ಕರುನಾಡ ಕಲೆಗೆ ಅದರಲ್ಲೂ ಚಿತ್ರಕಲೆಗೆ ಹಾಸನ ಜಿಲ್ಲೆಯ ಕೊಡುಗೆಯೂ ಸಾಕಷ್ಟಿದೆ. ಈ ಕಲೆಯ ನೆಲೆಯನ್ನು ಪರಿಚಯಿಸಲು ಹೊರಟು ನನಗೆ ಪ್ರತಿಭಾನ್ವಿತ ಚಿತ್ರಕಲಾವಿದೆ ಚಂದ್ರ ಪ್ರಭಾರವರ ಮಾಹಿತಿಯನ್ನು ಒದಗಿಸಿದವರು ಚಿತ್ರಕಲಾವಿದರು ಚಂದ್ರಕಾಂತ್ ನಾಯರ್. ಚಂದ್ರಪ್ರಭಾರಿಗೆ ಬಾಲ್ಯದಿಂದಲೇ ಚಿತ್ರಕಲೆಯ ಮೇಲೆ ಅಪಾರ ಆಸಕ್ತಿ. ಈ ಆಸಕ್ತಿಯೇ ಹವ್ಯಾಸವಾಗಿ ಇಂದು ಚಿತ್ರಕಲೆಯಲ್ಲಿ ಪ್ರಬುದ್ಧರಾಗಿದ್ದಾರೆ.
ಕಲಾವಿದೆ ಚಂದ್ರಪ್ರಭರವರು ಶಿವಣ್ಣ ಹಾಗೂ ಪ್ರದ್ಮ ದಂಪತಿಗಳ ಮಗಳಾಗಿ ಜುಲೈ 15 ರಂದು ಅರಕಲಗೂಡು ತಾಲೂಕಿನಲ್ಲಿ ಜನಿಸಿದರು. ಇವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಅರಕಲಗೂಡಿನಲ್ಲಿ ಮುಗಿಸಿ ನಂತರ ಚಿತ್ರಕಲಾ ಅಭ್ಯಾಸಕ್ಕಾಗಿ ಹಾಸನದ ನಿರ್ಮಲ ಚಿತ್ರಕಲಾ ಶಾಲೆಗೆ ಸೇರುತ್ತಾರೆ. ಕಲಾ ಶಾಲೆಯಲ್ಲಿ ಉಪನ್ಯಾಸಕರ ಪ್ರೋತ್ಸಾಹದಿಂದ ಕಲೆಯ ಅನೇಕ ತಂತ್ರಗಾರಿಕೆ, ಮಾದ್ಯಮ ಬಳಸುವ ವಿಧಾನ, ಚಿತ್ರಕಲೆಯ ಅನೇಕ ಆಯಾಮಗಳನ್ನು ಅರಿತುಕೊಳ್ಳಲು ಅನುಕೂಲವಾಗುತ್ತದೆ.
ಅಲ್ಲಿಂದ ಮುಂದೆ ಕಲೆಯಲ್ಲಿ ಪ್ರಾಯೋಗಿಕ ಚಿಂತನೆಯಿಂದಾಗಿ 2018ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎಫ್.ಎ ಸ್ನಾತಕೋತ್ತರ ಪದವಿಯನ್ನು ಸಂಪೂರ್ಣಗೊಳಿಸಲು ನೆರವಾಗುತ್ತದೆ. ಚಿತ್ರಕಲಾ ಪದವೀದರೆ ಪ್ರಸ್ತುತ ನಗರದ ಪ್ರತಿಷ್ಠಿತ ಶಾಲೆ ಹಾಸನ್ ಪಬ್ಲಿಕ್ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರದು ಬದುಕಿನುದ್ದಕ್ಕೂ ಸ್ವಾಭಿಮಾನದ ಜೀವನ. ಕಲೆಯಲ್ಲಿ ಜೀವಂತಿಕೆಯನ್ನು ಕಂಡು ಕರುನಾಡ ಕಲೆಯ ಸಿರಿವಂತಿಕೆಯನ್ನು ಕಾಣಬಯಸುವ ಕಲಾ ಸರಸ್ವತಿ. ಸಾವಿರಾರು ಮಕ್ಕಳ ಹೃದಯದಲ್ಲಿ ತನ್ನ ಕುಂಚದಿಂದ ಕಣ್ಣಿಗೆ ಹಬ್ಬದ ರಸದೂಟ ನೀಡಿ ಆತ್ಮೀಯತೆಯ ಮುಗ್ಧ ನಗುವನ್ನು, ಆಶ್ಚರ್ಯ, ಆಸಕ್ತಿಯನ್ನು ಉಂಟುಮಾಡುವ ಚೈತನ್ಯ ಶಕ್ತಿ ಚಂದ್ರಪ್ರಭಾರವರದ್ದಾಗಿದೆ.
ಚಂದ್ರಪ್ರಭಾರವರು ಬಿಡಿಸಿದ ವೈವಿಧ್ಯಮಯ ಚಿತ್ರಗಳ ಕಲಾಕೃತಿಗಳೆಂದರೆ, ಸಾಮಾಜಿಕ ಚಿತ್ರಗಳು, ಸೃಜನಾತ್ಮಕ ಚಿತ್ರಗಳು ಕ್ರಿಯಾತ್ಮಕ ಚಿತ್ರಗಳು, ರೇಖಾಚಿತ್ರಗಳು, ಅಂತರ್ಪಕ ಚಿತ್ರಗಳು ದೇವಿ ದೇವತಾ ಚಿತ್ರಗಳು, ಅದ್ಭುತ ಶಿಲಾಬಾಲಕಿಯ ಚಿತ್ರಗಳು, ಪ್ರಕೃತಿ ರಮಣೀಯ ಚಿತ್ರಗಳು, ಪ್ರಾಣಿ-ಪಕ್ಷಿಗಳ ಸುಂದರ ನೋಟಗಳ ಚಿತ್ರಗಳು, ಗಿಡ ಮರಗಳ ರಮ್ಯತೆಯ ಚಿತ್ರಗಳು, ಕವಿ ಹೃದಯ ಗೆದ್ದ ಆಕಾಶದ ಮೇಘಮಾಲ ಚಿತ್ರಗಳು, ನೂರಾರು ಮಕ್ಕಳು ಬಯಸುವ ಚಿತ್ರಗಳು, ಒಂದೆರಡಲ್ಲ ನೂರಾರು ವೈವಿಧ್ಯ ಚಿತ್ರಕಲಾ ಲೋಕ.
ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಚಿತ್ರಕಲಾ ಮೇಳಗಳು ಮತ್ತು ಚಿತ್ರಕಲಾ ಕ್ಯಾಂಪ್ ಗಳು ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಾರ್ಯಕ್ರಮಗಳ ರಂಗಮಂಟಪಗಳನ್ನು ಸಜ್ಜುಗೊಳಿಸುವಲ್ಲಿ ವಿಶಿಷ್ಟ ಕಲಾಪ್ರತಿಭೆ ಇವರಲ್ಲಿದೆ. ತಮ್ಮ ಬಿಡುವಿನ ಸಮಯದಲ್ಲಿ ಚಿತ್ರಕಲೆಗಾಗಿ ಆಸಕ್ತಿ ತೋರಿಸುವ ಮಕ್ಕಳಿಗೆ ಮಹಿಳೆಯರಿಗೆ ಉಚಿತವಾಗಿ ಚಿತ್ರಕಲೆ ಕಲಿಸುವ ಗುರುವಾಗಿದ್ದಾರೆ.
ಬಾಳೆಂಬ ದೋಣಿಯ ಬದುಕಿನಲ್ಲಿ ಕಷ್ಟ ಸುಖ ನೋವುಗಳು ಸಹಜ. ಸೂರ್ಯ ಭೂಮಿಗೆ ಬೆಳಕಾದರೆ, ನೀನು ನನ್ನ ಬಾಳಿಗೆ ಬೆಳಕು ಎಂದು ಹೇಳಿ ಕತ್ತಲೆಯಲ್ಲಿ ಮರೆಯಾದ ಪತಿ .ಹುಣ್ಣಿಮೆಯ ಚಂದಿರನಂತೆ ನಿನ್ನ ಬಾಳಿನಲ್ಲಿ ಇರುವೆ ಅಮ್ಮ ಎಂದು ಹೇಳಿ ಕೈಗೆಟುಕದ ಆಕಾಶದಲ್ಲಿರುವ ಧ್ರುವತಾರೆಯಂತೆ ಆದ ಮಗಳು. ಇವರಿಬ್ಬರೂ ಇಂದು ನೆನಪುಗಳು ಮಾತ್ರ ಆದರೆ ಬದುಕಿದ್ದಾಗ ಇವರಿಬ್ಬರೂ ಪ್ರೀತಿಸುವ ಚಿತ್ರಕಲೆ ಪ್ರಭಾರವರ ಬದುಕಿನಲ್ಲಿ ಶಾಶ್ವತ. ನೆನಪಿನ ಅಂಗಳದಿಂದ ಇಂದು ಚಿತ್ರಕಲೆಗಾಗಿ, ಚಿತ್ರಕಲೆ ಗೋಸ್ಕರ ತನ್ನ ಬಾಳನ್ನೇ ಮುಡುಪಾಗಿಟ್ಟು ಬದುಕು ನಡೆಸುತ್ತಿರುವ ಚಂದ್ರಪ್ರಭ ಮೇಡಂ ಚಿತ್ರಕಲೆ ಎಂಬ ಸಾಗರದಲ್ಲಿ ಸ್ವಂತ ಶಕ್ತಿಯಿಂದ ಗುರುತಿಸಿಕೊಳ್ಳುವ ಹೆಮ್ಮೆಯ ಸಾಧಕಿ.
- ಗೊರೂರು ಅನಂತರಾಜು, ಹಾಸನ.
ಮೊ: 9449462879.
ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ