ಬೆಳ್ತಂಗಡಿ: "ನಮ್ಮ ತಪ್ಪುಗಳಿಗೆ, ನಮ್ಮ ಸೋಲುಗಳಿಗೆ ನಾವೇ ಕಾರಣರಾಗುತ್ತೇವೆ. ಸಾಧನೆಗೆ ಬಡತನ ಎಂದೂ ಅಡ್ಡಿಯಾಗಲಾರದು. ಸ್ವಪ್ರಯತ್ನವನ್ನು ಬಿಡಬಾರದು. ಅದೃಷ್ಟವನ್ನೇ ನಂಬಿ ಕೂರಬಾರದು. ಒಳ್ಳೆಯ ಆಲೋಚನೆಯಿಂದ ಕಾರ್ಯ ಮಾಡಿದಾಗ ಒಳ್ಳೆಯ ಪ್ರತಿಫಲವೇ ಸಿಗುತ್ತದೆ" ಎಂದು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಗಣೇಶ್ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಡ ಸರಕಾರೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ನಡ ಗ್ರಾಮ ಪಂಚಾಯತ್ನ ಪ್ರಥಮ ಪ್ರಜೆ ಶ್ರೀಮತಿ ಮಂಜುಳಾ ದೇವಾಡಿಗ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಜಿತ್ ಕುಮಾರ್ ಆರಿಗ, ಕೊಯ್ಯೂರು ಸ.ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮೋಹನ ಗೌಡ, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಪರಿಸರಗೀತೆ ಹಾಡಿದರು. ಪರಿಸರ ಸ್ಫರ್ಧೆಯ ಬಹುಮಾನವನ್ನು ರೇಂಜರ್ಸ್ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕನ್ನಡ ಉಪನ್ಯಾಸಕರಾದ ಶ್ರೀಮತಿ ಲಿಲ್ಲಿ ಪಿ.ವಿ. ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಚುನಾವಣಾ ಸಂಚಾಲಕರಾದ ರಾಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶಿಲ್ಪಾ ಡಿ. ಪ್ರಸ್ತಾವನೆಗೈದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ವಸಂತಿ ಪಿ. ಸ್ವಾಗತಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಸುಕೇತ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ