ಗಡಿ ಪ್ರಾಧಿಕಾರದ ಮೂಲಕ ಕನ್ನಡ ಪರ ಕೆಲಸ: ಸೋಮಣ್ಣ ಬೇವಿನಮರದ

Upayuktha
0


 

ಕಾಸರಗೋಡು: ನಮ್ಮ ಭಾಷೆ, ಸಂಸ್ಕೃತಿ, ಕಲೆಯನ್ನು ಬೆಳೆಸುವಂತಹ ಮಹತ್ತರ ಕೆಲಸವು ಗಡಿನಾಡಿನಲ್ಲಿ ನಡೆಯುತ್ತಿದೆ. ಕರಾವಳಿ ಭಾಗದವರು ಕಲೆ ನೀಡುವಂತಹ ಪ್ರೋತ್ಸಾಹ ಮೆಚ್ಚುವಂತದ್ದಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ಮಾಜಿ ಶಾಸಕ ಸೋಮಣ್ಣ ಬೇವಿನಮರದ ಹೇಳಿದರು.


ಅವರು ಕಾಸರಗೋಡು ಜಿಲ್ಲೆಯ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ  ಗಡಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಉತ್ಸವ ಹಾಗೂ ಸಿರಿಬಾಗಿಲು ಯಕ್ಷ ವೈಭವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕರ್ನಾಟಕ ಸಂಭ್ರಮ-50 ಇದರ ಸವಿ ನೆನಪಿನಂಗವಾಗಿ ಮಂಗಳೂರಿನಲ್ಲಿ ದೊಡ್ಡ ಕನ್ನಡ ಕಾರ್ಯಕ್ರಮವನ್ನು ಇಟ್ಟುಕೊಳ್ಳುವ ಸಲುವಾಗಿ ಈಗಾಗಲೇ ಕರ್ನಾಟಕದ 14 ಅಕಾಡೆಮಿಗಳ ನೇತೃತ್ವದಲ್ಲಿ  ಸಚಿವರು ಸಭೆ ಕರೆದು ನಿರ್ಣಯ ಮಾಡಲಾಗಿದೆ. ಅಲ್ಲಿ ಕನ್ನಡ ಭಾಷೆ, ಕಲೆಗಳನ್ನು ಪ್ರೋತ್ಸಾಹಿಸುವರಿಗೆ ಗೌರವವನ್ನು ಸಲ್ಲಿಸಬೇಕು. ಸರಕಾರದ ಸಹಾಯದಿಂದ ಮಾತ್ರ ಕಲೆಗಳನ್ನು ಉಳಿಸಲು ಸಾಧ್ಯ, ಅದಕ್ಕಾಗಿ ಗಡಿ ಪ್ರದೇಶ ಅಭಿವೃದ್ಧಿ ಸಾಕಷ್ಟು ಅನುದಾನವನ್ನು ನೀಡುತ್ತಿದೆ. ಇದಲ್ಲದೇ ಗಡಿನಾಡಿನ ಕನ್ನಡ ಶಾಲೆಗಳಿಗೆ ಅನುದಾನ, ಕನ್ನಡ ಶಾಲೆಗಳಲ್ಲಿ ಕನ್ನಡ ಬಲ್ಲ ಶಿಕ್ಷಕ ನೇಮಕ ವಿಚಾರ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗಡಿನಾಡಿನೊಂದಿಗಿದೆ ಎಂದು ಅವರು ಹೇಳಿದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧಿಶ ಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಕರಾವಳಿಯಲ್ಲಿ ಯಕ್ಷಗಾನ ಎಂಬುದು ನಮ್ಮ ಬದುಕಿನ ಒಂದು ಭಾಗವಾಗಿದೆ. ಕನ್ನಡ ಉಳಿಸಿ ಬೆಳೆಸುವಲ್ಲಿ ಯಕ್ಷಗಾನದ ಕೊಡುಗೆ ಅನನ್ಯ, ಇಲ್ಲಿ ಹವ್ಯಾಸಿ ತಂಡಗಳಿಂದ ಪ್ರದರ್ಶನ ನಡೆಯುವಂತದ್ದು ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಕನ್ನಡ ಅಸ್ಮಿತೆ ಉಳಿಸುವಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿಯ ಪ್ರಾಧಿಕಾರದ ಕೊಡುಗೆ ಸಹಕಾರವು ಮೆರೆಯುವಂತಿಲ್ಲ ಎಂದು ಶ್ರೀಗಳು ಹೇಳಿದರು.


ಸಮಾರಂಭದಲ್ಲಿ ಯಕ್ಷಗಾನ ಕಲಾಪೋಷಕ, ಸಂಘಟಕ ಹೈದರಾಬಾದಿನ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಸ್ವಾಮೀಜಿಯವರು ಗೌರವ ಪೋಷಕ ಸದಸ್ಯತ್ವ ನೀಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಪ್ರಾಧಿಕಾರ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಆರಂಭದಲ್ಲಿ ಯಕ್ಷಗಾನ ಭಾಗವತ, ಸಿರಿಬಾಗಿಲು ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿ, ಜಗದೀಶ ಕೆ. ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.


ನಾಲ್ಕು ದಿನಗಳಲ್ಲಾಗಿ ಐದು ಜಿಲ್ಲೆಗಳಿಂದ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ 27 ಹವ್ಯಾಸಿ ಯಕ್ಷಗಾನ ಕಲಾ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ. ಅದಲ್ಲದೇ ಸ್ಥಳೀಯ ಪ್ರತಿಭೆಗಳ ಭರತನಾಟ್ಯ, ಕನ್ನಡ ಭಾವಗೀತೆಗಳ ಗಾಯನ ನಡೆಯಲಿದೆ. ನಂತರ ಕಾಸರಗೋಡು, ನೀರ್ಚಾಲ್, ಪೆರ್ಲ, ಬಾಯಾರು ಮುಂತಾದ ಕನ್ನಡ ಶಾಲೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top