- ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯಿಂದ ಆಯೋಜನೆ
- ಬದಿಯಡ್ಕದ ಕಯ್ಯಾರರ ವಾಚನಾಲಯ ಶೀಘ್ರ ಪುನರಾರಂಭ
ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಕಾಸರಗೋಡು ಮತ್ತು ಕಯ್ಯಾರರ ಕುಟುಂಬ ಜಂಟಿ ಆಶ್ರಯದಲ್ಲಿ ಕಯ್ಯಾರರ ನಿವಾಸದಲ್ಲಿ ಕಯ್ಯಾರರ 109ನೆ ಜನ್ಮ ದಿನಾಚರಣೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಅಧ್ಯಕ್ಷರಾದ ಚನಿಯಪ್ಪ ನಾಯ್ಕ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರಾದ ಸುಕುಮಾರ್ ಕುದ್ರೆಪಾಡಿ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಯವರ ಬದುಕು ಹಾಗೂ ಬರಹ ಸ್ಮರಣೀಯ. ರಾಜಕೀಯ, ಸಾಮಾಜಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ತೋರಿದ ಅಸಾಮಾನ್ಯ ಸಾಧನೆ ಇಂದಿನ ಮಕ್ಕಳಿಗೆ, ಯುವಜನರಿಗೆ ಮಾದರಿಯಾಗಬೇಕು. ಕಯ್ಯಾರರ ಬಗ್ಗೆ, ಅವರ ರೀತಿ ನೀತಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕನ್ನಡಿಗರು ಕನ್ನಡಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿತ್ವವನ್ನು ಸದಾ ಸ್ಮರಿಸಬೇಕು. ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ, ಮುಚ್ಚಿರುವ ಕಯ್ಯಾರರ ಹೆಸರಲ್ಲಿರುವ ಬದಿಯಡ್ಕ ಪಂಚಾಯತು ಪುಸ್ತಕಾಲಯವನ್ನು ತೆರೆದು, ಇನ್ನಷ್ಟು ಸುಸಜ್ಜಿತಗೊಳಿಸಿ ಅದರ ಪ್ರಯೋಜನ ಓದುಗರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಪಂಚಾಯತು ಅಧ್ಯಕ್ಷರನ್ನು ಒತ್ತಾಯಿಸಲಾಗುವುದೆಂದು ಹೇಳಿದರು.
ಪ್ರೊ. ಶ್ರೀನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಶ್ಯಾಂ ಪ್ರಸಾದ್ ಮಾನ್ಯ, ಕುಂಬಡಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಗೋಸಾಡ, ತುಳು ಸಂಘಟಕ ಕೃಷ್ಣ ಡಿ ಬೇಲಿಂಜ, ನಿರಂಜನ್ ರೈ ಪೆರಡಾಲ, ಬದಿಯಡ್ಕ ರೋಟರಿ ಕ್ಲಬ್ ನ ಪ್ರತಿಕ್ ಆಳ್ವ, ಕಯ್ಯಾರರ ಕುಟುಂಬದ ಪ್ರದೀಪ್ ರೈ, ಆರತಿ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಂದ್ರಹಾಸ ಮಾಸ್ಟರ್, ವಸಂತ ಬಾರಡ್ಕ ಕಯ್ಯಾರರು ರಚಿಸಿದ ಕವನ ವಾಚಿಸಿದರು. ಧನರಾಜ್ ಪೆರ್ಲ ಸ್ವಾಗತಿಸಿ, ಸುಷ್ಮಿತಾ ಗೋಸಾಡ ವಂದಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು.
ಮುಚ್ಚಿರುವ ಕಯ್ಯಾರರ ಹೆಸರಲ್ಲಿರುವ ಬದಿಯಡ್ಕ ಪಂಚಾಯತು ಪುಸ್ತಕಾಲಯವನ್ನು ತೆರೆದು, ಇನ್ನಷ್ಟು ಸುಸಜ್ಜಿತಗೊಳಿಸಿ ಅದರ ಪ್ರಯೋಜನ ಓದುಗರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಪಂಚಾಯತು ಅಧ್ಯಕ್ಷರನ್ನು ಒತ್ತಾಯಿಸಲಾಗುವುದು ಮತ್ತು ಅದಕ್ಕೆ ಸಮಿತಿಯೊಂದನ್ನು ರಚಿಸಿ ಹಲವು ಕಾರ್ಯಕ್ರಮಗಳನ್ನು ನಡೆಸಲು ರೂಪುರೇಷೆ ಮಾಡಲಾಗುವುದು.
- ಮಾಹಿನ್ ಕೇಳೋಟ್
ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು
ಕಳೆದ ಒಂಬತ್ತು ವರ್ಷಗಳಿಂದ ನಾಡೋಜ ಕಯ್ಯಾರ ಕಿಂಞಣ್ಣ ರೈಗಳ ಹುಟ್ಟುಹಬ್ಬವನ್ನು ಕಯ್ಯಾರರ ಕುಟೀರದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಹಮ್ಮಿ ಕೊಳ್ಳುತ್ತಾ ಬಂದಿರುತ್ತದೆ. ಮುಂದಿನ ವರ್ಷ ಹತ್ತನೇ ಜನ್ಮದಿನವನ್ನು ಜಿಲ್ಲಾ ಮಟ್ಟದಲ್ಲಿ ಬಹಳ ವಿಜೃಂಭಣೆಯಿಂದ ಕುಟುಂಬದ ಸಹಕಾರದೊಂದಿಗೆ ನಡೆಸಲಾಗುವುದು. ಈಗಾಗಲೇ ಕಯ್ಯಾರರ ಭವನ ನಿರ್ಮಾಣದತ್ತ ಸರಕಾರವು ಕಾಲಿಟ್ಟಿದ್ದು ಆದಷ್ಟು ಬೇಗ ಕಾಮಗಾರಿ ಆರಂಭಗೊಂಡು ಕಾರ್ಯ ಪ್ರವೃತ್ತವಾಗಲಿ.
- ಅಖಿಲೇಶ್ ನಗುಮುಗಂ
ಪ್ರಧಾನ ಕಾರ್ಯದರ್ಶಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ