- ಡಾ.ಪಿ. ಶಾಂತಾರಾಮ ಪ್ರಭು, ನಿಟ್ಟೂರು
ಇಂದಿನ ಪ್ರಕ್ಷುಬ್ದ ಜಾಗತಿಕ ಗೊಂದಲಗಳಿಗೆ ವಾಲ್ಮೀಕಿ ಮಹರ್ಷಿಗಳು ಚಿತ್ರಿಸಿದ ರಾಮನ ಮೌಲ್ಯಗಳು ಪರಿಹಾರೋಪಾಯಗಳನ್ನು ಸಿದ್ಧೌಷಧಗಳೆಂದು ಹೇಳಿದರೆ ತಪ್ಪಾಗಲಾರದು. ಮನುಷ್ಯನ ಮಾತು ಮತ್ತು ವರ್ತನೆಗಳೇ ಸಾಮಾಜಿಕ ಸಂಪರ್ಕ ಸಂಘರ್ಷಗಳಿಗೆ ಕಾರಣವಾಗುತ್ತವೆ. ರಾಮನ ಮಾತು ಮತ್ತು ವರ್ತನೆಗಳನ್ನು ನಾವು ಅನುಕರಿಸಿದರೆ ಸಾಮಾಜಿಕ ಅಶಾಂತಿ ದೂರವಾಗಿ ಸಮಾಜದ ಶಾಂತಿ ಸುವ್ಯವಸ್ಥೆ ಉಳಿದು ಬೆಳೆಯುವುದರಲ್ಲಿ ಸಂಶಯವಿಲ್ಲ.
ಸೂರ್ಯವಂಶದ ಒಂದು ನೂರಾ ಇಪ್ಪತ್ತೇಳು ರಾಜರು ಈ ನಮ್ಮ ದೇಶವನ್ನು ಆಳಿದರು. ಐತಿಹಾಸಿಕವಾಗಿ ಕಾಲಮಾನವನ್ನು ಹೇಳಬೇಕೆಂದರೆ ಅದು ತ್ರೇತಾಯುಗದ ಕಾಲ. ಆ ಕಾಲದಲ್ಲಿ ಸೂರ್ಯವಂಶದ ರಾಜ್ಯದ ವಿಸ್ತಾರವೆಷ್ಟಿತ್ತೆಂಬುದನ್ನು ಆ ಕಾಲದ ಪ್ರತ್ಯಕ್ಷದರ್ಶಿಗಳಾದ ವಾಲ್ಮೀಕಿಗಳೇ ಹೀಗೆ ಹೇಳಿದ್ದಾರೆ- "ಇಕ್ಷ್ವಾಕೂಣಾಂ ಇಯಂ ಭೂಮಿಃ ಸಶೈಲವನ ಕಾನನಾ" ಭೂಮಿಯ ಮೇಲೆ ಎಲ್ಲೆಲ್ಲಿ ಬೆಟ್ಟ ಗುಡ್ಡ ನದಿ ಕಾಡುಗಳಿವೆಯೋ ಅಲ್ಲಿ ಸೂರ್ಯವಂಶೀಯರ ಆಡಳಿತವಿತ್ತು. ಮಹಾ ಕವಿ ಕಾಳಿದಾಸ ಸೂರ್ಯವಂಶದವರ ರಾಜ್ಯದ ಮೇರೆಗಳನ್ನು ಒಂದೇ ಮಾತಿನಲ್ಲಿ ಹೇಳುತ್ತಾನೆ- "ಆ ಸಮುದ್ರ ಕ್ಷಿತೀಶಾನಾಂ.. .. .. .. " ನೆಲದ ಹರಹು ಮುಗಿದು ಸಮುದ್ರ ಆರಂಭವಾಗುವವರೆಗೂ ರವಿವಂಶದವರದ್ದೇ ಆಳ್ವಿಕೆ ಇತ್ತು.
ಹಾಗಿದ್ದರೆ ಎಲ್ಲರ ಬಾಯಿಯಲ್ಲಿಯೂ ಅಯೋಧ್ಯೆಯ ಮಾತು ಬರುವುದಲ್ಲ! ಅಯೋಧ್ಯೆ ಸೂರ್ಯವಂಶೀಯರ ರಾಜಧಾನಿಯಾಗಿತ್ತು. ಶ್ರೀರಾಮ ವಾಲ್ಮೀಕಿ ರಾಮಾಯಣದಲ್ಲಿ ಎರಡು ಬಾರಿ "ಅಯೋಧ್ಯೆ ನಮ್ಮ ತಂದೆಯ ರಾಜಧಾನಿ" ಎನ್ನುತ್ತಾನೆ. ಅದು ಅವನ ಜನ್ಮಭೂಮಿ. ಸೀತೆಯನ್ನು ರಾವಣನ ಸೆರೆಯಿಂದ ಬಿಡಿಸಿ ಪುಷ್ಪಕ ವಿಮಾನದಲ್ಲಿ ಕರೆದುಕೊಂಡು ಬರುವಾಗ ಅಯೋಧ್ಯೆ ಅವನಿಗೆ ದೃಗ್ಗೋಚರವಾದ ತಕ್ಷಣ ಅಯೋಧ್ಯೆಗೆ ನಮಸ್ಕರಿಸುವಂತೆ ಹೇಳುತ್ತಾನೆ. ಜನ್ಮಭೂಮಿಯ ಬಗ್ಗೆ ಇಂತಹ ಅಸೀಮ ಪ್ರೇಮ ಎಲ್ಲರಲ್ಲಿಯೂ ಮೂಡಿದರೆ ಭೋಯೋತ್ಪಾದನೆಗೆ ಬೇರೆ ಶಾಸನವೇಕೆ ಬೇಕು?
ಇಂತಹ ಸುವಿಶಾಲ ಚಕ್ರಾಧಿಪತ್ಯದ ಅಧಿಕಾರ ಅವನು ಕೇಳದೆಯೇ ತಾನಾಗಿಯೇ ಒಲಿದುಬಂದಿತ್ತು. ಅಂದಿನ ರಾಜನೀತಿಗೆ ಅನುಸಾರವಾಗಿ ಸಿಂಹಾಸನವನ್ನೇರುವ ಮಹಾರಾಜ ಮೊದಲು ಯುವರಾಜನಾಗಬೇಕಿತ್ತು. ಈ ಯುವರಾಜ ಪದವಿಯೆಂದರೆ ಅವಿರೋಧ ಆಯ್ಕೆಯಾಗಿತ್ತು. ಪ್ರಜೆಗಳು, ಪ್ರಜಾಪ್ರಮುಖರು ಎಂದರೆ ಪ್ರಜಾಪ್ರತಿನಿಧಿಗಳು ಮತ್ತು ರಾಜನ ಮಂತ್ರಿಮಂಡಲ ಎಲ್ಲರೂ ಅನುಮೋದಿಸಬೇಕಿತ್ತು. ಈ ಅಧಿಕಾರಕ್ಕೆ ಸ್ಪರ್ಧೆಯಂತೂ ಇರಲೇ ಇಲ್ಲ. ಅಧಿಕೃತವಾಗಿ ಯುವರಾಜನಾದ ಮೇಲೆಯೇ ಅವನಿಗೆ ಆಡಳಿತದಲ್ಲಿ ಭಾಗವಹಿಸುವ ಅಧಿಕಾರ ಸಿಗುತ್ತಿತ್ತು. ಎಂದರೆ ಅದುವರೆಗೆ ಅಧ್ಯಯನ ಮಾಡಿದ ಗ್ರಂಥಸ್ಥವಾದ ರಾಜನೀತಿಯನ್ನು ಪ್ರಾಯೋಗಿಕವಾಗಿ ಅನುಭವಕ್ಕೆ ತಂದುಕೊಳ್ಳುವ ಪರೀಕ್ಷಾವಧಿ ಈ ಯುವರಾಜ ಪದವಿ.
ಇಂತಹ ಯುವರಾಜ ಪದವಿಗೆ ದಶರಥ, ರಾಮನನ್ನು ಆಯ್ಕೆ ಮಾಡುತ್ತಾನೆ. ರಾಮನಿಗೆ ರಾಜ್ಯಾಧಿಕಾರವನ್ನು ವಹಿಸಿ ತಾನು ನಿವೃತ್ತನಾಗಬಯಸುತ್ತಾನೆ. "ಒಡಲು ನೆಲೆ ಎಂದು ತಿಳಿದು ಬಹು ಕಾಲ ರಾಜ್ಯವಾಳಿದೆ/ ಇಂದು ಕಡು ವೃದ್ಧನಾದೆ ನಾನು ಅದಕೆ ಪೊಡವಿಯನು ರಾಘವಗೆ ಕೊಡುವೆ" ಎಂದು ಯಕ್ಷಗಾನ ಕವಿ ಪಾರ್ತಿಸುಬ್ಬ ಬರೆಯುತ್ತಾನೆ. ಇಲ್ಲಿ ದಶರಥ ತಾನು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಅವನು ಒಂದು ಸಭೆಯನ್ನು ಕರೆದು ತನ್ನ ನಿರ್ಣಯವನ್ನು ಮಂಡಿಸಿ ಎಲ್ಲರ ಅಭಿಪ್ರಾಯವನ್ನು ಕೇಳುತ್ತಾನೆ. ಅಂದರೆ ದಶರಥನ ಕಾಲಕ್ಕಾಗಲೇ ಪ್ರಜಾಪ್ರಭುತ್ವ ಮಾದರಿ ಆಡಳಿತವಿತ್ತು ಭಾರತದಲ್ಲಿ ಎಂಬುದು ನಿರ್ವಿವಾದ. ವಯೋಧಿಕ್ಯದ ಕಾರಣ ಇಂದು ಅಧಿಕಾರದಿಂದ ನಿವೃತ್ತರಾಗುವವರೆಷ್ಟು ಮಂದಿ!
ರಾಮನ ಯೌವರಾಜ್ಯಾಭಿಷೇಕಕ್ಕೆ ಕೆಲವೇ ಕ್ಷಣಗಳು ಉಳಿದಿದ್ದವು. ಆಗ ತಿರುವೊಂದು ಪಡೆದಿತ್ತು. ಕೈಕೆಯ ಸ್ವಾರ್ಥಮೂಲ ಅಪೇಕ್ಷೆಯಂತೆ ಭರತನಿಗೆ ಸೂರ್ಯವಂಶದ ಸಾಮ್ರಾಜ್ಯದ ಅಧಿಕಾರವನ್ನು ಹಸ್ತಾಂತರ ಮಾಡುವ ಅನಿವಾರ್ಯತೆ ರಾಮನಿಗೆದುರಾಗುತ್ತದೆ. ಯಾವ ದ್ವಂದ್ವಕ್ಕೂ ಒಳಗಾಗದ ರಾಮ ತನಗೆ ಬಯಸದೇ ಬಂದ ಯುವರಾಜ ಪದವಿಯನ್ನು ತನ್ನ ಮಲತಾಯಿ ಕೈಕೆಯ ಮಗ ಭರತನಿಗೆ ಬಿಟ್ಟುಕೊಟ್ಟು ತಾನು ವನವಾಸ ವ್ರತಿಯಾಗುತ್ತಾನೆ. ತನಗೆ ಯುವರಾಜ ಪದವಿ ದೊರೆತಾಗ ರಾಮನಿಗೆ ಸಂತೋಷವೂ ಆಗಲಿಲ್ಲ, ವನವಾಸ ಅನಿವಾರ್ಯವಾದಾಗ ದುಃಖವೂ ಆಗಲಿಲ್ಲ.
ವನವಾಸದ ಅವಧಿಯಲ್ಲಿ ರಾಮ ಎರಡು ರಾಜ್ಯಗಳನ್ನು ಗೆದ್ದ. ವಾಲಿ ರಾಮನಿಂದ ಹತನಾಗಲಾಗಿ ಕಿಷ್ಕಿಂಧೆ ಅಂದಿನ ರಾಜನೀತಿಯ ಪ್ರಕಾರ ರಾಮನ ವಶವಾಯಿತು. ಆದರೆ ರಾಮ ವಾಲಿಯ ತಮ್ಮ ಸುಗ್ರೀವನಿಗೆ ಕಿಷ್ಕಿಂಧೆಯ ಅಧಿಕಾರವನ್ನು ನೀಡಿ, ವಾಲಿಯ ಮಗನಿಗೆ ಯುವರಾಜಪದವಿಯನ್ನು ನೀಡುತ್ತಾನೆ.
ತನ್ನ ಪೂರ್ವಜರಲ್ಲಿ ಒಬ್ಬನಾದ ಅನರಣ್ಯನನ್ನು ಕೊಂದ, ತನ್ನ ಪತ್ನಿಯನ್ನು ಅಪಹರಿಸಿದ ರಾವಣ ಒಮ್ಮೆ ಯುದ್ಧದಲ್ಲಿ ಸೋತು ಅಸಹಾಯಕನಾಗಿದ್ದಾಗ ರಾಮ ಯುದ್ಧ ವಿರಾಮವನ್ನು ಘೋಷಿಸಿ, ಅವನನ್ನು ಕೊಲ್ಲದೆ ಬಿಟ್ಟ. ಅವನ ತಮ್ಮ ವಿಭೀಷಣ ರಾಮನಿಗೆ ಶರಣಾಗತನಾದಾಗ ಅವನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕೋ ಬೇಡವೋ ಎಂದು ಎಲ್ಲಾ ವಾನರ ನಾಯಕರ ಅಭಿಪ್ರಾಯಗಳನ್ನು ಕೇಳುತ್ತಾನೆ. ವಿಭೀಷಣನೋ ಸ್ವತಃ ರಾವಣನೇ ಬಂದು ಶರಣಾಗತನಾದರೂ ತಾನು ಆಶ್ರಯವನ್ನು ನೀಡುವುದಾಗಿ ಹೇಳುತ್ತಾನೆ. ಎಂತಹ ದುಷ್ಟರೇ ಆಗಿರಲಿ ರಾಮ ಅವರನ್ನು ವಿರೋಧಿಸುತ್ತಿದ್ದನೇ ಹೊರತು ದ್ವೇಷಿಸುತ್ತಿರಲಿಲ್ಲ. ರಾಮನು ರಾಜ್ಯವನ್ನು ಕಳೆದುಕೊಂಡರೂ ಇಬ್ಬರನ್ನು ರಾಜರನ್ನಾಗಿಸುತ್ತಾನೆ. ರಾವಣ ವಧೆಯ ಬಳಿಕ ರಾಮನನ್ನು ವಿಷ್ಣುವಿನ ಅವತಾರವೆಂದು ಅವನನ್ನು ಪ್ರಶಂಸೆ ಮಾಡಿದಾಗ ರಾಮನು ವಿನಯಪೂರ್ವಕವಾಗಿ ಹೇಳುತ್ತಾನೆ- "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ" ನಾನು ಮನುಷ್ಯ, ದಶರಥನ ಮಗ ರಾಮ. ಇದು ಶ್ರೀರಾಮನ ನಮ್ರತೆ.
ಒಟ್ಟಿನಲ್ಲಿ ರಾಮಾಯಣ-ರಾಮನ ನಡವಳಿಕೆ- ಇಂದಿನ ಜಾಗತಿಕ ಜ್ವಲಂತ ಸಮಸ್ಯೆಗಳಿಗೆ ರಾಮ ನಡೆದ ದಾರಿ ಉಪಶಮನಕಾರಕ ಪರಿಹಾರಗಳನ್ನು ಸೂಚಿಸಲು ಅತ್ಯಂತ ಉಪಯುಕ್ತ. ಆದ್ದರಿಂದಲೇ ರಾಮನ ವಿರೋಧಿಗಳೂ "ರಾಮೋ ವಿಗ್ರಹವಾನ್ ಧರ್ಮಃ" ರಾಮನು ಮಾನವ ಧರ್ಮದ ವಿಗ್ರಹ ರೂಪ- ಎಂದುಕೊಂಡಿದ್ದಾರೆ.
- ಡಾ.ಪಿ. ಶಾಂತಾರಾಮ ಪ್ರಭು, ನಿಟ್ಟೂರು,
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
ಜಂಗಮವಾಣಿ -9480576717
ಲೇಖಕರ ಸಂಕ್ಷಿಪ್ತ ಪರಿಚಯ:
ಪಿ. ಶಾಂತಾರಾಮ ಪ್ರಭುಗಳ ಮೂಲ ಹುಟ್ಟೂರು ಉಡುಪಿ ಜಿಲ್ಲೆಯ ಪೆರ್ಣಂಕಿಲ. ವಾಸವಾಗಿ ಬೆಳೆದು ಬಂದುದು ತೀರ್ಥಹಳ್ಳಿ ತಾಲೂಕಿನ ಚಿಕ್ಕ ಬಿಂತಳದಲ್ಲಿ. ಈಗ ಇರುವುದು ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ. ಶಿಕ್ಷಣ ಆರಂಭವಾದುದು ತೀರ್ಥಹಳ್ಳಿಯ ರಂಜದಕಟ್ಟೆಯಲ್ಲಿ. ಮುಗಿದದ್ದು ಇನ್ನೆಲ್ಲೋ!
ಕನ್ನಡ ಹಾಗೂ ಇಂಗ್ಲೀ಼ಷನಲ್ಲಿ ಸ್ನಾತಕೋತ್ತರ ಪದವಿ. ಪಿಜಿ ಡಿಪ್ಲೋಮಾ ಇನ್ ಇಂಗ್ಲೀಷ, ಡಿಪ್ಲೋಮ ಇನ್ ಮಲಯಾಳಂ, ಹಿಂದಿ ರಾಷ್ಟ್ರಭಾಷಾ, ಸಂಸ್ಕೃತ ಕೋವಿದ. ಮಹಾ ಆಸ್ತಿಕವಂತ ಪ್ರಭುಗಳು ಪಿಎಚ್ಡಿ ಮಾಡಿದ್ದು ಮಹಾ ನಾಸ್ತಿಕ ಶತಾಯುಷಿ ಎ.ಎನ್. ಮೂರ್ತಿರಾಯರ ಬಗ್ಗೆ. ಮಾತೃಭಾಷೆ ಕೊಂಕಣಿ, ದುಡಿದ್ದು ಮಾತ್ರ ಕನ್ನಡಕ್ಕೆ. ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಆರಂಭದ ವೃತ್ತಿ. ಇಂಗ್ಲೀಷ್ ಉಪನ್ಯಾಸಕರಾಗಿ ಇತ್ತೀಚೆಗೆ ನಿವೃತ್ತರಾದರು. ಗಾಢ ಅಧ್ಯಯನದಲ್ಲಿ ತೊಡಗಿಕೊಂಡದ್ದು ಕನ್ನಡದ ಮಧುರ ಕಾವ್ಯದಲ್ಲಿ, ಇಂಗ್ಲೀಷಿನ ಸಾಹಿತ್ಯದಲ್ಲಿ, ಸಂಸ್ಕೃತ ಹಾಗೂ ಹಿಂದೀ ಮಹಾಕಾವ್ಯಗಳಲ್ಲಿ. ಬರೆದದ್ದು 'ವಿಶ್ವ ರಾಮಕಥಾವಾಹಿನಿ', 'ಗುರು ದ್ರೋಣಾಚಾರ್ಯ', ;ರಾಮಾಯಣ ಕೈಪಿಡಿ' 'ಎ.ಎನ್.ಮೂರ್ತಿರಾವ್', 'ಸದಾಶಿವ ಬ್ರಹ್ಮೇಂದ್ರ', 'ಡಾ.ಕೊಟ್ನೀಸ್' ಎಂಬ ಅದ್ಭುತ ಕೃತಿಗಳನ್ನು. ಬರೆದದ್ದು ಬಹಳವಲ್ಲವಾದರೂ ಬರೆಯುವ ಹುಚ್ಚು ಹಚ್ಚಿಕೊಂಡಂಥವರಿಗೆ ಮಾರ್ಗದರ್ಶಿಗಳಾಗಿ, ವಿಮರ್ಶಕರಾಗಿ. ಬರೆಯಲು ಹಚ್ಚಿದ್ದೇ ಹೆಚ್ಚು. ಅವರ ಭಾಷಣ ಎಂತವರನ್ನೂ ತಲೆದೂಗಿಸುವಂಥದ್ದು. ಎಂಥ ಜಟಿಲ ವಿಷಯವನ್ನೂ ಸರಳಗೊಳಿಸಿ ಮಾತಾಡುವ ಕಲೆ ಅವರಿಗೆ ಕರಗತ. ಅವರ ಭಾಷಣ ಇದೆ ಎಂದರೆ ಅಲ್ಲಿ ಕೂಡುವ ಜನಸಮುದಾಯ ಹೆಚ್ಚಿದೆಯೆಂದೇ ಅರ್ಥ. ಭಾಷಣಗಳನ್ನು ಯಾವ ಯಾವ ವಿಷಯದಲ್ಲಿ, ಯಾವ ಯಾವ ಭಾಷೆಯಲ್ಲಿ,ಎಲ್ಲೆಲ್ಲಿ ಮಾಡಿದ್ದೀರಿ ಎಂದರೆ "ಲೆಕ್ಕವಿಟ್ಟವರಾರು?" ಎನ್ನುವಂತಿದೆ. ಸನ್ಮಾನಗಳಿಗೂ ಲೆಕ್ಕವಿಲ್ಲ. ಅವುಗಳಲ್ಲಿ ಕೆಲವು ಪ್ರಮುಖವಾದವು- ಉಡುಪಿಯ ಯಕ್ಷಗಾನ ಕಲಾರಂಗದ ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ, ಸ್ವರ್ಣವಲ್ಲಿ ಮಠದ ಯಕ್ಷ ಶಾಲ್ಮಲಾದ ಯಕ್ಷ ಸ್ವರ್ಣ ಪ್ರಶಸ್ತಿ, ಶಿವಮೊಗ್ಗ ಯಾಜಿ ಯಕ್ಷಮಿತ್ರ ಬಳಗದ ಯಕ್ಷ ವಶಿಷ್ಠ ಪ್ರಶಸ್ತಿ, ಕರ್ಣಾಟಕ ಯಕ್ಷಗಾನ ಬಯಲಾಟ ಅಕಾಡಮಿಯ "ಯಕ್ಷ ಸಿರಿ" ಪ್ರಶಸ್ತಿ, ಹೊಸನಗರ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಬಿಳಿ ಲುಂಗಿಯನ್ನೊಂದು ಸುತ್ತಿಕೊಂಡು ಜುಬ್ಬಾಧಾರಿಯಾಗಿ, ಜುಬ್ಬದಲ್ಲೊಂದು ಕೈ ಚೀಲ ಏರಿಸಿಕೊಂಡು ಯಕ್ಷಗಾನದ ಹವ್ಯಾಸಿಗಳು ಕರೆದಲ್ಲಿಗೆ ಹೋಗುವ ಅದ್ಭುತ ಯಕ್ಷಗಾನ ಅರ್ಥಧಾರಿ. ತಾಳಮದ್ದಲೆಯಲ್ಲಿ ಇವರೊಂದು ಮಿಂಚು. ಯಾವ ಇಸಂಗೂ ಒಳಗಾಗಗದ ನೇರ ನಿಷ್ಟುರ ನಡೆ. ನೋವಿನ ನಂಜನ್ನು ಉಂಡೂ ಅಮೃತತ್ವದ ಧಾರೆ ಎರೆವ ಸನ್ನಡೆ. ಇವೆಲ್ಲವುಗಳಿಗಿಂತ ಹೆಚ್ಚಿನದಾದುದು ಎಂದರೆ ಇವರ ಸರಳ ಸಜ್ಜನಿಕೆ. ಅಪಾರ ಪಾಂಡಿತ್ಯವಿದ್ದೂ ವಿನಯದ ಸಾಕಾರ ಮೂರ್ತಿ. ಹೃದಯವಂತ. ಸ್ನೇಹಶೀಲ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ