ಗುರು ಪೂರ್ಣಿಮಾ: वन्दे गुरु परम्पराम् - ವಂದೇ ಗುರು ಪರಂಪರಾಮ್

Upayuktha
0

ಶ್ರೀ ಗುರುಭ್ಯೋ ನಮಃ


गुरुरादिरनादिश्च गुरुः परमदैवतम्/

गुरोः परतरं नास्ति तस्मै श्रीगुरवे नमः//


ಭಾರತೀಯರಾದ ನಾವು ತುಂಬಾ ಹೆಮ್ಮೆಪಡುವಂತಹ ಸಂಸ್ಕೃತಿಯು ನಮ್ಮದಾಗಿದೆ. ಈ ನಮ್ಮ ಸಂಸ್ಕೃತಿಯು ಇಷ್ಟು ಉತ್ಕೃಷ್ಟವಾಗಿರಲು ಕಾರಣ, ನಮ್ಮ ಪೂರ್ವಜರು ಮಾಡಿದ ಸಾಧನೆ, ತಪಸ್ಸು, ತ್ಯಾಗ, ಆಚರಣೆಗಳು. ತಮ್ಮ ತಪಸ್ಸಿನ ಶಕ್ತಿಯಿಂದ ಭಾರತಕ್ಕೆ ಮಾತ್ರವಲ್ಲದೆ ಇಡೀ ಮಾನವ ಕುಲಕ್ಕೆ ಅಪಾರವಾದ ಜ್ಞಾನ ರಾಶಿಯನ್ನು ಕರುಣಿಸಿದ್ದಾರೆ.


ಪ್ರತಿದಿನವೂ ನಾವು ಈ ಗುರು ಪರಂಪರೆಯನ್ನು ನೆನೆಯಲೇಬೇಕು, ಆದರೂ, ಇಂದು, ಅಂತಹ ಗುರುಗಳಿಗೆಲ್ಲ ವಿಶೇಷವಾದ ನಮನಗಳನ್ನು ಸಲ್ಲಿಸುವಂತಹ ಪರ್ವ ದಿನ- "ಗುರು ಪೂರ್ಣಿಮಾ". ಯಥಾ ಶಕ್ತಿ ಯಥಾಮತಿ ನಾವು ಗುರುಗಳ ಸ್ಮರಣೆಯನ್ನು ಮಾಡೋಣ. 


(ಅ) ಮೊದಲಿಗೆ, ಶ್ರೀ ಕೃಷ್ಣ ಪರಮಾತ್ಮ ನಮ್ಮ ಜಗದ್ಗುರು, कृष्णं वन्दे जगद्गुरुम्, ಎಂದು ಶ್ರೀಕೃಷ್ಣನನ್ನು ನಮಿಸೋಣ. 

(ಆ) ದೇವಗುರುವಾದ ಬೃಹಸ್ಪತಿ ಮತ್ತು ದೈತ್ಯ ಗುರುವಾದ 'ಶುಕ್ರಾಚಾರ್ಯ' ರಿಗೆ ನಮಸ್ಕಾರಗಳು.

(ಇ) ಸಂಸ್ಕೃತ, ಸಂಸ್ಕೃತಿ ಮತ್ತು ಸಂಸ್ಕಾರಗಳ ಹಿರಿಮೆಯಿಂದ, 'ವಿಶ್ವಗುರು' ಎಂದು ಎಲ್ಲರೂ ಪ್ರೀತಿಯಿಂದ ಕರೆಯುವ ನಮ್ಮ ಭಾರತ ದೇಶಕ್ಕೆ ನಮಸ್ಕಾರಗಳು.



(ಈ) ಭಾರತೀಯ ದರ್ಶನ ಶಾಸ್ತ್ರಗಳು ಹಲವಾರು. ಹಲವಾರು ಗುರುಗಳು, ತಮ್ಮ ಸಾಧನೆಯಿಂದ ಕಂಡುಕೊಂಡ ತತ್ವಗಳನ್ನು ಸಾಮಾನ್ಯ ಮನುಷ್ಯರಿಗೂ ಸುಲಭವಾಗಿ ಅರ್ಥವಾಗುವ ಹಾಗೆ ದರ್ಶನ ಶಾಸ್ತ್ರಗಳನ್ನು ರಚಿಸಿದ್ದಾರೆ. ಎಲ್ಲಾ ಸನ್ಮಾರ್ಗಗಳು ಸಾಧುವೇ ಆಗಿವೆ. ತಾವು ಕಂಡುಕೊಂಡ ದಾರಿಗಳು ಬೇರೆ ಬೇರೆಯಾದರೂ, ಕೊನೆಗೆ ಪ್ರತಿಪಾದಿಸುವ ತತ್ವ ಒಂದೇ. ಅಂತಹ ಎಲ್ಲಾ ಮಹಾನುಭಾವರಿಗೆ ನಮನಗಳು. 


ಇವರಲ್ಲಿ ಮುಖ್ಯ ಮೂರು ದಾರ್ಶನಿಕ ಗುರುಗಳು ಎಂದರೆ, ದ್ವೈತ ಸಿದ್ದಾಂತದ ಶ್ರೀ ಮಧ್ವಾಚಾರ್ಯರು, ಅದ್ವೈತ ಸಿದ್ಧಾಂತದ ಶ್ರೀ ಶಂಕರಾಚಾರ್ಯರು ಮತ್ತು ವಿಶಿಷ್ಟಾದ್ವೈತ ಸಿದ್ಧಾಂತದ ಶ್ರೀ ರಾಮಾನುಜಾಚಾರ್ಯರು.


(ಉ) ನಂತರ, ಸಾಮಾನ್ಯ ಮನುಷ್ಯರಂತೆ ಕಂಡರೂ, ಅಪ್ರತಿಮ ಸಾಧನೆಯಿಂದ ಮತ್ತು ತಪಸ್ಸಿನಿಂದ ಜ್ಞಾನ ರಾಶಿಯನ್ನು ಪಡೆದು ಇಡೀ ಮಾನವ ಕುಲಕ್ಕೆ ಉಪಕಾರ ಮಾಡಿದ ಎಷ್ಟೋ ಮಹನೀಯರು ಇದ್ದಾರೆ, ಅವರಿಗೆಲ್ಲ ನಮಸ್ಕಾರಗಳು. ತಾವು ಕಷ್ಟಪಟ್ಟು ಗಳಿಸಿದ ವಿದ್ಯೆಗೆ, ತಮ್ಮದೆಂಬ ಹೆಸರನ್ನು ಅವರು ಎಂದೂ ಸಹ ಜಂಬದಿಂದ ಹಾಕಿಕೊಳ್ಳಲಿಲ್ಲ, ಎಂದೂ, ತಾವು ಗಳಿಸಿದ ಜ್ಞಾನವನ್ನು ಇತರರು ಬಳಸಲು, ಕಾನೂನುಗಳನ್ನಾಗಲಿ ಅಥವಾ ನಿಯಮಾವಳಿಗಳ ಸಂಕೋಲೆಗಳಿಂದಾಗಲಿ ಬಂಧಿಸಲಿಲ್ಲ. ಜ್ಞಾನವನ್ನು ಎಲ್ಲರಿಗೂ ಮುಕ್ತವಾಗಿ ನೀಡಿದರು. ಮಾನವ ಕುಲದ ಉದ್ದಾರಕ್ಕಾಗಿ, ತಾವು ಕಂಡುಕೊಂಡಂತಹ ಜ್ಞಾನ ರಾಶಿಯ ಧಾರೆಯನ್ನು ಎರೆದು ನಮ್ಮನ್ನು ಕರುಣಿಸಿದ್ದಾರೆ. ಇಂತಹ ಎಷ್ಟೋ ದಯಾಮಯ, ಕರುಣಾಸಾಗರರಾದ ನಮ್ಮ ಪೂರ್ವಜರನ್ನು ನಾವು ಸ್ಮರಿಸೋಣ. ಕಾಲ ಗರ್ಭದಲ್ಲಿ ಮರೆಯಾಗಿರುವ, ಮಹಾತ್ಮರಾದ ನಮ್ಮ ಪೂರ್ವಜರ ಹೆಸರುಗಳನ್ನು ತಿಳಿದು, ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸೋಣ.


ಮೊದಲಿಗೆ,

1. ಆದಿ ಕಾವ್ಯವಾದ 'ಶ್ರೀಮದ್ ರಾಮಾಯಣವನ್ನು' ರಚಿಸಿ ಆದಿಕವಿ ಎಂದು ವಿಖ್ಯಾತರಾದ 'ಶ್ರೀ ವಾಲ್ಮೀಕಿ' ಮಹರ್ಷಿಗಳು.

2. ಅಪೌರುಷಯವಾದ, ಜ್ಞಾನ ರಾಶಿಯಾದ, ಸನಾತನ ಧರ್ಮದ ಬಲವಾದ, ವೇದಗಳನ್ನು, ಜನರ ಅನುಕೂಲಕ್ಕಾಗಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ ಶ್ರೀ ವೇದವ್ಯಾಸರು. ಅಷ್ಟೇ ಅಲ್ಲದೆ, 'ಪಂಚಮ ವೇದ' ಎಂದು ಪ್ರಸಿದ್ಧವಾದ 'ಮಹಾಭಾರತ' ಗ್ರಂಥವನ್ನು ರಚಿಸಿದವರು. ಅಷ್ಟಾದಶ ಪುರಾಣಗಳು, ಉಪ ಪುರಾಣಗಳು, 'ಶ್ರೀಮದ್ ಭಾಗವತಂ', ಬ್ರಹ್ಮಸೂತ್ರಗಳು ಮುಂತಾದ ಗ್ರಂಥಗಳನ್ನು ನಮಗೆ ಕರುಣಿಸಿದ್ದಾರೆ.


3. ಗಣಿತ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ: 

(1) ಗಣಿತದ ವಿಷಯಗಳನ್ನು ಒಳಗೊಂಡ 'ಲೀಲಾವತೀ' ಎಂಬ ಗ್ರಂಥವನ್ನು ರಚಿಸಿದವರು 'ಭಾಸ್ಕರಾಚಾರ್ಯರು'. ಲೀಲಾವತೀ ಗ್ರಂಥವು, ಭಾಸ್ಕರಾಚಾರ್ಯರ ಮುಖ್ಯ ಕೃತಿಯಾದ, 'ಸಿಧ್ದಾಂತ ಶಿರೋಮಣಿ' ಯ ಮೊದಲ ಸಂಪುಟವಾಗಿದೆ. ಇದು ಸಂಸ್ಕೃತದಲ್ಲಿ ಬರೆದಿರುವ ಗಣಿತ ಗ್ರಂಥ.

(2) ಶೂನ್ಯವನ್ನು ಕಂಡುಹಿಡಿದು, ಗಣಿತ ಕ್ಷೇತ್ರದಲ್ಲಿ ಲೋಕಕ್ಕೆ ಉಪಕಾರ ಮಾಡಿದ 'ಆರ್ಯಭಟ್ಟ'.

(3) ಈಗಿನ ಪೈಥಾಗರಸ್ ಸಿದ್ದಾಂತ ವೆಂದು ಖ್ಯಾತವಾದರೂ ಅದರ ಮೂಲವನ್ನು ಕಂಡುಹಿಡಿದ ಮಹಾಮುನಿಗಳಾದ, 'ಬೋಧಾಯನ' ಮತ್ತು 'ಕಾತ್ಯಾಯನ' ರು ಎಷ್ಟೋ  ವರ್ಷಗಳ ಹಿಂದೆಯೇ ಈ ಸೂತ್ರವನ್ನು ಕಂಡುಹಿಡಿದಿದ್ದಾರೆ.


4. ಋಕ್ ಸಂಹಿತೆಯ ಮಂತ್ರಕ್ಕೆ ವ್ಯಾಖ್ಯಾನವನ್ನು ರಚಿಸಿ, 'ಪ್ರಕಾಶದ ವೇಗ' -- 'speed of light' ಅನ್ನು, ತಮ್ಮ ಗ್ರಂಥವಾದ 'ಸಾಯಣ ಭಾಷ್ಯ'ದಲ್ಲಿ 'ಸಾಯಣಾಚಾರ್ಯ'ರು ತಿಳಿಸಿದ್ದಾರೆ.


5. 'ರಸ ರತ್ನಾಕರ' ಎಂಬ ಗ್ರಂಥವನ್ನು ರಚಿಸಿ 'ಲೋಹ ಮಿಶ್ರಣ ಕ್ರಮ'ವನ್ನು ದಯಪಾಲಿಸಿದವರು 'ನಾಗಾರ್ಜುನ' ಎಂಬುವವರು. 




6. ವೈದ್ಯಕೀಯ ಕ್ಷೇತ್ರದಲ್ಲೂ ಹಲವಾರು ಮಹನೀಯರು ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಶಸ್ತ್ರಚಿಕಿತ್ಸೆ, ಪ್ರತಿರೋಧ ಚಿಕಿತ್ಸೆ, ರಕ್ತ ಸಂಚಾರ, ರೋಗಗಳ ಉಪಶಮನ ಇತ್ಯಾದಿ ಹತ್ತು ಹಲವಾರು ವಿಷಯಗಳು ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. 'ಚರಕ ಸಂಹಿತೆ'ಯನ್ನು ರಚಿಸಿದ 'ಆಚಾರ್ಯ ಚರಕ', 'ಶುಶ್ರುತ ಸಂಹಿತೆ'ಯನ್ನು ರಚಿಸಿದ 'ಆಚಾರ್ಯ ಸುಶ್ರುತ', 'ವಾಗ್ಭಟ'ರ 'ಅಷ್ಟಾಂಗ ಸಂಗ್ರಹ', 'ಆಚಾರ್ಯ ಭಾವ ಮಿಶ್ರ'ರು ಬರೆದ 'ಭಾವಪ್ರಕಾಶ' ಗ್ರಂಥ, ಇತ್ಯಾದಿ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿ ಬರೆದಿರುವ 'ಆಯುರ್ವೇದ' ಗ್ರಂಥಗಳಾಗಿವೆ. ಆಚಾರ್ಯ ಸುಶ್ರುತರು 'ಪ್ಲಾಸ್ಟಿಕ್ ಸರ್ಜರಿ' ಯನ್ನು ಕಂಡುಹಿಡಿದ ಮಹನೀಯರು, ಇವರು ಶಸ್ತ್ರ ಚಿಕಿತ್ಸೆಯಲ್ಲಿ ನಿಪುಣರಾಗಿದ್ದರು. ಚಿಕಿತ್ಸಾ ಶಾಸ್ತ್ರದಲ್ಲೇ, ಶುಶ್ರುತ ಸಂಹಿತೆಯಲ್ಲಿ ಸರ್ವಪ್ರಥಮವಾಗಿ  'ಅಭಿಘಟನ ಚಲ್ಯ' ಅಂದರೆ ಪ್ಲಾಸ್ಟಿಕ್ ಸರ್ಜರಿ ಸಂಬಂಧವಾಗಿ ಲಿಖಿತ ಪ್ರಮಾಣ ದೊರೆಯುತ್ತದೆ, ಈ ಮಹತ್ವದ ಕೊಡುಗೆಗೆ ಪ್ರಪಂಚವೇ ಇವರಿಗೆ ಋಣಿಯಾಗಿದೆ.


7. ಖಗೋಳ ಶಾಸ್ತ್ರ, ಗಣಿತಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವಿಖ್ಯಾತರಾದ 'ವರಾಹಮಿಹಿರ'ರು 'ಬೃಹತ್ ಸಂಹಿತಾ' ಎಂಬ ಗ್ರಂಥವನ್ನು ರಚಿಸಿದ್ದಾರೆ. ಈ ಗ್ರಂಥವು ಜ್ಯೋತಿಷ, ಗ್ರಹಗಳ ಚಲನೆ, ಗ್ರಹಣ, ಮೋಡ, ಮಳೆ, ಶಿಲ್ಪಕಲೆ, ಬೆಳೆಗಳ ಬೆಳವಣಿಗೆ, ಸುಗಂಧದ್ರವ್ಯಗಳ ತಯಾರಿಕೆ, ಮದುವೆ, ಮುತ್ತು ರತ್ನ ಮತ್ತು ಸಂಪ್ರದಾಯದ ವಿಷಯಗಳನ್ನು ಒಳಗೊಂಡಿದೆ. 'ಬೃಹತ್ ಜಾತಕ' 'ಲಘು ಜಾತಕ' ಮೊದಲಾದ ಜ್ಯೋತಿಷ ಶಾಸ್ತ್ರ ಗ್ರಂಥಗಳನ್ನು ರಚಿಸಿದ್ದಾರೆ. ಅಲ್ಲದೆ, ಇವರು 'ಪಂಚಸಿದ್ಧಾಂತಿಕ'ವನ್ನು ರಚಿಸಿದ್ದಾರೆ.




8. 'ಅರ್ಥಶಾಸ್ತ್ರ'ವನ್ನು ರಚಿಸಿದ ಆಚಾರ್ಯ 'ಚಾಣಕ್ಯ'ರು ಪರಮ ದೇಶಭಕ್ತರಾಗಿದ್ದರು.


9. 'ಭಾರದ್ವಾಜ' ಮುನಿಗಳು 'ವೈಮನಿಕ ಶಾಸ್ತ್ರ'ವನ್ನು ರಚಿಸಿದ್ದಾರೆ. ಇದು ಸಂಸ್ಕೃತ ಗ್ರಂಥವಾಗಿದ್ದು, ವಿಮಾನ ತಂತ್ರಜ್ಞಾನದ ಕುರಿತಾಗಿದೆ.


10. 'ಆದಿಶೇಶ'ನ ಅವತಾರವಾದ 'ಶ್ರೀ ಪತಂಜಲಿ' ಮಹರ್ಷಿಗಳು ಶ್ರೇಷ್ಠವಾದ 'ಯೋಗ ಸೂತ್ರ'ಗಳನ್ನು ರಚಿಸಿ ಮಾನವ ಕುಲಕ್ಕೆ ಅಷ್ಟಾಂಗ ಯೋಗವನ್ನು ಕರುಣಿಸಿದ್ದಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವಲ್ಲಿ ಯೋಗದ ಪಾತ್ರ ಅದ್ವಿತೀಯವಾಗಿದೆ.


11. 'ಶ್ರೀ ಪಾಣಿನಿ' ಮಹರ್ಷಿಗಳು, ದೇವ ಭಾಷೆಯಾದ, ಭಾರತದ ಹೆಮ್ಮೆಯಾದ, ಸಂಸ್ಕೃತ ಭಾಷೆಯ ವ್ಯಾಕರಣವನ್ನು 'ಅಷ್ಟಾಧ್ಯಾಯೀ' ಎಂಬ ಗ್ರಂಥದಲ್ಲಿ ರಚಿಸಿದ್ದಾರೆ.


12. 'ಸಂಗೀತ ಪಿತಾಮಹ' ಎಂದು ವಿಖ್ಯಾತರಾದ ದೇವರ್ಷಿ 'ನಾರದ'ರ ಅವತಾರವಾದ, 'ಶ್ರೀ ಪುರಂದರದಾಸ'ರು ಶಾಸ್ತ್ರೀಯ ಸಂಗೀತವನ್ನು ಸಾಮಾನ್ಯ ಜನರಿಗೂ ಎಟಕುವಂತೆ ಸುಲಭಗೊಳಿಸಿ ನಮ್ಮನ್ನು ಉದ್ದಾರ ಮಾಡಿದ್ದಾರೆ.


13. ರಂಗಭೂಮಿಯ ಪಿತಾಮಹ ಎಂದು ಹೇಳಬಹುದಾದ 'ಶ್ರೀ ಭರತಮುನಿ'ಯು 'ನಾಟ್ಯ ಶಾಸ್ತ್ರ'ವನ್ನು ರಚಿಸಿದ್ದಾರೆ. ಇದರಲ್ಲಿ ಶಾಸ್ತ್ರೀಯ ನೃತ್ಯ, ಸಂಗೀತ, ಅಭಿನಯ ಇತ್ಯಾದಿಗಳ ಕುರಿತಾದ ವಿಷಯಗಳಿವೆ.


14. ಮಹರ್ಷಿ 'ಕಣಾದ', 'ಔಲೂಕ್ಯ ದರ್ಶನ' ಎಂಬ ಗ್ರಂಥವನ್ನು ರಚಿಸಿ ಅಣು-ಪರಮಾಣುಗಳ ರಚನೆಯನ್ನು ಅತ್ಯುತ್ತಮವಾಗಿ ತಿಳಿಸಿಕೊಟ್ಟಿದ್ದಾರೆ.


15. ಅಡುಗೆ ಎಂಬುದು ಒಂದು ವಿಜ್ಞಾನ, ಒಂದು ಕಲೆ, ಅದು ಜಠರಾಗ್ನಿಗೆ ನೀಡುವ ಹವಿಸ್ಸು. ಇಂತಹ ಪಾಕಶಾಸ್ತ್ರದ ಬಗ್ಗೆ ಭೋಜನ ಕುತೂಹಲ ಎಂಬ ಗ್ರಂಥವನ್ನು ರಚಿಸಿದ್ದಾರೆ.


ಹೀಗೆ, ಒಬ್ಬರೇ ಇಬ್ಬರೇ?, ಹೇಳುತ್ತಾ ಹೋದರೆ ಒಂದು ಜನ್ಮ ಸಾಲದು. ಅವರು ಬರೆದಂತಹ ಗ್ರಂಥಗಳನ್ನು ಪಟ್ಟಿ ಮಾಡುವುದಕ್ಕೂ ಆಗದಷ್ಟು ಜ್ಞಾನವನ್ನು ದಯಪಾಲಿಸಿದ್ದಾರೆ. ಮೇಲೆ ಹೇಳಿರುವ ಪಟ್ಟಿ ತುಂಬಾ ಚಿಕ್ಕದಾಗಿದೆ, ಸಾಧನೆ ಮಾಡಿದ ಮಹಾತ್ಮರು ಇನ್ನೂ ಸಹಸ್ರಾರು ಸಂಖ್ಯೆಯಲ್ಲಿ ಇದ್ದಾರೆ.


ನಮ್ಮ ಗುರು ಪರಂಪರೆಗೆ ಕೊನೆಯೇ ಇಲ್ಲ, ಲೆಕ್ಕವೇ ಇಲ್ಲದಷ್ಟು ಮಹನೀಯರು ಇದ್ದಾರೆ. ಎಲ್ಲಾ ಪ್ರಾತಃಸ್ಮರಣೀಯರಿಗೂ ನಮನಗಳನ್ನು ಪ್ರತಿದಿನ ಸಲ್ಲಿಸೋಣ ಹಾಗೂ ಈ ಜ್ಞಾನ ರಾಶಿಯು ಅಳಿಯದಂತೆ, ನಾವು ಕಲಿತು ಮುಂದಿನ ಪೀಳಿಗೆಗೂ ಕಲಿಸೋಣ.




- ರಾಧಿಕಾ ಎಸ್, ಬೆಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top