ಶಿವಮೊಗ್ಗ: ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ನಾಲ್ಕು ದಿನಗಳ ಕಾಲ ನಡೆದ ಹಸೆ ಚಿತ್ತಾರ ಕಲಿಕಾ ಶಿಬಿರದ ಸಮಾರೋಪ ನುಡಿಗಳನ್ನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮೋಹನ್ ಚಂದ್ರಗುತ್ತಿಯವರು "ಹಸೆ ಚಿತ್ತಾರವು ಜನಪದ ಕಲಾ ಪ್ರಕಾರವಾಗಿದ್ದು ಸುಮಾರು ಹತ್ತು ಸಾವಿರ ವರ್ಷಗಳಷ್ಟು ಚರಿತ್ರೆಯನ್ನು ಹೊಂದಿದೆ. ಆದಿಮ ಸಮುದಾಯಗಳ ಜೀವ ದ್ರವ್ಯದಂತೆ ಇರುವ ಈ ಎಲ್ಲಾ ಕಲೆಗಳು ಅಂದಿನ ಹಸಿವು - ಹರುಷ ಇವುಗಳ ಸಂಘರ್ಷದ ಮೂಲಕ ಮೂಡಿ ಬಂದ ಭಾವನಾ ಅಭಿವ್ಯಕ್ತಿಗಳು. ಪ್ರತಿಯೊಂದು ಹಸೆಗೂ ಅದರದ್ದೇ ಆದ ಶೈಲಿ, ಅರ್ಥ, ವ್ಯಾಖ್ಯಾನ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಂದೇಶಗಳು ಇವೆ. ಇಂತಹ ಕಲೆಯ ಶಿಬಿರವನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಿರುವುದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಾಮಾಜೀಕರಣದ ಮುಖ್ಯ ಆಯಾಮವಾಗಿದೆ" ಎಂದು ಹೇಳಿದರು.
ನಾಲ್ಕು ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಹಸೆಯ ಸೂಕ್ಷ್ಮ ಎಳೆಗಳನ್ನು ಬಿಡಿಸುವ ಚಾಕಚಕ್ಯತೆಯನ್ನು ಕಲಿತುಕೊಂಡರು. ಶಿಬಿರಾರ್ಥಿ ಕು.ಗೌತಮಿ ತಾನು ಈ ನಾಲ್ಕು ದಿನಗಳು ಶಿಬಿರದಿಂದ ಹಸೆ ಬಿಡಿಸುವ ಕಲೆಯನ್ನು ಸಂತೋಷದಿಂದ ಕಲಿತ್ತಿದ್ದೇನೆ. ಇದು ತನಗೆ ಒದಗಿದ ಉತ್ತಮ ಅವಕಾಶ ಎಂದರು.
ಈ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಹೆಗ್ಗೋಡಿನ ಚರಕ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗೌರಮ್ಮನವರು ಹಸೆ ಕಲಿಕಾ ಶಿಬಿರವನ್ನು ಆಯೋಜಿಸಿರುವ ಮೊತ್ತ ಮೊದಲ ಕಾಲೇಜು ಎಂದು ಮೆಚ್ಚುಗೆಯನ್ನು ಸೂಚಿಸಿದರು ಹಾಗೂ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಮತ್ತು ಶ್ರಮವನ್ನು ಪ್ರಶಂಸಿಸಿದರು.
ಶಿಬಿರದ ಸಮಾರೋಪದಲ್ಲಿ ಶ್ರೀಮತಿ ಗೌರಮ್ಮ, ಡಾ.ಮೋಹನ್ ಚಂದ್ರಗುತ್ತಿ, ಎಂ ಸಿ ಸಿ ಎಸ್ ನ ನಿರ್ದೇಶಕರಾದ ಡಾ.ರಾಜೇಂದ್ರ ಚೆನ್ನಿ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ವಹಿಸಿದ್ದರು. ವಿದ್ಯಾರ್ಥಿಗಳಾದ ಅಜಯ್ ನಿರೂಪಿಸಿ, ತನ್ಮಯಿ ಪ್ರಾರ್ಥಿಸಿ, ಮಮತಾ ಸ್ವಾಗತಿಸಿ, ಗೀತಾ ವಂದನಾರ್ಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment