ಉಜಿರೆ: ವೈಜ್ಞಾನಿಕ ವಲಯದಲ್ಲಿ ನಡೆಯುವ ಸಂಶೋಧನೆಯ ವಿನೂತನ ವಿವರಗಳು ಸಾಮಾನ್ಯರಿಗೂ ತಲುಪುವಂತಾಗಬೇಕು ಎಂದು ಎಸ್ಡಿಎಂ ಕಾಲೇಜಿನ ಉಪಪ್ರಾಂಶುಪಾಲ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎನ್. ಕಾಕತ್ಕರ್ ಹೇಳಿದರು.
ಉಜಿರೆಯ ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಅಭಿವೃದ್ದಿ ಕೋಶದ ಸಹಯೋಗದೊಂದಿಗೆ "ಅಡ್ವಾನ್ಸಡ್ ಮೆಟೀರಿಯಲ್ಸ್ ಫಾರ್ ಕೆಮಿಕಲ್ ಬಯೋಲಾಜಿಕಲ್ ಅಪ್ಲಿಕೇಶನ್ಸ್" ಕುರಿತು ಆಯೋಜಿತ ಎರಡು ದಿನಗಳ ರಾಷ್ಟೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಪ್ರಸ್ತುತಪಡಿಸಿದರು.
ಹೆಚ್ಚು ಮಾತನಾಡಿದಷ್ಟು ಹೆಚ್ಚು ವಿಚಾರಗಳು ವಿನಿಮಯವಾಗುತ್ತವೆ. ಅದರಲ್ಲೂ ವಿಜ್ಞಾನದ ವಿಷಯಗಳು ಹೆಚ್ಚು ಜನರಿಗೆ ತಲುಪಬೇಕಾಗಿದೆ, ಅದು ಮಾನವನ ಅಭಿವೃದ್ಧಿಗೆ ಬಳಕೆಯಾಗಬೇಕು. ವಿಜ್ಞಾನವು ನಿರಂತರ ಬದಲಾಗುತ್ತಲೇ ಇರುತ್ತದೆ, ಇಂತಹ ವಿಚಾರ ಸಂಕಿರಣಗಳು ಅದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿ, ಮೈಸೂರು ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತ್ರ ಪ್ರಾಧ್ಯಾಪಕ ಹಾಗೂ ಅಣು ಜೀವಶಾಸ್ತ್ರ ಮುಖ್ಯಸ್ಥ ಡಾ. ಗೋಪಾಲ್ ಮರಾಠೆ ಕೆ. ಮಾತನಾಡಿದರು. ಅಧ್ಯಯನ ಮತ್ತು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುವಿಕೆಯ ಬದ್ಧತೆಯಿಂದ ವಿದ್ಯಾರ್ಥಿಗಳ ಜ್ಞಾನ ವಿಸ್ತಾರಗೊಳ್ಳುತ್ತದೆ ಎಂದರು.
ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಹಾಗೂ ರಸಾಯನಶಾಸ್ತ್ರ ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ವಿಶ್ವನಾಥ ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸ ಹೊಸ ಸಂಶೋಧನೆಗಳಿಂದ ಮಾನವನ ಜೀವನ ಮಟ್ಟ ಸುಧಾರಣೆಯಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಸಂಶೋಧನೆಯ ಅಗತ್ಯವಿದ್ದು, ಭವಿಷ್ಯದ ಜನರಿಗಾಗಿ ನಾವಿಂದು ಸಂಶೋಧನೆ ಕೈಗೊಳ್ಳಬೇಕು. ಇಂದು ಸಂಶೋಧನೆಗಾಗಿ ವಿದೇಶಗಳಿಗೆ ಹೋಗಬೇಕಾಗಿಲ್ಲ, ಭಾರತದಲ್ಲೇ ಸಂಶೋಧನೆ ನಡೆಸಬಹುದು ಎಂದು ತಿಳಿಸಿದರು.
ರಾಷ್ಟೀಯ ವಿಚಾರ ಸಂಕಿರಣದ ಭಾಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಓರಲ್ ಪೇಪರ್ ಪ್ರೆಜೆಂಟೇಶನ್ನಲ್ಲಿ ಎ.ಜೆ. ಚಿರಂಜೀವಿ ಪದ್ಮಶ್ರೀಜಾ, ವಿ.ಐ.ಟಿ. ವೆಲ್ಲೂರು ಪ್ರಥಮ ಸ್ಥಾನ, ಸಂಶೋಧನಾ ವಿಭಾಗದ ಅತ್ಯುತ್ತಮ ಪೇಪರ್ ಪ್ರೆಜೆಂಟೇಶನ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಮೋಹನ್ ಕುಮಾರ್ ದೇವರಾಜು ಪ್ರಥಮ ಸ್ಥಾನ, ಸ್ನಾತಕೋತ್ತರ ವಿದ್ಯಾರ್ಥಿಗಳ ಭಿತ್ತಿಚಿತ್ರ ಪ್ರದರ್ಶನದಲ್ಲಿ ವಿಶ್ವಶ್ರೀ ಲಕ್ಷ್ಮೀ ಪಿ.ಎಸ್. ಮಾಹೆ ವಿಶ್ವವಿದ್ಯಾಲಯ, ಮಣಿಪಾಲ ಪ್ರಥಮ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ನವೀನ್ ಕುಮಾರ್, ಡಾ.ಸುಜಯ್ ಎಂ.ಎಂ. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕಿ ಡಾ. ಶಶಿಪ್ರಭ ನಿರೂಪಿಸಿ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ.ಸೌಮ್ಯ ಬಿ.ಪಿ. ಸ್ವಾಗತಿಸಿ, ಸಹಪ್ರಾಧ್ಯಾಪಕಿ ಡಾ. ನೆಫಿಸತ್.ಪಿ. ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ