ಚಿತ್ರ ಕೃಪೆ: ಪ್ರೊ. ಜಿ. ವೆಂಕಟಸುಬ್ಬಯ್ಯ ಸಂಪಾದಿತ ಸಚಿತ್ರ ರಾಮಾಯಣ ದರ್ಶನ
-ಸುಶೀಲ ದೀಕ್ಷಿತ್, ಅಮೆರಿಕ, ಸೆಂಟ್ ಲೂಯಿಸ್
॥ರಾಮಾನುಜ ದಯಾಪಾತ್ರಂ ಜ್ಞಾನವೈರಾಗ್ಯ ಭೂಷಣಂ।
।ಶ್ರೀಮದ್ವೇಂಕಟನಾಥಾಯ ವಂದೇ ವೇದಾಂತ ದೇಶಿಕಂ॥
ನಮ್ಮ ಭಾರತ ಕಂಡ ಮಹಾನ್ ವಿದ್ವತ್ ರತ್ನಗಳಲ್ಲಿ ವೇದಾಂತ ದೇಶಿಕರೂ ಒಬ್ಬರು. ಇವರು ತಮಿಳುನಾಡಿನ ತೂಪ್ಪಿಲ್ ಎಂಬ ಊರಿನಲ್ಲಿ 1268ರಲ್ಲಿ ಅನಂತಸೂರಿ ಮತ್ತು ತೋತಾರಂಬ ಎಂಬ ದಂಪತಿಗಳಿಗೆ ಸುಪುತ್ರರಾಗಿ ಹುಟ್ಟಿದರು. ಶ್ರೀ ವಂಕಟೇಶ್ವರನ ಕೃಪೆಯಿಂದ ಹುಟ್ಟಿದರಾದ್ದರಿಂದ ಇವರಿಗೆ ವೆಂಕಟನಾಥ ಎಂದು ಹೆಸರಿಟ್ಟರು. ಇವರ ಸೋದರಮಾವ ಆತ್ರೇಯ ರಾಮಾನುಜರ್ ಎಂಬುವರು ಇವರ ಗುರುಗಳು. ಬಹಳ ಮೇಧಾವಿಯಾದ್ದರಿಂದ ಚಿಕ್ಕವಯಸ್ಸಿನಲ್ಲೇ ಮಹಾನ್ ಪಂಡಿತರಾದರು. ವಿಶಿಷ್ಟಾದ್ವೈತ ದರ್ಶನ ಪರವಾದ “ತತ್ತ್ವಮುಕ್ತಾ ಕಲಾಪ” “ಗೀತಾರ್ಥ ಸಂಗ್ರಹ ರಕ್ಷಾ” ಮೊದಲಾದ ಗ್ರಂಥಗಳನ್ನು ರಚಿಸಿ ವೇದಾಂತದೇಶಿಕರೆಂದು ಖ್ಯಾತರಾದರು.
ಇವರು ರಾಮಾಯಣದ ಒಂದು ಪ್ರಸಂಗವನ್ನು ತೆಗೆದುಕೊಂಡು “ಹಂಸ ಸಂದೇಶ” ಎಂಬ ಕಾವ್ಯವನ್ನು ಬರೆದಿದ್ದಾರೆ. ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ಲಂಕೆಯಲ್ಲಿ ಪತ್ತೆಹಚ್ಚಿ ಹನುಮಂತ ಭೇಟಿ ಮಾಡಿ, ಸೀತೆ ಕೊಟ್ಟ ಚೂಡಾಮಣಿಯನ್ನು ರಾಮನಿಗೆ ಕೊಟ್ಟು, ಸೀತಾನ್ವೇಷಣೆ ಹೇಗೆಲ್ಲಾ ಆಯಿತು ಎಂದು ವಿವರವಾಗಿ ತಿಳಿಸಿದ ರಾಮನಿಗೆ ಆಂಜನೇಯ. ಅಂದು ರಾಮನಿಗೆ ನಿದ್ದೆ ಬರಲಿಲ್ಲ. ಸೀತೆಗೆ ತಾನು ಬಂದು ರಾವಣನನ್ನು ನಿಗ್ರಹಿಸಿ ನಿನ್ನನ್ನು ಕರೆತರುತ್ತೇನೆ ಎಂಬ ಸಂದೇಶವನ್ನು ಸೀತೆಗೆೆ ಭರವಸೆ ಕೊಡುವುದಕ್ಕಾಗಿ ಕಳಿಸಬೇಕು. ಹೇಗೆ ಕಳಿಸುವುದು ಎಂಬ ಯೋಚನೆಯಲ್ಲಿರುತ್ತಾನೆ. ಅಂದು ಸಂಜೆ ಸರೋವರದಲ್ಲಿ ಒಂದು ರಾಜಹಂಸವನ್ನು ನೋಡುತ್ತಾನೆ. ಹಂಸಕ್ಕೆ ತನ್ನ ಸಂದೇಶವನ್ನು ತಿಳಿಸಿ, ಲಂಕೆಗೆ ಕ್ರಮಿಸಬೇಕಾದ ಮಾರ್ಗವನ್ನು ಸವಿವರವಾಗಿ ತಿಳಿಸಿ, ಸೀತೆ ಹೇಗೆ ಕಾಣುತ್ತಾಳೆ ಎಂಬುದನ್ನೂ ತಿಳಿಸಿ ಹೇಳುವ ಕಾವ್ಯ “ಹಂಸ ಸಂದೇಶ”. ಈ ಕಾವ್ಯದಲ್ಲಿ 110 ಶ್ಲೋಕಗಳಿವೆ. ಆಯ್ದ ಕೆಲವು ಶ್ಲೋಕಗಳ ಬಗ್ಗೆ ವಿವರಣೆಯನ್ನು ಕೊಡಲು ಪ್ರಯತ್ನಿಸುತ್ತೇನೆ.
ಹಂಸಗಳಲ್ಲಿಯೇ ಶ್ರೇಷ್ಠವಾದ ರಾಜಹಂಸ ಸರೋವರದಲ್ಲಿ ಅರಳಿದ್ದ ತಾವರೆಯೊಡನೆ ಆಟವಾಡಲು ಬಂದುದನ್ನು ರಾಮ ನೋಡಿದ. ಅದನ್ನು ತನ್ನ ಸಂದೇಶವಾಹಕನಾಗಿ ಕಳಿಸಲು ಯೋಚಿಸುತ್ತಾನೆ. ನೀನು ಸರಸ್ವತಿಯ ವಾಹನ. ಅವಳು ನಿನಗೆ ಶ್ವೇತವರ್ಣವನ್ನಿತ್ತಿದ್ದಾಳೆ. ಶ್ರೀಮನ್ನಾರಾಯಣ ನಿನ್ನ ರೂಪ ತಾಳಿ ಬ್ರಹ್ಮನಿಗೆ ಅವನು ಮರೆತಿದ್ದ ನಾಲ್ಕು ವೇದಗಳನ್ನು ಉಪದೇಶಿಸುತ್ತಾನೆ. ಹೀಗೆ ಅದನ್ನು ಕೊಂಡಾಡಿ, ನಾನು ಕೊಡುವ ಸಂದೇಶವನ್ನು ಸೀತೆಗೆ ಮುಟ್ಟಿಸು ಎಂದು ಹೇಳಿ ಅದನ್ನು ಒಪ್ಪಿಸುತ್ತಾನೆ.
॥ಮಧ್ವಾಸಕ್ತಂ ಸರಸಿಜಂ ಇವ ಸ್ವಿನ್ನಂ ಆಲಂಬಮಾನಃ।
।ದಿವ್ಯಾಹಸ್ತಂ ತದಿತರ ಕರಣ್ಯಸ್ತ ಲೀಲಾರವಿಂದಃ।
।ದೇವಃ ಶ್ರೀಮಾನ್ ಸಹ ಯದಿ ವಿಹರೇತ್ ಸ್ವೈರಂ ಆರಾಮಭೂಮೌ।
।ವ್ಯಕ್ತೋ ವಾಲವ್ಯಜನವಪುಷಾ ವಿಜಯೇಸ್ತಂ ತ್ವಮೇವ॥೩೫॥
ಕಂಚಿಯಲ್ಲಿ ರಾಜಹಂಸವು ಹಾರಾಡುತ್ತಿದೆ. ಸಂಧ್ಯಾಸಮಯ. ವರದರಾಜಸ್ವಾಮಿ ಪತ್ನಿ ಪೆರುಂದೇವಿಯ ಜೊತೆಯಲ್ಲಿ, ಅವಳ ಮನೆಯ ಹಿಂದುಗಡೆಯ ನಂದನವನದಲ್ಲಿ ವಾಯುವಿಹಾರ ಮಾಡುತ್ತಿರುತ್ತಾನೆ. ದಿವ್ಯದಂಪತಿಗಳಿಗೆ ಚಾಮರಸೇವೆಯನ್ನು ಮಾಡಬೇಕೆಂದು ಬಯಕೆಯಾಗುತ್ತದೆ ರಾಜಹಂಸಕ್ಕೆ. ಅದೇ ಸಮಯಕ್ಕೆ ಸರಿಯಾಗಿ ಪರಮಾತ್ಮ ದೇವಿಯ ಎಡಗೈಯನ್ನು ಹಿಡಿಯುತ್ತಾನೆ ಹಾಗೂ ಅಲ್ಲೇ ಇದ್ದ ಕೊಳದಲ್ಲಿ ಅರಳಿದ ತಾವರೆಯೊಂದನ್ನು ಕೊಡುತ್ತಾನೆ. ಅವನ ಕೈಸ್ಪರ್ಶದಿಂದ ಸಂತೋಷಗೊಂಡ ಪೆರುಂದೇವಿಗೆ ಕೈ ಸ್ವಲ್ಪ ಬೆವೆತು, ಬೆವರುಹನಿ ಕಾಣಿಸಿಕೊಂಡು ಆ ಕೈ ಹೇಗೆ ಕಾಣುತ್ತಿತ್ತೆಂದರೆ ತಾವರೆಯನ್ನು ಜೇನಿನಲ್ಲಿ ಅದ್ದಿದಂತೆ ಇತ್ತಂತೆ. ಆಗ ರಾಜಹಂಸವು ಇವರುಗಳಿಗೆ ಗಾಳಿ ಬರುವಹಾಗೆ ತಲೆಯಮೇಲೆ ಸ್ವಲ್ಪ ಮೇಲುಭಾಗದಲ್ಲಿ ಹಾರಾಡಿತು. ಪಕ್ಷಿಕುಲಕ್ಕೆ ಸೇರಿದುದರಿಂದ ಅಂತಃಪುರದ ಭೃತ್ಯರು ಹಂಸವನ್ನು ತಪ್ಪಾಗಿ ತಿಳಿಯಲಿಲ್ಲ. ಹಾರಾಟಕ್ಕೆ ಅಡ್ಡಿಪಡಿಸಲಿಲ್ಲ. ರೆಕ್ಕೆಗಳ ಬೀಸುವಿಕೆಯಿಂದ ತಂಪಾದ ಗಾಳಿ ಬೀಸಿ ಹಾಯೆನಿಸಿತು. ಪರಮಾತ್ಮನಿಗೂ, ಪೆರುಂದೇವಿಗೂ ಆಯಾಸ ಪರಿಹಾರವಾಯಿತು. ಇದರಿಂದ ಅವರುಗಳು ಹಂಸದ ಮೇಲೆ ಕೃಪಾವರ್ಷವನ್ನು ಸುರಿಸಿದರು. ರಾಜಹಂಸಕ್ಕೆ, ದಿವ್ಯದಂಪತಿಗಳಿಗೆ ಚಾಮರಸೇವೆಯನ್ನು ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಬಹಳ ಸಂತೋಷವಾಯಿತು.
ಹೀಗೆ ಕಾಂಚೀಪುರದ ವರದರಾಜನಿಗೂ ಪೆರುಂದೇವಿಗೂ ಏಕಾಂತಸೇವೆಯನ್ನು ಹಂಸ ಗೈದುದರ ಚಿತ್ರಣವನ್ನು ಸುಂದರವಾಗಿ ಈ ಶ್ಲೋಕದಲ್ಲಿ ಕೊಟ್ಟಿದ್ದಾರೆ ವೇದಾಂತದೇಶಿಕರು.
॥ಶ್ಲೋಕ॥
॥ಭಾಸಾತಾದೃಕ್ ಪರಿಣತಿಜುಷಾ ಮೈಥಿಲೀ ಅಶೋಕವಹ್ನೇ।
।ಭಸ್ಮೀಭೂತಾ ಪವನತನಯ ಸ್ನೇಹಿನಾ ಪಾವಕೇನಾ।
॥ಅಂತ್ರಸ್ತಾಸತ್ ಅವಹಿತದಿಯ ಸಂಹಿತಾದ್ಯಂತ ವಶ್ಯಂ।
।ಪ್ರತ್ಯಾದಿಷ್ಟ ಪ್ರಥಮ ರಚನಂ ವಿಶ್ವಕರ್ಮಾ ದಯಸ್ಥಾಂ॥
ಎಲೈ ಹಂಸವೇ! ನೀನು ಲಂಕಾಪಟ್ಟಣದೊಳಕ್ಕೆ ಹೋಗುವೆ. ಅಶೋಕವನದ ಶಿಂಶುಪಾ ವೃಕ್ಷದ ಕೆಳಗೆ ನನ್ನ ಪ್ರಿಯಪತ್ನಿ ಸೀತೆಯನ್ನು ನೋಡುವೆ. ಹನುಮಂತ ಅಲ್ಲಿಗೆ ಹೋದಾಗ ಲಂಕೆಯನ್ನು ಸುಟ್ಟುಹಾಕಿದ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದು ಸತ್ಯವಲ್ಲ ಎಂದು ದೇಶಿಕರ ಅಭಿಪ್ರಾಯ. ಸೀತೆಯನ್ನು ಏಮಾರಿಸಿ ಬಲಾತ್ಕಾರವಾಗಿ ಕರೆತಂದನಲ್ಲವೇ ರಾವಣ? ಒಂದೊಂದು ದಿನವನ್ನೂ ಬಹು ಕಷ್ಟದಿಂದ ಕಳೆದಿದ್ದಾಳೆ ಸೀತೆ. ಅವಳು ಶೋಕಿಸದ ದಿನವೇ ಇಲ್ಲ. ಅವಳ ದುಃಖವೆಲ್ಲ ಅಗ್ನಿಯಾಗಿ ಮಾರ್ಪಟ್ಟು ಉದರದಲ್ಲಿ ತುಂಬಿಹೋಗಿದೆ. ಈ ಉದರದ ಅಗ್ನಿ ಲಂಕೆಯನ್ನು ಸುಟ್ಟುಹಾಕಿತು. ಹನುಮಂತ ಸುಮ್ಮನೆ ಅಗ್ನಿಯನ್ನು ವಾಹಕನಾಗಿ ಕೊಂಡೊಯ್ದ ಅಷ್ಟೆ.
ಭಾಗವತದಲ್ಲಿ ಹೀಗೆಯೇ ಗೋಪಿಕೆಯರ ಉದರದಲ್ಲಿ ತುಂಬಿದ್ದ ಅಗ್ನಿಯೇ ದುರುಳ ಕಂಸನನ್ನು ಕೊಂದಿದ್ದು ಎಂದು ಹೇಳುವರು. ಅದು ಹೇಗೆಂದರೆ, ಪುಟ್ಟ ಬಾಲಕ ಕೃಷ್ಣನನ್ನು ಕೊಲ್ಲಲು, ಕಂಸನಿಂದ ಕಳುಹಿಸಲ್ಪಟ್ಟ ಒಬ್ಬೊಬ್ಬ ರಾಕ್ಷಸ ಬಂದಾಗಲೂ, ಗೋಪಿಕೆಯರಿಗೆ ಅವರಲ್ಲಿದ್ದ ಕೃಷ್ಣಭಕ್ತಿಯು ಇನ್ನೂ ಗಾಢವಾಗಿ, ರಾಕ್ಷಸ ಕೃಷ್ಣನಿಗೇನು ಮಾಡುತ್ತಾನೋ ಎಂಬ ಆತಂಕದಿಂದ ಕುದ್ದುಹೋಗುತ್ತಿದ್ದರು. ಕೃಷ್ಣನ ಬಗ್ಗೆ ಎಲ್ಲಿಲ್ಲದ ಆತಂಕ, ದುಃಖಾಗ್ನಿ ಅವರುಗಳ ಜಠರದಲ್ಲಿ ತುಂಬಿಹೋಯಿತು. ಕೃಷ್ಣ ಇವರೆಲ್ಲರ ಒಳಗಿದ್ದ ಅಷ್ಟೂ ದುಃಖಾಗ್ನಿಯನ್ನು ಕಂಸನ ಉದರದೊಳಕ್ಕೆ ಹಾಕಿಬಿಟ್ಟ!
ಅಶೋಕವನಕ್ಕೆ ನೀನು ಹೋದಮೇಲೆ ಸೀತೆಯನ್ನು ಹೇಗೆ ಗುರುತು ಹಿಡಿಯುವೆ? ನಾನು ನಿನಗೆ ಉಪಾಯವನ್ನು ಹೇಳುವೆ, ಕೇಳು! ಸೀತೆ ಬಲು ಸುಂದರಿ. ಅವಳಿಗೆ ಎಣೆಯಾದವರು ಬೇರೆ ಯಾರೂ ಇಲ್ಲ. ಅವಳ ಕಣ್ಣು ಹೇಗಿರುತ್ತೆ ಎಂದರೆ, ಪ್ರಾತಃಕಾಲ ಸೂರ್ಯನ ಕಿರಣಗಳು ತಗುಲಿ ಕಮಲಪುಷ್ಪ ಫಕ್ಕನೆ ಅರಳುತ್ತವೆ. ಹಾಗೆ ಅರಳಿದ ಆ ತಾವರೆಯಷ್ಟು ದೊಡ್ಡದು ಅವಳ ಕಣ್ಣುಗಳು. ಅಷ್ಟು ಅಗಲವಾದ ಕಣ್ಣುಗಳು. ಶಂಖದಂತೆ ಕೊರಳು. ಬಲು ಸಣ್ಣ ಸೊಂಟ. ಅವಳ ರೂಪವನ್ನು ವರ್ಣಿಸಲು ಸಾಧ್ಯವಿಲ್ಲ. ಆದರೆ ಅವಳು ನನ್ನನ್ನೇ ನೆನೆಯುತ್ತಾ ಇರುತ್ತಾಳೆ. ಅವಳ ಎಡಗಾಲಿನ ನೂಪುರ ನನ್ನ ಬಳಿ ಇದೆ. ಬಲಗಾಲಿನ ನೂಪುರವನ್ನು ಮರದ ಒಂದು ಪೊಟರೆಯಲ್ಲಿ ಇಟ್ಟಿದ್ದಾಳೆ. ಅದರ ಜೊತೆ ಅವಳು ಮಾತಾಡುತ್ತಿರುತ್ತಾಳೆ. ನೂಪುರವೇ! ನಿನ್ನ ನೋಡಿದರೆ ನನಗೆ ರಾಮನ ಜ್ಞಾಪಕವಾಗುತ್ತದೆ. ಅವನು ಈಗ ಏನು ಮಾಡುತ್ತಿರಬಹುದು? ಎಂದು ಮಾತಾಡುತ್ತಿರುತ್ತಾಳೆ. ಅವಳೇ ನನ್ನ ಸೀತೆ.
॥ಅಂಗಾರೂಢೇ ಚರಣಕಮಲೇ ಮದ್ಗರೇಣೂಪದೇಯಂ।
।ವಾಮಾಂ ವಾಮಂಶಾಖಾ ಶಿಖರನಿಹಿತಂ ವೀಕ್ಷಗಾಢಂ ವಿಷಣ್ಣಾಂ॥
ಹಂಸವು ಹೇಳಿತು, ನಾನು ಇಷ್ಟು ಕಷ್ಟಪಟ್ಟು, ಇಷ್ಟೊಂದು ದೇಶಗಳನ್ನೆಲ್ಲ ದಾಟಿ ಸೀತೆಯನ್ನು ನೋಡಿ, ನಿನ್ನ ಸಂದೇಶವನ್ನು ಅವಳಿಗೆ ತಲಪಿಸುತ್ತೇನಲ್ಲಾ ಅದಕ್ಕೆ ಬದಲಾಗಿ ನೀನು ನನಗೇನು ಕೊಡುತ್ತೀಯಾ? ಎಂದು ಕೇಳಿತು.
॥ವೇಲಾತೀತಃ ಪ್ರಣಯವಿವಶಂ ಭಾವಮಾಸೇತು ಶೋಣೌ।
।ಭೋಗಾರಂಭೇ ಕ್ಷಣಮಿವಗತಾ ಪೂರ್ವಮಾಲಿಂಗನಾದ್ಯೈಃ।
॥ಸಂಪತ್ಯೇಷಾ ಸುತನುಶತಶತ್ ಕಲ್ಪನಾ ಸಂಗಮೈಸ್ತೇ।
।ಚಿಂತಾದೀರ್ಗೈರವಿಷಗಲಿತಾ ಶರ್ವರೀ ನಾಪಯಾತೀ॥
ರಾಜಹಂಸವೇ! ಯಾವಾಗ ನೀನು ನಾನು ಕೊಟ್ಟ ಸಂದೇಶವನ್ನು ಲಂಕೆಗೆ ಹೋಗಿ ನನ್ನ ಸೀತೆಗೆ ಹೇಳುತ್ತೀಯೋ, ಆಗ ಅವಳು ಸಂತೋಷಪಟ್ಟು, ನಿನಗೆ ಆಶೀರ್ವದಿಸುತ್ತಾಳೆ. ನಾನು ಕೊಟ್ಟ ಸಂದೇಶವನ್ನು ತಲಪಿಸಿದ್ದಕ್ಕಾಗಿ ನಾನೂ ನಿನ್ನನ್ನು ಆಶೀರ್ವದಿಸುತ್ತೇನೆ. ನೀನು ನಿನ್ನ ಹಂಸಿನಿಯ ಜೊತೆಯಲ್ಲಿ ಸಂತೋಷದಿಂದ ಪ್ರೀತಿಯಿಂದ ಇರುತ್ತೀಯೆ. ನಾನು ಹೇಗೆ ಸೀತೆಯೊಡನೆ ಸೇರಿ ಸಂತೋಷವಾಗಿರುತ್ತೇನೋ ಹಾಗೆ ನೀನೂ ನಿನ್ನ ಹಂಸಿನಿಯ ಜೊತೆಯಲ್ಲಿ ದೀರ್ಘಕಾಲ ಸಂತೋಷದಿಂದ, ನೆಮ್ಮದಿಯಿಂದ ಇರು ಎಂದು ರಾಮ ರಾಜಹಂಸಕ್ಕೆ ಹೇಳುತ್ತಾನೆ.
ಹಂಸ ಸಂದೇಶ ಕಾವ್ಯದ ಕೊನೆಕೊನೆಗೆ ಹಂಸವು ಒಂದು ಪ್ರಶ್ನೆಯನ್ನು ಕೇಳಿತು. ಇದುವರೆಗೂ ರಾಮ ಲಂಕೆಗೆ ಬರಲಿಲ್ಲ ಏಕೆ ಎಂದರೆ ನಾನೇನು ಹೇಳಲಿ? ರಾಮ ಹೇಳಿದ, ರಾವಣ ಎಂದು ಸೀತೆಯನ್ನು ಒಯ್ದನೋ ಆಗಲೇ ಬರುವವನಿದ್ದೆ. ಆದರೆ ಮಳೆಗಾಲ ಬಂದಿತು. ಆ ಸಮಯದಲ್ಲಿ ಜೀವ ಜಂತುಗಳಿಗೆ ತೊಂದರೆಯಾಗಬಾರದು ಎಂದು ನಾನು ಹೊರಗೆ ಬರಲಿಲ್ಲ ಎಂದು ಹೇಳು.
ರಾಮ! ನಾನು ಅತ್ತ ಹೋದಮೇಲೆ ನೀನೇನು ಮಾಡುವೆ? ಎಂದಿತು ಹಂಸ. ನೀನು ಸುದ್ದಿ ಮುಟ್ಟಿಸಿ ಬರುವುದರೊಳಗೆ ನಾನು ಎಲ್ಲರನ್ನೂ ಕರೆದುಕೊಂಡು ಹೊರಡುವೆ. ಲಕ್ಷ್ಮಣನಿಗೆ ಇಲ್ಲಿಂದ ನೇರ ಬಾಣ ಬಿಡು ಎಂದು ಹೇಳುವೆ. ಎಲ್ಲ ಕೆಲಸ ಆಗಿ ಹೋಗುತ್ತದೆ. ಅವನಿಗೆ ಯಾಕೆ ಹೇಳಬೇಕು ಎಂದರೆ ಸೀತೆಗೆ ಲಕ್ಷ್ಮಣನ ಹಿರಿಮೆ ತಿಳಿಯಬೇಕು. ಅವಳು ಅವನನ್ನು ಸರಿಯಾಗಿ ತಿಳಿದಿಲ್ಲ.
ನಾನು ಎಂದು ಬರುತ್ತೇನೆ ಎಂದು ಸೀತೆ ಕೇಳಿದರೆ, ನೀನು ಹೇಳು, ಆತಂಕಗೊಳ್ಳಬೇಡ! ರಾಮ ಇದೋ ಬರುತ್ತಿದ್ದಾನೆ ಎಂದು ಹೇಳು.
ಆಯಿತು ರಾಮ! ನೀನು ಸೀತೆಯ ಬಗ್ಗೆ ಏನೆಲ್ಲ ಹೇಳಿರುವೆ. ಇನ್ನೂ ಏನಾದರೂ ಇದೆಯಾ ಹೇಳಲು? ಎಂದು ಕೇಳಿತು ಹಂಸ.
ಸೂರ್ಯೋದಯ ಸಮಯದ ಹೊಂಬಣ್ಣದಂತೆ ಇರುವ ರೇಶಿಮೆ ಸೀರೆಯನ್ನು ಉಟ್ಟಿದ್ದಾಳೆ ಸೀತೆ. ಸೀರೆಯ ತುಂಬ ಹಂಸದ ಚಿತ್ರಗಳೇ ಇವೆ. ಅವಳದು ಹಂಸ ನಡೆ, ಹಂಸದಂತೆ ನುಡಿ ಅಷ್ಟೇ ಅಲ್ಲ ವಸ್ತ್ರದಲ್ಲೂ ಹಂಸದ ಚಿತ್ರವೇ ಇದೆ ಎಂದ ರಾಮ ಅಂತ ದೇಶಿಕರು ಹೇಳುತ್ತಾರೆ.
॥ವಿದ್ಯಾಶಿಲ್ಪಪ್ರಗುಣಮತಿನಾ ವೆಂಕಟೇಶೇನ ಕ್ಲೃಪ್ತಂ।
।ಚಿಂತಾಶೋಣೋಲ್ಲಿಖಿತ ಮಸಕೃಚ್ಛರೇಯಸಾಂ ಪ್ರಾಪ್ತಿಹೇತುಂ॥
॥ಸೀತಾಹಂಸವ್ಯತಿಕರಸಖಂ ರಾಮಸಂದೇಶ ರತ್ನಂ।
।ಪಶ್ಯಂತ್ವಂತಶ್ರವಣಮನಘಂ ಚಕ್ಷುರುಜ್ದೀವ್ಯ ಸಂತಃ॥೧೧೦॥
ಹಂಸ ಸಂದೇಶ ಒಂದು ಕಾವ್ಯರತ್ನವಾಗಿದೆ. ಇದನ್ನು ಯಾರೆಲ್ಲ ಕೇಳಿ ಮನನ ಮಾಡುತ್ತಾರೋ ಅವರಿಗೆ ಉಜ್ಜೀವನವಾಗುತ್ತದೆ. ಜೀವನ ಮತ್ತು ಉಜ್ಜೀವನ ಬೇರೆಬೇರೆಯಾದರೂ ಒಂದನ್ನು ಬಿಟ್ಟು ಮತ್ತೊಂದು ಇರಲಾರದು. ಜೀವನ ತಾಪವಾದರೆ, ಉಜ್ಜೀವನ ತಪವಾಗುತ್ತದೆ. ಜೀವನ ಚಿಂತೆಯಾದರೆ, ಉಜ್ಜೀವನ ಚಿಂತನೆ. ಉದಾ. ನೀರಿನಲ್ಲಿ ಹಾರಿ ಈಜುವುದು. ನೀರಿನಲ್ಲಿದ್ದು ನೀರನ್ನು ಹಿಂದಕ್ಕೆ ತಳ್ಳಿದರೆ ಈಜಲು ಸಾಧ್ಯ. ಆಗ ಈಜುಗಾರ ಮುಂದಕ್ಕೆ ಹೋಗಿ ನದಿಯನ್ನು ದಾಟಬಲ್ಲ. ಹಾಗೆಯೇ ಸಂಸಾರದಲ್ಲಿದ್ದು ಸಂಸಾರದ ಭೋಗಗಳನ್ನು ಹಿಂದಕ್ಕೆ ತಳ್ಳುತ್ತಾ ಇದ್ದರೆ ಅಧ್ಯಾತ್ಮದಲ್ಲಿ ಮುಂದುವರಿಯುತ್ತೇವೆ. ಹಾಗೆ ಈ ಹಂಸ ಸಂದೇಶವನ್ನು ಓದಿ, ಮನನ ಮಾಡಿ, ಉಜ್ಜೀವನಗೊಳಿಸಿಕೊಳ್ಳಬೇಕು.
ಲೇಖಕರ ಸಂಕ್ಷಿಪ್ತ ಪರಿಚಯ:
ಸುಶೀಲ ದೀಕ್ಷಿತ್
ಹುಟ್ಟಿದ ಸ್ಥಳ ಮೈಸೂರು. ವಯಸ್ಸು 79. ವಿದ್ಯಾಭ್ಯಾಸ ವೀಣಾವಾದನವನ್ನು ಐಚ್ಛಿಕವಾಗಿ ತೆಗೆದುಕೊಂಡು ಎಂ.ಎ. ಪದವಿಯನ್ನು ಪಡೆದಿದ್ದಾರೆ. ಸಂಗೀತ ಶಿಕ್ಷಕಿಯಾಗಿ 25 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ. ಹಾಗಾಗಿ ಭಗವದ್ಗೀತೆ, ಶ್ರೀಮನ್ನಾರಾಯಣೀಯಮ್, ವಿಷ್ಣುಸಹಸ್ರನಾಮ, ಪ್ರಶ್ನೋತ್ತರ ರತ್ನಮಾಲಿಕಾ, ಶಿವಾನಂದಲಹರಿ ಮುಂತಾದ ವಿಷಯಗಳ ಬಗ್ಗೆ ಬರೆದು ವಾಟ್ಸಾಪ್ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸದ್ಯ ಅಮೆರಿಕದ ಸೆಂಟ್ ಲೂಯಿಸ್ನಲ್ಲಿ ವಾಸ. ಇ-ವಿಳಾಸ: susheeladixit1@gmail.com
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ