ಗೋಕರ್ಣ: ಹಿಂದಿನ ಪೀಳಿಗೆಯ ಶ್ರೇಷ್ಠತೆಯನ್ನು ಮುಂದಿನ ಪೀಳಿಗೆಗೆ ಒಯ್ಯುವ ಜತೆಗೆ ಅದನ್ನು ವರ್ಧಿಸಿ ಮತ್ತಷ್ಟು ಶ್ರೇಷ್ಠವಾಗಿಸುವುದೇ ಪರಂಪರೆ. ಹಿಂದಿನ ಎಲ್ಲ ಒಳಿತುಗಳು ಮುಂದಿನ ಪೀಳಿಗೆಗೆ ತಲುಪಿದಾಗ ಅದು ಮತ್ತಷ್ಟು ಶ್ರೇಷ್ಠವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯಲ್ಲಿ ಹವ್ಯಕ ಮಹಾಮಂಡಲ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಪರಂಪರಾ ಗುರುಕುಲದ ವರ್ಧಂತಿ ಉತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮೌಲ್ಯಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ದಾಟಬೇಕು. ಶ್ರೇಷ್ಠತೆಯನ್ನು ಮುಂದುವರಿಸುವ ಸರಣಿಯೇ ನಿಜ ಅರ್ಥದಲ್ಲಿ ಪರಂಪರೆ. ಪ್ರತಿ ಜಾತಿ, ಧರ್ಮಗಳ ಪರಂಪರೆ ಮುಂದುವರಿಯಬೇಕು ಎಂದು ಸ್ವಾಮೀಜಿ ಆಶಿಸಿದರು.
ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆ ಪರಂಪರೆಯನ್ನು ಬೆಳೆಸುವ ಕಾರ್ಯ ಮಾಡುತ್ತಿಲ್ಲ; ಈ ಕೊರತೆಯನ್ನು ನೀಗಿಸುವ ಪ್ರಯತ್ನವೇ ಪರಂಪರಾ ಗುರುಕುಲದ ಪರಿಕಲ್ಪನೆ. ನಮ್ಮ ಪರಂಪರೆಯನ್ನು ಕಾಪಾಡಿಕೊಳ್ಳದಿದ್ದರೆ ಮುಂದೊಂದು ದಿನ ಅತಂತ್ರಭಾವ ನಮ್ಮನ್ನು ಕಾಡುತ್ತದೆ ಎಂದು ಎಚ್ಚರಿಸಿದರು.
ಮೈಸೂರಿನ ಭಾರತೀ ಯೋಗಧಾಮದ ಮುಖ್ಯಸ್ಥರಾದ ಡಾ.ಶಂಕರನಾರಾಯಣ ಜೋಯಿಸ್ ಅವರು ಗುರುಶಿಷ್ಯ ಪರಂಪರೆಯ ಬಗ್ಗೆ ಪ್ರವಚನ ನೀಡಿದರು. ಭಾರತೀಯ ಸಂಸ್ಕೃತಿಗೂ ಗುರುಶಿಷ್ಯ ಪರಂಪರೆಗೂ ಅವಿನಾಭಾವ ಸಂಬಂಧ ಇದೆ. ನಮ್ಮ ನಾಡಿನ ಮೌಲ್ಯಗಳನ್ನು, ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿರುವುದೇ ಈ ಗುರುಶಿಷ್ಯ ಪರಂಪರೆ. ತಾಯಿ ಮಗುವಿಗೆ ಹೇಳಿಕೊಡುವಲ್ಲಿಂದ ಹಿಡಿದು, ಮಗು ಬೇರೆಯವರಿಂದ ಕಲಿಯುವುದು ಕೂಡಾ ಈ ಪರಂಪರೆಯ ಭಾಗ. ಆದರೆ ಇದು ಲೌಕಿಕಕ್ಕೆ ಸೀಮಿತ. ಅಲೌಕಿಕ ತತ್ವಗಳನ್ನು ಬೋಧಿಸುವವನು ನಿಜವಾದ ಗುರು. ಭುವಿನಿಂದ ಪರಂಜ್ಯೋತಿಯೆಡೆಗೆ ಸಾಗುವ ದಿಕ್ಕು ತೋರಿಸುವವನು ಗುರು. ಅಂಥ ಅಪೂರ್ವ ಜ್ಞಾನವನ್ನು ಶಿಷ್ಯನಿಗೆ ಧಾರೆ ಎರೆಯುವ ಮೂಲಕ ಸಂಸಾರ ಬಂಧನದಿಂದ ಮುಕ್ತಿ ಪಡೆಯುವ ದಾರಿಯನ್ನು ತೋರಿಸುತ್ತಾನೆ ಎಂದು ಅವರು ಬಣ್ಣಿಸಿದರು.
ಆದರೆ ಕಳೆದ 150 ವರ್ಷಗಳಲ್ಲಿ ಭಾರತದ ಗುರುಕುಲ ಪದ್ಧತಿಯನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗಿದೆ. ಭಾರತೀಯ ವಿದ್ಯೆಗಳು ನಮ್ಮನ್ನು ಭವ್ಯ ಬೆಳಕಿನೆಡೆಗೆ ಒಯ್ಯುವ ವಾಹನಗಳು. ಆದರೆ ಇಂದಿನ ವಿದ್ಯೆ ಪರಿಪೂರ್ಣವೂ ಅಲ್ಲ; ಸಮರ್ಪಕವೂ ಅಲ್ಲ. ಬಾಹ್ಯ ಜೀವನಕ್ಕೆ ಬೇಕಾದ ಅಲ್ಪ ತಿಳಿವಳಿಕೆಯನ್ನು ಮಾತ್ರ ಇಂದಿನ ಶಿಕ್ಷಣ ನೀಡುತ್ತದೆ. ವಿದ್ಯೆಯ ಸಾಮಥ್ರ್ಯ ದೊಡ್ಡದು. ಜ್ಞಾನದ ಜತೆಗೆ ವಿದ್ಯೆಯ ಸದ್ಬಳಕೆಯನ್ನೂ ಗುರು ಹೇಳಿಕೊಡುತ್ತಾನೆ. ಆದ್ದರಿಂದ ಗುರುಶಿಷ್ಯ ಪರಂಪರೆಗೆ ಮಹತ್ವದ ಸ್ಥಾನ ಎಂದು ವಿಶ್ಲೇಷಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಕೊಣಾಲೆ ಸುಬ್ರಹ್ಮಣ್ಯ ಭಾರತಿಯವರು, ಪರಂಪರೆ ಇಲ್ಲಿ ಸಾಂಸ್ಥಿಕ ರೂಪವನ್ನು ಪಡೆದಿದೆ. ಸಮಾಜದಲ್ಲಿ ಶಾಂತಿ- ಸಮೃದ್ಧಿಗೆ ಜ್ಞಾನ ಅಗತ್ಯ. ಇಂಥ ನಿಜಜ್ಞಾನವನ್ನು ಗುರುಕುಲಗಳು ನೀಡುತ್ತವೆ. ಅದ್ವೈತ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಪರಿಪೂರ್ಣವಾಗುತ್ತದ ಎಂದು ಅಭಿಪ್ರಾಯಪಟ್ಟರು.
ಪರಂಪರಾ ಗುರುಕುಲದ ಪ್ರಾಚಾರ್ಯರಾದ ವಿದ್ವಾನ್ ನರಸಿಂಹ ಭಟ್- ಚಂಪಾ ದಂಪತಿ ಸಭಾಪೂಜೆ ನೆರವೇರಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಯೆ ಅಕ್ಷತಾ ವರದಿ ವಾಚನ ಮಾಡಿದರು. ಅರ್ಪಿತಾ ಹೆಗಡೆ ಪ್ರತಿಭಾ ಪುರಸ್ಕಾರ ನಿರ್ವಹಿಸಿದರು. ಸುಧನ್ವ ಆರ್ಯ ಕಾರ್ಯಕ್ರಮ ನಿರೂಪಿಸಿ, ಮಂಜುನಾಥ ಹೆಗಡೆ ವಂದಿಸಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಶಿಕ್ಷಣ ಸಂಯೋಜಕರಾದ ಅಶ್ವಿನಿ ಉಡುಚೆ, ಸಾರ್ವಭೌಮ ಗುರುಕುಲದ ಪಿಯು ವಿಭಾಗದ ಪ್ರಾಚಾರ್ಯೆ ಶಶಿಕಲಾ ಕೂರ್ಸೆ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ, ಶಿವಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ