರ ಪರಿಭಾಷೆ, ಅವರ ಆಯ್ದ ಲೇಖನಗಳ ಸಂಪಾದನೆ ಮಾಡಿದ್ದಾರೆ. ವಿಶೇಷವೇನೆಂದರೆ ವೇದ, ಉಪನಿಷತ್ತುಗಳನ್ನು ಆಧುನಿಕ ರೀತಿಯಲ್ಲಿ ಅಧ್ಯಯನ ಮಾಡಿದ ವಿದ್ವಾಂಸರು! 80ಕ್ಕೂ ಹೆಚ್ಚು ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಸಂಬಂಧಪಟ್ಟ ಕೃತಿಗಳನ್ನು ಪ್ರಕಟಿಸಿದ್ದಾರೆ. ಕನಾ೯ಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಿ ಆರ್ ಅಂಬೇಡ್ಕರ್ ಪ್ರಶಸ್ತಿ, ಸಿದ್ದಗಂಗಾಶ್ರೀ ಪ್ರಶಸ್ತಿ, ಶಿವಗಂಗಾಶ್ರೀ ಪ್ರಶಸ್ತಿ, ಶಾಸ್ತ್ರ ಚೂಡಾಮಣಿ (ನವದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ) ವಚನ ಸಾಹಿತ್ಯಶ್ರೀ ಪ್ರಶಸ್ತಿ, ಸಂಸ್ಕೃತಿ ಸಮ್ಮಾನ್ ಪ್ರಶಸ್ತಿ, ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ, ಡಾ॥ಶಿಮುಶ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಪುರಸ್ಕಾರ ಮತ್ತು ಇನ್ನಿತರ ಸನ್ಮಾನಗಳು, ಗೌರವಗಳೊಂದಿಗೆ ಎನ್.ರಂಗನಾಥಶ ರ್ಮಾ ಸಂಸ್ಕೃತಿ ಪುರಸ್ಕಾರಕ್ಕೆ ಭಾಜನರು.
ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಅವರು, ಸಮ್ವಿತ್ ರಿಸರ್ಚ್ ಫೌಂಡೇಶನ್ ನ ನಿರ್ದೇಶಕರು. ಕರ್ನಾಟಕದ ವಿದ್ವಾಂಸರಲ್ಲಿ ಒಬ್ಬರಾಗಿ, ಅನೇಕ ಕೃತಿಗಳನ್ನು ರಚಿಸಿ, ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಅಧ್ಯಯನಶೀಲರಾಗಿ, ನಾಡಿಗೆ ದೊರೆತ, ಅಪರೂಪದ ಬರಹಗಾರರಾದ ಮಹಾನುಭಾವರು.
ಶ್ರೀಧರ ರಾಯಸಂ
ಗಿರಿನಗರ
ಬೆಂಗಳೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ