ಭೂ ಹಕ್ಕುಪತ್ರ ವಿತರಣೆಗೆ ವಾರದೊಳಗೆ ಕ್ರಮ: ತಿಮ್ಮನಗೌಡ

Upayuktha
0



ಬಳ್ಳಾರಿ: 
ಬಳ್ಳಾರಿ ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾದ ತಿಮ್ಮನಗೌಡ ಮತ್ತು ತಾಲೂಕು ತಹಶೀಲ್ದಾರ್ ಅವರಿಗೆ ರೈತ ಸಂಘಟನೆ ಎ ಐ ಕೆ ಕೆ ಎಂ ಎಸ್ ನಿಂದ ಹಕ್ಕು ಪತ್ರ ಒದಗಿಸಲು ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಮಿತಿ ಅಧ್ಯಕ್ಷರು ಇನ್ನು ಒಂದು ವಾರದಲ್ಲಿ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದ ಕಾರ್ಯಕೈಗೊಳ್ಳುವುದಾಗಿ ಭರವಸೆ ನೀಡಿದರು. 


ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಗೋವಿಂದ್ ಅವರು ಮಾತನಾಡುತ್ತಾ ಬಳ್ಳಾರಿ ತಾಲೂಕಿನಲ್ಲಿ ಸುಮಾರು 50 ರಿಂದ 60 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ತಮ್ಮ ಜೀವನ ಸಾಗಿಸುವುದಕ್ಕಾಗಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿ, ಅವರಿಂದ ಅರ್ಜಿಗಳನ್ನು ಸ್ವೀಕಸಿ ಸುಮಾರು ವರ್ಷಗಳೇ ಕಳೆದಿವೆ, ಆದರೆ ಈ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದು ಕೆಲವೊಮ್ಮೆ, ಸ್ಥಗಿತಗೊಂಡಿರುವುದರಿಂದ, ಈ ಭೂಮಿಯ ಮೇಲೆ ಅವಲಂಬಿತವಾಗಿರುವ ಸಾಕಷ್ಟು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ರೈತರು ತಮ್ಮ ಜೀವನ ಸಾಗಿಸಲು ಬೇರೆ ಯಾವುದೇ ಭೂಮಿಯು ಇವರಿಗೆ ಇಲ್ಲವಾಗಿದೆ, ಈಗ ಇರುವ ಭೂಮಿಗೆ ಹಕ್ಕು ಪತ್ರ ಇಲ್ಲದ್ದರಿಂದ ಇವರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳು, ಬ್ಯಾಂಕ್ ಸೌಲಭ್ಯಗಳು ಸಿಗದಂತಾಗಿವೆ. ಹಾಗಾಗಿ ತಾವುಗಳು ಈ ಕ್ಷೇತ್ರದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಬಳ್ಳಾರಿ ತಾಲೂಕು ಉಪಾಧ್ಯಕ್ಷರಾದ ಮಲ್ಲಪ್ಪ ರೈತರಾದ ಅಸುಂಡಿ ನಾಗಭೂಷಣ, ತಿಪ್ಪಯ್ಯ, ಗಾದಿಲಿಂಗಪ್ಪ, ಹನುಮಂತಪ್ಪ ಯರಿಸ್ವಾಮಿ, ರಾಮದಾಸ್ ಸೇರಿದಂತೆ ಇತರರು ಇದ್ದರು.



إرسال تعليق

0 تعليقات
إرسال تعليق (0)
To Top