ಆರೋಗ್ಯ ಪ್ರಸಾದಿನೀ ಅರೋಗ್ಯ ಮಾಹಿತಿ ಕಾರ್ಯಾಗಾರ
ಪುತ್ತೂರು: ಆರೋಗ್ಯ ಪ್ರಸಾದಿನೀ ಅರೋಗ್ಯ ಮಾಹಿತಿ ಕಾರ್ಯಾಗಾರವು, ಭಾನುವಾರ (ಜೂ.9) ನರಿಮೊಗರಿನ ಪಾದೆ ಎಂಬಲ್ಲಿರುವ ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಿತು. ದೀಪಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಎನ್. ದುಗ್ಗಪ್ಪ ಇವರು "ಆರೋಗ್ಯದ ಕುರಿತ ಇಂತಹ ಕಾರ್ಯಕ್ರಮಗಳನ್ನು ಮಾಡುವ, ಬರಹಗಳ ಮೂಲಕ ಜನಜಾಗೃತಿ ಮೂಡಿಸುವ, ಹಲವಾರು ರೋಗಿಗಳನ್ನು ಆಯುರ್ವೇದ ಚಿಕಿತ್ಸೆಯ ಮೂಲಕ ಗುಣಪಡಿಸಿದ ಜನಪ್ರೇಮಿ ವೈದ್ಯ ಡಾ. ಬಂಗಾರಡ್ಕ ಇವರು ಅಭಿನಂದನಾರ್ಹರು" ಎಂದರು.
ಸಂಸ್ಕರಿಸಿದ ಆಹಾರ ಮತ್ತು ನಮ್ಮ ಅರೋಗ್ಯ ವಿಷಯದ ಬಗ್ಗೆ ವಿಸ್ತೃತವಾಗಿ ಮಾತನಾಡಿದ ಆಸ್ಪತ್ರೆಯ ಆಡಳಿತ ನಿರ್ದೇಶಕರೂ, ಖ್ಯಾತ ಆಯುರ್ವೇದ ತಜ್ಞ ವೈದ್ಯರೂ ಆಗಿರುವ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, "ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ಯಾಕ್ ಮಾಡಿದ, ಕೃತಕ ಬಣ್ಣ ಪರಿಮಳಗಳನ್ನು ಸುರಿದ, ಆರೋಗ್ಯಕ್ಕೆ ಮಾರಕವಾದ ಸಂಸ್ಕರಿತ ಆಹಾರಗಳ ಚಟಕ್ಕೆ ಎಲ್ಲರೂ ದಾಸರಾಗಿದ್ದಾರೆ. ಇದರಿಂದ ಹೊರಬರದೆ ಅರೋಗ್ಯ ಎಂಬುದು ಮರೀಚಿಕೆ" ಎಂದರು.
ಕು. ಸುನಿಧಿ ಪ್ರಾರ್ಥನೆಗೈದು, ಕು. ಸುದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಆಡಳಿತ ಮಂಡಳಿಯ ವ್ಯವಸ್ಥಾಪನಾ ಮುಖ್ಯಸ್ಥೆ ಡಾ. ಶ್ರುತಿ ಎಂ.ಎಸ್. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, "ಪ್ರಸಾದಿನೀ ಆಸ್ಪತ್ರೆಯು ಇಂದು ಒಳರೋಗಿ ವಿಭಾಗ, ಪಂಚಕರ್ಮ ಚಿಕಿತ್ಸಾ ಸೌಲಭ್ಯ, ಕಿರುಶಾಸ್ತ್ರ ಚಿಕಿತ್ಸಾ ವಿಭಾಗ, ಯೋಗ ಹಾಲ್ ಎಲ್ಲಾ ಸುಸಜ್ಜಿತ ವ್ಯಸ್ಥೆಯೊಂದಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟ್ಟು ಕಾರ್ಯನಿರ್ವಹಿಸುತ್ತಿರುವುದಕ್ಕೆ ಇಲ್ಲಿ ಚಿಕಿತ್ಸೆ ಪಡೆದು ಗುಣಹೊಂದಿದ ಜನರ ಆಶೀರ್ವಾದವೇ ಕಾರಣ" ಎಂದರು.
ಮುಖ್ಯ ಜೀವವಿಮಾ ಸಲಹೆಗಾರರೂ, ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರೂ ಆದ ಎಂ. ಸುಬ್ರಮಣ್ಯ ಭಟ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಧನ್ಯವಾದ ನಡೆಸಿಕೊಟ್ಟರು. ಪ್ರಶ್ನೋತ್ತರದಲ್ಲಿ ಸಾಮಾಜಿಕ ಕಾರ್ಯಕರ್ತ ಸುರೇಶ್ ಪ್ರಭು ಶೆಟ್ಟಿಮಜಲು, ಡಾ. ಸೀತಾರಾಮ ಭಟ್ ಕಲ್ಲಮ, ಡಾ. ರಾಜಾರಾಮ್ ನೆಲ್ಲಿತ್ತಾಯ, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಎನ್. ಸರ್ವೇದೋಳಗುತ್ತು, ನವಚೇತನ ನಿವಾಸಿ ಗೀತಾ ಸದಾಶಿವ ಮುಂತಾದವರು ಭಾಗವಹಿದರು.
ಜಯರಾಮ ಪ್ರಭು ಶೆಟ್ಟಿಮಜಲು ಉಪಹಾರ ನೀಡುವಲ್ಲಿ ಸಹಕರಿಸಿದರು. ಆಸ್ಪತ್ರೆಯ ಸಿಬ್ಬಂದಿಗಳಾದ ರಂಜಿನಿ, ತುಳಸಿ, ಸ್ವಾತಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಬರೆದ ಪುಸ್ತಕ "ಅರೋಗ್ಯ ಪ್ರಸಾದಿನೀ", ಪೇಯ ಕಷಾಯ ಹುಡಿ, ಸ್ವರ್ಣಪ್ರಾಶ ಇತ್ಯಾದಿ ಪ್ರಸಾದಿನೀ ಆಯುರ್ವೇದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ ವಿತರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ