ಒಂದಾನೊಂದು ಕಾಲದಲ್ಲಿ ಬ್ರಹ್ಮಾಂಡದ ನಾಲ್ಕು ಪ್ರಮುಖ ದೇವತೆಗಳು ಸಭೆ ಸೇರಿ 'ಜೀವ ರಹಸ್ಯ' ಕಾಪಾಡಿಕೊಳ್ಳುವುದು ಹೇಗೆ ಎಂದು ಚಿಂತನೆ ನಡೆಸಿದರಂತೆ. ಈ ರಹಸ್ಯ ಅಪಾತ್ರರ, ಅದರಲ್ಲೂ ಮಾನವರ ಕೈಗೆ ಸಿಗಬಾರದೆಂಬುದೇ ಅವರ ಆತಂಕವಾಗಿತ್ತು.
ಮೊದಲನೆ ದೇವತೆ ಹೇಳಿದನಂತೆ- ''ನಾವದನ್ನು ಅತ್ಯಂತ ಎತ್ತರದ ಪರ್ವತದಲ್ಲಿ ಅಡಗಿಸಿಟ್ಟರೆ ಅವರಾರಿಗೂ ಸಿಗದು''.
"ಅಲ್ಲಲ್ಲ, ಇವತ್ತಲ್ಲದಿದ್ದರೆ ನಾಳೆಯಾದರೂ ಮಾನವರು ಅಲ್ಲಿಗೆ ತಲುಪಿ ಹಿಡಿತಕ್ಕೆ ತೆಗೆದುಕೊಂಡು ದುರುಪಯೋಗಪಡಿಸದೆ ಇರಲಿಕ್ಕಿಲ್ಲ'' ಎಂದ ಎರಡನೇ ದೇವತೆ. "ಜೀವ ರಹಸ್ಯವನ್ನು ನಾವು ಆಳವಾದ ಸಾಗರದಡಿಯಲ್ಲಿ ಅವಿತಿಟ್ಟರೆ ಹೇಗೆ" ಎಂದು ಬುದ್ಧಿವಂತಿಕೆ ತೋರಿದ.
"ಅದು ಉಪಯೋಗವಿಲ್ಲ. ಒಂದಲ್ಲ, ಒಂದು ದಿನ ಅವರು ಸಾಗರದಡಿ ಶೋಧಿಸದೆ ಬಿಡರು" ಎಂದ ಮೂರನೆಯೆ ದೇವತೆ "ಚಂದ್ರನಲ್ಲಿ ಗುಟ್ಟಾಗಿ ಇಟ್ಟರೆ ಅವರಿಗೆ ಸುಳಿವೇ ಸಿಗದು" ಎಂದು ಜಾಣ ಸಲಹೆ ಇತ್ತನಂತೆ.
"ಅಯ್ಯೋ, ಮಾನವರು ಪ್ರಚಂಡರು. ಯಾವತ್ತಾದರೂ ಚಂದ್ರನಲ್ಲಿಗೆ ಪಯಣಿಸದೆ ಬಿಡರು. ಅಲ್ಲಿ ತಲುಪಿದ ಮೇಲೆ ಅವರದನ್ನು ಕಂಡುಹಿಡಿಯದೆ ಬಿಡುತ್ತಾರೆಯೇ?" ಎಂದು ಹೇಳಿದ ನಾಲ್ಕನೆಯ ಅತಿ ಬುದ್ಧಿವಂತ ದೇವತೆ "ನನಗೆ ಗೊತ್ತಿರುವಂತೆ ಮಾನವರಿಗೆ ಹುಡುಕಲು ಅಸಾಧ್ಯವಾದ ಒಂದೇ ಒಂದು ಜಾಗವಿದೆ" ಎಂದನಂತೆ.
"ಅದು ಯಾವುದು" ಉಳಿದವರೆಲ್ಲ ಉತ್ಸಾಹಿತರಾಗಿ ಕೇಳಿದರಂತೆ.
"ಅದಾ ! ಮಾನವರ ಹೃದಯದಾಳದಲ್ಲಿಟ್ಟರೆ ಅವರ ಜನ್ಮಕ್ಕೂ ಅವರಿಗೆ ರಹಸ್ಯ ಗೊತ್ತಾಗದು. ಹೃದಯದಾಳ ಹುಡುಕುವ ಬಗ್ಗೆ ಅವರಿಗೆ ಯೋಚನೆಯೂ ಬರದು ತಾಳ್ಮೆಯೂ ಇರದು" ಎಂದನಂತೆ ನಾಲ್ಕನೆಯ ದೇವತೆ ನಿಶ್ಚಿಂತನಾಗಿ.
ಸಂತೃಪ್ತಿ:
ಮಾನವನ ಸಂತೃಪ್ತಿಯ ಸಮೃದ್ಧ ಜೀವನದ ಸಪ್ತಸೂತ್ರಗಳಲ್ಲಿ ಉತ್ತಮ ಆರೋಗ್ಯ, ಆರಾಮದ ಬದುಕು, ಪ್ರೀತಿ ಪಾತ್ರರ ಸಂಬಂಧ, ಆಶಿಸಿದ್ದನ್ನು ಮಾಡಲು ಅವಕಾಶ, ಜೀವನಕ್ಕೊಂದು ಅರ್ಥ, ಸಾರ್ಥಕತೆ, ಮನಶ್ಶಾಂತಿ. ಈ ಸಾಲಿನಲ್ಲಿ ಬರುವ ಏಳನೆಯದೂ ಅಷ್ಟೇ ಪ್ರಮುಖವಾದುದು.
ಅದೇನೆಂದರೆ...?
ನಾವು ಈ ಜಗತ್ತು ಬಿಟ್ಟು ತೆರಳುವಾಗ, ನಾವಿಲ್ಲಿಗೆ ಬರುವಾಗ ಇದ್ದುದಕ್ಕಿಂತಲೂ ಉತ್ತಮ ಜಾಗವಾಗಿ ಬಿಟ್ಟು ಹೋಗುತ್ತಿದ್ದೇವೆ. ಹಾಗೂ ಅದಕ್ಕೆ ನಮ್ಮ ಅಳಿಲು ಸೇವೆಯೂ ಆಗಿದೆ ಎಂಬ ನಂಬಿಕೆ.
ಅಜ್ಜ ಮಾವಿನ ಗಿಡ ನೆಡುತ್ತಿದ್ದುದು ತನಗಾಗಿ ಅಲ್ಲ; ಮುಂದೆ ಮೊಮ್ಮಕ್ಕಳು ತಿಂದು ಸಂತೋಷಪಡಲಿ ಎಂದಲ್ಲವೇ...? ನಾವು ಈ ಸಂಸ್ಕೃತಿಯನ್ನು ಮರೆತುಬಿಟ್ಟಿದ್ದೇವೆಯೇ?
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ