ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ಅಶೋಕೆಯ ವಿದ್ಯಾನಂದದಲ್ಲಿ ಧಾನ್ಯಲಕ್ಷ್ಮಿ ಪೂಜೆ ಮತ್ತು ಅನ್ನಪೂಣೇಶ್ವರಿ ಪೂಜೆ ನಡೆಯಿತು.
ಇದಕ್ಕೂ ಮುನ್ನ ರಾಘವೇಶ್ವರ ಶ್ರೀಗಳು ಚಂದ್ರಮೌಳೀಶ್ವರ ದೇಗುಲಕ್ಕೆ ತೆರಳಿ ದರ್ಶನ ಪಡೆದರು. ನಾಡಿನ ಮೂಲೆ ಮೂಲೆಗಳಿಂದ ಶಿಷ್ಯಭಕ್ತರು ಸುವಸ್ತು ರೂಪದಲ್ಲಿ ಕಳುಹಿಸಿಕೊಟ್ಟ ದವಸ ಧಾನ್ಯಗಳಿಗೆ ಶ್ರೀಗಳು ಪೂಜೆ ನೆರವೇರಿಸಿದರು. ಅನ್ನಪೂಣೇಶ್ವರಿ ಪೂಜೆ ಬಳಿಕ ಚಾತುರ್ಮಾಸ್ಯದ ಅನ್ನಸಂತರ್ಪಣೆ ಆರಂಭವಾಯಿತು.
ಚಾತುರ್ಮಾಸ್ಯಕ್ಕೆ ಆಗಮಿಸುವ ಶಿಷ್ಯಭಕ್ತರಿಗೆ ಯಥೋಚಿತ ಊಟೋಪಚಾರದ ಜತೆಗೆ ಸ್ವಚ್ಛತೆಗೆ ಒತ್ತು ನೀಡುವಂತೆ ಶ್ರೀಗಳು ಸೂಚಿಸಿದರು. ಪುರಪ್ರವೇಶ ಸಂದರ್ಭದಲ್ಲಿ ನೂರಾರು ಮಂದಿ ಮಾತೆಯರು ಮತ್ತು ಶಿಷ್ಯಭಕ್ತರು ಶ್ರೀಗಳಿಗೆ ಭವ್ಯಸ್ವಾಗತ ಕೋರಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಹಿರಿಯ ಪದಾಧಿಕಾರಿಗಳಾದ ಆರ್.ಜಿ.ಹೆಗಡೆ, ಸುಬ್ರಾಯ ಭಟ್, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಸತ್ಯನಾರಾಯಣ ಶರ್ಮಾ, ಅಶ್ವಿನಿ ಉಡುಚೆ, ಪ್ರಸನ್ನ ಉಡುಚೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಕಾರ್ಯದರ್ಶಿ ಮಧು ಜಿ.ಕೆ, ವ್ಯವಸ್ಥಾಪಕ ಪ್ರಮೋದ್ ಮುಡಾರೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಭಾನುವಾರ ಚಾಲನೆ: ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಯವರ 31ನೇ ಚಾತುರ್ಮಾಸ್ಯ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ.
ಅನಾವರಣ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಪರಮಪೂಜ್ಯರು ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದು, ವರ್ಷಾಕಾಲದಲ್ಲಿ ಲೋಕಹಿತಕ್ಕಾಗಿ ಪರಮ ಪುರುಷನ ಆರಾಧನೆ, ಅನುಷ್ಠಾನಗಳಲ್ಲಿ ನಿರತರಾಗುವರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ