ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸಂಶೋಧನಾತ್ಮಕ ಕಿರುಸಂಪುಟವೇ ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ.
ಕನ್ನಡ-ಮರಾಠ ಜನಾಂಗ, ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಪರ್ಕ ಸೇತುವೆ. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮರಾಠ ಸಮಾಜ ವಹಿಸಿರುವ ಪಾತ್ರ ಅವಿಸ್ಮರಣೀಯ. ಇತಿಹಾಸ ಕಾಲದಿಂದಲೂ ಮರಾಠ ರಾಜವಂಶಗಳು ಕರ್ನಾಟಕದ ಚರಿತ್ರೆಯನ್ನು ರೂಪಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. 1637ರಲ್ಲಿ ಷಹಜಿಯು ಬೆಂಗಳೂರನ್ನು ಜಹಗೀರನ್ನಾಗಿ ಪಡೆದ ಮೇಲೆ ಕರ್ನಾಟಕದಲ್ಲಿ ಮರಾಠರ ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾದವು. ಕನ್ನಡ ನಾಡಿನ ಸಾಂಸ್ಕೃತಿಕ ಸಂವರ್ಧನೆಗೆ ಈ ಮರಾಠ ಸಮುದಾಯದ ಪಾತ್ರ ಅತ್ಯಂತ ಮಹತ್ವವಾದದ್ದು.
ಷಹಜಿಯು ಬೆಂಗಳೂರಿನಿಂದ ಆಳ್ವಿಕೆಯನ್ನು ನಡೆಸುತ್ತಿದ್ದನು. ಬಾಲ್ಯದಲ್ಲಿ ಶಿವಾಜಿಯು ಬೆಂಗಳೂರಿನಲ್ಲಿಯೇ ಇದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯವು ಇತ್ತು ಎಂಬುದು ನಮಗೆ ಅಭಿಮಾನದ ವಿಷಯ. ಷಹಜಿಯ ನಂತರ, ಶಿವಾಜಿ, ಸಂಭಾಜಿ, ಏಕೋಜಿ ಮೊದಲಾದವರು ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುಭಾಗಗಳ ಮೇಲೆ ಆಳ್ವಿಕೆ ನಡೆಸಿದರು. ಶಿವಾಜಿಯು ಕೆಳದಿಯ ಚೆನ್ನಮ್ಮಾಜಿಗೆ ನೆರವಾಗಿದ್ದನು. ಶಿವಾಜಿಯ ಮಗ ರಾಜಾರಾಮನಿಗೆ ಕೆಳದಿಯ ಚೆನ್ನಮ್ಮನು ರಕ್ಷಣೆಯನ್ನು ನೀಡಿದ್ದು ಐತಿಹಾಸಿಕ ಸತ್ಯ. ಮುಂದೆ ಕರ್ನಾಟಕ ಮೂಲಕ ಅನೇಕ ಮರಾಠ ರಾಜವಂಶಜರು, ಪರಾಕ್ರಮಿಗಳು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಭಾಗವಹಿಸಿ ತ್ಯಾಗ ಬಲಿದಾನಗೈದಿದ್ದಾರೆ.
ಆಧುನಿಕ ಕಾಲದಲ್ಲಿ ಮರಾಠ ಸಮುದಾಯವು ಕನ್ನಡ ನಾಡಿನ ಪುರೋಭಿವೃದ್ಧಿಗೆ ಸಲ್ಲಿಸಿರುವ ಸೇವೆಯಂತೂ ಗಮನಾರ್ಹವಾದುದು. ಸಾಹಿತ್ಯ, ಸಂಗೀತ, ನಾಟಕ, ಸಿನಿಮಾರಂಗ, ಕೈಗಾರಿಕೆ, ರಾಜಕೀಯ, ಆಡಳಿತ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮರಾಠ ಸಮುದಾಯ, ಕನ್ನಡ ನಾಡಿಗೆ ಅಪಾರ ಕೊಡುಗೆಯನ್ನು ನೀಡಿದೆ. ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನರು ಬೇರೆ, ಮರಾಠ ಸಮುದಾಯದವರು ಬೇರೆಯಾಗಿದ್ದು, ಇವರಿಬ್ಬರೂ ಕನ್ನಡದ ಅಭಿವ್ಯಕ್ತಿಗಳಾಗಿರುತ್ತಾರೆ.
ಕರ್ನಾಟಕ ರಾಜ್ಯದ ಪ್ರಮುಖ ಜನಸಮುದಾಯಗಳಲ್ಲಿ ಮರಾಠ ಜನಾಂಗವು ಒಂದು. ಸಾಮಾಜಿಕವಾಗಿ, ರಾಜಕೀಯವಾಗಿ ಇಲ್ಲಿ ನೆಲೆನಿಂತ ಈ ಸಮುದಾಯದವರು ಇತ್ತೀಚಿನ ಅಂಕಿಅAಶಗಳ ಪ್ರಕಾರ ರಾಜ್ಯದ 31 ಜಿಲ್ಲೆಗಳಲ್ಲಿ ಅಂದಾಜು 42 ಲಕ್ಷ ಜನರಿದ್ದಾರೆ. ಮರಾಠ ಸಮುದಾಯದಲ್ಲಿ ಅನೇಕ ಒಳಪಂಗಡಗಳಿವೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಬಹಳ ಮೊದಲಿನಿಂದಲೂ ಮರಾಠ ಸಮುದಾಯದವರು ನೆಲೆಸಿದ್ದರು ಎಂಬುದಕ್ಕೆ ಶಾಸನಾಧಾರಗಳೂ ಇವೆ.
ಮರಾಠ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ಮರಾಠ ಅಭಿವೃದ್ಧಿ ನಿಗಮವನ್ನು ರಚಿಸಿದ್ದು, ಹಿಂದುಳಿದ ಮರಾಠ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪುರೋಭಿವೃದ್ಧಿಯ ಬಗ್ಗೆ ನಿಗಮವು ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಮರಾಠ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತವು ಡಾ. ಪ್ರಕಾಶ್ ಆರ್. ಪಾಗೋಜಿರವರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರವರು ಸಂಪಾದಕರಾಗಿ ವಿದ್ವಾಂಸರ ನೆರವಿನಿಂದ ಸಮಗ್ರ ಅಧ್ಯಯನ ನಡೆಸಿ, “ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ” ಎಂಬ ಸಂಶೋಧನಾತ್ಮಕ ಕಿರು ಸಚಿತ್ರ ಸಂಪುಟವನ್ನು ಪ್ರಕಟಿಸುವ ಮೂಲಕ ಕರ್ನಾಟಕ ಮತ್ತು ಮರಾಠಿಗರ ಸಾಂಸ್ಕೃತಿಕ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಿ ನೆಲೆಗೊಳ್ಳುವಲ್ಲಿ ಇದೊಂದು ಮೈಲಿಗಲ್ಲಾಗಲಿದೆ.
ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಅನೇಕ ಮರಾಠ ವೀರರು ಕರ್ನಾಟಕದಿಂದ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಆಧುನಿಕ ಕಾಲದಲ್ಲಿ ಮರಾಠ ಸಮುದಾಯವು ಕನ್ನಡ ನಾಡಿನ ಪುರೋಭಿವೃದ್ಧಿಗೆ ಸಲ್ಲಿಸಿರುವ ಸೇವೆ ಗಮನಾರ್ಹವಾದುದು. ಕನ್ನಡ ಸಾಹಿತ್ಯ, ಸಂಗೀತ, ನಾಟಕ, ಸಿನಿಮಾರಂಗ, ಕೈಗಾರಿಕೆ, ಆಡಳಿತ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮರಾಠ ಸಮುದಾಯವು ಕನ್ನಡ ನಾಡಿಗೆ ಸಲ್ಲಿಸಿರುವ ಸೇವೆ ಸ್ಮರಣೀಯವಾದುದು. ಈ ಸಂಪುಟದ ಓದಿನ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಮರಾಠ ಸಮುದಾಯದ ಕೊಡುಗೆಯ ನೆಲೆ-ಬೆಲೆಯನ್ನು ತಿಳಿಯಲು ಸಾಧ್ಯವಾಗುತ್ತದೆ.
ಪುಸ್ತಕದ ವಿವರ
ಕೃತಿ: “ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ”
ಸಂಪಾದಕರು: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಪ್ರಕಾಶಕರು: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಪುಟ: 250- ಆಕಾರ: 1/4 ಕ್ರೌನ್- ಪ್ರಕಟಣ ವರ್ಷ: 2024 ಬೆಲೆ: ರೂ 500/- ಪ್ರತಿಗಳಿಗೆ ಸಂಪರ್ಕಿಸಿ: 080- 29903994
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ